ವಿವಾದಿತ ಕೃಷಿ ಕಾನೂನಗಳನ್ನು ರದ್ದುಗೊಳಿಸಬೇಕೆಂದು ಒಕ್ಕೂಟ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ದೇಶದ ರೈತರ ಗಮನ ಸೆಳೆದಿದ್ದಾರೆ. ಪ್ರಧಾನಿಗಳು ಸಂಸತ್ತಿನಲ್ಲಿ ಮಾತನಾಡುತ್ತ ಎಂಎಸ್ಪಿ ಹಿಂದೆಯೂ ಇತ್ತು, ಈಗಲೂ ಇದೆ ಮತ್ತು ಮುಂದೆಯೂ ಇರಲಿದೆ ಎಂದು ಘೋಷಿಸಿದ್ದರು. ಆದರೆ ರೈತ ಹೋರಾಟಗಾರರು ಆ ಹೇಳಿಕೆ ಸುಳ್ಳು ಎಂದು ಆಕ್ರೋಶಪಡಿಸಿ, ಪ್ರಧಾನಿಗಳೇ ಎಂಎಸ್ಪಿ ಎಲ್ಲಿದೆ ತೋರಿಸಿ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ರಾಜ್ಯದಲ್ಲಿಯೂ ಈಗ ಬೆಂಬಲ ಬೆಲೆ ಕೊಡಿಸಿ ಆಂದೋಲನ ಆರಂಭವಾಗಿದ್ದು, ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್ ಚಾಲನೆ ನೀಡಿದ್ದಾರೆ.
ರಾಜ್ಯದಲ್ಲಿ ಬೆಳೆಯಲಾಗುವ ಬೆಳೆಗಳಲ್ಲಿ ಯಾವ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಇದೆ. ಯಾವುದಕ್ಕೆ ಎಷ್ಟು ಎಂಎಸ್ಪಿ ಸಿಗುತ್ತಿದೆ ಎಂಬ ಮಾಹಿತಿಯೇ ಅನೇಕ ರೈತರಿಗೆ ಇಲ್ಲ. ಕೃಷಿ ಕಾನೂನುಗಳ ವಿರುದ್ಧದ ಹೋರಾಟದ ಜೊತೆಗೆ ಎಂಎಸ್ಪಿ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟು ಹಾಕಿರುವುದು ಈ ರೈತ ಹೋರಾಟವೇ. ಇದರಿಂದ ರಾಜ್ಯದಲ್ಲಿ ಎಂಎಸ್ಪಿ ಬಗ್ಗೆ ಚರ್ಚೆ ನಡೆಯುತ್ತಿದೆ.
ರಾಜ್ಯದಲ್ಲಿ ಮೂರು ದಿನಗಳ ಕಾಲ ಮಾರ್ಚ್ 5 ರಿಂದ 7ರ ವರೆಗೆ ’ಬೆಂಬಲ ಬೆಲೆ ಕೊಡಿಸಿ’ ಆಂದೋಲನ ನಡೆಯಲಿದೆ. ಗುಲ್ಬರ್ಗಾದಲ್ಲಿ ಮಾರ್ಚ್ 5, ಬಳ್ಳಾರಿ ಮಾರ್ಚ್ 6, ಶಿವಮೊಗ್ಗ, ಸಾಗರದಲ್ಲಿ ಮಾರ್ಚ್7 ಆಂದೋಲನ ನಡೆಯುತ್ತಿದ್ದು, ಅಂದೇ ಬೆಂಗಳೂರಿನಲ್ಲಿ ಈ ಆಂದೋಲನದ ಪತ್ರಿಕಾಗೋಷ್ಠಿ ನಡೆಯಲಿದೆ.
ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಬಿಜೆಪಿ ವಿರುದ್ಧ ಅಭಿಯಾನಕ್ಕೆ ಮುಂದಾದ ದೆಹಲಿ ರೈತ ಮುಖಂಡರು
ಮಾರ್ಚ್ 2 ರಂದು ಸಂಯುಕ್ತ ಕಿಸಾನ್ ಮೋರ್ಚಾ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ರೈತ ಮುಖಂಡರು ಮಾಹಿತಿ ನೀಡಿದ್ದರು. ಕರ್ನಾಟಕದ ರೈತರು ಎಂಎಸ್ಪಿಗಿಂತ ಕನಿಷ್ಠ ಒಂದು ಸಾವಿರ ಕಡಿಮೆ ಬೆಲೆ ಪಡೆಯುತ್ತಿದ್ದಾರೆ. ಹೀಗಾಗಿ ಮಾರ್ಚ್ 5 ರಿಂದ ಕರ್ನಾಟಕದಲ್ಲಿ ‘ಎಂಎಸ್ಪಿ ದಿಲಾವ್’ ಆಂದೋಲನವನ್ನು ಪ್ರಾರಂಭಿಸಲಾಗುವುದು. ಬೆಳೆಗಳಿಗೆ ಎಂಎಸ್ಪಿ ಖಾತ್ರಿಪಡಿಸಿಕೊಡುವಂತೆ ಪ್ರಧಾನಮಂತ್ರಿ ಅವರನ್ನು ಒತ್ತಾಯಿಸುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಯೋಗೇಂದ್ರ ಯಾದವ್ ತಿಳಿಸಿದ್ದರು.

