ಯಾವುದೇ ಆಹಾರ ವ್ಯಕ್ತಿಯ ದೇಹ-ಅಭಿರುಚಿ-ಆರೋಗ್ಯಕ್ಕೆ ಸಂಬಂಧಿಸಿದ ಸ್ವತಂತ್ರ ಆಯ್ಕೆ. ಧಾರ್ಮಿಕ ಫಲಾಪೇಕ್ಷೆಗಳಿಲ್ಲದೆ ಸೊಪ್ಪು-ತರಕಾರಿಗಳಂತೆ ಸಾಕು ಪ್ರಾಣಿಗಳನ್ನು ಬಳಸುವುದು ದಿನನಿತ್ಯದ ಸಾಮಾನ್ಯ ಆಹಾರ ಪದ್ಧತಿ.
ಈ ಪ್ರಜಾಪ್ರಭುತ್ವದಲ್ಲಿ ಯಾರು ಯಾವ ಆಹಾರ ತಿನ್ನಬೇಕೆಂದು ವಿಧಿಸುವುದು/ನಿಷೇಧಿಸುವುದು ಸರ್ವಾಧಿಕಾರಿ ಅವಿವೇಕದ ಪರಮಾವಧಿ. ಈ ಫರ್ಮಾನುಗಳ ಹಿಂದೆ ಜಾತೀಯತೆ/ಮತೀಯ ಅಸಹನೆ/ಅಸ್ಪೃಶ್ಯತಾಚರಣೆಗಳ ಸಮರ್ಥನೆ… ಇತ್ಯಾದಿ ರಾಜಕೀಯ ತಂತ್ರಗಳಿವೆ. ಈ ಷಡ್ಯಂತ್ರಗಳನ್ನು ಮರೆಮಾಚಲು 12ನೇ ಶತಮಾನದ ಶರಣರ ವಚನಗಳನ್ನು ಅವುಗಳ ಸಾಂದರ್ಭಿಕಾರ್ಥ-ಪೂರ್ಣಾರ್ಥ-ಒಟ್ಟು ಆಶಯಗಳ ಹಿನ್ನೆಲೆ ತಪ್ಪಿಸಿ ಬಳಸಿಕೊಳ್ಳುವುದರಲ್ಲಿ ಎಲ್ಲರನ್ನು ದಾರಿ ತಪ್ಪಿಸುವ ಹುನ್ನಾರವಡಗಿದೆ.
ಬಸವಣ್ಣನ ವಚನಗಳಲ್ಲಿ ಮಾಂಸಾಹಾರದ ತಿರುಳು ಹೆಚ್ಚಾಗಿ ಕಂಡುಬಂದಿರುವುದು- ವೈದಿಕರು ಯಜ್ಞ ಯಾಗಾದಿಗಳಲ್ಲಿ ಕೊಡುವ ಜೀವ ಬಲಿ ಮತ್ತು ಸಾಮೂಹಿಕವಾಗಿ ಜನ ಕ್ಷುದ್ರದೇವತೆಗಳ ಆರಾಧನೆಯಲ್ಲಿ ಹಬ್ಬದ ಹರಕೆಗಾಗಿ ಕೊಡುವ ಪ್ರಾಣಿಬಲಿಗಳ ಸಂದರ್ಭಗಳ ಉಲ್ಲೇಖಗಳಲ್ಲಿ, ‘ಹೋಮದ ನೇಮದಲ್ಲಿ ಹೋತನವೆಂಬ ಅನಾಮಿಕರೊಡನಾಡಿ ಗೆಲ್ಲುವುದೇನು…’, ‘ನಾನು ಕೊಲ್ಲೆ, ನೇಣು ಕೊಂದಿತ್ತೆಂಬ ಸೂನೆಗಾರರನೇನೆಂಬೆ’ (ನೇಣು=ಜನಿವಾರ) ಹಿಂಸಾತ್ಮಕ ಕ್ರಿಯೆಗಳ ವಿಪ್ರರನ್ನು ಹೊಲೆತನದ ತಳಕ್ಕೆ ಅನಾಮಿಕರೆಂದು ಸ್ಥಳಾಂತರಿಸಿದ್ದಾರೆ. ಹಾಗೆ ಸಾಮಾನ್ಯ ಜನರ ಕಿರುಕುಳ ದೈವಾರಾಧನೆಯ ಬಲಿ-ಹಿಂಸೆಗಳನ್ನು ಖಂಡಿಸಿ- ‘ಕುರಿ ಬೇಡ, ಮರಿ ಬೇಡ ಬರಿಯ ಪತ್ರೆಯ ತಂದು ಮರೆಯದೆ ಪೂಜಿಸು…’ ಎಂದಿದ್ದಾರೆ.
