Homeಮುಖಪುಟ‘ವಾತಿ’ ವಿಮರ್ಶೆ| ಖಾಸಗಿ ಶಿಕ್ಷಣ ಮಾಫಿಯಾ ಸುತ್ತ ಕಮರ್ಷಿಯಲ್‌ ಕತೆ

‘ವಾತಿ’ ವಿಮರ್ಶೆ| ಖಾಸಗಿ ಶಿಕ್ಷಣ ಮಾಫಿಯಾ ಸುತ್ತ ಕಮರ್ಷಿಯಲ್‌ ಕತೆ

- Advertisement -
- Advertisement -

1991ರಲ್ಲಿ ಭಾರತ ಸರ್ಕಾರ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣಕ್ಕೆ ತೆರೆದುಕೊಂಡ ಬಳಿಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಜಾಗದಲ್ಲಿ ಖಾಸಗಿಯವರು ಆಕ್ರಮಿಸಿಕೊಳ್ಳುತ್ತಾ, ಹೇಗೆ ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿಕೊಂಡಿದ್ದಾರೆ ಎಂಬುದನ್ನು ‘ಕಮರ್ಷಿಯಲ್‌’ ಎಲಿಮೆಂಟ್‌ಗಳೊಂದಿಗೆ ಹೇಳುವ ಸಿನಿಮಾ ‘ವಾತಿ’ (ತಮಿಳು). ‘ವೆಂಕಿ ಅತ್ಲುರಿ’ ನಿರ್ದೇಶನದ ಈ ಸಿನಿಮಾ ತಮಿಳು ಮತ್ತು ತೆಲುಗು (ಸರ್‌)- ಎರಡು ಭಾಷೆಯಲ್ಲೂ ಬಿಡುಗಡೆಯಾಗಿದೆ.

ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಭಾಗವಾಗಿದ್ದ ಮಾಸ್ಟರ್‌‌ (ವಾತಿ) ಬಾಲ ಮುರುಗನ್‌ (ಧನುಷ್‌), ಸರ್ಕಾರದ ನೀತಿಗಳ ಫಲವಾಗಿ ಅನುದಾನಿತ ಸರ್ಕಾರಿ ಶಾಲೆಯೊಂದಕ್ಕೆ ನೇಮಕವಾಗುತ್ತಾನೆ. ತಾನು ನಂಬಿದ್ದ ತಿರುಪತಿ (ಸಮುದ್ರಕನಿ) ನಡೆಸುತ್ತಿರುವ ಶಿಕ್ಷಣ ಮಾಫಿಯಾವನ್ನು ಅರ್ಥಮಾಡಿಕೊಂಡು ಆ ನಂತರ ಆತನ ವಿರುದ್ಧ ಸಿಡಿದೇಳುತ್ತೇನೆ. ಮುಂದೇನಾಗುತ್ತಾನೆ ಎಂಬುದೇ ಇಲ್ಲಿನ ಕತೆ.

