ದಲಿತ ಸಮುದಾಯದ ವ್ಯಕ್ತಿಯೊಬ್ಬರು ವ್ಯಕ್ತಿಯೊಬ್ಬನನ್ನು ಗ್ರೀಸ್ನಿಂದ ಮುಟ್ಟಿದ ಎನ್ನುವ ಕಾರಣಕ್ಕೆ ಆತನ ಮುಖ ಮತ್ತು ದೇಹಕ್ಕೆ ಮಾನವ ಮಲವನ್ನು ಬಳಿದಿದ್ದಾರೆ ಎನ್ನುವ ಆರೋಪ ಶುಕ್ರವಾರ ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ಕೇಳಿಬಂದಿದೆ ಎಂದು ಪಿಟಿಐ ವರದಿ ಮಾಡಿದೆ.
ಈ ವಿಚಾರವಾಗಿ ಶನಿವಾರ ದಶರತ್ ಅಹಿರ್ವಾರ್ ಅವರು ದೂರು ದಾಖಲಿಸಿದ ನಂತರ ಮಧ್ಯಪ್ರದೇಶ ಪೊಲೀಸರು ಆರೋಪಿ ರಾಮಕೃಪಾಲ್ ಪಟೇಲ್ನನ್ನು ಬಂಧಿಸಿದ್ದಾರೆ. ಅಹಿರ್ವಾರ್ ಛತ್ತರ್ಪುರ ಜಿಲ್ಲೆಯ ಬಿಕೌರಾ ಗ್ರಾಮದಲ್ಲಿ ಪಂಚಾಯತ್ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
”ಅಹಿರ್ವಾರ್ ಮತ್ತು ಇತರ ಕಾರ್ಮಿಕರು ಸ್ನಾನ ಮಾಡುತ್ತಿದ್ದ ವೇಳೆ ಆರೋಪಿ ಪಟೇಲರೊಂದಿಗೆ ತಮಾಷೆ ಮಾಡುತ್ತಿದ್ದರು. ಅಹಿರ್ವಾರ್ ಪಟೇಲ್ ಅವರ ಕೈಗೆ ಗ್ರೀಸ್ ಹಾಕಿದಾಗ ಅವರು ಪರಸ್ಪರ ತಮಾಷೆಯಾಗಿ ವಸ್ತುಗಳನ್ನು ಎಸೆಯುತ್ತಿದ್ದರು. ಇದ್ದಕ್ಕಿದ್ದಂತೆ ಕೋಪಗೊಂಡ ಪಟೇಲ್ ಅವರು ಮಾನವ ಮಲವನ್ನು ಎತ್ತಿಕೊಂಡು ಅಹಿರ್ವಾರ್ ಅವರ ಬೆನ್ನಿನ ಮೇಲೆ ಎಸೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
”ನನ್ನ ಕೈಯಲ್ಲಿ ಸ್ವಲ್ಪ ಗ್ರೀಸ್ ಇತ್ತು ತಮಾಶೆ ಮಾಡುವ ವೇಳೆ ಕೈತಪ್ಪಿ ಆ ಗ್ರೀಸ್ ಪಟೇಲ್ರ ಮೇಲೆ ಬಿದ್ದಿತು. ಆ ನಂತರ, ಪಟೇಲ್ ಹತ್ತಿರದಲ್ಲಿ ಬಿದ್ದಿದ್ದ ಮಾನವ ಮಲವನ್ನು ತಂದು ನನ್ನ ತಲೆ ಮತ್ತು ಮುಖ ಸೇರಿದಂತೆ ದೇಹದ ಮೇಲೆ ಲೇಪಿಸಿದರು” ಎಂದು ಅಹಿರ್ವಾರ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
”ಈ ವೇಳೆ ಪಟೇಲ್ ಜಾತಿ ನಿಂದನೆಯನ್ನು ಮಾಡಿದ್ದಾರೆ. ನಾನು ಈ ವಿಷಯವನ್ನು ಪಂಚಾಯತ್ಗೆ ವರದಿ ಮಾಡಿದ್ದೇನೆ ಮತ್ತು ಸಭೆಗೆ ಕರೆದಿದ್ದೇನೆ. ಆದರೆ ಅಲ್ಲಿ ಶುಕ್ರವಾರ ನನಗೆ 600 ರೂಪಾಯಿ ದಂಡವನ್ನು ಪಂಚಾಯತ್ ವಿಧಿಸಿದೆ” ಎಂದು ಅಹಿರ್ವಾರ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಪಟೇಲ್ ವಿರುದ್ಧ ಐಪಿಸಿ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು ಅಥವಾ ಸಾರ್ವಜನಿಕ ಪದಗಳಿಗೆ ಶಿಕ್ಷೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಉಪವಿಭಾಗಾಧಿಕಾರಿ ಮನಮೋಹನ್ ಸಿಂಗ್ ಬಾಘೆಲ್ ತಿಳಿಸಿದ್ದಾರೆ.
ಇತ್ತೀಚೆಗೆ ರಾಜ್ಯದ ಸಿಧಿ ಜಿಲ್ಲೆಯಲ್ಲಿ ಆದಿವಾಸಿ ವ್ಯಕ್ತಿಯೊಬ್ಬರ ಮೇಲೆ ಬಿಜೆಪಿ ಮುಖಂಡನೊಬ್ಬ ಮೂತ್ರ ವಿಸರ್ಜನೆ ಮಾಡಿದ್ದರು. ಈ ಘಟನೆಯ ವಿರುದ್ಧ ಪ್ರತಿಪಕ್ಷಗಳು ತೀವ್ರ ಟೀಕೆ ಮಾಡಿದ್ದವು. ಆ ನಂತರ ಪೊಲೀಸರು ಆರೋಪಿ ಪ್ರವೇಶ್ ಶುಕ್ಲಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಜೋಧ್ಪುರದಲ್ಲಿ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಎಬಿವಿಪಿ ಸದಸ್ಯರ ಕೈವಾಡವಿದೆ ಎಂದ ಪೊಲೀಸರು