Homeಮುಖಪುಟಸಿನಿಮಾ ವಿಮರ್ಶೆ: ಯುಎಪಿಎ ಕಾನೂನಿನ ಕರಾಳತೆ ತೆರೆದಿಟ್ಟ `19.20.21’

ಸಿನಿಮಾ ವಿಮರ್ಶೆ: ಯುಎಪಿಎ ಕಾನೂನಿನ ಕರಾಳತೆ ತೆರೆದಿಟ್ಟ `19.20.21’

‘ಯುಎಪಿಎ’ ಎಂಬ ಕರಾಳ ಕಾನೂನಿನ ಕುರಿತು ಕನ್ನಡ ಚಿತ್ರರಂಗದಲ್ಲಿ ಇಷ್ಟು ನೇರವಾಗಿ ಮಾತನಾಡಿರುವ ಸಿನಿಮಾ ಮತ್ತೊಂದಿಲ್ಲ.

- Advertisement -
- Advertisement -

ಭಾರತೀಯರಿಗೆ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿರುವುದು ಸಂವಿಧಾನದ 19ನೇ ವಿಧಿ; ಒಂದೇ ಅಪರಾಧಕ್ಕೆ ಒಂದಕ್ಕಿಂತ ಹೆಚ್ಚು ಭಾರಿ ಶಿಕ್ಷೆ ವಿಧಿಸುವಂತಿಲ್ಲ, ಒಬ್ಬ ವ್ಯಕ್ತಿಯನ್ನು ತನ್ನ ವಿರುದ್ಧ ತಾನೇ ಸಾಕ್ಷಿ ಹೇಳುವಂತೆ ಒತ್ತಾಯಿಸುವಂತಿಲ್ಲ ಎನ್ನುವುದು 20ನೇ ವಿಧಿ; ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ ನೀಡುವ 21ನೇ ವಿಧಿ- ಈ ಮೂರನ್ನು ಪ್ರಭುತ್ವ (ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಸೇನೆ) ಹೇಗೆ ದಮನ ಮಾಡಲು ಯತ್ನಿಸುತ್ತಿದೆ ಎಂಬುದನ್ನು ಒಂದು ಪ್ರಕರಣದ ಸುತ್ತ ಹೇಳಿರುವ ಕನ್ನಡ ಸಿನಿಮಾ- ‘19.20.21’.

ಪ್ರಾಸಂಗಿಕವಾಗಿಯಷ್ಟೇ ‘19.20.21’ ವಿಧಿಗಳನ್ನು ನಿರ್ದೇಶಕ ಮಂಸೋರೆಯವರು ಪ್ರಸ್ತಾಪಿಸಿದ್ದಾರೆಂಬುದು ನಿರ್ವೀವಾದ. ನಿಜ ಘಟನೆಯೊಂದರ ಸುತ್ತ ಹೆಣೆದಿರುವ ಇಲ್ಲಿನ ಕತೆ, ಚಿತ್ರಕತೆಯು- ಸಂವಿಧಾನದ ವಿರುದ್ಧ ಪ್ರಭುತ್ವ ಹೇಗೆ ನಡೆದುಕೊಳ್ಳುತ್ತದೆ ಎಂಬುದಕ್ಕೆ ಒಂದು ನಿದರ್ಶನವಷ್ಟೇ. ಈ ಮೂರು ವಿಧಿಗಳ ನೆಪದಲ್ಲಿ, ಸಂವಿಧಾನ ಪ್ರತಿಪಾದಿಸುವ ಏನೆಲ್ಲ ಆಶಯಗಳನ್ನು ಹೇಳಲು ಸಾಧ್ಯವೇ ಅದೆಲ್ಲವನ್ನೂ ಒಂದು ಪ್ರಕರಣದ ಹಿನ್ನೆಲೆಯಲ್ಲಿ ‘ಮಂಸೋರೆ’ ಹೇಳಲು ಪ್ರಯತ್ನಿಸಿದ್ದಾರೆ.

