ಲೋಕಾಯುಕ್ತದ ಮೂಲಕ ಭ್ರಷ್ಟರ ಹುಟ್ಟಡಗಿಸಿದ್ದ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ವೆಂಕಟಾಚಲ ಅವರು ಇಂದು ಬೆಳಗ್ಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಂಜೇಗೌಡ ವೆಂಕಟಾಚಲ ಅವರಿಗೆ 89 ವಯಸ್ಸಾಗಿತ್ತು. ಇಬ್ಬರು ಪುತ್ರರು ಮತ್ತು ಪತ್ನಿಯನ್ನು ಅಗಲಿದ್ದಾರೆ.
ಕೋಲಾರದ ಮುಳಬಾಗಿಲಿನ ಮಿಟ್ಟೂರು ಗ್ರಾಮದಲ್ಲಿ ಜನಿಸಿದ ವೆಂಕಟಾಚಲ, ಬೆಂಗಳೂರಿನಲ್ಲಿ ಬಿಎಸ್ಸಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಲ್.ಎಲ್.ಬಿ ಪದವಿ ಪಡೆದಿದ್ದರು. ಭ್ರಷ್ಟಾಚಾರವನ್ನು ಮಟ್ಟ ಹಾಕಲೆಂದು ಕರ್ನಾಟಕದಲ್ಲಿ 1984ರಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಲಾಯಿತು. 2001ರಲ್ಲಿ ನ್ಯಾಯಮೂರ್ತಿ ಎನ್.ವೆಂಕಟಾಚಲ ಅವರು ಲೋಕಾಯುಕ್ತರಾಗಿ ನೇಮಕವಾದ ನಂತರ ಜನಸಾಮಾನ್ಯರಲ್ಲಿ ಅರಿವು ಮೂಡಿಸಿದ್ದರು. ಕೆಳಮಟ್ಟದ ಕಚೇರಿಗಳ ಕಾರ್ಯವೈಖರಿಗೆ ಚುರುಕು ಮುಟ್ಟಿಸಿದ್ದರು. ಉಪಲೋಕಾಯುಕ್ತರ ನೇಮಕದಲ್ಲಿ ವಿಳಂಬವಾದಾಗ ತಾವು ಸ್ವತಃ ಉಪಲೋಕಾಯುಕ್ತರಾಗಿಯೂ ಕೆಲಸ ಮಾಡಿದ್ದರು. ಲೋಕಾಯುಕ್ತ ಸಂಸ್ಥೆಗೆ ಜೀವ ತುಂಬಿದ್ದ ಅವರು ಭ್ರಷ್ಟರಿಗೆ ಮುಳುವಾಗಿದ್ದರು.
ಆಡಳಿತದಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಲೋಕಾಯುಕ್ತಕ್ಕೆ ಹೊಸ ರೂಪುರೇಷೆ ನೀಡಿದ್ದರು. ರಾಜ್ಯದ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಸಭೆ ನಡೆಸಿ ದೂರು ಮತ್ತು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಕೆಲಸ ಮಾಡಿದ್ದರು. ಅಲ್ಲದೇ ಬ್ರಿಟನ್ ನಲ್ಲಿ ಭ್ರಷ್ಟಾಚಾರವನ್ನು ಮಟ್ಟ ಹಾಕಲು ತಂದಿರುವ ಕಾನೂನನ್ನು ಭಾರತದಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಹೀಗೆ ಮಾಡಿದರೆ ಪ್ರಧಾನಿ ಕಚೇರಿಯಿಂದ ಹಿಡಿದು ಕೆಳಹಂತದವರೆಗಿನ ಎಲ್ಲ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆ ಎಳೆಯಬಹುದು ಎಂದು ಹೇಳುತ್ತಿದ್ದರು. ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಆಡಳಿತವಿದ್ದಾಗ ಎನ್.ವೆಂಕಟಾಚಲ ಅವರ ನೇಮಕವಾಗಿತ್ತು. ರಾಜಕಾರಣಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದ ಅವರು ರಾಜಕಾರಣಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು.
ಕರ್ನಾಟಕದ ಮಾಜಿ ಲೋಕಾಯುಕ್ತ ಮತ್ತು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎನ್.ವೆಂಕಟಾಚಲ ಅವರ ನಿಧನದ ಸುದ್ದಿಕೇಳಿ ನೋವಾಯಿತು. ನ್ಯಾ.ವೆಂಕಟಾಚಲ ಅವರು ಲೋಕಾಯುಕ್ತರಾಗಿ ಭ್ರಷ್ಟರ ವಿರುದ್ಧ ಸಮರವನ್ನೇ ಸಾರಿ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದರು.
ಅವರ ಕುಟುಂಬಕ್ಕೆ ನನ್ನ ಸಂತಾಪಗಳು. pic.twitter.com/vPgwkcZ3fx— Siddaramaiah (@siddaramaiah) October 30, 2019
ಲೋಕಾಯುಕ್ತಕ್ಕೆ ಅನ್ವರ್ಥನಾಮ ಎಂಬಂತಿದ್ದ, ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲ ಅವರ ನಿಧನ ಅತೀವ ನೋವುಂಟು ಮಾಡಿದೆ. ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ಅವರು ಲೋಕಾಯುಕ್ತಕ್ಕೆ ಕಾಯಕಲ್ಪ ನೀಡಿದವರು. ಅವರ ಅಗಲಿಕೆ ಸಮಾಜದ ಬಹುದೊಡ್ಡ ನಷ್ಟ.
— H D Kumaraswamy (@hd_kumaraswamy) October 30, 2019
ಇನ್ನು ವೆಂಕಟಾಚಲ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ, ನ್ಯಾ.ವೆಂಕಟಾಚಲ ಅವರು ಲೋಕಾಯುಕ್ತರಾಗಿ ಭ್ರಷ್ಟರ ವಿರುದ್ಧ ಸಮರ ಸಾರಿ, ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದರು ಎಂದು ಸಂತಾಪ ಸೂಚಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ವೈಯಾಲಿಕಾವಲ್ ನ ವೆಂಕಟಾಚಲ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.