ಮದ್ರಸಾ ಶಿಕ್ಷಣಕ್ಕೆ ಸಂಬಂಧಿಸಿ ರಾಜ್ಯಸರಕಾರ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು, ವಕ್ಫ್ ಅಧೀನದಲ್ಲಿನ ಮದ್ರಸಾ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ, ಗಣಿತ, ವಿಜ್ಞಾನ ಹಾಗೂ ಸಮಾಜ ಶಾಸ್ತ್ರ ಬೋಧನೆ ಕಡ್ಡಾಯಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣದ ಜೊತೆಗೆ ಇತರ ವಿಷಗಳನ್ನು ಕೂಡ ಕಲಿಸಲು ಸೂಕ್ತ ವ್ಯವಸ್ಥೆಗೆ ಮುಂದಾಗಿದೆ.
ಬುಧವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಬಿ.ಎಂ.ಫಾರೂಖ್ ಪರವಾಗಿ ಅಬ್ದುಲ್ ಝಬ್ಬಾರ್ ಕೇಳಿದ ಪ್ರಶ್ನೆಗೆ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಪರವಾಗಿ ಕೃಷ್ಣ ಭೈರೇಗೌಡ ಅವರು ಉತ್ತರಿಸಿದ್ದು, ರಾಜ್ಯದಲ್ಲಿ ವಕ್ಫ್ ಸಂಸ್ಥೆಗಳಿಂದ ನಡೆಸಲಾಗುತ್ತಿರುವ ಮದ್ರಸಾಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಪ್ರಯೋಗಿಕವಾಗಿ 2 ವರ್ಷ ಕನ್ನಡ, ಇಂಗ್ಲಿಷ್, ವಿಜ್ಞಾನ, ಗಣಿತ ಹಾಗೂ ಇತರೆ ವಿಷಯಗಳ ಬಗ್ಗೆ ಬೋಧಿಸಲಾಗುವುದು. ಇದಲ್ಲದೆ ಹತ್ತನೇ ತರಗತಿ, ಪಿಯುಸಿ ಮತ್ತು ಪದವಿಯನ್ನು ರಾಜ್ಯ, ರಾಷ್ಟ್ರೀಯ ಮುಕ್ತ ಶಾಲೆಗಳ ಮೂಲಕ ನೀಡಲಾಗುವುದು ಎಂದು ಹೇಳಿದ್ದಾರೆ.
ಮದ್ರಸಾ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಧಾರ್ಮಿಕ ಬೋಧನೆ ಮಾತ್ರವಲ್ಲದೆ ಸಾಮಾಜಿಕ ಬದುಕು ಕಟ್ಟಿಕೊಳ್ಳುವ ಇತರೆ ವಿಷಯಗಳ ಕುರಿತು ಬೋಧನೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಸರಕಾರವೂ ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ. ಮದ್ರಸಾಗಳಲ್ಲಿ ಧಾರ್ಮಿಕ ಬೋಧನೆಯ ಜೊತೆಗೆ ಬೇರೆ ಶಿಕ್ಷಣ ಕೊಡದಿದ್ದಲ್ಲಿ ಸಮಾಜದಲ್ಲಿನ ಅವಕಾಶಗಳಿಂದ ವಿದ್ಯಾರ್ಥಿಗಳು ವಂಚಿತರಾಗಲಿದ್ದಾರೆ. ಹಾಗಾಗಿ ಬೇರೆ ವಿಷಯಗಳ ಪಾಠ ಮದ್ರಸಾಗಳಲ್ಲಿ ದೊರೆಯಬೇಕು ಎನ್ನುವ ಚರ್ಚೆ ಬಹಳ ವರ್ಷಗಳಿಂದ ಇತ್ತು. ನಮ್ಮ ಸರಕಾರ ಬಂದ ನಂತರ ಈ ಬಗ್ಗೆ ಚರ್ಚಿಸಿದ್ದು, ತಕ್ಷಣವೇ ಈ ವರ್ಷದಿಂದಲೇ ಮದ್ರಸಾಗಳಲ್ಲಿ ಬೇರೆ ವಿಷಯಗಳ ಪಠ್ಯ ಬೋಧನೆ ಮಾಡುವ ಯೋಜನೆ ಅನುಷ್ಠಾನ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಅದರಂತೆ 100 ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭ ಮಾಡುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.
ಮದರಸಾ ಶಿಕ್ಷಣವನ್ನು ಆಧುನೀಕರಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ರಾಜ್ಯಾದ್ಯಂತ ಮದರಸಾ ಸಂಸ್ಥೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ನ್ನು ವಿದ್ಯಾರ್ಥಿಗಳಿಗೆ ಕಲಿಸಲಿದೆ ಎಂದು ಈ ಮೊದಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಹೇಳಿದ್ದರು. ಪ್ರಾಥಮಿಕವಾಗಿ ಅರೇಬಿಕ್ ಮತ್ತು ಉರ್ದು ಬೋಧನಾ ಮಾಧ್ಯಮವಾಗಿರುವ ಮದರಸಾಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಕಲಿಸಲು ಸೂಕ್ತ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಇಲಾಖೆಗೆ ಸೂಚಿಸಲಾಗಿದೆ. ಮತ್ತು ವಕ್ಫ್ ಮಂಡಳಿಯಲ್ಲಿ 1,265 ಮದರಸಾಗಳು ನೋಂದಣಿಯಾಗಿವೆ ಎಂದು ಹೇಳಿದ್ದರು.
ಹಲವು ಮುಸ್ಲಿಂ ವಿದ್ವಾಂಸರು ಮದ್ರಸಾ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಭೋದನೆ ಜೊತೆಗೆ ಸಾಮಾಜಿಕ ವಿಷಗಳ ಬೋಧನೆಗೆ ಈ ಮೊದಲು ಆಗ್ರಹಿಸಿದ್ದರು. ಇದು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಜೊತೆಗೆ ಉದ್ಯೋಗಾವಕಾಶಗಳನ್ನು ಕೂಡ ಹೆಚ್ಚಿಸಲಿದೆ ಎಂದು ಹೇಳಲಾಗಿದೆ.
ಇದನ್ನು ಓದಿ: ಬಾಬರಿ ಮಸೀದಿ ಧ್ವಂಸಕ್ಕೆ 31 ವರ್ಷ: ಅಜೆಂಡಾ ಯಶಸ್ವಿಗೊಳಿಸುವತ್ತ ಬಿಜೆಪಿ