ಬೆಂಗಳೂರು: ದೊಡ್ಡಗಣಪತಿ ಮತ್ತು ಸಮೂಹ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ‘ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ’ ಹೊರಡಿಸಿರುವ ‘ಟೆಂಡರ್ ಮತ್ತು ಹರಾಜು’ ಪ್ರಕಟಣೆ ಚರ್ಚೆಗೆ ಗ್ರಾಸವಾಗಿದೆ. ದಲಿತ ಹೋರಾಟಗಾರರ ವಿರೋಧದ ಬಳಿಕ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿರುವುದಾಗಿ ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.
ಬಸವನಗುಡಿಯ ದೊಡ್ಡ ಗಣಪತಿ ದೇವಾಲಯ ದೇವಾಲಯ ಸಮೂಹಕ್ಕೆ ಸೇರಿದ ದೊಡ್ಡ ಗಣಪತಿ ದೇವಾಲಯ, ದೊಡ್ಡ ಬಸವಣ್ಣ ದೇವಾಲಯ, ಕಾರಂಜಿ ಆಂಜನೇಯಸ್ವಾಮಿ ದೇವಾಲಯಗಳಿಗೆ ಸಂಬಂಧಿಸಿದಂತೆ ಹರಾಜು ಪ್ರಕ್ರಿಯೆಯನ್ನು ನವೆಂಬರ್ 16ರಂದು ಹಮ್ಮಿಕೊಂಡಿರುವುದಾಗಿ ಪತ್ರಿಕಾ ಪ್ರಕಟಣೆ ನೀಡಲಾಗಿತ್ತು. ಅಂದು ಬೆಳಿಗ್ಗೆ 11 ಗಂಟೆಗೆ ದೊಡ್ಡಗಣಪತಿ ದೇವಾಲಯದ ಆವರಣದಲ್ಲಿ ಟೆಂಡರ್ ಮತ್ತು ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಬಾಬಿನ ವಿವರ ಟೀಕೆಗೆ ಗುರಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ದೊಡ್ಡಗಣಪತಿ ದೇವಾಲಯಕ್ಕೆ ಬರುವ ಭಕ್ತಾದಿಗಳ ಪೂಜಾ ಕೈಂಕರ್ಯ ಅನುಕೂಲಕ್ಕಾಗಿ ಪೂಜಾ ಸಾಮಗ್ರಿ ಮಾರಾಟ ಮಾಡುವ ಸ್ಥಳದ ಹಕ್ಕಿನ ಟೆಂಟರ್ ಮತ್ತು ಹರಾಜು ಸಾಮಾನ್ಯ ವರ್ಗಕ್ಕೆ, ಈಡುಗಾಯಿ ಆಯ್ದುಕೊಳ್ಳುವ ಹಕ್ಕು ಸಾಮಾನ್ಯರಿಗೆ, ಎಳನೀರು ಮಾರಾಟ ಹಕ್ಕು ಸಾಮಾನ್ಯ ವರ್ಗಕ್ಕೆ ಮೀಸಲಾದರೆ ದೇವಸ್ಥಾನದ ಮುಂದೆ ಪಾದರಕ್ಷೆ ಕಾಯುವ ಹಕ್ಕನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿದೆ.
ದೊಡ್ಡಬಸವಣ್ಣ ದೇವಾಲಯದ ವಿಚಾರದಲ್ಲೂ ಇದೇ ಪ್ರಮಾದವಾಗಿದೆ. ಚಪ್ಪಲಿ ಕಾಯುವ ಕೆಲಸವನ್ನು ಪರಿಶಿಷ್ಟರಿಗೆ ಮೀಸಲಿರಿಸಿದ್ದರೆ, ದೇವಾಲಯದ ಖಾಲಿ ಜಾಗದಲ್ಲಿ ಮೆರಿಗೋ ರೌಂಡ್ ಮತ್ತು ಸುಂಕ ವಸೂಲಾತಿ ಹಕ್ಕನ್ನು ಸಾಮಾನ್ಯ ವರ್ಗಕ್ಕೆ ನೀಡಲಾಗಿತ್ತು.
ಧಾರ್ಮಿಕ ದತ್ತಿ ಇಲಾಖೆಯ ಈ ಪ್ರಕಟಣೆಯ ಕುರಿತು ಚಿಂತಕ, ಹೋರಾಟಗಾರ ಹ.ರಾ.ಮಹೇಶ್ ಅವರು ಬೇಸರ ವ್ಯಕ್ತಪಡಿಸಿದ್ದು, “ಈ ಕೆಟ್ಟ ರೋಗಗ್ರಸ್ತ ಮನಸ್ಥಿತಿಯ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧವಾಗೋಣ” ಎಂದು ಮನವಿ ಮಾಡಿದ್ದಾರೆ.
