ಶಿಕ್ಷಕಿಯರಿಂದ ಸತತ ಜಾತಿನಿಂದನೆಗೆ ಬೇಸೆತ್ತ 9ನೇ ತರಗತಿಯ ದಲಿತ ಬಾಲಕಿಯರಿಬ್ಬರು ಶೌಚಾಲಯ ಸ್ವಚ್ಚಗೊಳಿಸುವ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ತೊಪ್ಪಪ್ಪಟ್ಟಿ ಗ್ರಾಮದಲ್ಲಿ ವರದಿಯಾಗಿದೆ.
ಸದ್ಯ ಆ ಇಬ್ಬರು ಬಾಲಕಿಯರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ಹಿನ್ನೆಲೆ
ಚಿನ್ನಾಲಪಟ್ಟಿಯ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಓದುತ್ತಿರುವ ಇಬ್ಬರು ಬಾಲಕಿಯರಿಗೆ ಅವರ ತರಗತಿ ಶಿಕ್ಷಕರಾದ ಸವರ್ಣೀಯ ಜಾತಿಯ ಪ್ರೇಮಲತಾ ಎಂಬುವವರು ಜಾತಿ ಹೆಸರಿಡಿದು ಬೈಯ್ದು ಜಾತಿನಿಂದನೆ ಮಾಡಿದ್ದಾರೆ. ಅಲ್ಲದೇ ಬಾಲಕಿಯರು ಪರಿಶಿಷ್ಟ ಜಾತಿಗೆ ಸೇರಿದವರೆಂಬ ಕಾರಣಕ್ಕೆ ಶಾಲಾ ಬಸ್ಗೆ ಹತ್ತಿಸಿಕೊಳ್ಳದೆ ಅಸ್ಪೃಶ್ಯತೆ ಆಚರಿಸಲಾಗಿದೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ. ಹಾಗಾಗಿ ಫೆಬ್ರವರಿ 15 ರಂದು ಶಾಲಾ ಬಸ್ ಅನ್ನು ತಡೆದು ಪ್ರತಿಭಟನೆ ನಡೆಸಿದ್ದರು.
#Casteism Two teenage Dalit girl students from Thoppampatti village in Dindigul district, Tamilnadu. who are studying at a government-aided school in Chinnalapatti, reportedly consumed toilet cleaner after their caste Hindu teacher abused them by their caste name on Thursday…. pic.twitter.com/1yAyOTLqhl
— The Dalit Voice (@ambedkariteIND) February 17, 2023
ಇದರಿಂದ ಕುಪಿತಗೊಮಡ ಗಣಿತ ಶಿಕ್ಷಕಿಯಾದ ಪ್ರೇಮಲತಾ ಈ ಇಬ್ಬರೂ ದಲಿತ ವಿದ್ಯಾರ್ಥಿನಿಯರ ಮೇಲೆ ಹಗೆ ಸಾಧಿಸುತ್ತಿದ್ದರು. ಉಳಿದ ಯಾವ ವಿದ್ಯಾರ್ಥಿಗಳು ಸಹ ಇವರಿಬ್ಬರೊಂದಿಗೆ ಮಾತನಾಡಬಾರದೆಂದು ತಾಕೀತು ಮಾಡಿದ್ದರು. ಗುರುವಾರ ಶಾಲೆಗೆ ಬಂದ ದಲಿತ ವಿದ್ಯಾರ್ಥಿನಿಯರನ್ನು ಯಾರು ಮಾತನಾಡಿಸಿಲ್ಲ. ಇದರಿಂದ ನೊಂದ ಆ ಇಬ್ಬರು ವಿದ್ಯಾರ್ಥಿನಿಯರು ಊಟದ ವೇಳೆಯಲ್ಲಿ ಶೌಚಾಲಯದಲ್ಲಿದ್ದ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಸಂತ್ರಸ್ತ ಬಾಲಕಿಯೊಬ್ಬರ ತಾಯಿ ದೂರು ನೀಡಿದ್ದಾರೆ.
ಜಾತಿನಿಂದನೆ ಮಾಡಿದ ಶಿಕ್ಷಕಿಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಂತ್ರಸ್ತ ವಿದ್ಯಾರ್ಥಿನಿಯರ ಸಂಬಂಧಿಕರು ಮಧುರೈ-ದಿಂಡುಗಲ್ ಹೆದ್ದಾರಿ ತಡೆದು ಮತ್ತು ಚಿನ್ನಾಲಪಟ್ಟಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಸಂಬಂಧಪಟ್ಟ ಶಾಲೆ ಮತ್ತು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದು, ರಾಜ್ಯ ಎಸ್ಸಿ ಮತ್ತು ಎಸ್ಟಿ ಆಯೋಗವು ಬಂದು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿನಿಯರ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಶಾಲೆಯ ಆಡಳಿತ ಮಂಡಳಿ ಗಣಿತ ಶಿಕ್ಷಕಿ ಪ್ರೇಮಲತಾರನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೆ ಅದೇ ರೀತಿ ಜಾತಿ ನಿಂದನೆ ಮಾಡಿದ ಆರೋಪ ಹೊತ್ತಿರುವ ಮತ್ತೊಬ್ಬ ಶಿಕ್ಷಕಿಗೆ ಕಡ್ಡಾಯ ವೈದ್ಯಕೀಯ ರಜೆ ನೀಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ದೇವಾಲಯ ಪ್ರವೇಶಿಸಿದ ದಲಿತ ಯುವಕನಿಗೆ ಡಿಎಂಕೆ ಮುಖಂಡನಿಂದ ಬೆದರಿಕೆ; ವಿಡಿಯೊ ವೈರಲ್