Homeಮುಖಪುಟಸಿನಿಮಾ ವಿಮರ್ಶೆ: ಯುಎಪಿಎ ಕಾನೂನಿನ ಕರಾಳತೆ ತೆರೆದಿಟ್ಟ `19.20.21’

ಸಿನಿಮಾ ವಿಮರ್ಶೆ: ಯುಎಪಿಎ ಕಾನೂನಿನ ಕರಾಳತೆ ತೆರೆದಿಟ್ಟ `19.20.21’

‘ಯುಎಪಿಎ’ ಎಂಬ ಕರಾಳ ಕಾನೂನಿನ ಕುರಿತು ಕನ್ನಡ ಚಿತ್ರರಂಗದಲ್ಲಿ ಇಷ್ಟು ನೇರವಾಗಿ ಮಾತನಾಡಿರುವ ಸಿನಿಮಾ ಮತ್ತೊಂದಿಲ್ಲ.

- Advertisement -
- Advertisement -

ಭಾರತೀಯರಿಗೆ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿರುವುದು ಸಂವಿಧಾನದ 19ನೇ ವಿಧಿ; ಒಂದೇ ಅಪರಾಧಕ್ಕೆ ಒಂದಕ್ಕಿಂತ ಹೆಚ್ಚು ಭಾರಿ ಶಿಕ್ಷೆ ವಿಧಿಸುವಂತಿಲ್ಲ, ಒಬ್ಬ ವ್ಯಕ್ತಿಯನ್ನು ತನ್ನ ವಿರುದ್ಧ ತಾನೇ ಸಾಕ್ಷಿ ಹೇಳುವಂತೆ ಒತ್ತಾಯಿಸುವಂತಿಲ್ಲ ಎನ್ನುವುದು 20ನೇ ವಿಧಿ; ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ ನೀಡುವ 21ನೇ ವಿಧಿ- ಈ ಮೂರನ್ನು ಪ್ರಭುತ್ವ (ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಸೇನೆ) ಹೇಗೆ ದಮನ ಮಾಡಲು ಯತ್ನಿಸುತ್ತಿದೆ ಎಂಬುದನ್ನು ಒಂದು ಪ್ರಕರಣದ ಸುತ್ತ ಹೇಳಿರುವ ಕನ್ನಡ ಸಿನಿಮಾ- ‘19.20.21’.

ಪ್ರಾಸಂಗಿಕವಾಗಿಯಷ್ಟೇ ‘19.20.21’ ವಿಧಿಗಳನ್ನು ನಿರ್ದೇಶಕ ಮಂಸೋರೆಯವರು ಪ್ರಸ್ತಾಪಿಸಿದ್ದಾರೆಂಬುದು ನಿರ್ವೀವಾದ. ನಿಜ ಘಟನೆಯೊಂದರ ಸುತ್ತ ಹೆಣೆದಿರುವ ಇಲ್ಲಿನ ಕತೆ, ಚಿತ್ರಕತೆಯು- ಸಂವಿಧಾನದ ವಿರುದ್ಧ ಪ್ರಭುತ್ವ ಹೇಗೆ ನಡೆದುಕೊಳ್ಳುತ್ತದೆ ಎಂಬುದಕ್ಕೆ ಒಂದು ನಿದರ್ಶನವಷ್ಟೇ. ಈ ಮೂರು ವಿಧಿಗಳ ನೆಪದಲ್ಲಿ, ಸಂವಿಧಾನ ಪ್ರತಿಪಾದಿಸುವ ಏನೆಲ್ಲ ಆಶಯಗಳನ್ನು ಹೇಳಲು ಸಾಧ್ಯವೇ ಅದೆಲ್ಲವನ್ನೂ ಒಂದು ಪ್ರಕರಣದ ಹಿನ್ನೆಲೆಯಲ್ಲಿ ‘ಮಂಸೋರೆ’ ಹೇಳಲು ಪ್ರಯತ್ನಿಸಿದ್ದಾರೆ.

