ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹರವರು ಮೈಸೂರು ವಿಶ್ವವಿದ್ಯಾಲಯದಲ್ಲಿ ವಸೂಲಿ ಮಾಡಿ ಆ ಹಣವನ್ನು ಕೊಡಗಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ನಲ್ಲಿ ಪಕ್ಷದ ಕಾರ್ಯಕರ್ತರಲ್ಲದ ವ್ಯಕ್ತಿಯನ್ನು ನೇಮಕ ಮಾಡಿ ಅವರ ಮೂಲಕ ಹಣ ವಸೂಲಿ ಮಾಡಿದ್ದಾರೆ. ಅದನ್ನು ಕೊಡಗಿನಲ್ಲಿ ‘ಕೊಡಗು ನ್ಯೂಟ್ರಿಷಿಯನ್’ ಎಂಬ ಕಂಪನಿಯನ್ನು ಟೇಕ್ಓವರ್ ಮಾಡಿ ಅಲ್ಲಿ ಬೇನಾಯಿ ಹೆಸರಿನಲ್ಲಿ ಕಪ್ಪು ಹಣ ಹೂಡಿಕೆ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.
ಮೈಸೂರು – ಬೆಂಗಳೂರು ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ಬಂದ ಕಮಿಷನ್ ಮತ್ತು ಲಂಚವನ್ನು ಪ್ರತಾಪ್ ಸಿಂಹರವರು ಹೂಡಿಕೆ ಮಾಡಿದ್ದಾರೆ. ಇದರಲ್ಲಿ ಕೆಲ ಅಧಿಕಾರಿಗಳು ಸಹ ಹೂಡಿಕೆ ಮಾಡಿದ್ದಾರೆ. ಆ ಕಂಪನಿ ಯಾವುದೋ ಕ್ಯಾಪ್ಶೂಲ್ ತಯಾರಿ ಮಾಡುತ್ತಂತೆ. ಮೆಣಸಿಗೆ ರೋಗ ಬರಬಾರದು ಮತ್ತು ವಾಸನೆ ಕಳೆದುಕೊಳ್ಳಬಾರದು ಎಂದು ಅದನ್ನು ಬಳಸುತ್ತಾರಂತೆ. ಒಟ್ಟಿನಲ್ಲಿ ಈ ಅಕ್ರಮ ಆಸ್ತಿಯ ವಿರುದ್ಧ ತನಿಖೆಯಾಗಬೇಕು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.
ಸುಮಾರು 50-60 ಕೋಟಿ ಹೂಡಿಕೆ ಮಾಡಿದ್ದಾರೆ. ಇಷ್ಟು ಹಣ ಎಲ್ಲಿಂದ ಬಂತು? ಈ ಬಗ್ಗೆ ಐಟಿ ಮತ್ತು ಇಡಿಗೆ ದೂರು ನೀಡುತ್ತೇನೆ. ನಿಮಗೂ ಆ ಸಿಂಡಿಕೇಟ್ ಸದಸ್ಯರಿಗೆ ಸಂಬಂಧ ಏನು ಎಂಬುದನ್ನು ಅವರು ತನಿಖೆ ನಡೆಸಲಿ ಎಂದರು.
ಡಿ.ಕೆ ಶಿವಕುಮಾರ್ರವರ ಮೇಲೆ ಪ್ರೀತಿ ತೋರಿಸುವ ಪ್ರತಾಪ್ ಸಿಂಹರವರು, ಅವರದೇ ಪಕ್ಷ ಡಿಕೆಶಿಯನ್ನು ಜೈಲಿಗೆ ಹಾಕಿದ್ದು ಏಕೆ? ತಿಂಗಳುಗಟ್ಟಲೇ ಜೈಲಿನಲ್ಲಿ ಏಕೆ ಇರಿಸಲಾಗಿತ್ತು? ಅವರ ಮೇಲೆ 30-35 ಇಡಿ, ಸಿಬಿಐ, ಐಟಿ ದೂರು ನೀಡಿದ್ದೇಕೆ? ಚುನಾವಣೆ ಸಂದರ್ಭದಲ್ಲಿ ಅವರಿಗೆ ತೊಂದರೆ ಕೊಟ್ಟಿದ್ದೇಕೆ? ಒಕ್ಕಲಿಗರ ಮೇಲೆ ಪ್ರೀತಿ ಎಲ್ಲಿ ಹೋಯಿತು? ಎಂದು ಲಕ್ಷ್ಮಣ್ ಪ್ರಶ್ನಿಸಿದ್ದಾರೆ.
ಪ್ರತಾಪ್ ಸಿಂಹರವರು ಮೋದಿ 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಾರೆ. ಮೋದಿ ಏನು ತಮ್ಮ ಮನೆಯಿಂದ ಕೊಡುತ್ತಿಲ್ಲ. ಬದಲಿಗೆ 2013ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಆಹಾರ ಭದ್ರತೆ ಕಾಯ್ದೆ ಪ್ರಕಾರ ಅದು ಜಾರಿಗೆ ಬಂದಿದೆ. ಅದನ್ನು ತಂದವರು ಕಾಂಗ್ರೆಸ್ ಹೊರತು ಬಿಜೆಪಿಯಲ್ಲ ಎಂದರು.
ಇದನ್ನೂ ಓದಿ: ನಾಯಕರೇ ಇಲ್ಲದ ಬಿಜೆಪಿಗೆ ವಿರೋಧ ಪಕ್ಷದ ನಾಯಕ ಸಿಗುವುದಾದರೂ ಎಲ್ಲಿಂದ?: ಕಾಂಗ್ರೆಸ್ ಪ್ರಶ್ನೆ