Homeಮುಖಪುಟಸಿನಿಮಾ ವಿಮರ್ಶೆ: ಯುಎಪಿಎ ಕಾನೂನಿನ ಕರಾಳತೆ ತೆರೆದಿಟ್ಟ `19.20.21’

ಸಿನಿಮಾ ವಿಮರ್ಶೆ: ಯುಎಪಿಎ ಕಾನೂನಿನ ಕರಾಳತೆ ತೆರೆದಿಟ್ಟ `19.20.21’

‘ಯುಎಪಿಎ’ ಎಂಬ ಕರಾಳ ಕಾನೂನಿನ ಕುರಿತು ಕನ್ನಡ ಚಿತ್ರರಂಗದಲ್ಲಿ ಇಷ್ಟು ನೇರವಾಗಿ ಮಾತನಾಡಿರುವ ಸಿನಿಮಾ ಮತ್ತೊಂದಿಲ್ಲ.

- Advertisement -
- Advertisement -

ಭಾರತೀಯರಿಗೆ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿರುವುದು ಸಂವಿಧಾನದ 19ನೇ ವಿಧಿ; ಒಂದೇ ಅಪರಾಧಕ್ಕೆ ಒಂದಕ್ಕಿಂತ ಹೆಚ್ಚು ಭಾರಿ ಶಿಕ್ಷೆ ವಿಧಿಸುವಂತಿಲ್ಲ, ಒಬ್ಬ ವ್ಯಕ್ತಿಯನ್ನು ತನ್ನ ವಿರುದ್ಧ ತಾನೇ ಸಾಕ್ಷಿ ಹೇಳುವಂತೆ ಒತ್ತಾಯಿಸುವಂತಿಲ್ಲ ಎನ್ನುವುದು 20ನೇ ವಿಧಿ; ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ ನೀಡುವ 21ನೇ ವಿಧಿ- ಈ ಮೂರನ್ನು ಪ್ರಭುತ್ವ (ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಸೇನೆ) ಹೇಗೆ ದಮನ ಮಾಡಲು ಯತ್ನಿಸುತ್ತಿದೆ ಎಂಬುದನ್ನು ಒಂದು ಪ್ರಕರಣದ ಸುತ್ತ ಹೇಳಿರುವ ಕನ್ನಡ ಸಿನಿಮಾ- ‘19.20.21’.

ಪ್ರಾಸಂಗಿಕವಾಗಿಯಷ್ಟೇ ‘19.20.21’ ವಿಧಿಗಳನ್ನು ನಿರ್ದೇಶಕ ಮಂಸೋರೆಯವರು ಪ್ರಸ್ತಾಪಿಸಿದ್ದಾರೆಂಬುದು ನಿರ್ವೀವಾದ. ನಿಜ ಘಟನೆಯೊಂದರ ಸುತ್ತ ಹೆಣೆದಿರುವ ಇಲ್ಲಿನ ಕತೆ, ಚಿತ್ರಕತೆಯು- ಸಂವಿಧಾನದ ವಿರುದ್ಧ ಪ್ರಭುತ್ವ ಹೇಗೆ ನಡೆದುಕೊಳ್ಳುತ್ತದೆ ಎಂಬುದಕ್ಕೆ ಒಂದು ನಿದರ್ಶನವಷ್ಟೇ. ಈ ಮೂರು ವಿಧಿಗಳ ನೆಪದಲ್ಲಿ, ಸಂವಿಧಾನ ಪ್ರತಿಪಾದಿಸುವ ಏನೆಲ್ಲ ಆಶಯಗಳನ್ನು ಹೇಳಲು ಸಾಧ್ಯವೇ ಅದೆಲ್ಲವನ್ನೂ ಒಂದು ಪ್ರಕರಣದ ಹಿನ್ನೆಲೆಯಲ್ಲಿ ‘ಮಂಸೋರೆ’ ಹೇಳಲು ಪ್ರಯತ್ನಿಸಿದ್ದಾರೆ.

