ಮನೆಯಲ್ಲಿ ಬಿದ್ದು ಹಣೆಗೆ ಗಾಯ ಮಾಡಿಕೊಂಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
“ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಮಮತಾ ಬ್ಯಾನರ್ಜಿ ಅವರನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು. ಹಣೆಗೆ ಹೊಲಿಗೆಗಳನ್ನು ಹಾಕಲಾಗಿದ್ದು, ವೈದ್ಯಕೀಯ ಪರೀಕ್ಷೆಯ ಬಳಿಕ ಅವರನ್ನು ಮನೆಗೆ ಕಳುಹಿಸಿಕೊಡಲಾಗಿದೆ” ಎಂದು ಕೊಲ್ಕತ್ತಾದ ಎಸ್ಎಸ್ಕೆಎಂ ಆಸ್ಪತ್ರೆಯ ನಿರ್ದೇಶಕ ಮಣಿಮೋಯ್ ಬಂಡೋಪಾಧ್ಯಾಯ ತಿಳಿಸಿದ್ದಾರೆ.
ಗುರುವಾರ ಸಂಜೆ ದಕ್ಷಿಣ ಕೊಲ್ಕಕತ್ತಾದ ಕಾಳಿಘಾಟ್ನ ಮನೆಯಲ್ಲಿದ್ದ ವೇಳೆ ಮಮತಾ ಬ್ಯಾನರ್ಜಿ ಅಚಾನಕ್ಕಾಗಿ ಬಿದ್ದಿದ್ದರು. ಇದರಿಂದ ಅವರ ಹಣೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಮನೆಯಿಂದ ಸುಮಾರು 3 ಕಿ.ಮೀ ದೂರದ ಎಸ್ಎಸ್ಕೆಎಂ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅವರ ಸಹೋದರ ಕಾರ್ತಿಕ್ ಬ್ಯಾನರ್ಜಿ ಮಾಹಿತಿ ನೀಡಿದ್ದಾರೆ.
ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ 8 ವೈದ್ಯರ ವಿಶೇಷ ತಂಡ ರಚಿಸಿ ಮಮತಾ ಬ್ಯಾನರ್ಜಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ವೈದ್ಯರು ಹಣೆಗೆ ಹೊಲಿಗೆ ಹಾಕಿದ್ದಾರೆ. ಚಿಕಿತ್ಸೆಯ ಬಳಿಕ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಮನೆಗೆ ತೆರಳಿದ್ದಾರೆ ಎಂದು ವರದಿಗಳು ಹೇಳಿವೆ.
ಮಮತಾ ಬ್ಯಾನರ್ಜಿ ಹಠಾತ್ ಆಗಿ ಯಾಕೆ ಕುಸಿದು ಬಿದ್ರು? ಅವರಿಗೆ ರಕ್ತದೊಡ್ಡದಂತಹ ಸಮಸ್ಯೆ ಏನಾದರು ಇದೆಯಾ? ಈ ಕುರಿತು ಹೆಚ್ಚಿನ ಪರಿಶೀಲನೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹಿರಿಯ ಕಾಂಗ್ರೆಸ್ ಮತ್ತು ಟಿಎಂಸಿ ನಾಯಕ ಸುಬ್ರತಾ ಮುಖರ್ಜಿ ಅವರ ಸ್ಮರಣಾರ್ಥ ದಕ್ಷಿಣ ಕೋಲ್ಕತ್ತಾದ ಗರಿಯಾಹಟ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಹಿಂದುರುಗಿದ ಸ್ವಲ್ಪ ಸಮಯದ ನಂತರ ಮಮತಾ ಬ್ಯಾನರ್ಜಿ ಕುಸಿದು ಬಿದ್ದಿದ್ದಾರೆ.
ಘಟನೆ ನಡೆದಾಗ ಮಮತಾ ಅವರ ಸೋದರಳಿಯ ಮತ್ತು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮನೆಯಲ್ಲಿದ್ದರು. ಅವರೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಟಿಎಂಸಿ ನಾಯಕ ರಾಜೀಬ್ ಬ್ಯಾನರ್ಜಿ ಹೇಳಿದ್ದಾರೆ.
ಮಮತಾ ಅವರ ಹಣೆಗೆ ಗಂಭೀರ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟಿಎಂಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ನಿನ್ನೆ ಸಂಜೆ ಫೋಟೋ ಹಂಚಿಕೊಂಡಿತ್ತು. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಮಮತಾ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದರು.
ಇದನ್ನೂ ಓದಿ : ಚುನಾವಣಾ ಬಾಂಡ್: ಎಸ್ಬಿಐ ನೀಡಿದ ಮಾಹಿತಿ ವೆಬ್ಸೈಟ್ನಲ್ಲಿ ಪ್ರಕಟಿಸಿದ ಚು. ಆಯೋಗ