2022ರ ಕಾಲಘಟ್ಟದಲ್ಲಿ ಕತೆ ಆರಂಭವಾದರೂ, 90ರ ದಶಕಕ್ಕೆ ಜಾರುತ್ತದೆ. ಬಾಲ ಮುರುಗನ್‌ ಎಂಬ ಮೇಷ್ಟ್ರ ಜೀವನಗಾಥೆ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ಮುರುಗನ್‌ ಶಿಕ್ಷಕನಾಗಿ ಬಂದಿರುವ ಆ ಗ್ರಾಮದಲ್ಲಿ ಶಿಕ್ಷಣವೆಂಬುದು ಮರೀಚಿಕೆ. ಇಲ್ಲಿನ ಎಲ್ಲ ಜನಕ್ಕೂ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ತಾತ್ಸಾರವಿದೆ. ಅವರದ್ದೇ ಆದ ಜಂಜಾಟಗಳಲ್ಲಿರುವ ಜನರು ಮಕ್ಕಳನ್ನು ದುಡಿಮೆಗೆ ದೂಡಿದ್ದಾರೆ. ಇಲ್ಲಿನ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುವ ನಿಟ್ಟಿನಲ್ಲಿ ಮೇಷ್ಟ್ರು ಪಣತೊಡುತ್ತಾನೆ. ಇದು ಸಿನಿಮಾ ಭಾಷೆಯ ಮಿತಿಗಳನ್ನು ಮೀರಿ ಹೆಚ್ಚಿನ ಕಮರ್ಷಿಯಲ್ ಆಯಾಮಗಳೊಂದಿಗೆ ಚಿತ್ರಿತವಾಗಿರುವುದು ಭಾರವೆನಿಸುತ್ತದೆ. ಅತಿಯಾದ ವೈಭವೀಕರಣಕ್ಕೆ ಒತ್ತು ನೀಡಿರುವುದು ಅನಗತ್ಯವೆನಿಸುತ್ತದೆ. ಕೆಳ ಮಧ್ಯಮವರ್ಗದವನ್ನು ಕೇಂದ್ರೀಕರಿಸಿದ್ದರೂ ಇಡೀ ಗ್ರಾಮವೇ ಫ್ಯೂಡಲ್ ವ್ಯವಸ್ಥೆಯನ್ನು ಒಪ್ಪಿಕೊಂಡು, ಅದರಂತೆಯೇ ಜೀವಿಸುತ್ತಿರುವುದಾಗಿ ಚಿತ್ರಿಸಲಾಗಿದೆ. ಶಿಕ್ಷಣ ಮಾಫಿಯಾದೊಂದಿಗೆ ಕೈಜೋಡಿಸಿರುವ ಗ್ರಾಮದ ಅಧ್ಯಕ್ಷನು ಮೇಷ್ಟ್ರಿಗೆ ತೊಂದರೆ ಕೊಡುವುದು, ಸರ್ಕಾರಿ ಶಾಲೆಗೆ ಒಳ್ಳೆಯ ಅಂಕಗಳು ಬಂದರೆ ಖಾಸಗಿ ಸಂಸ್ಥೆಗಳಿಗೆ ಧಕ್ಕೆಯಾಗುತ್ತದೆ ಎಂದು ಖಾಸಗೀ ಮಾಫಿಯಾಗಳು ಶಿಕ್ಷಕನ ಮೇಲೆ ದಾಳಿ ಮಾಡುವುದು, ಮೆಚ್ಚಿನ ಮೇಷ್ಟ್ರು ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಊರು ಬಿಟ್ಟು ಹೊರಡುವಾಗ ಇಡೀ ಊರಿನ ಮಕ್ಕಳೆಲ್ಲ ಅವರ ಹಿಂದೆ ನಡೆದು ಬಂದು, ಬಸ್ಸು ಹತ್ತಿಸುವುದು- ಇವೆಲ್ಲವೂ ತೀವ್ರ ಭಾವಕತೆಯನ್ನು ಹೊತ್ತು, ಒಂದು ಗೆರೆ ದಾಟಿದೆ ಎನ್ನುವಷ್ಟರ ಮಟ್ಟಿಗೆ ಅತಿಯಾಗಿವೆ. ಇಂತಹ ಎಳೆಗಳನ್ನು ಕೊಂಚ ಕಡಿಮೆ ಮಾಡಬಹುದಿತ್ತು ಎನಿಸುತ್ತದೆ.

