Homeಕರ್ನಾಟಕನುಡಿನಮನ: ಹೋರಾಟದ ಸಂಗಾತಿ ಪಟ್ಟಾಭಿಯವರ ನೆನಪುಗಳು

ನುಡಿನಮನ: ಹೋರಾಟದ ಸಂಗಾತಿ ಪಟ್ಟಾಭಿಯವರ ನೆನಪುಗಳು

ಪಟ್ಟಾಭಿರಾಮ ಸೋಮಯಾಜಿಯವರು "ನನಗೆ ದೇಶವಾಸಿಗಳ ತೆರಿಗೆಯ ದುಡ್ಡಿನಿಂದ ಸಂಬಳ ಬರುತ್ತಿದೆ. ದೇಶವಾಸಿಗಳಲ್ಲಿ ಒಂದು ವಿಭಾಗಕ್ಕೆ ಅನ್ಯಾಯವಾಗುವಾಗ ಅದನ್ನು ವಿರೋಧಿಸುವುದು ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯ" ಎಂದಿದ್ದರು.

- Advertisement -
- Advertisement -

ಪಟ್ಟಾಭಿ ನಮ್ಮನ್ನಗಲಿ ಅವರ ದೇಹ ಬೂದಿಯಾಗಿಯೂ ಆಯಿತು. ಒಂದು ಕಾಲದಲ್ಲಿ ಚಳವಳಿಗಳಲ್ಲಿ ಒಡನಾಡಿಯಾಗಿದ್ದರೂ ಕಳೆದೆರಡು ವರ್ಷಗಳಿಂದ ಸಂಪರ್ಕವೂ ಇರಲಿಲ್ಲ. ಸಂಪರ್ಕವಿರದ ಕಾಲಕ್ಕಾಗಲೀ, ಅವರು ಅಗಲಿದ ಈ ಹೊತ್ತಿಗಾಗಲೀ ಸಂಪರ್ಕವಿಟ್ಟುಕೊಂಡಿರಲಿಲ್ಲ ಎಂಬ ಖೇದ ನನಗಂತೂ ಇಲ್ಲ. ಅವರು ಯಾರನ್ನೂ ಮನಸ್ಸಿಗೆ ಹಚ್ಚಿಕೊಂಡು ಗೆಳೆತನವಿಟ್ಟುಕೊಂಡವರಲ್ಲ. ಹಾಗಿರುವಾಗ ಆತ್ಮೀಯತೆ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ ಅಷ್ಟೆ. ಆದರೆ ನಮಗೆ ಒಡನಾಟವಿದ್ದ ಕಾಲದಲ್ಲಿ ಅವರ ಕೋಮುವಾದ ವಿರೋಧೀ ಹೋರಾಟದ ಕಾರಣಕ್ಕಾಗಿ ಅವರ ಉದ್ಯೋಗಕ್ಕೆ ಕುತ್ತು ಬಂದಾಗ ಅವರ ಪರವಾಗಿ ನಾವು ಎರಡೆರಡು ಬಾರಿ ಮಂಗಳೂರು ಯುನಿವರ್ಸಿಟಿಯ ಕುಲಪತಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ಒಮ್ಮೆಯಂತೂ ಆಗಿನ ಕುಲಪತಿ‌ ಟಿ.ಸಿ.ಶಿವಶಂಕರ ಮೂರ್ತಿಗೆ ನನ್ನ ಕಟುವಾದ ಮಾತಿನಿಂದ ಸಿಟ್ಟು ಬಂದು ನನ್ನ ಮೇಲೆ ರೇಗಿದ್ದರು.

