”ದೇಶದ ಪ್ರಜಾಪ್ರಭುತ್ವದ ಮೂಲಭೂತ ರಚನೆಯ ಮೇಲೆ ಭಾರತ ಸರ್ಕಾರ ದಾಳಿ ಮಾಡುತ್ತಿದೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಉಪನ್ಯಾಸದ ಸಂದರ್ಭದಲ್ಲಿ ಆರೋಪಿಸಿದ್ದಾರೆ. ಇಸ್ರೇಲಿ ಸ್ಪೈವೇರ್ ಪೆಗಾಸಸ್ ಬಳಸಿ ತಮ್ಮ ಫೋನ್ನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಅವರ ಸಂಭಾಷಣೆಗಳು ರೆಕಾರ್ಡ್ ಆಗುತ್ತಿರುವುದರಿಂದ ಫೋನ್ನಲ್ಲಿ ಮಾತನಾಡುವಾಗ ಎಚ್ಚರಿಕೆ ವಹಿಸುವಂತೆ ಗುಪ್ತಚರ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ಅವರು ಹೇಳಿದರು.
“ನನ್ನ ಫೋನ್ನಲ್ಲಿ ಸ್ಪೈವೇರ್ ಪೆಗಾಸಸ್ ಬಳಸಿ ಸಂಭಾಷೆಣೆಯನ್ನು ಕದಿಯಲಾಗಿದೆ. ಅದೇ ರೀತಿ ಅನೇಕ ರಾಜಕಾರಣಿಗಳ ಫೋನ್ಗಳನ್ನು ಹ್ಯಾಕ್ ಮಾಡಿದ್ದಾರೆ. ನನಗೆ ಗುಪ್ತಚರ ಅಧಿಕಾರಿಗಳು ಕರೆ ಮಾಡಿ, ‘ದಯವಿಟ್ಟು ನೀವು ಫೋನ್ನಲ್ಲಿ ಏನು ಮಾತನಾಡುತ್ತಿದ್ದೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ, ಏಕೆಂದರೆ ನಾವು ಆ ವಿಷಯವನ್ನು ರೆಕಾರ್ಡ್ ಮಾಡುತ್ತಿದ್ದೇವೆ’ ಎಂದು ಹೇಳಿದ್ದರು. ಇದು ನಾವು ಅನುಭವಿಸುವ ನಿರಂತರ ಒತ್ತಡವಾಗಿದೆ. ನನ್ನ ಮೇಲೆ ಹಲವಾರು ಕ್ರಿಮಿನಲ್ ಹೊಣೆಗಾರಿಕೆಯ ಪ್ರಕರಣಗಳನ್ನು ದಾಖಲಿಸಲಾಗಿದೆ. ಭಾರತ ಸರ್ಕಾರದ ಈ ನಡೆಯ ವಿರುದ್ಧ ಮತ್ತು ನಮ್ಮನ್ನು ನಾವು ರಕ್ಷಿಸಲು ಹೋರಾಡುತ್ತಲೇ ಇದ್ದೇವೆ” ಎಂದು ರಾಹುಲ್ ಗಾಂಧಿ ಹೇಳಿದರು.
ರಾಹುಲ್ ಗಾಂಧಿಯವರ ಭಾಷಣವನ್ನು ಕಾಂಗ್ರೆಸ್ ನಾಯಕ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಜಿ ಸಲಹೆಗಾರ ಸ್ಯಾಮ್ ಪಿತ್ರೋಡಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
Here is the full Video of Rahul Gandhi’s Lecture at @CambridgeMBA @CambridgeJBS
“The art of listening” when done consistently and diligently is “very powerful,” – @RahulGandhi https://t.co/4ETVo0X45f#BharatJodoYatra#RahulGandhiinCambridge pic.twitter.com/tDI4ONieG0
— Sam Pitroda (@sampitroda) March 3, 2023
ಭಾರತದಲ್ಲಿ ಸಂಸತ್ತು, ಪತ್ರಿಕಾ ರಂಗ ಮತ್ತು ನ್ಯಾಯಾಂಗವನ್ನು ನಿರ್ಬಂಧಿಸಲಾಗಿದೆ ಎಂದು ಗಾಂಧಿ ಆರೋಪಿಸಿದರು.