ಹೃತಿಕ್ ರೋಷನ್ ಅಭಿನಯದ ‘ಸೂಪರ್ 30’ ಸಿನಿಮಾದ ಛಾಯೆ ‘ವಾತಿ’ಯಲ್ಲೂ ಇದೆ. 30 ಬಡ ಮಕ್ಕಳು ಐಐಟಿ ಪ್ರವೇಶ ಪರೀಕ್ಷೆಯನ್ನು ಪಾಸ್‌ ಮಾಡುವಂತೆ ಗಣಿತ ಶಿಕ್ಷಕ ಆನಂದ್‌ ತರಬೇತಿ ನೀಡುತ್ತಾರೆಂಬ ಕತೆಯನ್ನು ‘ಸೂಪರ್‌ 30’  ಒಳಗೊಂಡಿದೆ. ಇಲ್ಲೂ ಅದೇ ಮಾದರಿ ಕಂಡು ಬರುತ್ತದೆ. ‘ವಾದಿ’ ಸಿನಿಮಾದಲ್ಲಿನ ಮೇಷ್ಟ್ರು ಕೂಡ ‘ಗಣಿತ ಶಿಕ್ಷಕ!’. ಆದರೆ ಸೂಪರ್‌ 30ಯಷ್ಟು ತೀವ್ರತೆ ‘ವಾದಿ’ಯಲ್ಲಿ ಇಲ್ಲವಾಗಿದೆ.

ವಿದ್ಯಾರ್ಥಿಗಳು ಮತ್ತು ಪೋಷಕರನ್ನು ‘ಕಸ್ಟಮರ್ಸ್’ (ಗ್ರಾಹಕರು) ಎಂದು ನಮೂದಿಸಿ ಖಾಸಗಿ ಮಾಫಿಯಾದ ಪ್ರತಿನಿಧಿ ಮಾತನಾಡುತ್ತಾನೆ. ಇದು ವಾಸ್ತವಕ್ಕೆ ಹತ್ತಿರವಾಗಿದೆ. ಶಿಕ್ಷಣ ದಂಧೆಕೋರರ ಕಣ್ಣಿಗೆ ಮಕ್ಕಳು ಮತ್ತು ಪೋಷಕರು ಗ್ರಾಹಕರೇ ತಾನೆ?

ಪ್ರವೇಶ ಪರೀಕ್ಷೆಗಳಿಂದಾಗಿ ತಲೆ ಎತ್ತಿರುವ ‘ಕೋಚಿಂಗ್ ಸೆಂಟರ್‌ ಮಾಫಿಯಾ’ಗಳ ಕುರಿತು ‘ವಾತಿ’ ಸ್ಪಷ್ಟವಾಗಿ ಮಾತನಾಡಿದೆ. ಕಳೆದ ವರ್ಷ ನಡೆದ ಘಟನೆ. ನೀಟ್‌ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ, ಈ ಟಾಪರ್‌ಗಳೆಲ್ಲ ನಮ್ಮಲ್ಲಿ ತರಬೇತಿ ಪಡೆದಿದ್ದಾರೆ ಎಂದು ವಿವಿಧ ಕೋಚಿಂಗ್ ಸೆಂಟರ್‌ಗಳು ಜಾಹೀರಾತು ಪ್ರಕಟಿಸಿದ್ದು ಸುದ್ದಿಯಾಗಿತ್ತಲ್ಲವೇ? ಟಾಪರ್‌ಗಳನ್ನು ನಾವು ಸೃಷ್ಟಿ ಮಾಡುತ್ತೇವೆ ಎಂದು ತೋರಿಸಿಕೊಂಡು ಪೋಷಕರನ್ನು ನಂಬಿಸುವುದು ಈ ಜಾಹೀರಾತುಗಳ ಹಿಂದಿನ ಜಾಲ. ‘ವಾತಿ’ ಕೂಡ ಈ ದಂಧೆಯ ಕುರಿತು ಸುಳಿವನ್ನು ನೀಡಿದೆ. ಜಾಹೀರಾತುಗಳಿಗೆ ಮರುಳಾಗಬೇಡಿ ಎಂದು ಸಂದೇಶ ನೀಡಿದೆ. ಜನಪ್ರತಿನಿಧಿಗಳು ಮತ್ತು ಕಾರ್ಪೊರೆಟ್ ಶಕ್ತಿಗಳ ನಡುವಿನ ಆತ್ಮೀಯ ಸಂಬಂಧಗಳಿಂದಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಮೂರಾಬಟ್ಟೆಯಾಗುತ್ತಿರುವುದನ್ನು ತನ್ನೆಲ್ಲ ಮಿತಿಗಳ ನಡುವೆ ‘ವಾತಿ’ ಚರ್ಚಿಸಿದೆ. ತಾರತಮ್ಯದ ಭಾವನೆಗಳು ಮಕ್ಕಳಲ್ಲಿ ಮೊಳೆಯದಂತೆ ಅರಿವು ಮೂಡಿಸುವ ಕರ್ತವ್ಯ ಶಿಕ್ಷಕರ ಮೇಲಿದೆ ಎಂಬುದನ್ನು ಸ್ಪಷ್ಟವಾಗಿ ದಾಟಿಸಿದೆ.

