ಕೊರೋನಾ ಸೋಂಕಿನಿಂದ ಗುಣಮುಖರಾದ ನಂತರ ಮೆರವಣಿಗೆ ಮಾಡಿದ್ದ ಕಾರ್ಪೋರೇಟರ್ ಇಮ್ರಾನ್ ಪಾಷ ಸೇರಿದಂತೆ ಅವರ ಜೊತೆಗಿದ್ದ ಒಟ್ಟು 27 ಜನರಲ್ಲಿ 23 ಜನರನ್ನು ಎಸಿಎಂಎಂ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿ ಇಂದು ಆದೇಶ ಹೊರಡಿಸಿದೆ.
ಬಂಧಿತರಲ್ಲಿ ಬಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಮೂವರು ಆರೋಪಿಗಳ ವರದಿಗಾಗಿ ಕಾಯುತ್ತಿದ್ದು ವರದಿ ಬರುತ್ತಿದ್ದಂತೆ ನಾಲ್ಕು ಜನರನ್ನೂ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಕಾರ್ಪೊರೇಟ್ ಇಮ್ರಾನ್ ಪಾಷಾ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದರು. ನಿಯಮದಂತೆ ಕೊರೋನಾ ಸೋಂಕಿನಿಂದ ಗುಣಮುಖನಾದ ವ್ಯಕ್ತಿ ಯಾರ ಸಂಪರ್ಕಕ್ಕೂ ಬರುವಂತಿಲ್ಲ. ವೈದ್ಯರ ಸೂಚನೆಯಂತೆ ಮನೆಯಲ್ಲೇ ನಿಗದಿತ ಅವಧಿಯವರೆಗೆ ಕ್ವಾರಂಟೈನ್ ಇರಬೇಕಾಗುತ್ತದೆ.
ಅದರೆ, ಜೂನ್.08 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಇಮ್ರಾನ್ ಪಾಷಾ ತಮ್ಮ ಅಪಾರ ಬೆಂಬಲಿಗರ ಜೊತೆ ಪಾದರಾಯನಪುರದಲ್ಲಿ ರ್ಯಾಲಿ ನಡೆಸಿದ್ದರು. ಹೀಗಾಗಿ ಜೆಜೆ ನಗರದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡು ಸರ್ಕಾರಿ ಆದೇಶಗಳನ್ನ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ಸ್ 143, 188, 270, 271, 353 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿರುವ ನ್ಯಾಯಾಲಯ ಇಮ್ರಾನ್ ಪಾಷಾ ಸೇರಿದಂತೆ ಒಟ್ಟು 23 ಜನರನ್ನು ಜೂನ್.22 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಓದಿ: ಇಮ್ರಾನ್ ಪಾಷ ಬಂಧನ ಸರಿಯಾಗಿದೆ ಆದರೆ ಸಚಿವ ಶ್ರೀರಾಮುಲು ಅವರನ್ನು ಯಾವಾಗ ಬಂಧಿಸುತ್ತೀರಿ?