ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆ (ಎಚ್ಆರ್ ಮತ್ತು ಸಿಇ) ನಿರ್ವಹಿಸುತ್ತಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಡಿಎಂಕೆ ಒಕ್ಕೂಟದ ಕಾರ್ಯದರ್ಶಿಯೊಬ್ಬರು ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಪೊಲೀಸರ ಪ್ರಕಾರ, ತಮಿಳುನಾಡಿನ ತಿರುಮಲೈಗಿರಿ (ಸೇಲಂ ಜಿಲ್ಲೆ)ಯಲ್ಲಿರುವ ಅರುಲ್ಮಿಗು ಪೆರಿಯ ಮಾರಿಯಮ್ಮನ್ ದೇವಸ್ಥಾನದಲ್ಲಿ ಗುರುವಾರ ಈ ಘಟನೆ ನಡೆದಿದೆ.
ಯುವಕರನ್ನು ನಿಂದಿಸುತ್ತಾ ವಿಡಿಯೊದಲ್ಲಿ ಸೆರೆಯಾಗಿರುವ ವ್ಯಕ್ತಿಯನ್ನು ಡಿಎಂಕೆ ಸೇಲಂ ಸೌತ್ ಯೂನಿಯನ್ನ ಕಾರ್ಯದರ್ಶಿ ಡಿ.ಮಾಣಿಕಂ ಎಂದು ಗುರುತಿಸಲಾಗಿದೆ.
ಯುವಕ ದೇವಸ್ಥಾನ ಪ್ರವೇಶಿಸಿದ ಬಳಿಕ ಆಯೋಜಿಸಲಾಗಿದ್ದ ಪಂಚಾಯತ್ ಸಭೆಯಲ್ಲಿ ಯುವಕ ಹಾಗೂ ಆತನ ತಂದೆಯ ವಿರುದ್ಧ ಮಾಣಿಕಂ ಅತ್ಯಂತ ನಿಂದನೀಯ ಮತ್ತು ಅವಹೇಳನಕಾರಿ ಪದಗಳನ್ನು ಬಳಸಿರುವುದು ಕಂಡುಬಂದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
video of a DMK Union Secretary verbally abusing a Dalit youth for allegedly entering a temple
இது எபோதான் மாறும்…@mkstalin @cpimspeak @Udhaystalin#salem #dalit #viral #Tamilnadu pic.twitter.com/FzM75bXcSz
— Sharun Rajkumar (@sharunRajkumar) January 30, 2023
ಯುವಕನ ಕುಟುಂಬದ ಯಾವುದೇ ಸದಸ್ಯರು ಗ್ರಾಮದಲ್ಲಿ ಉಳಿಯದಂತೆ ನೋಡಿಕೊಳ್ಳುವುದಾಗಿ ಡಿಎಂಕೆ ಪದಾಧಿಕಾರಿ ಬೆದರಿಕೆ ಹಾಕುತ್ತಿರುವುದು ಕಂಡುಬಂದಿದೆ.
ದೇವಾಲಯದಲ್ಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದ್ದು, ಯುವಕನು ದೇವಾಲಯಕ್ಕೆ ಪ್ರವೇಶಿಸಿ ಗುರುವಾರ ದೇವರ ಆಶೀರ್ವಾದ ಪಡೆಯಲು ಗರ್ಭಗುಡಿಯ ಬಳಿ ತಲುಪಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆತ ದೇವಾಲಯಕ್ಕೆ ಪ್ರವೇಶಿಸಿದ ಕೂಡಲೇ, ಹಿಂದೂಗಳ ಒಂದು ವಿಭಾಗವು ಜಗಳಕ್ಕೆ ಇಳಿಯಿತು. ನಂತರ ಘಟನೆಯ ಬಗ್ಗೆ ಸ್ಥಳೀಯ ಪಂಚಾಯತ್ ನಾಯಕನಾದ ಮಾಣಿಕ್ಕಮ್ ಅವರಿಗೆ ಈ ಗುಂಪು ತಿಳಿಸಿತು.
ದಲಿತರು ಆವರಣಕ್ಕೆ ಕಾಲಿಟ್ಟಿದ್ದರಿಂದ ಗ್ರಾಮದ ಹಲವಾರು ಜನರು ದೇವಸ್ಥಾನಕ್ಕೆ ಪ್ರವೇಶಿಸಲು ಇಷ್ಟಪಡುವುದಿಲ್ಲ ಎಂದು ಮಾಣಿಕ್ಕಂ ಹೇಳುವುದನ್ನು ವೀಡಿಯೊದಲ್ಲಿ ಕೇಳಬಹುದು.
ಡಿಎಂಕೆ ಪಕ್ಷದ ಶಿಸ್ತು ಉಲ್ಲಂಘಿಸಿ ಪಕ್ಷಕ್ಕೆ ಅಪಖ್ಯಾತಿ ತಂದಿದ್ದಕ್ಕಾಗಿ ಮಾಣಿಕ್ಕಂ ಅವರನ್ನು ಪಕ್ಷದಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್ ತಿಳಿಸಿದ್ದಾರೆ.
ಸೋಮವಾರ ಸೇಲಂನಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಕಾರ್ಯಕಾರಿ ಇಮಾಯವರಂಬನ್, ಈ ಘಟನೆಯು ದಲಿತ ಸಮುದಾಯಕ್ಕೆ ತುಂಬಾ ನೋವನ್ನುಂಟು ಮಾಡಿದೆ ಎಂದಿದ್ದಾರೆ.
ಇದೀಗ ಅಮಾನತುಗೊಂಡಿರುವ ಡಿಎಂಕೆ ಕಾರ್ಯಕರ್ತನ ವಿರುದ್ಧ ಪೊಲೀಸರು ಮತ್ತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಘಟನೆಯ ಬಗ್ಗೆ ಸಂತ್ರಸ್ತರಿಂದ ದೂರು ಸ್ವೀಕರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.