ಮಂಗಳೂರಿನ ಇತಿಹಾಸ ಪ್ರಸಿದ್ಧ ಮಂಗಳಾದೇವಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ಎಲ್ಲಾ ದೇವಸ್ಥಾನಗಳು ದತ್ತಿ ಇಲಾಖೆಯ ಕಾನೂನಿಗೆ ಒಳಪಡುತ್ತಿದ್ದು, ಜಾತ್ರಾ ಸಂದರ್ಭ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಸಂತೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ದತ್ತನಗರ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲಾಡಳಿತ ಮಂಗಳಾದೇವಿ ದೇವಸ್ಥಾನದಲ್ಲಿ 2ನೇ ಬಾರಿ ಏಲಂ ಕರೆದು ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಿದ್ದು ಸರಿಯಲ್ಲ. ದತ್ತಿ ಇಲಾಖೆಯ ಕಾನೂನಿನ ಪ್ರಕಾರ ದೇವಸ್ಥಾನಗಳ ರಥಬೀದಿಯಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ. ಬಡ ಹಿಂದೂ ವ್ಯಾಪಾರಸ್ಥರು ಈ ಜಾತ್ರೆ ವ್ಯಾಪಾರ ನಂಬಿ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಕೇಸರಿ ಧ್ವಜ ಹಾಕಿರುವ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡುವಂತೆ ಮಂಗಳಾದೇವಿ ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ವಿನಂತಿಸುವುದಾಗಿ ಅವರು ಹೇಳಿದ್ದಾರೆ.
ಬಡ ಮುಸ್ಲಿಂ ವ್ಯಾಪಾರಿಗಳಿಗೆ ನಮ್ಮ ವಿರೋಧವಿಲ್ಲ. ಕಾರ್ಮಿಕ ಕ್ಷೇತ್ರ ನಮ್ಮ ಹಕ್ಕು. ದತ್ತಿ ಇಲಾಖೆ ಕಾನೂನು ಅನ್ವಯ ರಥಬೀದಿಯಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ. ರಥಬೀದಿ ಬಿಟ್ಟು ಬೇರೆ ಕಡೆ ವ್ಯಾಪಾರ ಮಾಡಿದರೆ ಅಭ್ಯಂತರ ಇಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಸ್ಥಳಕ್ಕೆ ಬಂದ ಕಾರ್ಯಕರ್ತರು, ಸೋಮವಾರ ಮಧ್ಯಾಹ್ನ ಹಿಂದು ವ್ಯಾಪಾರಸ್ಥರು ನಡೆಸುವ ಅಂಗಡಿಗಳಿಗೆ ಕೇಸರಿ ಪತಾಕೆಯನ್ನು ಕಟ್ಟಿದ್ದಾರೆ.
ಇದೇ ವೇಳೆ ಮಾತನಾಡಿದ ಶರಣ್ ಪಂಪ್ವೆಲ್, ”ಇವತ್ತು ಎಲ್ಲಾ ಅಂಗಡಿಗಳಿಗೆ ಕೇಸರಿ ಭಗವಾಧ್ವಜ ಹಾಕಿದ್ದೇವೆ. ಹಿಂದೂಗಳ ಅಂಗಡಿಯೆಂದು ಭಕ್ತರಿಗೆ ಗೊತ್ತಾಗಬೇಕು ಎಂದು ಭಗವಧ್ವಜ ಕಟ್ಟುತ್ತಿದ್ದೇವೆ. ಹಿಂದುಗಳು, ಹಿಂದೂಗಳ ಅಂಗಡಿಯಲ್ಲೇ ವ್ಯಾಪಾರ ಮಾಡಬೇಕು, ಹಿಂದೂಗಳ ದೇವಸ್ಥಾನದಲ್ಲಿ ಹಿಂದುಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು” ಎಂದು ಹೇಳಿದರು.
