Homeಮುಖಪುಟ'ನಾನಲ್ಲ, ನೀವೇ ಅವರ ಟಾರ್ಗೆಟ್': ದೆಹಲಿ ಸಿಎಂ ಕೇಜ್ರಿವಾಲ್‌ಗೆ ಸಿಸೋಡಿಯಾ ಪತ್ರ

‘ನಾನಲ್ಲ, ನೀವೇ ಅವರ ಟಾರ್ಗೆಟ್’: ದೆಹಲಿ ಸಿಎಂ ಕೇಜ್ರಿವಾಲ್‌ಗೆ ಸಿಸೋಡಿಯಾ ಪತ್ರ

- Advertisement -
- Advertisement -

”8 ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿದ ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಬಂದಿರುವುದು ದುರದೃಷ್ಟಕರ” ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಮನೀಶ್ ಸಿಸೋಡಿಯಾ ನೀಡಿರುವ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಭಾನುವಾರ ಬಂಧಿಸಿದೆ. ಸೋಮವಾರ ದೆಹಲಿ ನ್ಯಾಯಾಲಯ ಅವರನ್ನು ಮಾರ್ಚ್ 4ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ. ಅದರ ಬೆನ್ನಲ್ಲೇ ಮಂಗಳವಾರ (ಫೆ28)ರಂದು ಸಿಸೋಡಿಯಾ ಅವರು ದೆಹಲಿ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಸಿಸೋಡಿಯಾ ಮತ್ತು ಸಂಪುಟದಲ್ಲಿರುವ ಅವರ ಸಹೋದ್ಯೋಗಿ ಸತ್ಯೇಂದ್ರ ಜೈನ್ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎಎಪಿಯ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ಪತ್ರಗಳನ್ನು ಅಂಗೀಕರಿಸಿದ್ದಾರೆ.

ಇದನ್ನೂ ಓದಿ: ಸಿಸೋಡಿಯಾ ಬಂಧನ: ಕೇಂದ್ರದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಎಎಪಿ ಕರೆ

ಸಿಸೋಡಿಯಾ ತಮ್ಮ ರಾಜೀನಾಮೆ ಪತ್ರದಲ್ಲಿ, ”8 ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿದ ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಬಂದಿರುವುದು ದುರದೃಷ್ಟಕರ. ನನ್ನ ವಿರುದ್ಧದ ಆರೋಪಗಳು ಸುಳ್ಳು ಮತ್ತು ಅರವಿಂದ್ ಕೇಜ್ರಿವಾಲ್ ಅವರ ಸತ್ಯದ ರಾಜಕಾರಣಕ್ಕೆ ಹೆದರುವ ಹೇಡಿಗಳು ಮತ್ತು ದುರ್ಬಲರು ನಮ್ಮ ವಿರುದ್ಧ ಪಿತೂರಿ ನಡೆಸಿದ್ದಾರೆ” ಎಂದು ಹೇಳಿದ್ದಾರೆ.

”ಅವರ ಗುರಿ ನಾನಲ್ಲ, ನೀವು (ಕೇಜ್ರಿವಾಲ್) ಏಕೆಂದರೆ, ಇಂದು ದೆಹಲಿಯ ಜನರು ಮತ್ತು ದೇಶದ ಇತರ ಜನರು ನಿಮ್ಮನ್ನು ದೇಶದ ದೂರದೃಷ್ಟಿಯುಳ್ಳ ನಾಯಕ ಎಂದು ನೋಡುತ್ತಿದ್ದಾರೆ” ಎಂದು ಸಿಸೋಡಿಯಾ ಹೇಳಿದ್ದಾರೆ

”ನನ್ನ ವಿರುದ್ಧ ಇನ್ನಷ್ಟು ಪ್ರಕರಣಗಳನ್ನು ದಾಖಲಿಸಲು ಸಿದ್ಧತೆ ನಡೆಸಲಾಗುತ್ತಿದೆ. ನಾನು ನಿಮ್ಮಿಂದ (ಕೇಜ್ರಿವಾಲ್) ದೂರವಾಗಿ ಪಕ್ಷ ತೊರೆಯಬೇಕು ಎಂದು ಪ್ರಯತ್ನಿಸಿದರು. ನಾನು ಅವರ ಮುಂದೆ ತಲೆಬಾಗದಿರುವುದಕ್ಕೆ ಇಂದು ಅವರು ನನ್ನನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ” ಎಂದು ಕೇಜ್ರಿವಾಲ್‌ಗೆ ಸಿಸೋಡಿಯಾ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ನವೆಂಬರ್ 2021ರಲ್ಲಿ ಜಾರಿಗೆ ಬಂದ ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ. ಹೊಸ ಅಬಕಾರಿ ನೀತಿಯಡಿಯಲ್ಲಿ 849 ಮದ್ಯದಂಗಡಿಗಳ ಪರವಾನಗಿಯನ್ನು ಖಾಸಗಿ ಸಂಸ್ಥೆಗಳಿಗೆ ಮುಕ್ತ ಬಿಡ್ಡಿಂಗ್ ಮೂಲಕ ನೀಡಲಾಯಿತು. ಈ ಹಿಂದೆ ನಾಲ್ಕು ಸರ್ಕಾರಿ ನಿಗಮಗಳು 475 ಮದ್ಯದಂಗಡಿಗಳನ್ನು ನಡೆಸುತ್ತಿದ್ದು, ಉಳಿದ 389 ಖಾಸಗಿ ಅಂಗಡಿಗಳಾಗಿದ್ದವು.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು, ಈ ಹೊಸ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಸಿಬಿಐ ತನಿಖೆಗೆ ಶಿಫಾರಸು ಮಾಡಿದರು. ಆ ನಂತರ ಜುಲೈ 30ರಂದು ಎಎಪಿ ನೇತೃತ್ವದ ಸರ್ಕಾರವು ನೀತಿಯನ್ನು ಹಿಂತೆಗೆದುಕೊಂಡಿತು.

”ಸಿಸೋಡಿಯಾ ಅವರು ಪ್ರಕರಣದಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳಿದ್ದರೂ ಅವರು ತನಿಖೆಗೆ ಸಹಕರಿಸಲಿಲ್ಲ ಹಾಗಾಗಿ ಅವರನ್ನು ಬಂಧಿಸಲಾಗಿದೆ” ಎಂದು ಸಿಬಿಐ ಹೇಳಿಕೊಂಡಿದೆ.

ಎಎಪಿ ನಾಯಕ ಸಿಸೋಡಿಯಾ ಅವರು ಮಂಗಳವಾರ ತಮ್ಮ ಬಂಧನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಸಿಸೋಡಿಯಾ ಅವರ ಮನವಿಯನ್ನು ಆಲಿಸಲು ನಿರಾಕರಿಸಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...