‘ಹರಿವು’, ‘ನಾತಿಚರಾಮಿ’ಯ ನಂತರದಲ್ಲಿ ‘ಆಕ್ಟಿವಿಸಂ’ ಪ್ರೇರಿತ ಕಥೆಗೆ ಧುಮುಕಿರುವ ಮಂಸೋರೆ, ‘ಆಕ್ಟ್‌- 1978’ಗಿಂತ ಗಟ್ಟಿಯಾಗಿ, ಶೋಷಿತ ಸಮುದಾಯಗಳ ಕಷ್ಟವನ್ನು ನೇರವಾಗಿ, ನಿರ್ಭಿಡೆಯಿಂದ ಇಲ್ಲಿ ಮಾತನಾಡಿದ್ದಾರೆ. ‘ಆಕ್ಟ್‌ 1978’ ಅತಿ ಭಾವುಕತೆಗೆ ಒತ್ತು ನೀಡಿದಂತೆ ಭಾಸವಾಗಿತ್ತು. ಆದರೆ ಇಲ್ಲಿ ಸಹಜ ಸೌಂದರ್ಯಕ್ಕೆ ಆದ್ಯತೆ ನೀಡಿದ್ದಾರೆ.

ಇಲ್ಲಿನ ಪಾತ್ರಗಳು ಕಾಲ್ಪನಿಕವಲ್ಲ. ನಿಜ ಘಟನೆಯಾಧಾರಿತ ಈ ಸಿನಿಮಾದೊಳಗೆ ಬಳಸಲಾಗಿರುವ ಹೆಸರುಗಳನ್ನು ಬದಲಿಸಲಾಗಿದ್ದರೂ ಅವು ನಮ್ಮ ನಡುವೆಯೇ ಇರುವ ನಿಜ ಜೀವಗಳು. ಪ್ರಭುತ್ವದ ಹಿಂಸಾ ಪ್ರವೃತ್ತಿಯನ್ನು, ಪ್ರಜಾಪ್ರತಿನಿಧಿಗಳನ್ನು ಪ್ರಶ್ನಿಸಿದ ಮಾತ್ರಕ್ಕೆ ಹೇಗೆ ಒಂದು ಸ್ಥಾಪಿತ ವ್ಯವಸ್ಥೆ ಅಸಹಾಯಕ ಜೀವಗಳ ಮೇಲೆ ಗದಾಪ್ರಹಾರ ಮಾಡುತ್ತದೆ ಎಂಬುದನ್ನು ‘ರಿವರ್ಸ್ ಸ್ಕ್ರೀನ್‌ ಪ್ಲೇ’ನಲ್ಲಿ ಈ ಸಿನಿಮಾ ಕಟ್ಟಿಕೊಡುತ್ತದೆ.

ಇದನ್ನೂ ಓದಿರಿ: ಫರ್ಜಿ: ರಾಜ್ ಮತ್ತು ಡಿಕೆ ಜೋಡಿಯ ಮತ್ತೊಂದು ಥ್ರಿಲ್ಲರ್ ವೆಬ್ ಸಿರೀಸ್

‘ನಕ್ಸಲ್‌’ ಎಂಬ ಹಣೆಪಟ್ಟಿಯು ಪ್ರಶ್ನಿಸುವವರನ್ನು ದಮನ ಮಾಡಲು ಬಳಸುವ ಅಸ್ತ್ರವೂ ಹೌದು. ಹಾಗೆಯೇ ನಕ್ಸಲ್‌ ಚಳವಳಿಗೆ ‘ಭಯೋತ್ಪಾದನೆ’ಯ ಬಣ್ಣ ಹಚ್ಚುವುದು ಹೊಸದೇನಲ್ಲ! ‘ವಿಠ್ಠಲ್‌ ಮಲೆಕುಡಿಯ’ ಎಂಬ ಆದಿವಾಸಿ ಯುವಕನನ್ನು ಇನ್ನಿಲ್ಲದಂತೆ ಶೋಷಿಸಿದ ನಿಜ ಘಟನೆಯ ಸುತ್ತ ಕಥೆ ಹರಡಿದೆ. ಈ ನೆಲದ ಮೂಲ ನಿವಾಸಿಗಳನ್ನು ಕಾಡಿನಿಂದ ನಾಡಿಗೆ ದಬ್ಬುವ ವಿಛಿದ್ರಕಾರಿ ನೀತಿಗಳ ನಡುವೆ ಹುಟ್ಟಿಕೊಂಡ ನಕ್ಸಲ್‌ ಚಳವಳಿ, ಅದರ ನೆಪದಲ್ಲಿ ಬಂದ ನಕ್ಸಲ್‌ ನಿಗ್ರಹ ದಳ ಎಸಗುವ ದೌರ್ಜನ್ಯ, ಕಾಡಿನಿಂದ ಹೊರದಬ್ಬಲು ಆದಿವಾಸಿಗಳನ್ನು ಇನ್ನಿಲ್ಲದಂತೆ ಹಿಂಸಿಸುವ ರೀತಿ- ಇವೆಲ್ಲವನ್ನೂ ಈ ಕಥೆ ಒಳಗೊಂಡಿದೆ.

