ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಘೋಷಿಸಿ ಎಂದು ಒತ್ತಾಯಿಸಿ ಕೆಎಸ್ಆರ್ಟಿಸಿ ನೌಕರರು ನಿನ್ನೆ ನಡೆಸಿದ ಬೃಹತ್ ಪ್ರತಿಭಟನೆಯ ಮುಂದುವರೆದ ಭಾಗವಾಗಿ ಇಂದು ಮುಷ್ಕರ ಹೂಡಿದ್ದು, ಮುಂಜಾನೆಯಿಂದ ಯಾವುದೇ ಬಸ್ಸುಗಳು ಓಡಾಡಿರಲಿಲ್ಲ. ಮುಷ್ಕರದ ಬಗ್ಗೆ ಸರ್ಕಾರ ನಮ್ಮೊಂದಿಗೆ ಯಾವುದೆ ಮಾತುಕತೆ ನಡೆಸಿಲ್ಲವಾದ್ದರಿಂದ ’ನಾಳೆಯು ಮುಷ್ಕರ ಮುಂದುವರೆಯಲಿದೆ’ ಎಂದು ಮುಷ್ಕರವನ್ನು ಮುನ್ನಡೆಸುತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರು ತಿಳಿಸಿದರು.
ನಾನುಗೌರಿ.ಕಾಮ್ ಜೊತೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, “ಸರ್ಕಾರ ಈ ಸಮಸ್ಯೆಯಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ದಾರಿ ಹುಡುಕುತ್ತಿದೆ. ಮಾತುಕತೆಗಾಗಿ ನಮ್ಮನ್ನು ಕರೆದಿದ್ದಾರೆಂದು ಸಾರಿಗೆ ಸಚಿವರು ಸುಳ್ಳು ಹೇಳುತ್ತಿದ್ದಾರೆ. ಇದುವರೆಗೂ ಯಾವುದೇ ಮಾತುಕತೆಗಾಗಿ ನಮ್ಮನ್ನು ಕರೆದಿಲ್ಲವಾದ್ದರಿಂದ, ನಾಳೆಯು ಮುಷ್ಕರ ಮುಂದುವರೆಯಲಿದೆ” ಎಂದು ಹೇಳಿದರು.
ಈ ಬಗ್ಗೆ ನಾನುಗೌರಿ.ಕಾಮ್ ಜೊತೆ ಮಾತನಾಡಿದ ಕೆಎಸ್ಆರ್ಟಿಸಿ ನೌಕರರ ಸಂಘ(ಎ.ಐ.ಟಿ.ಯು.ಸಿ) ಮುಖಂಡರಾದ ಅನಂತ ಸುಬ್ಬರಾವ್, “ಈ ಮುಷ್ಕರವನ್ನು ಮುನ್ನಡೆಸುತ್ತಿರುವುದು ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಅವರಾಗಿದ್ದಾರೆ, ನಮ್ಮ ಸಂಘಟನೆಯ ಸದಸ್ಯರಿಗೆ ಸಹಕಾರ ಕೊಡಲು ಹೇಳಿದ್ದೇವೆ. ಮುಷ್ಕರ ಹಿನ್ನಲೆಯಲ್ಲಿ ಸಚಿವರು ನಮ್ಮನ್ನು ಸಭೆಗೆ ಕರೆದಿದ್ದರಾದರೂ ’ಮುಷ್ಕರವನ್ನು ನಾವು ಮುನ್ನಡೆಸುತ್ತಿಲ್ಲವಾದ್ದರಿಂದ ಅದನ್ನು ತಡೆಯುವುದು ಕೂಡಾ ಇಲ್ಲ, ಮುಷ್ಕರ ಮುನ್ನಡೆಸುತ್ತಿರುವ ಮುಖಂಡರನ್ನು ಕರೆದು ಮಾತನಾಡಿ’ ಎಂದು ಸರ್ಕಾರವನ್ನು ಕೇಳಿಕೊಂಡಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಿ: ಬೆಂಗಳೂರಿನಲ್ಲಿ ಬೃಹತ್ ಹೋರಾಟ
“ಮುಷ್ಕರದಲ್ಲಿ ಮುಖ್ಯವಾಗಿ ಸರ್ಕಾರಿ ಸಂಬಳ, ಕೊರೊನಾದಿಂದ ಮೃತಪಟ್ಟವರಿಗೆ 30 ಲಕ್ಷ ನೀಡುವುದು ಹಾಗೂ ನೌಕರರಿಗೆ ಹಿಂಸೆ ಕಿರುಕುಳದ ಬಗ್ಗೆ ನೌಕರರು ಹೇಳಿಕೊಂಡಿದ್ದಾರೆ. ನಾವು ಈ ಬಗ್ಗೆ ಆಂಧ್ರಪ್ರದೇಶದಲ್ಲಿ ಆಗಿರುವ ಸುಧಾರಣೆಗಳ ಬಗ್ಗೆ ಅಧ್ಯಯನ ನಡೆಸಲು ಒಂದು ಆಯೋಗವನ್ನು ಕಳುಹಿಸಿ ವರದಿ ಪಡೆಯಲು ಕೇಳಿಕೊಂಡಿದ್ದೇವೆ” ಎಂದು ಅನಂತಸುಬ್ಬರಾವ್ ಹೇಳಿದರು.