‘ಹರಿವು’, ‘ನಾತಿಚರಾಮಿ’ಯ ನಂತರದಲ್ಲಿ ‘ಆಕ್ಟಿವಿಸಂ’ ಪ್ರೇರಿತ ಕಥೆಗೆ ಧುಮುಕಿರುವ ಮಂಸೋರೆ, ‘ಆಕ್ಟ್‌- 1978’ಗಿಂತ ಗಟ್ಟಿಯಾಗಿ, ಶೋಷಿತ ಸಮುದಾಯಗಳ ಕಷ್ಟವನ್ನು ನೇರವಾಗಿ, ನಿರ್ಭಿಡೆಯಿಂದ ಇಲ್ಲಿ ಮಾತನಾಡಿದ್ದಾರೆ. ‘ಆಕ್ಟ್‌ 1978’ ಅತಿ ಭಾವುಕತೆಗೆ ಒತ್ತು ನೀಡಿದಂತೆ ಭಾಸವಾಗಿತ್ತು. ಆದರೆ ಇಲ್ಲಿ ಸಹಜ ಸೌಂದರ್ಯಕ್ಕೆ ಆದ್ಯತೆ ನೀಡಿದ್ದಾರೆ.

ಇಲ್ಲಿನ ಪಾತ್ರಗಳು ಕಾಲ್ಪನಿಕವಲ್ಲ. ನಿಜ ಘಟನೆಯಾಧಾರಿತ ಈ ಸಿನಿಮಾದೊಳಗೆ ಬಳಸಲಾಗಿರುವ ಹೆಸರುಗಳನ್ನು ಬದಲಿಸಲಾಗಿದ್ದರೂ ಅವು ನಮ್ಮ ನಡುವೆಯೇ ಇರುವ ನಿಜ ಜೀವಗಳು. ಪ್ರಭುತ್ವದ ಹಿಂಸಾ ಪ್ರವೃತ್ತಿಯನ್ನು, ಪ್ರಜಾಪ್ರತಿನಿಧಿಗಳನ್ನು ಪ್ರಶ್ನಿಸಿದ ಮಾತ್ರಕ್ಕೆ ಹೇಗೆ ಒಂದು ಸ್ಥಾಪಿತ ವ್ಯವಸ್ಥೆ ಅಸಹಾಯಕ ಜೀವಗಳ ಮೇಲೆ ಗದಾಪ್ರಹಾರ ಮಾಡುತ್ತದೆ ಎಂಬುದನ್ನು ‘ರಿವರ್ಸ್ ಸ್ಕ್ರೀನ್‌ ಪ್ಲೇ’ನಲ್ಲಿ ಈ ಸಿನಿಮಾ ಕಟ್ಟಿಕೊಡುತ್ತದೆ.

ಇದನ್ನೂ ಓದಿರಿ: ಫರ್ಜಿ: ರಾಜ್ ಮತ್ತು ಡಿಕೆ ಜೋಡಿಯ ಮತ್ತೊಂದು ಥ್ರಿಲ್ಲರ್ ವೆಬ್ ಸಿರೀಸ್

‘ನಕ್ಸಲ್‌’ ಎಂಬ ಹಣೆಪಟ್ಟಿಯು ಪ್ರಶ್ನಿಸುವವರನ್ನು ದಮನ ಮಾಡಲು ಬಳಸುವ ಅಸ್ತ್ರವೂ ಹೌದು. ಹಾಗೆಯೇ ನಕ್ಸಲ್‌ ಚಳವಳಿಗೆ ‘ಭಯೋತ್ಪಾದನೆ’ಯ ಬಣ್ಣ ಹಚ್ಚುವುದು ಹೊಸದೇನಲ್ಲ! ‘ವಿಠ್ಠಲ್‌ ಮಲೆಕುಡಿಯ’ ಎಂಬ ಆದಿವಾಸಿ ಯುವಕನನ್ನು ಇನ್ನಿಲ್ಲದಂತೆ ಶೋಷಿಸಿದ ನಿಜ ಘಟನೆಯ ಸುತ್ತ ಕಥೆ ಹರಡಿದೆ. ಈ ನೆಲದ ಮೂಲ ನಿವಾಸಿಗಳನ್ನು ಕಾಡಿನಿಂದ ನಾಡಿಗೆ ದಬ್ಬುವ ವಿಛಿದ್ರಕಾರಿ ನೀತಿಗಳ ನಡುವೆ ಹುಟ್ಟಿಕೊಂಡ ನಕ್ಸಲ್‌ ಚಳವಳಿ, ಅದರ ನೆಪದಲ್ಲಿ ಬಂದ ನಕ್ಸಲ್‌ ನಿಗ್ರಹ ದಳ ಎಸಗುವ ದೌರ್ಜನ್ಯ, ಕಾಡಿನಿಂದ ಹೊರದಬ್ಬಲು ಆದಿವಾಸಿಗಳನ್ನು ಇನ್ನಿಲ್ಲದಂತೆ ಹಿಂಸಿಸುವ ರೀತಿ- ಇವೆಲ್ಲವನ್ನೂ ಈ ಕಥೆ ಒಳಗೊಂಡಿದೆ.