‘ಹರಿವು’, ‘ನಾತಿಚರಾಮಿ’ಯ ನಂತರದಲ್ಲಿ ‘ಆಕ್ಟಿವಿಸಂ’ ಪ್ರೇರಿತ ಕಥೆಗೆ ಧುಮುಕಿರುವ ಮಂಸೋರೆ, ‘ಆಕ್ಟ್‌- 1978’ಗಿಂತ ಗಟ್ಟಿಯಾಗಿ, ಶೋಷಿತ ಸಮುದಾಯಗಳ ಕಷ್ಟವನ್ನು ನೇರವಾಗಿ, ನಿರ್ಭಿಡೆಯಿಂದ ಇಲ್ಲಿ ಮಾತನಾಡಿದ್ದಾರೆ. ‘ಆಕ್ಟ್‌ 1978’ ಅತಿ ಭಾವುಕತೆಗೆ ಒತ್ತು ನೀಡಿದಂತೆ ಭಾಸವಾಗಿತ್ತು. ಆದರೆ ಇಲ್ಲಿ ಸಹಜ ಸೌಂದರ್ಯಕ್ಕೆ ಆದ್ಯತೆ ನೀಡಿದ್ದಾರೆ.

ಇಲ್ಲಿನ ಪಾತ್ರಗಳು ಕಾಲ್ಪನಿಕವಲ್ಲ. ನಿಜ ಘಟನೆಯಾಧಾರಿತ ಈ ಸಿನಿಮಾದೊಳಗೆ ಬಳಸಲಾಗಿರುವ ಹೆಸರುಗಳನ್ನು ಬದಲಿಸಲಾಗಿದ್ದರೂ ಅವು ನಮ್ಮ ನಡುವೆಯೇ ಇರುವ ನಿಜ ಜೀವಗಳು. ಪ್ರಭುತ್ವದ ಹಿಂಸಾ ಪ್ರವೃತ್ತಿಯನ್ನು, ಪ್ರಜಾಪ್ರತಿನಿಧಿಗಳನ್ನು ಪ್ರಶ್ನಿಸಿದ ಮಾತ್ರಕ್ಕೆ ಹೇಗೆ ಒಂದು ಸ್ಥಾಪಿತ ವ್ಯವಸ್ಥೆ ಅಸಹಾಯಕ ಜೀವಗಳ ಮೇಲೆ ಗದಾಪ್ರಹಾರ ಮಾಡುತ್ತದೆ ಎಂಬುದನ್ನು ‘ರಿವರ್ಸ್ ಸ್ಕ್ರೀನ್‌ ಪ್ಲೇ’ನಲ್ಲಿ ಈ ಸಿನಿಮಾ ಕಟ್ಟಿಕೊಡುತ್ತದೆ.

ಇದನ್ನೂ ಓದಿರಿ: ಫರ್ಜಿ: ರಾಜ್ ಮತ್ತು ಡಿಕೆ ಜೋಡಿಯ ಮತ್ತೊಂದು ಥ್ರಿಲ್ಲರ್ ವೆಬ್ ಸಿರೀಸ್

‘ನಕ್ಸಲ್‌’ ಎಂಬ ಹಣೆಪಟ್ಟಿಯು ಪ್ರಶ್ನಿಸುವವರನ್ನು ದಮನ ಮಾಡಲು ಬಳಸುವ ಅಸ್ತ್ರವೂ ಹೌದು. ಹಾಗೆಯೇ ನಕ್ಸಲ್‌ ಚಳವಳಿಗೆ ‘ಭಯೋತ್ಪಾದನೆ’ಯ ಬಣ್ಣ ಹಚ್ಚುವುದು ಹೊಸದೇನಲ್ಲ! ‘ವಿಠ್ಠಲ್‌ ಮಲೆಕುಡಿಯ’ ಎಂಬ ಆದಿವಾಸಿ ಯುವಕನನ್ನು ಇನ್ನಿಲ್ಲದಂತೆ ಶೋಷಿಸಿದ ನಿಜ ಘಟನೆಯ ಸುತ್ತ ಕಥೆ ಹರಡಿದೆ. ಈ ನೆಲದ ಮೂಲ ನಿವಾಸಿಗಳನ್ನು ಕಾಡಿನಿಂದ ನಾಡಿಗೆ ದಬ್ಬುವ ವಿಛಿದ್ರಕಾರಿ ನೀತಿಗಳ ನಡುವೆ ಹುಟ್ಟಿಕೊಂಡ ನಕ್ಸಲ್‌ ಚಳವಳಿ, ಅದರ ನೆಪದಲ್ಲಿ ಬಂದ ನಕ್ಸಲ್‌ ನಿಗ್ರಹ ದಳ ಎಸಗುವ ದೌರ್ಜನ್ಯ, ಕಾಡಿನಿಂದ ಹೊರದಬ್ಬಲು ಆದಿವಾಸಿಗಳನ್ನು ಇನ್ನಿಲ್ಲದಂತೆ ಹಿಂಸಿಸುವ ರೀತಿ- ಇವೆಲ್ಲವನ್ನೂ ಈ ಕಥೆ ಒಳಗೊಂಡಿದೆ.

