ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ಮತ್ತು ಅವರ ಪತ್ನಿ ವಿಶಾಲಾಕ್ಷಿಗೆ ಮೂರು ವರ್ಷಗಳ ಸಾಮಾನ್ಯ ಜೈಲು ಶಿಕ್ಷೆ ಮತ್ತು ತಲಾ 50ಲಕ್ಷ ರೂಪಾಯಿ ದಂಡ ವಿಧಿಸಿ ಮದ್ರಾಸ್ ಹೈಕೋರ್ಟ್ ಇಂದು(ಡಿ.21) ಆದೇಶಿಸಿದೆ.
BREAKING| Madras High Court Sentences TN Minister Ponmudi To 3 Year Imprisonment In Disproportionate Asset Casehttps://t.co/SpGpKhsNaC
— Live Law (@LiveLawIndia) December 21, 2023
ನ್ಯಾಯಮೂರ್ತಿ ಜಿ. ಜಯಚಂದ್ರನ್ ಅವರು ಶರಣಾಗಲು ಅಪರಾಧಿಗಳಿಗೆ 30 ದಿನಗಳ ಕಾಲಾವಕಾಶ ನೀಡಿದ್ದು, ಈ ಅವಧಿಯಲ್ಲಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಬಹುದು ಎಂದು ಹೇಳಿದ್ದಾರೆ.
30 ದಿನದೊಳಗೆ ದಂಪತಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸಾಧ್ಯವಾಗದಿದ್ದರೆ ಸಮಯ ವಿಸ್ತರಿಸುವ ಬಗ್ಗೆ ಮುಂದೆ ನಿರ್ಧರಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಇದು ಬೇರೆ ಯಾವುದೇ ಸಚಿವರ ಮೇಲಿನ ಅಪರಾಧವಾಗಿದ್ದರೆ ವಿಷಯ ವಿಭಿನ್ನವಾಗಿರುತ್ತಿತ್ತು. ಆದರೆ, ಇದು ಉನ್ನತ ಶಿಕ್ಷಣ ಸಚಿವರ ಪ್ರಕರಣ. ಶಿಕ್ಷಣ ಸಚಿವರ ಅಪರಾಧ ಭವಿಷ್ಯದ ಪೀಳಿಗೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ನ್ಯಾಯಧೀಶರು ಹೇಳಿದ್ದಾರೆ.
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಚಿವ ಪೊನ್ಮುಡಿ ದಂಪತಿ ತಪ್ಪಿತಸ್ಥರು ಎಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ಘೋಷಿಸಿತ್ತು. ತೀರ್ಪು ಕಾಯ್ದಿರಿಸಿತ್ತು.
ಏನಿದು ಪ್ರಕರಣ?
1996ರಿಂದ 2001ರ ವರೆಗಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರದಲ್ಲಿ ಪೊನ್ಮುಡಿ ಅವರು ರಾಜ್ಯ ಸಾರಿಗೆ ಸಚಿವರಾಗಿದ್ದ ಸಂದರ್ಭ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಎಐಎಡಿಎಂಕೆ 2002ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಜಾಗೃತ ಹಾಗೂ ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯ (ಡಿವಿಎಸಿ)ಅವರ ವಿರುದ್ದ ಪ್ರಕರಣ ದಾಖಲಿಸಿತ್ತು.
2015ರಲ್ಲಿ ಪೊನ್ಮುಡಿ ವಿರುದ್ಧ ಆರೋಪ ರೂಪಿಸಲಾಗಿತ್ತು. ವಿಚಾರಣೆಯನ್ನು ವಿಲ್ಲುಪುರಂನಿಂದ ವೆಲ್ಲೂರಿಗೆ ಸ್ಥಳಾಂತರಿಸಲಾಗಿತ್ತು. ಕಳೆದ ಜೂನ್ 28ರಂದು ವೆಲ್ಲೂರಿನ ಪ್ರಧಾನ ಜಿಲ್ಲಾ ನ್ಯಾಯಧೀಶೆ ಎನ್ .ವಸಂತಲೀಲಾ ಅವರು ಪೊನ್ಮುಡಿ ಮತ್ತು ಅವರ ಪತ್ನಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದರು.
ಆದರೆ, ಮದ್ರಾಸ್ ಹೈಕೋರ್ಟ್ ಪೊನ್ಮುಡಿ ದಂಪತಿ ಸೇರಿದಂತೆ ಇತರ ಆರು ಮಂದಿ ರಾಜಕಾರಣಿಗಳ ವಿರುದ್ಧದ ಪ್ರಕರಣಗಳನ್ನು ಸ್ವಯಂ ಪ್ರೇರಿತ ಮರು ಪರಿಶೀಲನೆಗೆ ತೆಗೆದುಕೊಂಡಿತ್ತು.ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರು ಪೊನ್ಮುಡಿ ದಂಪತಿಯ ಪ್ರಕರಣದ ವಿಚಾರಣೆ ಆರಂಭಿಸಿದ್ದರು.
ವಿಚಾರಣಾ ನ್ಯಾಯಾಲಯ ಇತ್ಯರ್ಥಪಡಿಸಿದ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ವೆಂಕಟೇಶ್ ವಿರುದ್ಧ ಪೊನ್ಮುಡಿ ಮತ್ತು ಅವರ ಪತ್ನಿ ಸಲ್ಲಿಸಿದ್ದ ಅರ್ಜಿಗಳನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. “ನಮ್ಮ ವ್ಯವಸ್ಥೆಯಲ್ಲಿ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರಂತಹ ನ್ಯಾಯಾಧೀಶರನ್ನು ಹೊಂದಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು”ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ನವೆಂಬರ್ 5 ರಂದು ಹೇಳಿತ್ತು.
ಬಳಿಕ ನ್ಯಾಯಾಲಯದ ರೋಸ್ಟರ್ ಬದಲಾವಣೆಯ ಕಾರಣ ನ್ಯಾಯಮೂರ್ತಿ ಜಿ.ಜಯಚಂದ್ರ ಅವರು ಈ ಪ್ರಕರಣಗಳ ವಿಚಾರಣೆಯನ್ನು ಮುಂದುವರೆಸಿದ್ದರು. ವಿಚಾರಣೆಗೆ ಪೂರ್ಣಗೊಳಿಸಿ ಮಂಗಳವಾರ ತೀರ್ಪು ಕಾಯ್ದಿರಿಸಿದ್ದರು. ಇಂದು ಪ್ರಕಟಿಸಿದ್ದಾರೆ.
ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದ ಹಿನ್ನೆಲೆ ಕೆ. ಪೊನ್ಮುಡಿ ಅವರು ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಸಾಧ್ಯತೆ ಇದೆ. ಹಾಗೇನಾದರು ಆದರೆ ಅವರ ಸಚಿವ ಸ್ಥಾನವೂ ಕೈ ತಪ್ಪಲಿದೆ. ಮುಂದೆ ಅವರು ಸುಪ್ರೀಂ ಕೋರ್ಟ್ ಮೊರೆ ಹೋದರೆ ಏನಾಗಲಿದೆ ಎಂಬುವುದು ಕಾದು ನೋಡಬೇಕಿದೆ.
ಇದನ್ನೂ ಓದಿ: ಸಂಸತ್ತಿನ ಭದ್ರತಾ ಲೋಪ: ಕರ್ನಾಟಕದ ಮಾಜಿ ಪೊಲೀಸ್ ಅಧಿಕಾರಿಯೋರ್ವರ ಪುತ್ರ ಸೇರಿ ಮತ್ತಿಬ್ಬರ ಬಂಧನ