‘ಯುಎಪಿಎ’ (ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ- ಕಾಯಿದೆ, 1967) ಎಂಬ ಕರಾಳ ಕಾನೂನಿನ ಕುರಿತು ಕನ್ನಡ ಚಿತ್ರರಂಗದಲ್ಲಿ ಇಷ್ಟು ನೇರವಾಗಿ ಮಾತನಾಡಿರುವ ಸಿನಿಮಾ ಮತ್ತೊಂದಿಲ್ಲ. ಪ್ರಶ್ನಿಸುವವರನ್ನು, ಸಾಂವಿಧಾನಿಕ ಹಕ್ಕುಗಳನ್ನು ಪ್ರತಿಪಾದಿಸುವವರನ್ನು ‘ಯುಎಪಿಎ’ ಅಡಿ ಬಂಧಿಸಿ, ಭಯೋತ್ಪಾದಕ, ದೇಶದ್ರೋಹಿ ಎಂಬೆಲ್ಲಾ ಪಟ್ಟ ಕಟ್ಟುವ ಪ್ರಭುತ್ವದ ಆಟಾಟೋಪಗಳನ್ನು ಈ ಸಿನಿಮಾ ಮನವರಿಕೆ ಮಾಡಿದೆ; ‘ಯುಎಪಿಎ’ ಹಾಕಿಸಿಕೊಂಡವರಲ್ಲ ದೇಶದ್ರೋಹಿಗಳಲ್ಲ, ಭಯೋತ್ಪಾದಕರಲ್ಲ ಎಂಬುದನ್ನು ಮನವರಿಕೆ ಮಾಡುತ್ತದೆ.

‘ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಗತ್‌ಸಿಂಗ್‌ ಕುರಿತು ಓದುವುದು ದೇಶದ್ರೋಹವೇ?’ ಎಂಬ ಪ್ರಶ್ನೆಯನ್ನು ಪ್ರಭುತ್ವದ ಎದೆಗೆ ಒದ್ದಂತೆ ಕೇಳಲಾಗಿದೆ. ಎಡ- ಬಲ ನಡುವೆ ಬ್ಯಾಲೆನ್ಸ್ ಮಾಡಿ, ಪ್ರಭುತ್ವ ಪ್ರೇರಿತ ಬಲಪಂಥೀಯ ದಾಳಿಯಿಂದ ನುಣುಚಿಕೊಳ್ಳುವ ಯತ್ನವನ್ನು ಮಂಸೋರೆ ಮತ್ತು ತಂಡ ಮಾಡಿಲ್ಲ. ನೇರವಾಗಿ ಸಂವಿಧಾನ ಮತ್ತು ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಶ್ರೀರಕ್ಷೆಗೆ ಅಥವಾ ಆಶ್ರಯಕ್ಕೆ ಹೊರಳಿ, ಹೇಳಬೇಕಾದದ್ದನ್ನು ಗಟ್ಟಿಯಾಗಿ ಹೇಳಿ ಮುಗಿಸಿದ್ದಾರೆ. ಈ ಕಾಲದಲ್ಲಿ ನಡೆಯುತ್ತಿರುವುದು ‘ಪ್ರಭುತ್ವ v/s ಸಂವಿಧಾನ’ ಎಂಬುದನ್ನು ಸ್ಪಷ್ಟವಾಗಿ ತಿಳಿಸಲು ಯಾವುದೇ ಮುಲಾಜಿಗೆ ಚಿತ್ರತಂಡ ಒಳಗಾಗಿಲ್ಲ.

