ದೆಹಲಿಯ ಶಾಹೀನ್ಬಾಗ್ನಲ್ಲಿ ಅಕ್ರಮ ತೆರವು ಕಾರ್ಯಾಚರಣೆ ನಡೆಸಲು ಬುಲ್ಡೋಜರ್ ಬಳಸಲು ಮುಂದಾದ ಬಿಜೆಪಿ ಕ್ರಮವನ್ನು ಒಕ್ಲಾ ಕ್ಷೇತ್ರದ ಆಪ್ ಶಾಸಕ ಅಮಾನತುಲ್ಲಾಖಾನ್ ವಿರೋಧಿಸಿದ್ದಾರೆ. ಶಾಹೀನ್ಬಾಗ್ನಲ್ಲಿ ಅಕ್ರಮ ಕಟ್ಟಡಗಳಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಇಲ್ಲಿ ಅತಿಕ್ರಮ ಪ್ರವೇಶ ಮಾಡಿದವರನ್ನು ಈ ಹಿಂದೆಯೇ ತೆರವುಗೊಳಿಸಲಾಗಿದೆ. ಹಾಗಾಗಿ ಇಲ್ಲಿ ಯಾವುದೇ ಅಕ್ರಮ ಕಟ್ಟಡಗಳಿಲ್ಲ ಎಂದು ಅಮಾನತುಲ್ಲಾಖಾನ್ ತಿಳಿಸಿದ್ದಾರೆ. ಸ್ಥಳೀಯ ಪ್ರತಿಭಟನಾಕಾರರೊಂದಿಗೆ ಅವರು ಸಹ ಕೈ ಜೋಡಿಸಿದ ನಂತರ ತೆರವು ಕಾರ್ಯಾಚರಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ವಿವಾದಾತ್ಮಕ ಸಿಎಎ ವಿರೋಧಿ ಹೋರಾಟದ ಕೇಂದ್ರತಾಣವಾಗಿದ್ದ ಶಾಹೀನ್ಬಾಗ್ನಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಬಿಜೆಪಿ ಆಡಳಿತದ ದೆಹಲಿ ಮುನಿಸಿಪಲ್ ಕಾರ್ಪೊರೇಷನ್ ಮುಂದಾಗಿದೆ. ಇಂದು ಬೆಳಿಗ್ಗೆ ಬುಲ್ಡೋಜರ್ಗಳನ್ನು ನುಗ್ಗಿಸಲಾಗಿದ್ದು ಅದನ್ನು ವಿರೋಧಿಸಿ ಪ್ರತಿಭಟನಾಕಾರರು ಜೆಸಿಬಿಗಳ ಎದುರು ಮಲಗಿ ಪ್ರತಿಭಟಿಸಿದ್ದಾರೆ. ಕೆಲ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ತಿಂಗಳು ದೆಹಲಿಯ ಜಹಾಂಗೀರ್ ಪುರಿಯಲ್ಲಿಯೂ ಇದೇ ರೀತಿ ಬಿಜೆಪಿ ಆಡಳಿತದ ಎಂಸಿಡಿ ಬುಲ್ಡೋಜರ್ಗಳನ್ನು ನುಗ್ಗಿಸಿತ್ತು. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ ತೆರವು ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಈಗ ಮತ್ತೆ ಮುಸ್ಲಿಮರು ಹೆಚ್ಚಾಗಿ ವಾಸಿಸುವ ಶಾಹೀನ್ ಬಾಗ್ ಅನ್ನು ಗುರಿ ಮಾಡಿ ಬುಲ್ಡೋಜರ್ಗಳನ್ನು ನುಗ್ಗಿಸಲಾಗುತ್ತಿದೆ.
ಕಳೆದ ತಿಂಗಳು ದೆಹಲಿಯ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಎಂಸಿಡಿಗೆ ಪತ್ರ ಬರೆದು ಶಾಹೀನ್ ಬಾಗ್ನಲ್ಲಿ ತೆರವು ಕಾರ್ಯಾಚರಣೆ ನಡೆಸುವಂತೆ ಮನವಿ ಮಾಡಿದ್ದರು. ಇಲ್ಲಿ ಅಕ್ರಮ ಬಾಂಗ್ಲಾ ನುಸುಳುಕೋರರು, ರೋಹಿಂಗ್ಯಾ ಮುಸ್ಲಿಮರು ಮತ್ತು ಸಮಾಜವಿರೋಧಿ ಶಕ್ತಿಗಳು ನೆಲಿಸಿದ್ದಾರೆ ಎಂದು ದೂರಿದ್ದರು. ಅದರ ಆಧಾರದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಬುಲ್ಡೋಜರ್ ರಾಜಕಾರಣ: ’ಜಹಾಂಗೀರ್ ಪುರಿ’ಯಿಂದ ದೇಶದ ವಿನಾಶಕ್ಕೆ ಮುಂದಾದ ಬಿಜೆಪಿ-ಸಂಘ ಪರಿವಾರ
ದಕ್ಷಿಣ ದೆಹಲಿಯ ಕಾರ್ಪೊರೇಷನ್ 10 ದಿನಗಳ ತೆರವು ಕಾರ್ಯಾಚರಣೆಯ ಯೋಜನೆ ಸಿದ್ದಪಡಿಸಿಕೊಂಡಿದೆ. ಮೇ 13ರವರೆಗೂ ಅದು ನಡೆಯಲಿದೆ ಎಂದು ಮೇಯರ್ ತಿಳಿಸಿದ್ದಾರೆ. ಇದು ಬಿಜೆಪಿಯ ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.