2023ರ ಕಾನೂನಿನ ಅಡಿಯಲ್ಲಿ ನೂತನ ಚುನಾವಣಾ ಆಯುಕ್ತರ ನೇಮಕಾತಿಯನ್ನು ತಡೆಹಿಡಿಯದಿರಲು ಭಾರತದ ಸರ್ವೋಚ್ಚ ನ್ಯಾಯಾಲಯವು ನಿರ್ಧರಿಸಿದೆ. ಸದರಿ ಕಾನೂನು ಮುಖ್ಯ ನ್ಯಾಯಾಧೀಶರನ್ನು ಆಯ್ಕೆ ಪ್ರಕ್ರಿಯೆಯಿಂದ ನಿರ್ಬಂಧಿಸಿದೆ; ನ್ಯಾಯಾಲಯವು ಮಾರ್ಚ್ 21ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಶುಕ್ರವಾರ ಕಾಂಗ್ರೆಸ್ ನಾಯಕ ಜಯಾ ಠಾಕೂರ್, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಲ್ಲಿಸಿದ ರಿಟ್ ಅರ್ಜಿಗಳನ್ನು ಆಲಿಸಿತು. ಆಯ್ಕೆಯಾದ ಇಬ್ಬರು ಹೊಸ ಚುನಾವಣಾ ಆಯುಕ್ತರ ನೇಮಕಾತಿಗೆ ತಡೆ ನೀಡುವುದಿಲ್ಲ ಎಂದು ತೀರ್ಪು ನೀಡಿದೆ.
ಚುನಾವಣಾ ಆಯೋಗಗಳ ಆಯ್ಕೆಗೆ ಸಭೆಯನ್ನು ಮುಂದೂಡಲಾಗಿದೆ ಎಂದು ಸೂಚಿಸಿದ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಪೀಠವು, ವಾಸ್ತವವನ್ನು ಎತ್ತಿ ತೋರಿಸುವ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಲು ತಿಳಿಸಿದೆ.
2023ರ ಕಾನೂನಿಗೆ ಅನುಸಾರವಾಗಿ ಮಾಡಲಾದ ನೇಮಕಾತಿಗಳನ್ನು ತಡೆಹಿಡಿಯಲು ನಿರಾಕರಿಸಿದ ಪೀಠ, ‘ಸಾಮಾನ್ಯವಾಗಿ ನಾವು ಮಧ್ಯಂತರ ಆದೇಶದ ಮೂಲಕ ಕಾನೂನಿಗೆ ತಡೆ ನೀಡುವುದಿಲ್ಲ’ ಎಂದು ಹೇಳಿದೆ. 2023ರ ಕಾನೂನಿನಡಿಯಲ್ಲಿ ಇಬ್ಬರು ಚುನಾವಣಾ ಆಯುಕ್ತರ ನೇಮಕವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಅದು ಮುಂದೂಡಿದೆ.
ಅರ್ಜಿದಾರ ಜಯಾ ಠಾಕೂರ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್, ‘ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಕಾಯಿದೆ, 2023ರಲ್ಲಿ ಸ್ಪಷ್ಟವಾದ ಉಲ್ಲಂಘನೆಯಾಗಿದೆ’ ಎಂದು ಅವರು ಪ್ರತಿಪಾದಿಸಿದರು.
ಭಾರತೀಯ ಆಡಳಿತ ಸೇವೆಯ (ಐಎಎಸ್) ಮಾಜಿ ಅಧಿಕಾರಿಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಂಧು ಅವರನ್ನು ಗುರುವಾರ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯು ಅವರನ್ನು ಆಯ್ಕೆ ಮಾಡಿದೆ.
ಫೆಬ್ರವರಿ 14 ರಂದು ಅನುಪ್ ಚಂದ್ರ ಪಾಂಡೆ ಅವರ ನಿವೃತ್ತಿ ಮತ್ತು ಅರುಣ್ ಗೋಯೆಲ್ ಅವರ ಹಠಾತ್ ರಾಜೀನಾಮೆ ನಂತರ ಚುನಾವಣಾ ಆಯೋಗದಲ್ಲಿ ಎರಡು ಹುದ್ದೆಗಳು ಖಾಲಿಯಾಗಿದ್ದವು.
ಇದನ್ನೂ ಓದಿ; ಚುನಾವಣಾ ಬಾಂಡ್ಗಳ ಸಂಪೂರ್ಣ ಮಾಹಿತಿ ಹಂಚಿಕೊಳ್ಳದ ಎಸ್ಬಿಐ: ಮತ್ತೆ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್