ಎರಡು ವರ್ಷಗಳ ಹಿಂದೊಮ್ಮೆ ಕರೆಮಾಡಿ, ‘ಜಿ.ರಾಜಶೇಖರ್ ಕುರಿತು ಒಂದು ಪುಸ್ತಕ ತರಬೇಕಿದೆ. ನೀವು ಅವರ ಕುರಿತು ಬರೆದ ಲೇಖನ ಓದಿದೆ, ಚೆನ್ನಾಗಿತ್ತು, ಸ್ವಲ್ಪ ವಿಸ್ತರಿಸಿ ಕೊಡಿ’ ಎಂದು ಕೇಳಿದ್ದರು. ನನ್ನದಾದರೋ ಒಮ್ಮೆ ಬರೆದ ಬಳಿಕ ಅದರಿಂದ ಕಳಚಿಬಿಡುವ ಅಭ್ಯಾಸ. ಅದನ್ನು ಪುನಃ ಬರೆದು ಕೊಡಿ ಎಂದು ಯಾರಾದರೂ ಒಮ್ಮೆ ಅಪೇಕ್ಷಿಸಿದರೆ ನಾನು ಈ ವರೆಗೆ ಯಾರಿಗೂ ಯಾವ ಬರಹವನ್ನು ಕೊಟ್ಟದ್ದಿಲ್ಲ. ಮೂರು ಬಾರಿ ಕೇಳಿದರೆ ಅವರ ಸೀರಿಯಸ್ಸಾಗಿಯೇ ಕೇಳುತ್ತಿದ್ದಾರೆ ಎಂದು ಭಾವಿಸುತ್ತೇನೆ. ಆಗ ಅದನ್ನು ಹುಡುಕಿ ಹಿಗ್ಗಿಸಿಯೋ, ಕುಗ್ಗಿಸಿಯೋ ಕೊಡುತ್ತೇನೆ. ಪಟ್ಟಾಭಿಯವರಲ್ಲಿ ಒಬ್ಬನಿಗೆ ಪದೇ ಪದೇ ಕರೆ ಮಾಡಿ ಅಂಗಲಾಚುವ ಸ್ವಭಾವ ಬಿಲ್ಕುಲ್ ಇರಲಿಲ್ಲ. ಅಂತಹ ಸ್ವಭಾವವನ್ನು ಅವರಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗದಷ್ಟು ಬಿಗಿ ವ್ಯಕ್ತಿತ್ವ ಅವರದ್ದು.

ಪಟ್ಟಾಭಿ ನನಗಂತಲ್ಲ.. ಅವರ ಹೆಚ್ಚಿನೆಲ್ಲಾ ಒಡನಾಡಿಗಳಿಗೆ ಅರ್ಥವಾಗದ ಒಗಟು. ಒಂಥರಾ ಅಂತರ್ಮುಖಿ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಬೇಕಾದುದನ್ನು ಖಡಾಖಂಡಿತವಾಗಿ ಮಾತನಾಡುತ್ತಿದ್ದರು. ನನಗೆ ತಿಳಿದಂತೆ ಮಂಗಳೂರಿನಲ್ಲಿ ಸಹೋದ್ಯೋಗಿಗಳ ಹೊರತುಪಡಿಸಿ ಅವರ ಹೆಚ್ಚಿನೆಲ್ಲಾ ಸಂಪರ್ಕ ಮುಸ್ಲಿಮರ ಜೊತೆಗೇ ಇದ್ದದ್ದು. ಕೋಮುವಾದದ ಪ್ರಬಲ ಶತ್ರುವಾಗಿದ್ದ ಪಟ್ಟಾಭಿ ಆ ವಿಚಾರದಲ್ಲಿ ನೆಹರೂ ಅವರ ಸೈದ್ಧಾಂತಿಕ ಧಾರೆಯವರು. ಅವರು ಬಹುಸಂಖ್ಯಾತ ಕೋಮುವಾದವನ್ನು ವಿರೋಧಿಸಿದಷ್ಟು ಅಲ್ಪಸಂಖ್ಯಾತ ಕೋಮುವಾದದ ವಿರುದ್ಧ ಮಾತನಾಡಿಲ್ಲ. ನೆಹರೂ ಹೇಳುವ ಪ್ರಕಾರ “ಅಲ್ಪಸಂಖ್ಯಾತ ಕೋಮುವಾದ ಸ್ವತಃ ಆ ಸಮುದಾಯಕ್ಕೆ ಮಾರಕ, ಬಹುಸಂಖ್ಯಾತ ಕೋಮುವಾದ ದೇಶಕ್ಕೆ ಮಾರಕ”. ಆದುದರಿಂದಲೋ ಏನೋ ಪಟ್ಟಾಭಿ ಬಹುಸಂಖ್ಯಾತ ಕೋಮುವಾದದ ವಿರುದ್ಧ ಕಟುವಾಗಿ ಮಾತನಾಡುತ್ತಿದ್ದರು.