‘ಯುಎಪಿಎ’ (ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ- ಕಾಯಿದೆ, 1967) ಎಂಬ ಕರಾಳ ಕಾನೂನಿನ ಕುರಿತು ಕನ್ನಡ ಚಿತ್ರರಂಗದಲ್ಲಿ ಇಷ್ಟು ನೇರವಾಗಿ ಮಾತನಾಡಿರುವ ಸಿನಿಮಾ ಮತ್ತೊಂದಿಲ್ಲ. ಪ್ರಶ್ನಿಸುವವರನ್ನು, ಸಾಂವಿಧಾನಿಕ ಹಕ್ಕುಗಳನ್ನು ಪ್ರತಿಪಾದಿಸುವವರನ್ನು ‘ಯುಎಪಿಎ’ ಅಡಿ ಬಂಧಿಸಿ, ಭಯೋತ್ಪಾದಕ, ದೇಶದ್ರೋಹಿ ಎಂಬೆಲ್ಲಾ ಪಟ್ಟ ಕಟ್ಟುವ ಪ್ರಭುತ್ವದ ಆಟಾಟೋಪಗಳನ್ನು ಈ ಸಿನಿಮಾ ಮನವರಿಕೆ ಮಾಡಿದೆ; ‘ಯುಎಪಿಎ’ ಹಾಕಿಸಿಕೊಂಡವರಲ್ಲ ದೇಶದ್ರೋಹಿಗಳಲ್ಲ, ಭಯೋತ್ಪಾದಕರಲ್ಲ ಎಂಬುದನ್ನು ಮನವರಿಕೆ ಮಾಡುತ್ತದೆ.

‘ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಗತ್‌ಸಿಂಗ್‌ ಕುರಿತು ಓದುವುದು ದೇಶದ್ರೋಹವೇ?’ ಎಂಬ ಪ್ರಶ್ನೆಯನ್ನು ಪ್ರಭುತ್ವದ ಎದೆಗೆ ಒದ್ದಂತೆ ಕೇಳಲಾಗಿದೆ. ಎಡ- ಬಲ ನಡುವೆ ಬ್ಯಾಲೆನ್ಸ್ ಮಾಡಿ, ಪ್ರಭುತ್ವ ಪ್ರೇರಿತ ಬಲಪಂಥೀಯ ದಾಳಿಯಿಂದ ನುಣುಚಿಕೊಳ್ಳುವ ಯತ್ನವನ್ನು ಮಂಸೋರೆ ಮತ್ತು ತಂಡ ಮಾಡಿಲ್ಲ. ನೇರವಾಗಿ ಸಂವಿಧಾನ ಮತ್ತು ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಶ್ರೀರಕ್ಷೆಗೆ ಅಥವಾ ಆಶ್ರಯಕ್ಕೆ ಹೊರಳಿ, ಹೇಳಬೇಕಾದದ್ದನ್ನು ಗಟ್ಟಿಯಾಗಿ ಹೇಳಿ ಮುಗಿಸಿದ್ದಾರೆ. ಈ ಕಾಲದಲ್ಲಿ ನಡೆಯುತ್ತಿರುವುದು ‘ಪ್ರಭುತ್ವ v/s ಸಂವಿಧಾನ’ ಎಂಬುದನ್ನು ಸ್ಪಷ್ಟವಾಗಿ ತಿಳಿಸಲು ಯಾವುದೇ ಮುಲಾಜಿಗೆ ಚಿತ್ರತಂಡ ಒಳಗಾಗಿಲ್ಲ.