ಇದನ್ನೂ ಓದಿರಿ: ಗೌರಿ ಸಾಕ್ಷ್ಯಚಿತ್ರ; ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಬೇಕಾದ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಿನಿಮಾ

ಸಹ ಶಿಕ್ಷಕಿ ಮೀನಾಕ್ಷಿ (ಸಂಯುಕ್ತ ಮೆನಾನ್‌) ಪಾತ್ರಕ್ಕೆ ಹೆಚ್ಚಿನ ಸ್ಪೇಸ್ ಇಲ್ಲ. ‘ಗಂಡಿಗೊಂದು ಹೆಣ್ಣು’ ಎಂಬ ಸಿದ್ಧ ಮಾದರಿ ಮಸಾಲೆ ಫಾರ್‍ಮುಲಾಕ್ಕಾಗಿ ನಾಯಕ ನಟಿಯ ಪಾತ್ರ ಬಂದಿದೆ ಎನಿಸುತ್ತದೆ. ಕತೆಯ ಕೇಂದ್ರಬಿಂದುವಿನೊಳಗೆ ಮೀನಾಕ್ಷಿ ಪಾತ್ರವನ್ನು ಕಟ್ಟುವ ಪ್ರಯತ್ನ ಮಾಡಿದ್ದರೂ ಅದು ಮೂರರಲ್ಲಿ ಮತ್ತೊಂದು ಆಗಿದೆಯಷ್ಟೇ. ಆದರೆ ಇಡೀ ಸಿನಿಮಾ ‘ಧನುಷ್‌’ ಕೇಂದ್ರಿತವಾಗಿ ಸಾಗುತ್ತದೆ.

ಸಾಯಿಕುಮಾರ್‌, ಸಮುದ್ರಕನಿ, ತನಿಕೆಲ್ಲ ಭರಣಿ, ಕೇನ್‌ ಕರುಣನ್‌ ಮೊದಲಾದವರ ಅಭಿನಯ ಮನೋಜ್ಞವಾಗಿದೆ. ಜಿ.ವಿ.ಪ್ರಕಾಶ್ ಕುಮಾರ್‌ ಅವರ ಸಂಗೀತವು ಸಿನಿಮಾದ ಕೆಲವು ಕೊರತೆಗಳನ್ನು ನೀಗಿಸಿದೆ. ಖಾಸಗಿ ಶಿಕ್ಷಣ ಮಾಫಿಯಾದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡದಲ್ಲಿ ‘ಕ್ರಾಂತಿ’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಕಮರ್ಷಿಯಲ್‌ ಎಳೆಗಳನ್ನು ಕೊಂಚ ಕಡಿಮೆಯಾಗಿಸಿ, ಕತೆಯ ಆಶಯಗಳ ಮೇಲೆ ಹೆಚ್ಚು ಕೇಂದ್ರೀಕೃತಗೊಳಿಸಿ ‘ಖಾಸಗಿ ಶಿಕ್ಷಣ ಮಾಫಿಯಾ’ ಕುರಿತು ಮತ್ತಷ್ಟು ಪರಿಣಾಮಕಾರಿ ಸಿನಿಮಾಗಳು ನಿರ್ಮಾಣವಾಗುವ ಅಗತ್ಯವಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನೂನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...