”ಭಾರತೀಯ ಪ್ರಜಾಪ್ರಭುತ್ವವು ಒತ್ತಡದಲ್ಲಿದೆ ಮತ್ತು ಆಕ್ರಮಣದಲ್ಲಿದೆ ಎಂದು ಸಾಕಷ್ಟು ಸುದ್ದಿಯಾಗಿದೆ. ಈ ಬಗ್ಗೆ ಎಲ್ಲರಿಗೂ ತಿಳಿದಿದೆ. ನಾನು ಭಾರತದಲ್ಲಿ ವಿರೋಧ ಪಕ್ಷದ ನಾಯಕ, ನಾವು ಆ(ವಿರೋಧ) ಜಾಗದಲ್ಲಿ ಕುಳಿತು ನಮ್ಮ ಕೆಲಸ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಸಾಂಸ್ಥಿಕ ಚೌಕಟ್ಟು-ಸಂಸತ್ತು, ಮುಕ್ತ ಪತ್ರಿಕಾ, ನ್ಯಾಯಾಂಗ, ಚರ್ಚೆಗಳು ಎಲ್ಲವೂ ನಿರ್ಬಂಧಿತವಾಗುತ್ತಿವೆ. ಹಾಗಾಗಿ, ನಾವು ಭಾರತೀಯ ಪ್ರಜಾಪ್ರಭುತ್ವದ ಮೂಲ ರಚನೆಯ ಮೇಲೆ ದಾಳಿಯನ್ನು ಎದುರಿಸುತ್ತಿದ್ದೇವೆ” ಎಂದು ಕಾಂಗ್ರೆಸ್ ಸಂಸದರು ಆರೋಪಿಸಿದ್ದಾರೆ.
ವಿರೋಧ ಪಕ್ಷದ ನಾಯಕರು ಸಂಸತ್ ಭವನದ ಮುಂದೆ ಸುಮ್ಮನೆ ನಿಂತು ಸಮಸ್ಯೆಗಳ ಬಗ್ಗೆ ಮಾತನಾಡಿದ್ದಕ್ಕಾಗಿ ಅವರನ್ನು ಜೈಲಿಗೆ ಹಾಕಲಾಗುತ್ತಿದೆ ಎಂದು ಆರೋಪಿಸಿ ಪೊಲೀಸ್ ಅಧಿಕಾರಿಗಳು ಹಿಡಿದಿರುವ ಚಿತ್ರವನ್ನು ತೋರಿಸಿದರು.
ಅಲ್ಪಸಂಖ್ಯಾತರು ಮತ್ತು ಪತ್ರಿಕೆಗಳ ಮೇಲೆ ಸರ್ಕಾರವು ದಾಳಿ ಮಾಡುತ್ತಿದೆ. ಭಾರತದಲ್ಲಿ ಪರಿಸ್ಥಿತಿ ಭೀಕರವಾಗಿದೆ ಎಂದು ಅವರು ಆರೋಪಿಸಿದರು.
”ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ಸಂವಿಧಾನದಲ್ಲಿ ವಿವರಿಸಲಾಗಿದೆ ಮತ್ತು ಆ ಒಕ್ಕೂಟಕ್ಕೆ ಮಾತುಕತೆ ಮತ್ತು ಸಂಭಾಷಣೆಯ ಅಗತ್ಯವಿದೆ. ಆದರೆ ಈಗ ಒಕ್ಕೂಟ ವ್ಯವಸ್ಥೆ ದಾಳಿ ಮತ್ತು ಬೆದರಿಕೆಗೆ ಒಳಗಾಗಿದೆ. ಸಂಸತ್ ಭವನದ ಮುಂದೆ ತೆಗೆದ ಚಿತ್ರವನ್ನು ನೀವು ನೋಡಬಹುದು. ವಿರೋಧ ಪಕ್ಷದ ನಾಯಕರು ಕೆಲವು ವಿಷಯಗಳ ಬಗ್ಗೆ ಮಾತನಾಡುತ್ತಾ ನಿಂತಿದ್ದೇವೆ. ಆದರೂ ನಮ್ಮನ್ನು ಜೈಲಿಗೆ ಹಾಕಲಾಯಿತು, ಈ ರೀತಿ 3 ಅಥವಾ 4 ಬಾರಿ ಸಂಭವಿಸಿದೆ. ಅಲ್ಪಸಂಖ್ಯಾತರು ಮತ್ತು ಪತ್ರಿಕಾ ದಾಳಿಗಳ ಬಗ್ಗೆಯೂ ನೀವು ಕೇಳಿದ್ದೀರಿ, ಏನಾಗುತ್ತಿದೆ ಎಂದು ನಿಮಗೆ ಅರ್ಥವಾಗುತ್ತದೆ” ಎಂದು ರಾಹುಲ್ ಹೇಳಿಕೊಂಡರು.