ನಕ್ಸಲ್‌ ಚಳವಳಿಯ ಉದ್ದೇಶಗಳಿಗೆ ಕಥೆ ಹೆಚ್ಚಾಗಿ ಹೊರಳದಿದ್ದರೂ ನಕ್ಸಲ್‌ ಹಣೆಪಟ್ಟಿ ಕಟ್ಟಿ ಅಸಹಾಯಕ ಸಮುದಾಯಗಳನ್ನು ಶೋಷಿಸುವ ಪ್ರಭುತ್ವದ ಮೇಲೆ ಇಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಕ್ಸಲ್‌ ಚಳವಳಿಯ ರಕ್ತಸಿಕ್ತ ಹಾದಿಯ ಕುರಿತು ಚರ್ಚಿಸದಿದ್ದರೂ ಕತೆಯ ಮೂಲಕವೇ ನಮ್ಮದು ‘ಪ್ರಜಾಸತ್ತಾತ್ಮಕ ಎಡಪಂಥ’ ಆಗಿರಬೇಕು ಎಂಬ ಆಶಯವನ್ನು ಈ ಸಿನಿಮಾ ಧ್ವನಿಸಿದಂತಿದೆ.

‘ಲಾಲ್‌ ಸಲಾಂ, ಇನ್‌ಕ್ವಿಲಾಬ್‌ ಜಿಂದಾಬಾದ್‌’ ಎಂಬ ಘೋಷಣೆಗಳನ್ನು ನಕ್ಸಲ್‌ ಚಳವಳಿಯಲ್ಲಿ ತೊಡಗಿಸಿಕೊಂಡವರೂ ಹೇಳುತ್ತಾರೆ, ಅದರ ಜೊತೆಗೆ ನಾಡಿನೊಳಗೆ ಪ್ರಭುತ್ವವನ್ನು ಎದುರಿಸುತ್ತಿರುವ ಎಡಪಂಥೀಯ ಧೋರಣೆಯ ಚಳವಳಿಗಾರರೂ ಕೂಗುತ್ತಾರೆ. ಆದರೆ ಬಂದೂಕು ಹಿಡಿದ ‘ಲಾಲ್‌ ಸಲಾಂ, ಇನ್‌ಕ್ವಿಲಾಬ್‌ ಜಿಂದಾಬಾದ್‌’ಅನ್ನು ಪ್ರಭುತ್ವ ಸುಲಭವಾಗಿ ಮುಗಿಸಬಲ್ಲದು, ಆದರೆ ಪ್ರಜಾಸತ್ತಾತ್ಮಕವಾದ ‘ಲಾಲ್‌ ಸಲಾಂ, ಇನ್‌ಕ್ವಿಲಾಬ್‌ ಜಿಂದಾಬಾದ್‌’ಅನ್ನು ಅಷ್ಟು ಸುಲಭವಾಗಿ ದಮನ ಮಾಡಲು ಸಾಧ್ಯವಿಲ್ಲ ಎಂಬುದನ್ನು- ಎರಡು ನೆಲೆಯ ದೃಷ್ಟಿಕೋನಗಳ ಮೂಲಕ ಸೂಕ್ಷ್ಮವಾಗಿ ಹೇಳುವ ಪ್ರಯತ್ನವನ್ನು ಮಂಸೋರೆ ಮಾಡಿದಂತಿದೆ. ಇಲ್ಲಿ ಬರುವ ರಫಿ, ಪತ್ರಕರ್ತ ವಿಜಯ್, ಸುರೇಶ್ ಹೆಗ್ಡೆ ಮೊದಲಾದವರು ಪ್ರಜಾಸತ್ತಾತ್ಮಕ ಎಡಪಂಥೀಯ ‘ಕೆಂಬಾವುಟ’ದ ಉದಾಹರಣೆಯಾಗಿ ನಿಲ್ಲುತ್ತಾರೆ.