‘ಯುಎಪಿಎ’ (ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ- ಕಾಯಿದೆ, 1967) ಎಂಬ ಕರಾಳ ಕಾನೂನಿನ ಕುರಿತು ಕನ್ನಡ ಚಿತ್ರರಂಗದಲ್ಲಿ ಇಷ್ಟು ನೇರವಾಗಿ ಮಾತನಾಡಿರುವ ಸಿನಿಮಾ ಮತ್ತೊಂದಿಲ್ಲ. ಪ್ರಶ್ನಿಸುವವರನ್ನು, ಸಾಂವಿಧಾನಿಕ ಹಕ್ಕುಗಳನ್ನು ಪ್ರತಿಪಾದಿಸುವವರನ್ನು ‘ಯುಎಪಿಎ’ ಅಡಿ ಬಂಧಿಸಿ, ಭಯೋತ್ಪಾದಕ, ದೇಶದ್ರೋಹಿ ಎಂಬೆಲ್ಲಾ ಪಟ್ಟ ಕಟ್ಟುವ ಪ್ರಭುತ್ವದ ಆಟಾಟೋಪಗಳನ್ನು ಈ ಸಿನಿಮಾ ಮನವರಿಕೆ ಮಾಡಿದೆ; ‘ಯುಎಪಿಎ’ ಹಾಕಿಸಿಕೊಂಡವರಲ್ಲ ದೇಶದ್ರೋಹಿಗಳಲ್ಲ, ಭಯೋತ್ಪಾದಕರಲ್ಲ ಎಂಬುದನ್ನು ಮನವರಿಕೆ ಮಾಡುತ್ತದೆ.

‘ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಗತ್‌ಸಿಂಗ್‌ ಕುರಿತು ಓದುವುದು ದೇಶದ್ರೋಹವೇ?’ ಎಂಬ ಪ್ರಶ್ನೆಯನ್ನು ಪ್ರಭುತ್ವದ ಎದೆಗೆ ಒದ್ದಂತೆ ಕೇಳಲಾಗಿದೆ. ಎಡ- ಬಲ ನಡುವೆ ಬ್ಯಾಲೆನ್ಸ್ ಮಾಡಿ, ಪ್ರಭುತ್ವ ಪ್ರೇರಿತ ಬಲಪಂಥೀಯ ದಾಳಿಯಿಂದ ನುಣುಚಿಕೊಳ್ಳುವ ಯತ್ನವನ್ನು ಮಂಸೋರೆ ಮತ್ತು ತಂಡ ಮಾಡಿಲ್ಲ. ನೇರವಾಗಿ ಸಂವಿಧಾನ ಮತ್ತು ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಶ್ರೀರಕ್ಷೆಗೆ ಅಥವಾ ಆಶ್ರಯಕ್ಕೆ ಹೊರಳಿ, ಹೇಳಬೇಕಾದದ್ದನ್ನು ಗಟ್ಟಿಯಾಗಿ ಹೇಳಿ ಮುಗಿಸಿದ್ದಾರೆ. ಈ ಕಾಲದಲ್ಲಿ ನಡೆಯುತ್ತಿರುವುದು ‘ಪ್ರಭುತ್ವ v/s ಸಂವಿಧಾನ’ ಎಂಬುದನ್ನು ಸ್ಪಷ್ಟವಾಗಿ ತಿಳಿಸಲು ಯಾವುದೇ ಮುಲಾಜಿಗೆ ಚಿತ್ರತಂಡ ಒಳಗಾಗಿಲ್ಲ.