”ಮಂಗಳಾದೇವಿ ದೇವಸ್ಥಾನದ ದಸರಾ ಸಂದರ್ಭದಲ್ಲಿ ಹಿಂದುಗಳಿಗೆ ಮುತ್ರ ವ್ಯಾಪಾರಕ್ಕೆ ಅವಕಾಶ ಕೊಡಬೇಕು ಎಂಬ ಬೇಡಿಕೆಯನ್ನು ಸನಾತನ ಹಿಂದು ವ್ಯಾಪಾರಸ್ಥರ ಸಂಘದವರು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದರು. ನಮ್ಮ ಈ ರೀತಿಯ ಬೇಡಿಕೆ `ಕಳೆದ ಎರಡು ಮೂರು ವರ್ಷಗಳಿಂದ ಇದೆ ಧಾರ್ಮಿಕ ದತ್ತಿ ಇಲಾಖೆಯ ಕಾನೂನಿನ ಪ್ರಕಾರ ದೇವಸ್ಥಾನ, ಜಾತ್ರೆಯ ಸಂತೆ ವ್ಯಾಪಾರ ಹಿಂದೂಗಳಿಗೆ ಕೊಡಬೇಕು. ಎಂಬ ನಿಯಮ ಇದೆ. ಇದನ್ನೀಗ ಮಂಗಳಾದೇವಿ ದೇವಸ್ಥಾನದಲ್ಲಿ ಮಾಡಿದ್ದೇವೆ. ಮುಂದೆ ಎಲ್ಲಾ ದೇವಸ್ಥಾನಗಳಲ್ಲಿ ಇದೇ ನೀತಿ ಮಾಡಬೇಕು” ಎಂದು ಹೇಳಿದರು.
”ಕಮ್ಯುನಿಸ್ಟ್ ನವರು ಮುಸಲ್ಮಾನ ಬಡ ವ್ಯಾಪಾರಿಗಳಿಗೆ ಅವಕಾಶ ನೀಡಬೇಕು ಎನ್ನುತ್ತಾರೆ, ನಾವು ಮುಸಲ್ಮಾನ, ವ್ಯಾಪಾರಿಗಳ ವಿರೋಧಿಗಳಲ್ಲ. ನಮ್ಮ ದೇವಸ್ಥಾನದ ಸುತ್ತ ಮುತ್ತ ಹಿಂದುಗಳಿಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದೇವೆ. ಆಸುಪಾಸಿನ ರಸ್ತೆಯ ಎಲ್ಲಿ ಬೇಕಾದರೂ ಅನ್ಯಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಕೂಡಿ, ನಮ್ಮ ಅಭ್ಯಂತರ ಇಲ್ಲ. ಎಲ್ಲಿ ದೇವಸ್ಥಾನಕ್ಕೆ ಜನ ಬರುತ್ತಾರೆ, ಎಲ್ಲಿ ದೇವಸ್ಥಾನದ ರಥ ಹೋಗುತ್ತೆ ಅಲ್ಲಿ ಹಿಂದುಗಳಿಗೆ ಅವಕಾಶ ಕೊಡಬೇಕು” ಎಂಬುದು ನಮ್ಮ ನಿಲುವು” ಎಂದರು.
”ಒಮ್ಮೆ ಹರಾಜು ಪ್ರಕ್ರಿಯೆ ಆದ ಬಳಿಕ ಮಹಾನಗರ ಪಾಲಿಕೆ ಮತ್ತೆ ಹರಾಜು ಪ್ರಕ್ರಿಯೆ ನಡೆಸಿದೆ ಒಂದು ಬಾರಿ ಹರಾಜು ಆದ ಬಳಿಕ ಎರಡನೇ ಹರಾಜಿಗೆ ಅವಕಾಶ ಇರುವುದಿಲ್ಲ. ಇದು ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನ, ಕಾನೂನು ಪ್ರಕಾರ ಹಿಂದುಯೇತರರಿಗೆ ಅವಕಾಶ ಇಲ್ಲ. ಯಾವ ರೀತಿಯಲ್ಲಿ ಎರಡನೇ ಸಲ ಹರಾಜು ನಡೆಸಿ ಅನ್ಯರಿಗೆ ಅವಕಾಶ ಕೊಟ್ಟರು ಅಂತ ಗೊತ್ತಿಲ್ಲ ನಾವು ಇದನ್ನ ವಿರೋಧ ಮಾಡ್ತೀವಿ” ಎಂದು ಹೇಳಿದರು.
ಇದನ್ನೂ ಓದಿ: ಮಂಗಳೂರು: ಮಂಗಳಾದೇವಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