ಕೋಲ್ಕತ್ತಾದ ಜಾದವ್ಪುರ ವಿಶ್ವವಿದ್ಯಾಲಯದ 18 ವರ್ಷದ ವಿದ್ಯಾರ್ಥಿ ಸ್ವಪ್ನದೀಪ್ ಆತ್ಮಹತ್ಯೆ ಪ್ರಕರಣದ ತನಿಖೆಯ ವೇಳೆ ಪೊಲೀಸರು ಮಹತ್ವದ ಅಂಶಗಳನ್ನು ಕಂಡುಕೊಂಡಿದ್ದಾರೆ.
ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಕೆಲ ನಿಮಿಷಗಳ ಮೊದಲು ಮುಖ್ಯ ಹಾಸ್ಟೆಲ್ನ ಎರಡನೇ ಮಹಡಿಯ ಕಾರಿಡಾರ್ನಲ್ಲಿ ಬೆತ್ತಲೆಯಾಗಿ ಆತನಿಗೆ ಮೆರವಣಿಗೆ ಮಾಡಲಾಗಿದೆ ಎಂದು ಕೋಲ್ಕತ್ತಾ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ತನಿಖಾಧಿಕಾರಿಗಳು ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ಪತ್ತೆಹಚ್ಚಿದ್ದಾರೆ. ಬಂಧಿತ 12 ಮಂದಿಯಲ್ಲಿ ಜಾದವ್ ಪುರ ವಿವಿಯ ಹಾಲಿ ಮತ್ತು ಮಾಜಿ ವಿದ್ಯಾರ್ಥಿಗಳಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ. ಕೊಠಡಿ ಸಂಖ್ಯೆ 70 ರಲ್ಲಿ ಆತನಿಗೆ ಬಲವಂತವಾಗಿ ಬಟ್ಟೆ ಬಿಚ್ಚಿದ ನಂತರ ಹಾಸ್ಟೆಲ್ನ ಕಾರಿಡಾರ್ನಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಯಿತು. ನಮ್ಮ ಬಳಿ ಸಾಕ್ಷ್ಯವಿದೆ. ಬಂಧಿತರಾದ 12 ಮಂದಿ ಇಡೀ ಘಟನೆಯಲ್ಲಿ ಪಾತ್ರವನ್ನು ವಹಿಸಿದ್ದಾರೆ ಎಂದು ಅಧಿಕಾರಿಯೋರ್ವರು ಪಿಟಿಐಗೆ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಒಬ್ಬರು ರಚಿಸಿದ ವಾಟ್ಸಾಪ್ ಗ್ರೂಪ್ ಪತ್ತೆಹಚ್ಚಿದ್ದಾರೆ. ಪೊಲೀಸರನ್ನು ತಪ್ಪುದಾರಿಗೆಳೆಯಲು ಈ ಗ್ರೂಪ್ ರಚಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಬಂಧಿತ ಆರೋಪಿಗಳು ಪೊಲೀಸರನ್ನು ದಿಕ್ಕು ತಪ್ಪಿಸಿ ರ್ಯಾಗಿಂಗ್ ಮರೆಮಾಚಲು ಪ್ರಯತ್ನಿಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ಈ ಕುರಿತು ಹಾಸ್ಟೆಲ್ ನ ಅಡುಗೆ ಸಿಬ್ಬಂದಿಗಳನ್ನು ಪ್ರಶ್ನಿಸುತ್ತಿದ್ದಾರೆ. ಇನ್ನು ಇಬ್ಬರು ವಿದ್ಯಾರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ: ಮಿಜೋರಾಂನಲ್ಲಿ ರೈಲ್ವೇ ಬ್ರಿಡ್ಜ್ ಕುಸಿತ; 17 ಕಾರ್ಮಿಕರು ಸಾವು