ನಕ್ಸಲ್‌ ಚಳವಳಿಯ ಉದ್ದೇಶಗಳಿಗೆ ಕಥೆ ಹೆಚ್ಚಾಗಿ ಹೊರಳದಿದ್ದರೂ ನಕ್ಸಲ್‌ ಹಣೆಪಟ್ಟಿ ಕಟ್ಟಿ ಅಸಹಾಯಕ ಸಮುದಾಯಗಳನ್ನು ಶೋಷಿಸುವ ಪ್ರಭುತ್ವದ ಮೇಲೆ ಇಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಕ್ಸಲ್‌ ಚಳವಳಿಯ ರಕ್ತಸಿಕ್ತ ಹಾದಿಯ ಕುರಿತು ಚರ್ಚಿಸದಿದ್ದರೂ ಕತೆಯ ಮೂಲಕವೇ ನಮ್ಮದು ‘ಪ್ರಜಾಸತ್ತಾತ್ಮಕ ಎಡಪಂಥ’ ಆಗಿರಬೇಕು ಎಂಬ ಆಶಯವನ್ನು ಈ ಸಿನಿಮಾ ಧ್ವನಿಸಿದಂತಿದೆ.

‘ಲಾಲ್‌ ಸಲಾಂ, ಇನ್‌ಕ್ವಿಲಾಬ್‌ ಜಿಂದಾಬಾದ್‌’ ಎಂಬ ಘೋಷಣೆಗಳನ್ನು ನಕ್ಸಲ್‌ ಚಳವಳಿಯಲ್ಲಿ ತೊಡಗಿಸಿಕೊಂಡವರೂ ಹೇಳುತ್ತಾರೆ, ಅದರ ಜೊತೆಗೆ ನಾಡಿನೊಳಗೆ ಪ್ರಭುತ್ವವನ್ನು ಎದುರಿಸುತ್ತಿರುವ ಎಡಪಂಥೀಯ ಧೋರಣೆಯ ಚಳವಳಿಗಾರರೂ ಕೂಗುತ್ತಾರೆ. ಆದರೆ ಬಂದೂಕು ಹಿಡಿದ ‘ಲಾಲ್‌ ಸಲಾಂ, ಇನ್‌ಕ್ವಿಲಾಬ್‌ ಜಿಂದಾಬಾದ್‌’ಅನ್ನು ಪ್ರಭುತ್ವ ಸುಲಭವಾಗಿ ಮುಗಿಸಬಲ್ಲದು, ಆದರೆ ಪ್ರಜಾಸತ್ತಾತ್ಮಕವಾದ ‘ಲಾಲ್‌ ಸಲಾಂ, ಇನ್‌ಕ್ವಿಲಾಬ್‌ ಜಿಂದಾಬಾದ್‌’ಅನ್ನು ಅಷ್ಟು ಸುಲಭವಾಗಿ ದಮನ ಮಾಡಲು ಸಾಧ್ಯವಿಲ್ಲ ಎಂಬುದನ್ನು- ಎರಡು ನೆಲೆಯ ದೃಷ್ಟಿಕೋನಗಳ ಮೂಲಕ ಸೂಕ್ಷ್ಮವಾಗಿ ಹೇಳುವ ಪ್ರಯತ್ನವನ್ನು ಮಂಸೋರೆ ಮಾಡಿದಂತಿದೆ. ಇಲ್ಲಿ ಬರುವ ರಫಿ, ಪತ್ರಕರ್ತ ವಿಜಯ್, ಸುರೇಶ್ ಹೆಗ್ಡೆ ಮೊದಲಾದವರು ಪ್ರಜಾಸತ್ತಾತ್ಮಕ ಎಡಪಂಥೀಯ ‘ಕೆಂಬಾವುಟ’ದ ಉದಾಹರಣೆಯಾಗಿ ನಿಲ್ಲುತ್ತಾರೆ.