ನಕ್ಸಲ್‌ ಚಳವಳಿಯ ಉದ್ದೇಶಗಳಿಗೆ ಕಥೆ ಹೆಚ್ಚಾಗಿ ಹೊರಳದಿದ್ದರೂ ನಕ್ಸಲ್‌ ಹಣೆಪಟ್ಟಿ ಕಟ್ಟಿ ಅಸಹಾಯಕ ಸಮುದಾಯಗಳನ್ನು ಶೋಷಿಸುವ ಪ್ರಭುತ್ವದ ಮೇಲೆ ಇಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಕ್ಸಲ್‌ ಚಳವಳಿಯ ರಕ್ತಸಿಕ್ತ ಹಾದಿಯ ಕುರಿತು ಚರ್ಚಿಸದಿದ್ದರೂ ಕತೆಯ ಮೂಲಕವೇ ನಮ್ಮದು ‘ಪ್ರಜಾಸತ್ತಾತ್ಮಕ ಎಡಪಂಥ’ ಆಗಿರಬೇಕು ಎಂಬ ಆಶಯವನ್ನು ಈ ಸಿನಿಮಾ ಧ್ವನಿಸಿದಂತಿದೆ.

‘ಲಾಲ್‌ ಸಲಾಂ, ಇನ್‌ಕ್ವಿಲಾಬ್‌ ಜಿಂದಾಬಾದ್‌’ ಎಂಬ ಘೋಷಣೆಗಳನ್ನು ನಕ್ಸಲ್‌ ಚಳವಳಿಯಲ್ಲಿ ತೊಡಗಿಸಿಕೊಂಡವರೂ ಹೇಳುತ್ತಾರೆ, ಅದರ ಜೊತೆಗೆ ನಾಡಿನೊಳಗೆ ಪ್ರಭುತ್ವವನ್ನು ಎದುರಿಸುತ್ತಿರುವ ಎಡಪಂಥೀಯ ಧೋರಣೆಯ ಚಳವಳಿಗಾರರೂ ಕೂಗುತ್ತಾರೆ. ಆದರೆ ಬಂದೂಕು ಹಿಡಿದ ‘ಲಾಲ್‌ ಸಲಾಂ, ಇನ್‌ಕ್ವಿಲಾಬ್‌ ಜಿಂದಾಬಾದ್‌’ಅನ್ನು ಪ್ರಭುತ್ವ ಸುಲಭವಾಗಿ ಮುಗಿಸಬಲ್ಲದು, ಆದರೆ ಪ್ರಜಾಸತ್ತಾತ್ಮಕವಾದ ‘ಲಾಲ್‌ ಸಲಾಂ, ಇನ್‌ಕ್ವಿಲಾಬ್‌ ಜಿಂದಾಬಾದ್‌’ಅನ್ನು ಅಷ್ಟು ಸುಲಭವಾಗಿ ದಮನ ಮಾಡಲು ಸಾಧ್ಯವಿಲ್ಲ ಎಂಬುದನ್ನು- ಎರಡು ನೆಲೆಯ ದೃಷ್ಟಿಕೋನಗಳ ಮೂಲಕ ಸೂಕ್ಷ್ಮವಾಗಿ ಹೇಳುವ ಪ್ರಯತ್ನವನ್ನು ಮಂಸೋರೆ ಮಾಡಿದಂತಿದೆ. ಇಲ್ಲಿ ಬರುವ ರಫಿ, ಪತ್ರಕರ್ತ ವಿಜಯ್, ಸುರೇಶ್ ಹೆಗ್ಡೆ ಮೊದಲಾದವರು ಪ್ರಜಾಸತ್ತಾತ್ಮಕ ಎಡಪಂಥೀಯ ‘ಕೆಂಬಾವುಟ’ದ ಉದಾಹರಣೆಯಾಗಿ ನಿಲ್ಲುತ್ತಾರೆ.

