ಲೋಕಸಭೆ ಚುನಾವಣೆಯ ಬಳಿಕ ರಾಜ್ಯದಲ್ಲಿ ತಮ್ಮ ವಿರುದ್ದ ಮತ್ತೆ ಹಿಂಸಾಚಾರ ನಡೆಯುವ ಆತಂಕ ವ್ಯಕ್ತಪಡಿಸಿರುವ ಮಣಿಪುರದ ಬುಡಕಟ್ಟು ಜನಾಂಗ ಕುಕಿ-ಝೋ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಕಳೆದ ಆರು ತಿಂಗಳಿನಿಂದ, ಮಣಿಪುರದ ಕುಕಿ-ಝೋ ಸಮುದಾಯವು ಆಕ್ರಮಣಕಾರಿ ಗುಂಪುಗಳು ಸಂಪೂರ್ಣ ಶಸ್ತ್ರಸಜ್ಜಿತರಾಗಿ ಸಿದ್ದರಾಗುತ್ತಿರುವುದನ್ನು ಪ್ರತ್ಯಕ್ಷವಾಗಿ ನೋಡಿದೆ. ಈ ಗುಂಪುಗಳಲ್ಲಿ ಒಂದಾದ ಅರಂಬೈ ಟೆಂಗೋಲ್ ಕುಕಿಗಳನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕಿದೆ ಎಂದು ಅರ್ಜಿಯಲ್ಲಿ ಹೇಳಿರುವುದಾಗಿ ಬಾರ್ & ಬೆಂಚ್ ವರದಿ ಮಾಡಿದೆ.
ಹಿಂಸಾಚಾರದ ತನಿಖೆಗಳ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿರುವ ಮಹಾರಾಷ್ಟ್ರದ ಪೊಲೀಸ್ ಅಧಿಕಾರಿ ದತ್ತಾತ್ರೇ ಪಡಸಾಲಿಗೀಕರ್ ಅವರು ಕುಕಿ- ಝೋ ಸಮುದಾಯದ ನೆರವಿಗೆ ಬಂದಿಲ್ಲ ಎಂದು ಆರ್ಜಿಯಲ್ಲಿ ಆರೋಪಿಸಲಾಗಿದೆ.
ಸಮುದಾಯದ ಮೇಲಿನ ಕ್ರೂರ ದಾಳಿಯ ಬಗ್ಗೆ ಮತ್ತೆ ಮತ್ತೆ ಮನವಿ ಸಲ್ಲಿಸಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ದಾಳಿಕೋರರು ಸ್ವತಂತ್ರವಾಗಿ ತಿರಗುತ್ತಿದ್ದುಮ ಹಿಂಸಾಚಾರ ಮತ್ತು ಶಸ್ತ್ರಾಸ್ತ್ರ ದೋಚುವಿಕೆಗೆ ಸಂಬಂಧಿಸಿದಂತೆ ಪಡಸಾಲಗೀಕರ್ ಅವರಿಗೆ ಐದು ಮನವಿ ಸಲ್ಲಿಸಿದ್ದರೂ, ಸಂತ್ರಸ್ತ ಸಮುದಾಯದ ನೆರವಿಗೆ ಬಂದಿಲ್ಲ ಎಂದು ಹೇಳಲಾಗಿದೆ.
ಮೊದಲ ದಾಳಿಗಿಂತಲೂ ತೀವ್ರ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ನ್ಯಾಯಾಲಯದ ಮುಂದೆ ಕೈಮುಗಿದು ನಿಂತಿದ್ದೇವೆ. ಕುಕಿ ಸಮುದಾಯದ ಬಾಲಕನ ಶಿರಚ್ಛೇದ ಮಾಡಿದ ಆರೋಪ ಎದುರಿಸುತ್ತಿರುವ ಕುಂಬಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಎಸ್ ಪ್ರೇಮಚಂದ್ರ ಸಿಂಗ್ ಅವರನ್ನು ಬಂಧಿಸಬೇಕು. ಹಿಂಸಾಚಾರ ತಡೆಗಟ್ಟಲು ಅರಂಬೈ ಟೆಂಗೋಲ್ ಮತ್ತು ಮೈತೇಯಿ ಲೀಪುನ್ ಗುಂಪಿನ ನಾಯಕರನ್ನು ಬಂಧಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅಲ್ಲದೆ, 170 ಕುಕಿಗಳ ಸಾವು, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ಆರೋಪ ಪಟ್ಟಿಗಳ ವಿವರಗಳನ್ನು ಮಣಿಪುರ ಸರ್ಕಾರ ಕೂಡಲೇ ಬಹಿರಂಗಪಡಿಸಬೇಕು. ಭಾರತೀಯ ಸೇನೆಯು ತಕ್ಷಣವೇ ಕುಕಿ-ಝೋ ಸಮುದಾಯದ ಜೀವ ಮತ್ತು ಆಸ್ತಿ ರಕ್ಷಣೆಗೆ ಮುಂದಾಗಬೇಕು. ಪಡಸಾಲಿಗೀಕರ್ ಮತ್ತು ನ್ಯಾಯಮೂರ್ತಿ ಗೀತಾ ಮಿತ್ತಲ್ ಸಮಿತಿ ಸಲ್ಲಿಸಿದ ವರದಿಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಲಾಗಿದೆ.
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ವಿವಿಧ ಅರ್ಜಿಗಳು ಸುಪ್ರೀಂ ಕೋರ್ಟ್ ಅಂಗಳದಲ್ಲಿವೆ. ಹಿಂಸಾಚಾರದ ತನಿಖೆ ಮೇಲ್ವಿಚಾರಣೆಗಾಗಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರ ನೇತೃತ್ವದ ಅಖಿಲ ಮಹಿಳಾ ನ್ಯಾಯಾಂಗ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿದೆ. ಆದರೆ, ರಾಜ್ಯ ಸರ್ಕಾರದ ಪ್ರತಿಯೊಂದು ವಿವರಗಳನ್ನು ಪರಿಶೀಲಿಸುವ ಕೆಲಸ ತನ್ನದಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಕೆಲ ತಿಂಗಳುಗಳ ಹಿಂದೆ ತಿಳಿಸಿದ್ದರು.
ಮಾಹಿತಿ ಕೃಪೆ : ಬಾರ್ & ಬೆಂಚ್
ಇದನ್ನೂ ಓದಿ : ‘ಮತಗಟ್ಟೆಗಳಲ್ಲಿ ನಮ್ಮನ್ನು ತಿರಸ್ಕಾರದಿಂದ ನೋಡುತ್ತಾರೆ..’; ತಾರತಮ್ಯದ ಆತಂಕ ವ್ಯಕ್ತಪಡಿಸಿದ ಟ್ರಾನ್ಸ್ಜೆಂಡರ್ ಮತದಾರರು