ಮದ್ಯ ನೀತಿಯಲ್ಲಿನ ಅಕ್ರಮ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಎಎಪಿಯ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರು ಬಿಜೆಪಿಗೆ ಸೇರ್ಪಡೆಯಾದರೆ ನಾಳೆಯೇ ಜೈಲಿನಿಂದ ಹೊರಬರುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.
”ಸಮಸ್ಯೆಯು ಭ್ರಷ್ಟಾಚಾರವಲ್ಲ, ಆಮ್ ಆದ್ಮಿ ಪಕ್ಷವು ಮಾಡುವ ಕೆಲಸವನ್ನು ನಿಲ್ಲಿಸುವುದು ಮತ್ತು ನಂತರ ಅವರ ವಿರುದ್ಧ ಕೇಂದ್ರೀಯ ತನಿಖಾ ಮತ್ತು ಜಾರಿ ನಿರ್ದೇಶನಾಲಯವನ್ನು ಕಳುಹಿಸುವುದು” ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಈಗ ರದ್ದಾದ ಅಬಕಾರಿ ನೀತಿಯ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಸಿಬಿಐ ಭಾನುವಾರ ಬಂಧಿಸಿದೆ. ದೆಹಲಿ ನ್ಯಾಯಾಲಯವು ಸೋಮವಾರ ಅವರನ್ನು ಮಾರ್ಚ್ 4ರವರೆಗೆ ಸಿಬಿಐ ಕಸ್ಟಡಿಗೆ ಕಳುಹಿಸಿದೆ.
ಇದನ್ನೂ ಓದಿ: ‘ನಾನಲ್ಲ, ನೀವೇ ಅವರ ಟಾರ್ಗೆಟ್’: ದೆಹಲಿ ಸಿಎಂ ಕೇಜ್ರಿವಾಲ್ಗೆ ಸಿಸೋಡಿಯಾ ಪತ್ರ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈನ್ ಅವರನ್ನು ಜಾರಿ ನಿರ್ದೇಶನಾಲಯವು ಮೇ 30 ರಂದು ಬಂಧಿಸಿತ್ತು. 2017ರಲ್ಲಿ ಅಸಮಂಜಸ ಆಸ್ತಿಯ ವಿವರ ಸಲ್ಲಿಸಿದ ಬಗ್ಗೆ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಅದರ ಆಧಾರದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಜೈನ್ ಅವರನ್ನು ಬಂಧಿಸಲಾಗಿತ್ತು.
ಫೆಬ್ರವರಿ 28 ರಂದು ಈ ಇಬ್ಬರೂ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ”8 ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿದ ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಬಂದಿರುವುದು ದುರದೃಷ್ಟಕರ” ಎಂದು ಮನೀಶ್ ಸಿಸೋಡಿಯಾ ನೀಡಿರುವ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
”ತಮ್ಮ ವಿರುದ್ಧದ ಆರೋಪಗಳು ಸುಳ್ಳು ಮತ್ತು ಅರವಿಂದ್ ಕೇಜ್ರಿವಾಲ್ ಅವರ ಸತ್ಯದ ರಾಜಕಾರಣಕ್ಕೆ ಹೆದರುವ ಹೇಡಿಗಳು ಮತ್ತು ದುರ್ಬಲರು ತಮ್ಮ ವಿರುದ್ಧ ಪಿತೂರಿ ನಡೆಸಿದ್ದಾರೆ” ಎಂದು ಹೇಳಿದ್ದಾರೆ.
ಬುಧವಾರ ಕೇಜ್ರಿವಾಲ್ ಅವರು, ಆಮ್ ಆದ್ಮಿ ಪಕ್ಷ, ಬಿಜೆಪಿ ವಿರುದ್ಧ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದೆ ಎಂದು ಹೇಳಿದ್ದಾರೆ.
”ನಾವು ಪ್ರತಿ ಮನೆಗೆ ಹೋಗುತ್ತೇವೆ, ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರು ಹೇಗೆ ತೀವ್ರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ಜನರಿಗೆ ವಿವರಿಸುತ್ತೇವೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ ಮತ್ತು ಅವರು ಕೇಂದ್ರದ ವಿರುದ್ಧ ಕೋಪಗೊಂಡಿದ್ದಾರೆ” ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದರು.
”ಕಳೆದ ವರ್ಷ ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವಿನಿಂದ ಕೇಸರಿ ಪಕ್ಷವು ಕಂಗೆಟ್ಟಿದೆ. ನಾವು ಪಂಜಾಬ್ನಲ್ಲಿ ಗೆದ್ದಾಗಿನಿಂದ, ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಎಪಿಯ ಗೆಲುವಿನ ಓಟವನ್ನು ನಿಲ್ಲಿಸಲು ಬಿಜೆಪಿ ಬಯಸಿದೆ” ಎಂದು ಅವರು ಹೇಳಿದರು.