ನಿರ್ದೇಶಕ ಮಂಸೋರೆ

ದ್ವಿತೀಯಾರ್ಧದಲ್ಲಿ ಕೋರ್ಟ್ ರೂಮ್‌ಗೆ ಹೆಚ್ಚಿನ ಸ್ಪೇಸ್‌ ಸಿಕ್ಕಿದೆ. ಕತೆಗೆ ಅದು ಅನಿವಾರ್ಯವೂ ಆಗಿದೆ. ಈ ವೇಳೆ ಸಂಭಾಷಣೆಗೆ ಹೆಚ್ಚು ಒತ್ತು ಕೊಟ್ಟಿರುವುದು ಢಾಳಾಗಿ ಕಾಣುತ್ತದೆ. ಆದರೆ ಆ ಸಂಭಾಷಣೆ ಈ ಸಿನಿಮಾದ ಆತ್ಮವೂ ಹೌದು. ಆದರೆ ಇಲ್ಲಿ ಬೋಧನೆ ಮಾಡಲಾಗುತ್ತಿದೆ ಎಂಬ ಅಪವಾದದಿಂದ ಪಾರಾಗಲು ನಿರ್ದೇಶಕರು ಜಾಣ್ಮೆ ವಹಿಸಿದ್ದಾರೆ. ‘ಸಂವಿಧಾನದ ಕುರಿತು ಕೋರ್ಟ್‌ನಲ್ಲಿ ಹೇಳದೆ, ಕಾಡಿನಲ್ಲಿ ಹೇಳಲೇ?’ ಎಂಬ ಡೈಲಾ‌ಗ್‌ ಇರಬಹುದು, ಸಂವಿಧಾನದ ಮೂರು ವಿಧಿಗಳನ್ನು ಮಲೆ ಕುಡಿಯ ಸಮುದಾಯದ ನೋವಿನ ಕತೆಗೆ ಥಳುಕು ಹಾಕಿ ಹೇಳುವುದಿರಬಹುದು, ಆ ಮೂಲಕ ಸಂವಿಧಾನದ ಆಶಯವನ್ನು ನಿಚ್ಚಳವಾಗಿ ಪ್ರತಿಪಾದಿಸುವುದಿರಬಹುದು- ಇವೆಲ್ಲ ಚಿತ್ರಕತೆಗಾರರು ವಹಿಸಿರುವ ಎಚ್ಚರಿಕೆಯಾಗಿಯೂ ಕಾಣುತ್ತವೆ.

ಇಲ್ಲಿಯೇ ಇನ್ನೊಂದು ಮಾತು ಸೇರಿಸಬೇಕು; ತಮಿಳಿನ ‘ಜೈ ಭೀಮ್‌’, ಮಲಯಾಳಂನ ‘ಜನಗಣಮನ’ ಸಿನಿಮಾದಲ್ಲಿನ ಕೋರ್ಟ್ ರೂಮ್‌ ದೃಶ್ಯಗಳು ಅತಿ ಅನಿಸಬಹುದಾದ ಅಭಿನಯ, ಹೀರೋಯಿಸಂ, ನಾಟಕೀಯತೆಯಿಂದ ಭಾರವಾದಂತೆ ಭಾಸವಾಗಿದ್ದವು. ಆದರೆ ಅಂಥದ್ದೇ ಕತೆಯನ್ನು ವ್ಯವಹರಿಸುತ್ತಿರುವ ‘19.20.21’ ಸಿನಿಮಾದಲ್ಲಿ ಕೋರ್ಟ್ ಸೀನ್‌ಗಳು, ನ್ಯಾಯಾಧೀಶರ ಮಾತುಕತೆಗಳು, ವಕೀಲರ ವಾದಗಳು ಸಹಜವೂ ಸುಂದರವೂ ಆಗಿ ಹೊಮ್ಮಿವೆ. ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ, ಉದ್ಗಾರಗಳೇ ಈ ಸಹಜತೆಗೆ ಸಾಕ್ಷಿಯಾಗಿ ನಿಲ್ಲುತ್ತವೆ.