ನಿರ್ದೇಶಕ ಮಂಸೋರೆ

ದ್ವಿತೀಯಾರ್ಧದಲ್ಲಿ ಕೋರ್ಟ್ ರೂಮ್‌ಗೆ ಹೆಚ್ಚಿನ ಸ್ಪೇಸ್‌ ಸಿಕ್ಕಿದೆ. ಕತೆಗೆ ಅದು ಅನಿವಾರ್ಯವೂ ಆಗಿದೆ. ಈ ವೇಳೆ ಸಂಭಾಷಣೆಗೆ ಹೆಚ್ಚು ಒತ್ತು ಕೊಟ್ಟಿರುವುದು ಢಾಳಾಗಿ ಕಾಣುತ್ತದೆ. ಆದರೆ ಆ ಸಂಭಾಷಣೆ ಈ ಸಿನಿಮಾದ ಆತ್ಮವೂ ಹೌದು. ಆದರೆ ಇಲ್ಲಿ ಬೋಧನೆ ಮಾಡಲಾಗುತ್ತಿದೆ ಎಂಬ ಅಪವಾದದಿಂದ ಪಾರಾಗಲು ನಿರ್ದೇಶಕರು ಜಾಣ್ಮೆ ವಹಿಸಿದ್ದಾರೆ. ‘ಸಂವಿಧಾನದ ಕುರಿತು ಕೋರ್ಟ್‌ನಲ್ಲಿ ಹೇಳದೆ, ಕಾಡಿನಲ್ಲಿ ಹೇಳಲೇ?’ ಎಂಬ ಡೈಲಾ‌ಗ್‌ ಇರಬಹುದು, ಸಂವಿಧಾನದ ಮೂರು ವಿಧಿಗಳನ್ನು ಮಲೆ ಕುಡಿಯ ಸಮುದಾಯದ ನೋವಿನ ಕತೆಗೆ ಥಳುಕು ಹಾಕಿ ಹೇಳುವುದಿರಬಹುದು, ಆ ಮೂಲಕ ಸಂವಿಧಾನದ ಆಶಯವನ್ನು ನಿಚ್ಚಳವಾಗಿ ಪ್ರತಿಪಾದಿಸುವುದಿರಬಹುದು- ಇವೆಲ್ಲ ಚಿತ್ರಕತೆಗಾರರು ವಹಿಸಿರುವ ಎಚ್ಚರಿಕೆಯಾಗಿಯೂ ಕಾಣುತ್ತವೆ.

ಇಲ್ಲಿಯೇ ಇನ್ನೊಂದು ಮಾತು ಸೇರಿಸಬೇಕು; ತಮಿಳಿನ ‘ಜೈ ಭೀಮ್‌’, ಮಲಯಾಳಂನ ‘ಜನಗಣಮನ’ ಸಿನಿಮಾದಲ್ಲಿನ ಕೋರ್ಟ್ ರೂಮ್‌ ದೃಶ್ಯಗಳು ಅತಿ ಅನಿಸಬಹುದಾದ ಅಭಿನಯ, ಹೀರೋಯಿಸಂ, ನಾಟಕೀಯತೆಯಿಂದ ಭಾರವಾದಂತೆ ಭಾಸವಾಗಿದ್ದವು. ಆದರೆ ಅಂಥದ್ದೇ ಕತೆಯನ್ನು ವ್ಯವಹರಿಸುತ್ತಿರುವ ‘19.20.21’ ಸಿನಿಮಾದಲ್ಲಿ ಕೋರ್ಟ್ ಸೀನ್‌ಗಳು, ನ್ಯಾಯಾಧೀಶರ ಮಾತುಕತೆಗಳು, ವಕೀಲರ ವಾದಗಳು ಸಹಜವೂ ಸುಂದರವೂ ಆಗಿ ಹೊಮ್ಮಿವೆ. ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ, ಉದ್ಗಾರಗಳೇ ಈ ಸಹಜತೆಗೆ ಸಾಕ್ಷಿಯಾಗಿ ನಿಲ್ಲುತ್ತವೆ.