ನಿರ್ದೇಶಕ ಮಂಸೋರೆ

ದ್ವಿತೀಯಾರ್ಧದಲ್ಲಿ ಕೋರ್ಟ್ ರೂಮ್‌ಗೆ ಹೆಚ್ಚಿನ ಸ್ಪೇಸ್‌ ಸಿಕ್ಕಿದೆ. ಕತೆಗೆ ಅದು ಅನಿವಾರ್ಯವೂ ಆಗಿದೆ. ಈ ವೇಳೆ ಸಂಭಾಷಣೆಗೆ ಹೆಚ್ಚು ಒತ್ತು ಕೊಟ್ಟಿರುವುದು ಢಾಳಾಗಿ ಕಾಣುತ್ತದೆ. ಆದರೆ ಆ ಸಂಭಾಷಣೆ ಈ ಸಿನಿಮಾದ ಆತ್ಮವೂ ಹೌದು. ಆದರೆ ಇಲ್ಲಿ ಬೋಧನೆ ಮಾಡಲಾಗುತ್ತಿದೆ ಎಂಬ ಅಪವಾದದಿಂದ ಪಾರಾಗಲು ನಿರ್ದೇಶಕರು ಜಾಣ್ಮೆ ವಹಿಸಿದ್ದಾರೆ. ‘ಸಂವಿಧಾನದ ಕುರಿತು ಕೋರ್ಟ್‌ನಲ್ಲಿ ಹೇಳದೆ, ಕಾಡಿನಲ್ಲಿ ಹೇಳಲೇ?’ ಎಂಬ ಡೈಲಾ‌ಗ್‌ ಇರಬಹುದು, ಸಂವಿಧಾನದ ಮೂರು ವಿಧಿಗಳನ್ನು ಮಲೆ ಕುಡಿಯ ಸಮುದಾಯದ ನೋವಿನ ಕತೆಗೆ ಥಳುಕು ಹಾಕಿ ಹೇಳುವುದಿರಬಹುದು, ಆ ಮೂಲಕ ಸಂವಿಧಾನದ ಆಶಯವನ್ನು ನಿಚ್ಚಳವಾಗಿ ಪ್ರತಿಪಾದಿಸುವುದಿರಬಹುದು- ಇವೆಲ್ಲ ಚಿತ್ರಕತೆಗಾರರು ವಹಿಸಿರುವ ಎಚ್ಚರಿಕೆಯಾಗಿಯೂ ಕಾಣುತ್ತವೆ.

ಇಲ್ಲಿಯೇ ಇನ್ನೊಂದು ಮಾತು ಸೇರಿಸಬೇಕು; ತಮಿಳಿನ ‘ಜೈ ಭೀಮ್‌’, ಮಲಯಾಳಂನ ‘ಜನಗಣಮನ’ ಸಿನಿಮಾದಲ್ಲಿನ ಕೋರ್ಟ್ ರೂಮ್‌ ದೃಶ್ಯಗಳು ಅತಿ ಅನಿಸಬಹುದಾದ ಅಭಿನಯ, ಹೀರೋಯಿಸಂ, ನಾಟಕೀಯತೆಯಿಂದ ಭಾರವಾದಂತೆ ಭಾಸವಾಗಿದ್ದವು. ಆದರೆ ಅಂಥದ್ದೇ ಕತೆಯನ್ನು ವ್ಯವಹರಿಸುತ್ತಿರುವ ‘19.20.21’ ಸಿನಿಮಾದಲ್ಲಿ ಕೋರ್ಟ್ ಸೀನ್‌ಗಳು, ನ್ಯಾಯಾಧೀಶರ ಮಾತುಕತೆಗಳು, ವಕೀಲರ ವಾದಗಳು ಸಹಜವೂ ಸುಂದರವೂ ಆಗಿ ಹೊಮ್ಮಿವೆ. ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ, ಉದ್ಗಾರಗಳೇ ಈ ಸಹಜತೆಗೆ ಸಾಕ್ಷಿಯಾಗಿ ನಿಲ್ಲುತ್ತವೆ.

