ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ರಾಜಕೀಯ ಲಾಭಕ್ಕಾಗಿ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿಗೆ ಆಪ್ ಪಕ್ಷದ ರಾಷ್ಟ್ರೀಯ ವಕ್ತಾರ ರಾಘವ್ ಚಾಡ್ಡಾ ತಿರುಗೇಟು ನೀಡಿದ್ದಾರೆ. “ಈ ಬಿಕ್ಕಟ್ಟಿನ ಸಮಯದಲ್ಲಿ ರೈತರ ಪರ ನಿಂತರೆ, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರೇ ಅದು ರಾಜಕೀಯ ಎನ್ನುವುದಾದರೇ..ಹೌದು ನಾವು ತಪ್ಪಿತಸ್ಥರೇ” ಎಂದು ಹೇಳಿದ್ದಾರೆ.
ರೈತರ ಮೇಲೆ ಬಿಜೆಪಿ ಆಡಳಿತದ ಹರಿಯಾಣ ಮತ್ತು ದೆಹಲಿಯಲ್ಲಿ ಪೊಲೀಸರು ನಡೆಸಿರುವ ದಾಳಿಯ ಕುರಿತು ಬಿಜೆಪಿ ಮೇಲೆ ರಾಘವ್ ಚಾಡ್ಡಾ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ಮನಸ್ಸು ಮಾಡಿದರೇ, ಷರತ್ತುಬದ್ಧ ಮಾತುಕತೆಯನ್ನು ಬಿಟ್ಟು ಬೇಷರತ್ತಾದ ಮಾತುಕತೆಗೆ ರೈತರನ್ನು ಕರೆದು ಸಭೆ ನಡೆಸಿದರೆ ಸಮಸ್ಯೆಯನ್ನು ಒಂದು ನಿಮಿಷದಲ್ಲಿ ಪರಿಹರಿಸಬಹುದು ಎಂದಿದ್ದಾರೆ.
“ರೈತರು ಈಗ ಬಿಕ್ಕಟ್ಟಿನ ಸಮಯದಲ್ಲಿದ್ದಾರೆ. ಈ ಸಮಯದಲ್ಲಿ ರೈತರ ಪರವಾಗಿ ನಿಲ್ಲುವುದು ರಾಜಕೀಯವಾಗಿದ್ದರೆ, ನಾವು ಅದನ್ನು ಮಾಡುತ್ತಿದ್ದೇವೆ ಹಾಗಾಗಿ, ನಾವು ತಪ್ಪಿತಸ್ಥರೇ. ಈ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರೆ ಅದು ರಾಜಕೀಯ ಎನ್ನುವುದಾದರೇ, ನಾವು ತಪ್ಪಿತಸ್ಥರೇ. ನಮ್ಮ ಹೃದಯವು ರೈತರಿಗಾಗಿ ಮಿಡಿಯುತ್ತದೆ. ನಾವು ಅವರೊಂದಿಗೆ ನಿಲ್ಲುತ್ತೇವೆ. ಇದು ರೈತರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ. ಇದನ್ನು ಬೆಂಬಲಿಸಲು ನಾವು ಇಲ್ಲಿದ್ದೇವೆ “ಎಂದು ಚಾಡ್ಡಾ ಎನ್ಡಿಟಿವಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರತಿಭಟನಾ ನಿರತ ರೈತರಿಗೆ ಆಹಾರ-ನೀರು ಒದಗಿಸಿದ ಆಪ್: ಹೋರಾಟಕ್ಕೆ ಬೆಂಬಲ
“ಈ ವಿಷಯವನ್ನು ಕೇಂದ್ರ ಸರ್ಕಾರ ಒಂದು ನಿಮಿಷದಲ್ಲಿ ಪರಿಹರಿಸಬಹುದು. ಅವರು ಮಾಡಬೇಕಾಗಿರುವುದು ಫೋನ್ ತೆಗೆದುಕೊಂಡು ರೈತರಿಗೆ ಬೇಷರತ್ತಾದ ಸಂವಾದಕ್ಕೆ ಅವಕಾಶ ನೀಡುವುದು ಅಷ್ಟೇ. ದುರದೃಷ್ಟವಶಾತ್, ಸರ್ಕಾರ ಇದನ್ನು ಅಹಂಮ್ಮಿನ ಯುದ್ಧವಾಗಿ ಮಾಡಿ, ರೈತರೊಂದಿಗೆ ಮಾತನಾಡದೇ ರಹಸ್ಯ ಸಭೆಗಳನ್ನು ನಡೆಸುತ್ತಿದೆ. ಇದು ರೈತರ ಬಗ್ಗೆ ಮೋದಿ ಸರ್ಕಾರಕ್ಕೆ ಇರುವ ನಿರಾಸಕ್ತಿಯನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಅವರ ಸಂಪುಟ ಸಚಿವರೊಂದಿಗೆ, ಅಧಿಕಾರಿಗಳೊಂದಿಗೆ ಅನೇಕ ಉನ್ನತ ಮಟ್ಟದ ಸಭೆಗಳನ್ನು ನಡೆಸುತ್ತಿರುವ ಕುರಿತು ಆಪ್ ಪಕ್ಷ ಉಲ್ಲೇಖಿಸಿದೆ.
’ದೆಹಲಿ ಚಲೋ’ ಪ್ರತಿಭಟನಾ ನಿರತ ರೈತರಿಗೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರ್ದೇಶನದಂತೆ ರೈತರಿಗೆ ಆಹಾರ, ನೀರು, ವಿದ್ಯುತ್ ವ್ಯವಸ್ಥೆ ಮಾಡಿದೆ.
ಬಿಜೆಪಿಯ ಐಟಿ ಸೇಟಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ದೆಹಲಿ ಸರ್ಕಾರವು ಈಗಾಗಲೇ ಮೊದಲು ಕೃಷಿ ಕಾನೂನುಗಳನ್ನು ಜಾರಿಗೊಳಿಸಿದೆ. ಈಗ ಕಾನೂನುಗಳನ್ನು ವಿರೋಧಿಸಲು ಖಲಿಸ್ತಾನಿಗಳು ಮತ್ತು ಮಾವೋವಾದಿಗಳು ಬಂದಿದ್ದು, ಅವರನ್ನು ಬೆಂಬಲಿಸುತ್ತಿದೆ. ಆಪ್ ಸರ್ಕಾರ ಎಂದಿಗೂ ರೈತರ ಪರ ಇರಲಿಲ್ಲ. ಇದು ಕೇವಲ ರಾಜಕೀಯ ಟ್ವೀಟ್ ಮಾಡಿದ್ದರು.