”ಬಿಜೆಪಿಯು ಸಿಬಿಐ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ನಮ್ಮ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಚಿವ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದೆ. ಬಿಜೆಪಿಯ ಈ ಸರ್ವಾಧಿಕಾರದ ಧೋರಣೆ ಬಗ್ಗೆ ಜನರಿಗೆ ತಿಳಿಸಲು ನಾವು ದೆಹಲಿಯಾದ್ಯಂತ 2,500 ಬೀದಿ ಸಭೆಗಳನ್ನು ನಡೆಸಲ್ಲಿದ್ದೇವೆ” ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಗುರುವಾರ, ದೆಹಲಿ ರಾಜ್ಯ ಸಂಚಾಲಕ ಗೋಪಾಲ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಂಸ್ಥಿಕ ಸಭೆಯಲ್ಲಿ, ”ಮೋದಿ ಸರ್ಕಾರದಿಂದ ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ಬಗ್ಗೆ” ಜನರಿಗೆ ತಿಳಿಸಲು ಬಹಿರಂಗ ಸಭೆಗಳು ಮತ್ತು ಬೀದಿ ಸಭೆಗಳನ್ನು ಆಯೋಜಿಸಲು ರಾಜ್ಯ ಘಟಕ ನಿರ್ಧರಿಸಿದೆ.
ಮಾರ್ಚ್ 3ರಂದು ದೆಹಲಿಯ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವಯಂಸೇವಕ ಸಭೆ ನಡೆಸುವ ಮೂಲಕ ಬಿಜೆಪಿಯ ನಡೆಯನ್ನು ಬಹಿರಂಗಪಡಿಸುತ್ತೇವೆ ಎಂದು ರೈ ಹೇಳಿದರು.
”ಮಾರ್ಚ್ 4ರಂದು, ಪಕ್ಷವು ರಾಜ್ಯ ಮಟ್ಟದಲ್ಲಿ ಬಹಿರಂಗ ಸಭೆಗಳನ್ನು ನಡೆಸುತ್ತದೆ ಮತ್ತು ಮಾರ್ಚ್ 6 ಮತ್ತು 7ರಂದು ದೆಹಲಿಯ ಪ್ರತಿ ಮತಗಟ್ಟೆ ವ್ಯಾಪ್ತಿಗಳಲ್ಲಿ ಸಭೆಗಳನ್ನು ಆಯೋಜಿಸುತ್ತದೆ. ಅಂತಿಮವಾಗಿ ಮಾರ್ಚ್ 10ರಂದು, ದೆಹಲಿಯ ಪ್ರತಿ ಬೀದಿಗಳಲ್ಲಿ ಸಭೆಗಳನ್ನು ಆಯೋಜಿಸುವ ಮೂಲಕ ಎಲ್ಲರನ್ನೂ ತಲುಪುತ್ತೇವೆ” ಎಂದು ಹೇಳಿದರು.
ಇದನ್ನೂ ಓದಿ: ಸಿಸೋಡಿಯಾ, ಜೈನ್ ಬಿಜೆಪಿ ಸೇರಿದರೆ ನಾಳೆಯೇ ಜೈಲಿನಿಂದ ಹೊರಬರುತ್ತಾರೆ: ಅರವಿಂದ್ ಕೇಜ್ರಿವಾಲ್
ಎಎಪಿ ದೆಹಲಿಯಲ್ಲಿ 2,500ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಿದ್ದು, ಅಲ್ಲಿ ಬಿಜೆಪಿಯ ಸರ್ವಾಧಿಕಾರದ ಬಗ್ಗೆ ಜನರಿಗೆ ತಿಳಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.
”ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರ್ವಾಧಿಕಾರಿ ಧೋರಣೆ ಅನುಸರಿಸಿ ದೇಶದ ಅತ್ಯುತ್ತಮ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದ್ದಾರೆ ಮತ್ತು ಸತ್ಯೇಂದ್ರ ಜೈನ್ ಅವರನ್ನು ಜೈಲಿನಲ್ಲಿಡಲು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ” ಎಂದು ನಗರಾಡಳಿತದಲ್ಲಿ ಪರಿಸರ ಸಚಿವರೂ ಆಗಿರುವ ರೈ ಹೇಳಿದರು.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಎಲ್ಲಾ ಶಾಸಕರು ಮತ್ತು ಕೌನ್ಸಿಲರ್ಗಳೊಂದಿಗೆ ಸಭೆ ನಡೆಸಿ, ಜನರನ್ನು ತಲುಪಿ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಸುವಂತೆ ಕೇಳಿಕೊಂಡರು. ಬಿಜೆಪಿಯ ಪ್ರತಿಯೊಂದು ಸಂಚು ಮತ್ತು ಷಡ್ಯಂತ್ರವನ್ನು ಜನರಿಗೆ ತಲುಪಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.
”ನಾವು ದೆಹಲಿಯ ಪ್ರತಿ ಮೂಲೆಮೂಲೆಗಳಲ್ಲಿ ಸಭೆಗಳನ್ನು ಆಯೋಜಿಸುತ್ತೇವೆ ಮತ್ತು ಆಮ್ ಆದ್ಮಿ ಪಕ್ಷವನ್ನು ತಡೆಯಲು ಪ್ರಧಾನಿ ಹಮ್ಮಿಕೊಂಡಿರುವ ಪಿತೂರಿಯನ್ನು ಜನರಿಗೆ ಬಹಿರಂಗಪಡಿಸುತ್ತೇವೆ. ನಮ್ಮ ನಾಯಕರನ್ನು ಬಂಧಿಸಲು ಸುಳ್ಳು ಆರೋಪಗಳನ್ನು ಮಾಡಿರುವ ಬಗ್ಗೆ ಜನರಿಗೆ ತಿಳಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದರು.
”ಸದ್ಯಕ್ಕೆ ರಾಜ್ಯ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಶೀಘ್ರದಲ್ಲಿಯೇ ರಾಷ್ಟ್ರಮಟ್ಟದಲ್ಲಿಯೂ ಕಾರ್ಯಕ್ರಮ ನಡೆಸಲಿದೆ” ಎಂದು ಹಿರಿಯ ಮುಖಂಡರು ತಿಳಿಸಿದ್ದಾರೆ.
”ನಮ್ಮ ಪಕ್ಷದ ನಾಯಕರನ್ನು ಜೈಲಿಗೆ ಯಾಕೆ ಕಳುಹಿಸಿದ್ದಾರೆ? ನಿಜವಾಗಿಯೂ ಏನಾಗುತ್ತಿದೆ ಎಂಬುದನ್ನೂ ಜನರಿಗೆ ತಿಳಿಸುತ್ತೇವೆ” ಎಂದು ಅರವಿಂದ್ ಕೇಜ್ರಿವಾಲ್ ಬುಧವಾರ ಹೇಳಿದರು.