ಇದನ್ನೂ ಓದಿರಿ: ‘ವಾತಿ’ ವಿಮರ್ಶೆ| ಖಾಸಗಿ ಶಿಕ್ಷಣ ಮಾಫಿಯಾ ಸುತ್ತ ಕಮರ್ಷಿಯಲ್‌ ಕತೆ

ನಕ್ಸಲ್‌ ನಿಗ್ರಹ ಪಡೆಯ ಕ್ರೌರ್ಯ, ಪೊಲೀಸ್ ವ್ಯವಸ್ಥೆ ಕೈಗೊಳ್ಳುವ ಪಿತೂರಿಗಳು ಪ್ರಭುತ್ವದ ಭಾಗವಷ್ಟೇ. ಅವರದ್ದು ವೃತ್ತಿಪರವಾಗಿ, ಸರ್ಕಾರದ ಭಾಗವಾಗಿ ಎಸಗುವ ಅಪರಾಧ. ಹೀಗಾಗಿಯೇ ಪ್ರಭುತ್ವದ ಪ್ರತಿನಿಧಿಯಾಗಿದ್ದ ಪೊಲೀಸ್ ಅಧಿಕಾರಿ, ನಿವೃತ್ತಿಯ ನಂತರದಲ್ಲಿ ಕೋರ್ಟ್ ಮುಂದೆ ನಿಂತು, ತಾನು ಹಿನ್ನಡೆ ಅನುಭವಿಸಿದ ಬಳಿಕವೂ ಹಸ್ತಲಾಘನ ಮಾಡುವುದು ನಿಜಕ್ಕೂ ಅರ್ಥಪೂರ್ಣವಾಗಿದೆ. ನಾವೆಲ್ಲ ಒಂದು ಪಿತೂರಿ ಕಾನೂನು ವ್ಯವಸ್ಥೆಯ ಭಾಗವಷ್ಟೇ ಎಂಬುದನ್ನು ಈ ಪಾತ್ರ ಸೂಚ್ಯವಾಗಿ ಹೇಳಿದಂತಿದೆ.

ಆದಿವಾಸಿಗಳ ಮೇಲಾಗುವ ದೌರ್ಜನ್ಯಗಳನ್ನು ಚಿತ್ರಿಸುವಾಗ ಒಂದಿಷ್ಟು ಲಂಬಿಸಿದಂತೆ ಭಾಸವಾಗುತ್ತದೆ. ಕತೆ ಹೇಳುವುದಕ್ಕೆ ನಮಗೆ ಧಾವಂತವಿಲ್ಲ ಎಂಬುದನ್ನು ಕತೆ, ಚಿತ್ರಕತೆ ಬರೆದಿರುವ ಮಂಸೋರೆ ಹಾಗೂ ವೀರೇಂದ್ರ ಮಲ್ಲಣ್ಣ ಒಪ್ಪಿಕೊಂಡಿದ್ದಾರೆ.

ಶೃಂಗ ಬಿ.ವಿ., ಬಾಲಾಜಿ ಮನೋಹರ್, ಎಂ.ಡಿ. ಪಲ್ಲವಿ, ರಾಜೇಶ್ ನಟರಂಗ, ಅವಿನಾಶ್, ಮಹದೇವ್ ಹಡಪದ್, ವೆಂಕಟೇಶ್ ಪ್ರಸಾದ್, ಬಿ.ಎಂ.ಗಿರಿರಾಜ್‌, ವೈ.ಜಿ.ಉಮಾ- ಹೀಗೆ ಎಲ್ಲರೂ ತಮ್ಮ ಅಭಿನಯದ ಮೂಲಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಅನೇಕರು ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಂದು ಮಾಲಿನಿಯವರ ಸಂಗೀತ, ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತ, ಶಿವ ಬಿ.ಕೆ.ಕುಮಾರ್‌ ಅವರ ಸಿನಿಮಾಟೋಗ್ರಫಿ ಕತೆಯ ತೂಕವನ್ನು ಹೆಚ್ಚಿಸಿವೆ. ಇಂಥದೊಂದು ಸಿನಿಮಾಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕ ದೇವರಾಜ್ ಆರ್‌. ಅವರು ಗೆದ್ದರೆ ಮತ್ತಷ್ಟು ಇಂತಹ ಒಳ್ಳೆಯ ಕಥೆಗಳು ಕನ್ನಡ ಚಿತ್ರರಂಗದಲ್ಲಿ ಮೂಡಿ ಬರಲು ಸಾಧ್ಯವಾಗಬಹುದು.

ಆದಿವಾಸಿಗಳ ಕತೆ ಹೇಳುತ್ತೇವೆ ಎಂದು ನಯವಾಗಿ ಪ್ರಭುತ್ವಕ್ಕೆ ಶರಣಾಗಬೇಕೆಂಬ ಸಂದೇಶ ನೀಡುವ, ರಂಜನೆಯ ಮೂಲಕ ವಂಚಿಸುವ ಸಿನಿಮಾಗಳಿಗಿಂತ ‘19.20.21’ ಥರದ ನೆಲದ ವಾಸ್ತವಗಳನ್ನು ಒಳಗೊಂಡ ಮತ್ತಷ್ಟು ಸಿನಿಮಾಗಳು ಮೂಡಿಬರಬೇಕಾದ ತುರ್ತು ಇಂದಿಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...