ಇದನ್ನೂ ಓದಿರಿ: ‘ವಾತಿ’ ವಿಮರ್ಶೆ| ಖಾಸಗಿ ಶಿಕ್ಷಣ ಮಾಫಿಯಾ ಸುತ್ತ ಕಮರ್ಷಿಯಲ್‌ ಕತೆ

ನಕ್ಸಲ್‌ ನಿಗ್ರಹ ಪಡೆಯ ಕ್ರೌರ್ಯ, ಪೊಲೀಸ್ ವ್ಯವಸ್ಥೆ ಕೈಗೊಳ್ಳುವ ಪಿತೂರಿಗಳು ಪ್ರಭುತ್ವದ ಭಾಗವಷ್ಟೇ. ಅವರದ್ದು ವೃತ್ತಿಪರವಾಗಿ, ಸರ್ಕಾರದ ಭಾಗವಾಗಿ ಎಸಗುವ ಅಪರಾಧ. ಹೀಗಾಗಿಯೇ ಪ್ರಭುತ್ವದ ಪ್ರತಿನಿಧಿಯಾಗಿದ್ದ ಪೊಲೀಸ್ ಅಧಿಕಾರಿ, ನಿವೃತ್ತಿಯ ನಂತರದಲ್ಲಿ ಕೋರ್ಟ್ ಮುಂದೆ ನಿಂತು, ತಾನು ಹಿನ್ನಡೆ ಅನುಭವಿಸಿದ ಬಳಿಕವೂ ಹಸ್ತಲಾಘನ ಮಾಡುವುದು ನಿಜಕ್ಕೂ ಅರ್ಥಪೂರ್ಣವಾಗಿದೆ. ನಾವೆಲ್ಲ ಒಂದು ಪಿತೂರಿ ಕಾನೂನು ವ್ಯವಸ್ಥೆಯ ಭಾಗವಷ್ಟೇ ಎಂಬುದನ್ನು ಈ ಪಾತ್ರ ಸೂಚ್ಯವಾಗಿ ಹೇಳಿದಂತಿದೆ.

ಆದಿವಾಸಿಗಳ ಮೇಲಾಗುವ ದೌರ್ಜನ್ಯಗಳನ್ನು ಚಿತ್ರಿಸುವಾಗ ಒಂದಿಷ್ಟು ಲಂಬಿಸಿದಂತೆ ಭಾಸವಾಗುತ್ತದೆ. ಕತೆ ಹೇಳುವುದಕ್ಕೆ ನಮಗೆ ಧಾವಂತವಿಲ್ಲ ಎಂಬುದನ್ನು ಕತೆ, ಚಿತ್ರಕತೆ ಬರೆದಿರುವ ಮಂಸೋರೆ ಹಾಗೂ ವೀರೇಂದ್ರ ಮಲ್ಲಣ್ಣ ಒಪ್ಪಿಕೊಂಡಿದ್ದಾರೆ.

ಶೃಂಗ ಬಿ.ವಿ., ಬಾಲಾಜಿ ಮನೋಹರ್, ಎಂ.ಡಿ. ಪಲ್ಲವಿ, ರಾಜೇಶ್ ನಟರಂಗ, ಅವಿನಾಶ್, ಮಹದೇವ್ ಹಡಪದ್, ವೆಂಕಟೇಶ್ ಪ್ರಸಾದ್, ಬಿ.ಎಂ.ಗಿರಿರಾಜ್‌, ವೈ.ಜಿ.ಉಮಾ- ಹೀಗೆ ಎಲ್ಲರೂ ತಮ್ಮ ಅಭಿನಯದ ಮೂಲಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಅನೇಕರು ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಂದು ಮಾಲಿನಿಯವರ ಸಂಗೀತ, ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತ, ಶಿವ ಬಿ.ಕೆ.ಕುಮಾರ್‌ ಅವರ ಸಿನಿಮಾಟೋಗ್ರಫಿ ಕತೆಯ ತೂಕವನ್ನು ಹೆಚ್ಚಿಸಿವೆ. ಇಂಥದೊಂದು ಸಿನಿಮಾಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕ ದೇವರಾಜ್ ಆರ್‌. ಅವರು ಗೆದ್ದರೆ ಮತ್ತಷ್ಟು ಇಂತಹ ಒಳ್ಳೆಯ ಕಥೆಗಳು ಕನ್ನಡ ಚಿತ್ರರಂಗದಲ್ಲಿ ಮೂಡಿ ಬರಲು ಸಾಧ್ಯವಾಗಬಹುದು.

ಆದಿವಾಸಿಗಳ ಕತೆ ಹೇಳುತ್ತೇವೆ ಎಂದು ನಯವಾಗಿ ಪ್ರಭುತ್ವಕ್ಕೆ ಶರಣಾಗಬೇಕೆಂಬ ಸಂದೇಶ ನೀಡುವ, ರಂಜನೆಯ ಮೂಲಕ ವಂಚಿಸುವ ಸಿನಿಮಾಗಳಿಗಿಂತ ‘19.20.21’ ಥರದ ನೆಲದ ವಾಸ್ತವಗಳನ್ನು ಒಳಗೊಂಡ ಮತ್ತಷ್ಟು ಸಿನಿಮಾಗಳು ಮೂಡಿಬರಬೇಕಾದ ತುರ್ತು ಇಂದಿಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...