ಇಡೀ ದೇಶದ ರೈತ ಚಳವಳಿಗಳು ರೈತರ ಬೆಳೆಗೆ ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಿ, ನಮ್ಮ ದುಡಿಮೆಗೆ ನ್ಯಾಯಯುತ ಫಲ ಸಿಗುವಂತೆ ಮಾಡಿ, ರೈತರ ಬೆಳೆಗೆ ನ್ಯಾಯಯುತ ಬೆಲೆ ಬೇಕು ಎಂದು ಆಗ್ರಹಿಸುತ್ತಾ ಬಂದಿದ್ದಾರೆ. ದೆಹಲಿ ಮತ್ತು ದೇಶದಾದ್ಯಂತ ಇಂದು ನಡೆಯುತ್ತಿರುವ ಹೋರಾಟದ ಪ್ರಮುಖ ಹಕ್ಕೊತ್ತಾಯಗಳಲ್ಲಿ ಅದೂ ಒಂದಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಇದನ್ನೂ ಓದಿ: ಹತ್ರಾಸ್, ಬಿಜ್ನೋರ್ ಗಳಲ್ಲಿ ಬೃಹತ್ ಮಹಾಪಂಚಾಯತ್: ಸರ್ಕಾರದ ವಿರುದ್ಧ ರೈತರ ಗುಡುಗು
ರೈತರ ಎಲ್ಲಾ ಬೆಳೆಗಳಿಗೂ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಿ ಅದನ್ನು ಕಾಯ್ದೆ ಮಾಡಬೇಕು. ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ವ್ಯಾಪಾರ ಮಾಡುವುದು ಅಪರಾಧ ಎಂದು ಘೋಷಿಸಿ, ಕನಿಷ್ಟ ಆ ದರವನ್ನು ಎಲ್ಲಾ ವ್ಯಾಪಾರಿಗಳೂ ಕೊಡಲೇಬೇಕು ಎಂಬ ಕಾನೂನು ಮಾಡಬೇಕು. ಖಾಸಗಿ ವ್ಯಾಪಾರಿಗಳು ಕೊಡದಿದ್ದರೆ ಸರ್ಕಾರ ಮುಂದೆ ನಿಂತು ರೈತರ ಬೆಳೆ ಖರೀದಿಸಿ, ಮಾರುಕಟೆ ಗೆ ವಿತರಿಸಬೇಕು. ವಾಸ್ತವದಲ್ಲಿ ಸ್ವಾಮಿನಾಥನ್ ವರದಿ ಆಧರಿಸಿ ರೈತರ ಎಲ್ಲಾ ಬೆಳೆಗಳಿಗೂ ಬೆಲೆ ನಿಗದಿ ಮಾಡಿ ಎಂದು ಕೇಳುತ್ತಿದ್ದೇವೆ ಎಂದು ರೈತ ಸಂಘಟನೆ ಹೇಳಿದೆ.
ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣೆ ಸಂದರ್ಭದಲ್ಲಿ ಹೇಳಿದರೂ ಅಧಿಕಾರಕ್ಕೆ ಬಂದ ಕೂಡಲೇ ಹೇಳೇ ಇಲ್ಲವೇನೋ ಎಂಬಂತೆ ಮುಖ ತಿರುಗಿಸುತ್ತಿದ್ದಾರೆ. ಸ್ವಾಮಿನಾಥನ್ ವರದಿ ಪ್ರಕಾರ ರೈತರಿಗೆ ಒಂದೂವರೆ ಪಟ್ಟು ಬೆಲೆ ಸಿಗಬೇಕು. ಆದರೆ, ಒಂದೂವರೆ ಪಟ್ಟು ಇರಲಿ, ಇವರು ಒಪ್ಪಿರುವ ಕನಿಷ್ಟ ಬೆಂಬಲ ಬೆಲೆಯನ್ನೂ ರೈತರಿಗೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಹೋರಾಟ ನಡೆಸುತ್ತಿರುವ ರೈತರು ಸೃಷ್ಟಿಸಿರುವ ಒತ್ತಡದ ಪರಿಣಾಮವಾಗಿ ಪ್ರಧಾನಿಗಳು ಕೊನೆಗೂ ಎಂಎಸ್ಪಿ ಬಗ್ಗೆ ಮಾತನಾಡಿದ್ದಾರೆ. ಆದರೆ, ಎಂಎಸ್ಪಿ ಥಾ, ಹೈ, ರಹೇಗಾ ಎಂದಿದ್ದಾರೆ. ಅಂದರೆ ಕನಿಷ್ಟ ಬೆಂಬಲ ಬೆಲೆ ಇತ್ತು, ಇದೆ, ಇರುತ್ತೆ ಎಂದು ಅರ್ಥ. ಪ್ರಧಾನಿಯವರ ಈ ಮಾತಿಗೆ ಪ್ರತಿಕ್ರಿಯೆಯಾಗಿ, 400 ಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಒಳಗೊಂಡಿರುವ ಸಂಯುಕ್ತ ಕಿಸಾನ ಮೋರ್ಚಾ ಎಂಎಸ್ಪಿ ಕೊಡಿಸಿ ಆಂದೋಲನ ಪ್ರಾರಂಭಿಸಿದೆ. ಈ ಆಂದೋಲನ ಕರ್ನಾಟಕದಿಂದ ಆರಂಭವಾಗಲಿದೆ ಎಂದು ಎಸ್ಕೆಎಂ ತಿಳಿಸಿದೆ.
ಇದನ್ನೂ ಓದಿ: ರೈತ ಹೋರಾಟ: ಕಡು ಬೇಸಿಗೆ ಎದುರಿಸಲು ಸಿದ್ದರಾಗುತ್ತಿದ್ದಾರೆ ಅನ್ನದಾತರು!