ನಾನುಗೌರಿ.ಕಾಮ್ ಜೊತೆ ಮಾತನಾಡಿದ ಸಿಐಟಿಯು ಮುಖಂಡ ಪ್ರಕಾಶ್ ಮಾತನಾಡಿ, “ಮುಷ್ಕರವನ್ನು ನಿಲ್ಲಿಸಲು ಸಹಾಯ ಮಾಡಿ ಎಂದು ಸರ್ಕಾರ ಕೇಳಿಕೊಂಡಿದೆ. ಮುಷ್ಕರ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವುದರಿಂದ, ಅವರನ್ನು ಸಭೆಗೆ ಕರೆಯದ ಹೊರತು ಸಭೆ ನಡೆಸಿ ಮುಷ್ಕರವನ್ನು ಕೊನೆಗೊಳಿಸಲು ಆಗುವುದಿಲ್ಲ ಎಂದು ಹೇಳಿದ್ದೇವೆ. ಕಾರ್ಮಿಕರಲ್ಲಿ ಸರ್ಕಾರದ ವಿರುದ್ದ ಅಸಮಾಧಾನ ಮಡುಗಟ್ಟಿರುವುದರಿಂದ ಮುಷ್ಕರವನ್ನು ಮಾಡುತ್ತಿದ್ದಾರೆ, ಸರ್ಕಾರ ಕೂಡಾ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಕಾರ್ಮಿಕರು ಎತ್ತಿರುವ ಬೇಡಿಕೆಯನ್ನು ಈಡೇರಿಸುವಂತೆ ಕೇಳಿಕೊಂಡಿದ್ದೇವೆ” ಎಂದು ಹೇಳಿದರು.
“ಸಾರಿಗೆ ಸಿಬ್ಬಂದಿಗಳ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಸಹಾನುಭೂತಿ ಇದೆ. ಅವರ ಬೇಡಿಕೆಗಳ ಬಗ್ಗೆ ಈಗಾಗಲೇ ಒಕ್ಕೂಟಗಳ ಮುಖಂಡರ ಒಂದು ಸುತ್ತಿನ ಸಭೆ ನಡೆಸಲಾಯಿತು. ಅಗತ್ಯವಿದ್ದರೆ ಮತ್ತಷ್ಟು ಮಾತುಕತೆಗಳನ್ನು ನಡೆಸಿ ಸಂಧಾನ ಮಾರ್ಗದಲ್ಲಿ ಸಮಸ್ಯೆ ಪರಿಹರಿಸುವ ಉದ್ದೇಶ ನಮ್ಮ ಸರ್ಕಾರದ್ದಾಗಿದೆ” ಎಂದು ಸಚಿವ ಲಕ್ಷ್ಮಣ್ ಸವದಿ ಸಂಜೆ ಮಾಧ್ಯಮ ಹೇಳಿಕೆ ನೀಡಿದ್ದರು.
ದಿಡೀರ್ ಆಗಿ ಬಸ್ ಸಂಚಾರವನ್ನು ಕೆಲವೆಡೆ ಸ್ಥಗಿತಗೊಳಿಸಿರುವುದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆ ಉಂಟಾಗಿದೆ. ಆದ್ದರಿಂದ ತಕ್ಷಣ ಮುಷ್ಕರನಿರತ ಸಿಬ್ಬಂದಿಗಳು ಕರ್ತವ್ಯಕ್ಕೆ ಮರಳಬೇಕೆಂದು ಮನವಿ ಮಾಡಿಕೊಂಡಿದ್ದ ಲಕ್ಷ್ಮಣ ಸವದಿ, “ಕೋವಿಡ್ನಿಂದಾಗಿ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ನೌಕರರ ಕುಟುಂಬದವರಿಗೆ ಇನ್ನು 15 ದಿನಗಳೊಳಗಾಗಿ 30 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು” ಎಂದು ಮಾಧ್ಯಮ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಇಂದು BMTC ಬಸ್ಗಳು ರಸ್ತೆಗಿಳಿಯುವುದಿಲ್ಲ: ಸಾರಿಗೆ ನೌಕರರ ಪ್ರತಿಭಟನೆ