ಒಟ್ಟು ಧಾರ್ಮಿಕಾಚರಣೆಯ ಮೌಢ್ಯದಲ್ಲಿ ತಮ್ಮ ಇಹ-ಪರ ಸುಖ, ಸಮೃದ್ಧಿ ಭೋಗಭಾಗ್ಯಗಳ ಈಡೇರಿಕೆಗಾಗಿ ಇನ್ನೊಂದು ಜೀವವನ್ನು ಬಲಿಕೊಟ್ಟು ತಮ್ಮ ಮಾಂಸಾಹಾರದ ಬಯಕೆಯನ್ನು ತೀರಿಸಿಕೊಳ್ಳುವ ರೂಢಿಯನ್ನು ಸ್ವಹಿತಕ್ಕಾಗಿ ಅನ್ಯಜೀವವನ್ನು ಕೊಲ್ಲುವ ಹಿಂಸಾರಭಸಮತೆಯನ್ನು ಖಂಡಿಸಿದ್ದಾರೆ.
ಹೀಗಾಗಿ ಬಸವಣ್ಣನ ವಚನಾಭಿವ್ಯಕ್ತಿ ಕೇವಲ ಮಾಂಸಾಹಾರಕ್ಕೆ ಸಂಬಂಧಿಸಿಲ್ಲ. ಉದಾಹರಣೆ, ‘ಸತ್ತುದನನೆಳೆವನೆತ್ತಣ ಹೊಲೆಯ?’
ಹೊತ್ತು ತಂದು ನೀವು ಕೊಲ್ಲುವಿರಿ ‘ಎಂದಿರುವುದು ಹಾಗೆ’ ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ ಬಾಯಲ್ಲಿ ಸುರೆಯ ಗಡಿಗೆ… ಅವರ ಲಿಂಗನೆಂಬೆ- ಸಂಗನೆಂಬೆ’ ಎಂಬಲ್ಲಿ ಸ್ವೀಕಾರಭಾವವಿದೆ.
ಸಸ್ಯಾಹಾರ-ಮಾಂಸಾಹಾರವೆಂಬ ಚರ್ಚೆಗಿಂತ ಬಸವಣ್ಣನ ತೀವ್ರ ಪ್ರತಿಭಟನೆ-ತಿರಸ್ಕಾರಗಳಿರುವುದು ದೇವರು-ಧರ್ಮ-ಶಾಸ್ತ್ರಗಳ ಪ್ರಮಾಣುವಿನಲ್ಲಿ ಬಲಿ-ಹಿಂಸೆಯನ್ನು ಧಾರ್ಮಿಕಗೊಳಿಸುವ/ಮೌಲಿಕಗೊಳಿಸುವ/ತಾತ್ವಿಕಗೊಳಿಸುವ ವೈದಿಕರ ಅಪಾಯಕಾರಿ ಪ್ರವೃತ್ತಿಯನ್ನು ಖಂಡಿಸುವಲ್ಲಿ, ಜತೆಗೆ ಹೀಗಾದಾಗ ಸಮಾಜದ ಅಧಃಪತನದ ಗತಿ ತೀವ್ರವಾಗುತ್ತದಲ್ಲ ಎಂಬ ಆತಂಕ- ಮರುಕ – ಕಾಳಜಿಗಳೂ ಬಸವಣ್ಣನ ದರ್ಶನದಲ್ಲಿದೆ.
ಡಾ.ಲತಾ ಮೈಸೂರು, ಪ್ರಾಧ್ಯಾಪಕರು
ಲಿಂಗಾಯಿತ ಧರ್ಮವು ಮಾಂಸಾಹಾರಿಗಳನ್ನೂ ಒಪ್ಪುವ ಮೂಲಕ ಆಹಾರ ಸಂಸ್ಕೃತಿಯ ವಿಚಾರದಲ್ಲಿ ಪ್ರಜಾತಾಂತ್ರಿಕವಾಗಿರುತ್ತದೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಆಹಾರ ಸಂಸ್ಕೃತಿ ಮತ್ತು ಯಾವುದು ಮೇಲು ಯಾವುದು ಕೀಳು ಎಂಬುದರಲ್ಲೇ ಶ್ರೇಣೀಕರಣವನ್ನು ಪ್ರತಿಪಾದಿಸುವ ಈ ದೇಶದಲ್ಲಿ ಇಂತಹ ಚರ್ಚೆಗಳು ಬರುವುದು, ಬರಬೇಕಾದದ್ದು ಸಹಜ. ಆದರೆ, ಈ ಸದ್ಯ ಅದು ಎದ್ದಿರುವ ಸಂದರ್ಭ ಹಾಗೂ ಅದರ ಟಾರ್ಗೆಟ್ ಸರಿಯಿಲ್ಲ ಎಂಬ ಅನಿಸಿಕೆಗಳೂ ಇವೆ. ಈ ಹಿನ್ನೆಲೆಯಲ್ಲಿ ವಿವಿಧ ಚಿಂತಕರನ್ನು ಪತ್ರಿಕೆಯು ಮಾತಾಡಿಸಿತು.