ಕೊಚ್ಚಿಯ ಕಲಮಸ್ಸೆರಿಯಲ್ಲಿ ಕ್ರಿಶ್ಚಿಯನ್ ಪ್ರಾರ್ಥನಾ ಸಮಾವೇಶದ ಸಭಾಂಗಣದಲ್ಲಿ ನಡೆದ ಸ್ಫೋಟವನ್ನು ದುರದೃಷ್ಟಕರ ಮತ್ತು ಗಂಭೀರವಾದ ಘಟನೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹೇಳಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಿಣರಾಯ್ ವಿಜಯನ್, ಈ ಬಗ್ಗೆ ರಾಜ್ಯ ಡಿಜಿಪಿಯೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಫೋಟದ ಸ್ಥಳಕ್ಕೆ ತೆರಳಿದ್ದಾರೆ. ಇದೊಂದು ದುರದೃಷ್ಟಕರ ಘಟನೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ತನಿಖೆ ಆರಂಭಿಸಲಾಗಿದ್ದು, ಹೆಚ್ಚಿನ ವಿವರಗಳು ನಂತರ ಲಭ್ಯವಾಗಲಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.
ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿದ ಎರ್ನಾಕುಲಂನ ಕಾಂಗ್ರೆಸ್ ಸಂಸದ ಹೈಬಿ ಈಡನ್ ಸುದ್ದಿಗಾರರೊಂದಿಗೆ ಮಾತನಾಡಿ, ಸಮಾವೇಶದಲ್ಲಿ ಭಾಗವಹಿಸಿದ್ದವರ ಪ್ರಕಾರ ಸರಣಿ ಸ್ಫೋಟಗಳು ಸಂಭವಿಸಿದೆ. ಬಾಂಬ್ ಸ್ಕ್ವಾಡ್, ಫೊರೆನ್ಸಿಕ್ ತಂಡ, ಕೊಚ್ಚಿ ನಗರ ಪೊಲೀಸ್ ಕಮಿಷನರ್ ಮತ್ತು ಎರ್ನಾಕುಲಂ ಜಿಲ್ಲಾಧಿಕಾರಿಗಳು ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ಹೇಳಿದ್ದಾರೆ.
ಕ್ರಿಶ್ಚಿಯನ್ ಸಮುದಾಯದ ಯೆಹೋವನ ಸಾಕ್ಷಿಗಳ ಸಮಾವೇಶದ ಸಮಯದಲ್ಲಿ ಸ್ಫೋಟಗಳು ಸಂಭವಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಯೋತ್ಪಾದನಾ ನಿಗ್ರಹ ಸಂಸ್ಥೆಗಳಾದ ಎನ್ಎಸ್ಜಿ, ಎನ್ಐಎ ತಂಡವನ್ನು ಸ್ಫೋಟದ ಸ್ಥಳಕ್ಕೆ ಕಳುಹಿಸಿದ್ದಾರೆ.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ ವಿ ಗೋವಿಂದನ್ ಅವರು ಈ ಬಗ್ಗೆ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದು, ಕೇರಳವು ಪ್ಯಾಲೆಸ್ತೀನ್ ಜನರೊಂದಿಗೆ ಒಗ್ಗಟ್ಟಾಗಿ ನಿಂತಿದೆ. ಈ ಬಗೆಗಿನ ಗಮನವನ್ನು ಬೇರೆಡೆ ಸೆಳೆಯಲು ನಡೆಸಿದ ಕತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಮತ್ತು ಎಲ್ಲಾ ಪ್ರಜಾಪ್ರಭುತ್ವವಾದಿ ವ್ಯಕ್ತಿಗಳು ಒಟ್ಟಾಗಿ ಅದನ್ನು ಖಂಡಿಸುತ್ತಾರೆ ಎಂದು ಅವರು ಹೇಳಿದರು.
ಘಟನೆಯು ಭಯೋತ್ಪಾದಕ ಕೃತ್ಯದ ಭಾಗವಾಗಿ ಕಂಡುಬರುತ್ತದೆ. ಇದನ್ನು ಗಂಭೀರವಾಗಿ ಪರಿಶೀಲಿಸಬೇಕು. ಸ್ಫೋಟವು ಆಕಸ್ಮಿಕವಲ್ಲ. ತನಗೆ ದೊರೆತ ಮಾಹಿತಿಯ ಪ್ರಕಾರ ಘಟನಾ ಸ್ಥಳದಲ್ಲಿ ಬಾಂಬ್ ಭಾಗಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಕೇರಳ: ಪ್ರಾರ್ಥನಾ ಸಭೆಯಲ್ಲಿ ಸರಣಿ ಸ್ಪೋಟ; ಓರ್ವ ಮೃತ್ಯು, ಹಲವರಿಗೆ ಗಂಭೀರ ಗಾಯ