ಮಹಾರಾಷ್ಟ್ರದಲ್ಲಿ ಈಗಾಗಲೇ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಶಿವಸೇನೆ ಜತೆಗೆ ಮೈತ್ರಿಗೂ ಮುನ್ನ ಕೆಲವು ಷರತ್ತು ಹಾಗೂ ಜನಸ್ನೇಹಿ ನಿಯಮಗಳನ್ನು ರೂಪಿಸಲಾಗಿದ್ದು, ಆದಷ್ಟು ಬೇಗ ಅಂತಿಮಗೊಳಿಸಲಾಗುವುದು ಎಂದು ಎನ್ಸಿಪಿ ಮತ್ತು ಕಾಂಗ್ರೆಸ್ ತಿಳಿಸಿವೆ.
ಶಿವಸೇನೆ ಜತೆ ಮೈತ್ರಿ ಮಾಡಿಕೊಳ್ಳುವ ಮೊದಲು ಕೆಲ ಸೂತ್ರಗಳೊಂದಿಗೆ ಷರತ್ತು ವಿಧಿಸಲಾಗುವುದು. ಐದು ವರ್ಷದ ಆಡಳಿತಾವಧಿಯಲ್ಲಿ ಎರಡೂವರೆ ವರ್ಷದವರೆಗೆ ಎನ್ಸಿಪಿ ಅಭ್ಯರ್ಥಿಗೆ ಸಿಎಂ ಹುದ್ದೆ ಬಿಟ್ಟು ಕೊಡುವಂತೆ ಮತ್ತು ಕಾಂಗ್ರೆಸ್ಗೆ ಸ್ಪೀಕರ್ ಸ್ಥಾನ ನಿಡುವಂತೆ ಷರತ್ತು ಮುಂದಿರಿಸುವ ಸಾಧ್ಯತೆ ದಟ್ಟವಾಗಿದೆ. ಮೂರು ಪಕ್ಷಗಳ ಮಧ್ಯೆ ಅಧಿಕಾರ ಹಂಚಿಕೆಯ ಸೂತ್ರ ರೂಪಿಸಲಾಗಿದೆ.
ಶಿವಸೇನೆಗೆ ಬೆಂಬಲ ನೀಡುವಂತೆ ಉದ್ಧವ್ ಠಾಕ್ರೆ ಅವರ ಮನವಿಯನ್ನು ಕಾಂಗ್ರೆಸ್ ಒಪ್ಪಿಕೊಳ್ಳಲಿಲ್ಲ. ನಂತರ ಮುಂಬೈನಲ್ಲಿ ಎನ್ಸಿಪಿ ಮತ್ತು ಕಾಂಗ್ರೆಸ್ ನಾಯಕರು ಸಭೆ ನಡೆಸಿ, ಅಧಿಕಾರ ಮತ್ತು ಸ್ಥಾನ ಹಂಚಿಕೆ ಬಗ್ಗೆ ನಿಯಮ ರೂಪಿಸಿದರು. ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ್ ಖರ್ಗೆ, ಅಹಮದ್ ಪಟೇಲ್, ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಇಂದು ಸಂಜೆ ಮುಂಬೈನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ: ಅನರ್ಹ ಶಾಸಕರ ಸುಪ್ರೀಂ ತೀರ್ಪು ಕುರಿತು ಸಿದ್ದರಾಮಯ್ಯ, ಬಿ.ಎಸ್ ಯಡಿಯೂರಪ್ಪನವರು ಹೇಳಿದ್ದೇನು?
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ವೈ.ಬಿ.ಚವ್ಹಾಣ್ ಸೇರಿದಂತೆ ಅನೇಕರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಭಾಗವಹಿಸಿದರು. ಸೇನಾ ಜತೆ ಮೈತ್ರಿಗೂ ಮುನ್ನ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮತ್ತು ಇತರ ವಿಷಯಗಳ ಕುರಿತು ಕಾಂಗ್ರೆಸ್ ಮತ್ತು ಎನ್ಸಿಪಿ ಚರ್ಚೆ ನಡೆಸಲಿವೆ. ರಚನೆಯಾಗಲಿರುವ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮಗಳ ಕುರಿತು ಒಪ್ಪಂದಕ್ಕೆ ಬಂದ ನಂತರ ಸರ್ಕಾರ ರಚಿಸಲು ಸೇನಾಗೆ ಬೆಂಬಲಿಸುವ ನಿರ್ಧಾರ ತೆಗೆದುಕೊಳ್ಳುವುದಾಗಿ ಪಟೇಲ್ ಹೇಳಿದ್ದಾರೆ.
ಈಗ ಎನ್ಸಿಪಿ ಮತ್ತು ಕಾಂಗ್ರೆಸ್ ವಿಧಿಸುವ ನಿಯಮ ಮತ್ತು ಷರತ್ತುಗಳನ್ನು ಶಿವಸೇನೆ ಒಪ್ಪಿಕೊಳ್ಳುತ್ತದಾ..? ಭಿನ್ನ ಸೈದ್ಧಾಂತಿಕ ನಿಲುವು ಹೊಂದಿರುವ ಪಕ್ಷಗಳು ಮೈತ್ರಿ ಮೂಲಕ ಒಂದಾಗುತ್ತವಾ..? ಎಂಬುದೇ ಸದ್ಯದ ಕುತೂಹಲ.