ಇದನ್ನೂ ಓದಿರಿ: ‘ವಾತಿ’ ವಿಮರ್ಶೆ| ಖಾಸಗಿ ಶಿಕ್ಷಣ ಮಾಫಿಯಾ ಸುತ್ತ ಕಮರ್ಷಿಯಲ್‌ ಕತೆ

ನಕ್ಸಲ್‌ ನಿಗ್ರಹ ಪಡೆಯ ಕ್ರೌರ್ಯ, ಪೊಲೀಸ್ ವ್ಯವಸ್ಥೆ ಕೈಗೊಳ್ಳುವ ಪಿತೂರಿಗಳು ಪ್ರಭುತ್ವದ ಭಾಗವಷ್ಟೇ. ಅವರದ್ದು ವೃತ್ತಿಪರವಾಗಿ, ಸರ್ಕಾರದ ಭಾಗವಾಗಿ ಎಸಗುವ ಅಪರಾಧ. ಹೀಗಾಗಿಯೇ ಪ್ರಭುತ್ವದ ಪ್ರತಿನಿಧಿಯಾಗಿದ್ದ ಪೊಲೀಸ್ ಅಧಿಕಾರಿ, ನಿವೃತ್ತಿಯ ನಂತರದಲ್ಲಿ ಕೋರ್ಟ್ ಮುಂದೆ ನಿಂತು, ತಾನು ಹಿನ್ನಡೆ ಅನುಭವಿಸಿದ ಬಳಿಕವೂ ಹಸ್ತಲಾಘನ ಮಾಡುವುದು ನಿಜಕ್ಕೂ ಅರ್ಥಪೂರ್ಣವಾಗಿದೆ. ನಾವೆಲ್ಲ ಒಂದು ಪಿತೂರಿ ಕಾನೂನು ವ್ಯವಸ್ಥೆಯ ಭಾಗವಷ್ಟೇ ಎಂಬುದನ್ನು ಈ ಪಾತ್ರ ಸೂಚ್ಯವಾಗಿ ಹೇಳಿದಂತಿದೆ.

ಆದಿವಾಸಿಗಳ ಮೇಲಾಗುವ ದೌರ್ಜನ್ಯಗಳನ್ನು ಚಿತ್ರಿಸುವಾಗ ಒಂದಿಷ್ಟು ಲಂಬಿಸಿದಂತೆ ಭಾಸವಾಗುತ್ತದೆ. ಕತೆ ಹೇಳುವುದಕ್ಕೆ ನಮಗೆ ಧಾವಂತವಿಲ್ಲ ಎಂಬುದನ್ನು ಕತೆ, ಚಿತ್ರಕತೆ ಬರೆದಿರುವ ಮಂಸೋರೆ ಹಾಗೂ ವೀರೇಂದ್ರ ಮಲ್ಲಣ್ಣ ಒಪ್ಪಿಕೊಂಡಿದ್ದಾರೆ.

ಶೃಂಗ ಬಿ.ವಿ., ಬಾಲಾಜಿ ಮನೋಹರ್, ಎಂ.ಡಿ. ಪಲ್ಲವಿ, ರಾಜೇಶ್ ನಟರಂಗ, ಅವಿನಾಶ್, ಮಹದೇವ್ ಹಡಪದ್, ವೆಂಕಟೇಶ್ ಪ್ರಸಾದ್, ಬಿ.ಎಂ.ಗಿರಿರಾಜ್‌, ವೈ.ಜಿ.ಉಮಾ- ಹೀಗೆ ಎಲ್ಲರೂ ತಮ್ಮ ಅಭಿನಯದ ಮೂಲಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಅನೇಕರು ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಂದು ಮಾಲಿನಿಯವರ ಸಂಗೀತ, ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತ, ಶಿವ ಬಿ.ಕೆ.ಕುಮಾರ್‌ ಅವರ ಸಿನಿಮಾಟೋಗ್ರಫಿ ಕತೆಯ ತೂಕವನ್ನು ಹೆಚ್ಚಿಸಿವೆ. ಇಂಥದೊಂದು ಸಿನಿಮಾಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕ ದೇವರಾಜ್ ಆರ್‌. ಅವರು ಗೆದ್ದರೆ ಮತ್ತಷ್ಟು ಇಂತಹ ಒಳ್ಳೆಯ ಕಥೆಗಳು ಕನ್ನಡ ಚಿತ್ರರಂಗದಲ್ಲಿ ಮೂಡಿ ಬರಲು ಸಾಧ್ಯವಾಗಬಹುದು.

ಆದಿವಾಸಿಗಳ ಕತೆ ಹೇಳುತ್ತೇವೆ ಎಂದು ನಯವಾಗಿ ಪ್ರಭುತ್ವಕ್ಕೆ ಶರಣಾಗಬೇಕೆಂಬ ಸಂದೇಶ ನೀಡುವ, ರಂಜನೆಯ ಮೂಲಕ ವಂಚಿಸುವ ಸಿನಿಮಾಗಳಿಗಿಂತ ‘19.20.21’ ಥರದ ನೆಲದ ವಾಸ್ತವಗಳನ್ನು ಒಳಗೊಂಡ ಮತ್ತಷ್ಟು ಸಿನಿಮಾಗಳು ಮೂಡಿಬರಬೇಕಾದ ತುರ್ತು ಇಂದಿಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...