“ದೇವಾಲಯದ ಹೊರಗೆ ಸಾವಿರಾರು ರೂಪಾಯಿ ದುಡಿಯುವ ಪೂಜಾ ಸಾಮಗ್ರಿ ಮಾರಾಟ ಟೆಂಡರ್, ಈಡುಗಾಯಿ ಆಯುವ ಹಕ್ಕಿನ ಟೆಂಡರ್, ಎಳನೀರು ಮಾರಾಟ ಟೆಂಡರ್, ಸುಂಕ ವಸೂಲಾತಿ ಟೆಂಡರ್ ಇವೆಲ್ಲವೂ ಸಾಮಾನ್ಯ ವರ್ಗಗಳಿಗೆ ಮೀಸಲು. ದೇವಾಲಯದ ಬಾಗಿಲ ಬಳಿ ನೂರಾರು ರೂಪಾಯಿ ದುಡಿಯುವ ‘ಚಪ್ಪಲಿ ಕಾಯುವ’ ಹಕ್ಕಿನ ಟೆಂಡರ್ ಎಸ್.ಸಿ., ಎಸ್.ಟಿ.ಗಳಿಗೆ ಮೀಸಲು. ದೇವಾಲಯದ ಗರ್ಭಗುಡಿಯೊಳಗೆ ತಣ್ಣಗೆ ಲಕ್ಷ ಲಕ್ಷ ರೂ. ದುಡಿಯುವ ಅರ್ಚಕ ಹುದ್ದೆ, ಹುಂಡಿಯ ಹಕ್ಕು ಕೇವಲ ಬ್ರಾಹ್ಮಣರಿಗೆ ಮಾತ್ರೆ” ಎಂದು ಆರೋಪಿಸಿದ್ದಾರೆ.
“Dignity of labour ಬಗ್ಗೆ ಪಾಠ ಮಾಡುವ, ಜಾತಿ ಇಲ್ಲ ಎಂದು ವಾದಿಸುವ, ಮೀಸಲಾತಿಯನ್ನು ವಿರೋಧಿಸುವ ಜನರೇ ಕಣ್ಣು ಬಿಟ್ಟು ಇಲ್ಲಿ ನೋಡಿ. ಚಪ್ಪಲಿ ಕಾಯುವ ಕೆಲಸವನ್ನು ಕೇವಲ ಎಸ್ಸಿ, ಎಸ್ಟಿಗಳಿಗೆ ಮೀಸಲಿಟ್ಟಿರುವ ಈ ಟೆಂಡರ್ ಪ್ರಕ್ರಿಯೆಯು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಬಹಳ ಮುಕ್ತವಾಗಿ ಜಾತಿವಾದವನ್ನು ಪೋಷಿಸಿದೆ. ನೇರವಾಗಿ ಅಸ್ಪೃಶ್ಯತೆಯನ್ನು ಆಚರಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿರಿ: ಗೌರವಾನ್ವಿತ ಜಸ್ಟೀಸ್ ದಾಸ್ ವಿರುದ್ಧ ದ್ವೇಷ ಕಾರಿದ ಮತೀಯವಾದಿ ಸಂಘಟನೆ; ಕ್ರಮಕ್ಕೆ ಆಗ್ರಹ
“ಇದಕ್ಕೆ ದೇವಾಲಯ ಮಂಡಳಿ ಮತ್ತು ಧಾರ್ಮಿಕ ದತ್ತಿ ಇಲಾಖೆಯು ಉತ್ತರಿಸಬೇಕಾಗುತ್ತದೆ. ಪ್ರಕಟಣೆ ನೀಡುವುದು, ವಿರೋಧ ಬಂದರೆ ನಂತರ ರದ್ದುಗೊಳಿಸುವುದು ನಡೆಯುತ್ತದೆ. ಯಾರ ಗಮನಕ್ಕೂ ಬಾರದಿದ್ದರೆ ಜಾರಿಗೆ ತರುತ್ತಾರೆ. ಈ ನಾಟಕದ ಹುನ್ನಾರ ಯಾಕೆ? ನಾವು ಕಾನೂನಾತ್ಮಕ ಹೋರಾಟಕ್ಕೆ ಸಜ್ಜಾಗುತ್ತೇವೆ” ಎಂದು ಎಚ್ಚರಿಸಿದ್ದಾರೆ.
ಟೆಂಡರ್ ಪ್ರಕ್ರಿಯೆ ರದ್ದಾಗಿರುವ ಕುರಿತು ಈ ‘ದಿನ.ಕಾಮ್’ ವರದಿ ಮಾಡಿದೆ. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಕುಮಾರ ಪ್ರತಿಕ್ರಿಯಿಸಿ, “ಯಾವುದೇ ಕೆಟ್ಟ ಉದ್ದೇಶದಿಂದ ನಾವು ಈ ರೀತಿ ಟೆಂಡರ್ ಕರೆದಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ನಾವು ಚಪ್ಪಲಿ ಕಾಯುವವರಾ ಎಂದು ಕೇಳುತ್ತಿದ್ದಾರೆ. ಹಾಗಾಗಿ, ಟೆಂಡರ್ ರದ್ದುಗೊಳಿಸಲಾಗಿದೆ. ಮೊದಲಿನಿಂದ ಈ ರೀತಿಯಿಂದಲೇ ಟೆಂಡರ್ ಪ್ರಕ್ರಿಯೆ ನಡೆದುಕೊಂಡು ಬರುತ್ತಿದೆ. ಸರ್ಕಾರದ ಆದೇಶದ ಪ್ರಕಾರ ನಾವು ಟೆಂಡರ್ ಕರೆದಿದ್ದೇವೆ” ಎಂದು ತಿಳಿಸಿದ್ದಾರೆ.
“ಆ ರೀತಿ ಟೆಂಡರ್ ಕರೆಯಬಾರದಿತ್ತು. ಆದರೆ, ತಪ್ಪಾಗಿ ಕರೆದಿದ್ದೇವೆ. ಹಾಗಾಗಿ ಕರೆದ ಟೆಂಡರ್ ಅನ್ನು ರದ್ದುಗೊಳಿಸಿ ನಾಳೆ ಮರು ಟೆಂಡರ್ ಕರೆಯಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.