ಸರಕಾರಿ ಉದ್ಯೋಗಿಯಾಗಿಯೂ ಸರಕಾರದ ವಿರುದ್ಧ ಮಾತನಾಡುತ್ತಿದ್ದರು ಎಂದು ಎಲ್ಲರೂ ಹೇಳುತ್ತಿದ್ದರು. ಪಟ್ಟಾಭಿಯವರಲ್ಲಿ ಆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಲುವೊಂದಿತ್ತು. “ನಾನು ಮಾತನಾಡುವುದು ಅಧಿಕಾರದಲ್ಲಿ ಕೂತ ವ್ಯಕ್ತಿಯ ಸ್ವಜನ ಪಕ್ಷಪಾತ, ಕೋಮುವಾದ, ಕೆಡುಕು ಇವುಗಳ ವಿರುದ್ಧವೇ ಹೊರತು ಸರಕಾರ ಎಂಬ ಸಂಸ್ಥೆಯ ವಿರುದ್ಧವಲ್ಲ. ನನಗೆ ಅವರ್ಯಾರೂ ತಮ್ಮ ಜೇಬಿನಿಂದ ಸಂಬಳ ಕೊಡುವುದಲ್ಲ. ದೇಶವಾಸಿಗಳ ತೆರಿಗೆಯ ದುಡ್ಡಿನಿಂದ ಸಂಬಳ ಬರುತ್ತಿದೆ. ದೇಶವಾಸಿಗಳಲ್ಲಿ ಒಂದು ವಿಭಾಗಕ್ಕೆ ಅನ್ಯಾಯವಾಗುವಾಗ ಅದನ್ನು ವಿರೋಧಿಸುವುದು ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯ” ಎಂದಿದ್ದರು. ನೋಟೀಸುಗಳ ಮೇಲೆ ನೋಟೀಸು ಹೋದರೂ, ವರ್ಗಾವಣೆಯಾದರೂ, ಅಮಾನತ್ತಾದರೂ ಅವರು ತನ್ನ ವ್ಯವಸ್ಥೆಯ ವಿರೋಧೀ ಮನೋಧರ್ಮವನ್ನು ತ್ಯಜಿಸಲೇ ಇಲ್ಲ.

ಪಟ್ಟಾಭಿ ಅಪ್ಪಟ ಗಾಂಧಿವಾದಿ. ಗಾಂಧಿವಾದವೆಂದರೆ ಗಾಂಧೀಜಿಯ ಉಡುಪಲ್ಲ, ಗಾಂಧೀಜಿಯ ಧಾರ್ಮಿಕ ವಿಶ್ವಾಸವೂ ಅಲ್ಲ, ಗಾಂಧೀಜಿಯ ಆಹಾರ ಶೈಲಿಯೂ ಅಲ್ಲ. ಗಾಂಧೀಜಿ ದೇಶದ ಹಿತಕ್ಕಾಗಿ ಆಯ್ದುಕೊಂಡ ಹೋರಾಟದ ದಾರಿ. ಪಟ್ಟಾಭಿ ಶಾಸ್ತ್ರೋಕ್ತವಾಗಿ ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಮದುವೆಯಾದಾಗ ಅವರ ಹಲವು ಒಡನಾಡಿಗಳೇ ಅವರನ್ನು ವಿಮರ್ಶಿಸಿದರು. ಅದನ್ನು ಕೆಲವು ಎಡಬಿಡಂಗಿತನವೆಂದರು. ಪಟ್ಟಾಭಿ ಯಾರಿಗೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಆಗ ನಾನು ಪಟ್ಟಾಭಿಯನ್ನು ಹೀಗೆ ಅರ್ಥೈಸಿದ್ದೆ. “ಪಟ್ಟಾಭಿ ಧಾರ್ಮಿಕ ವಿಧಿ ವಿಧಾನಗಳನುಸಾರ ಮದುವೆಯಾದರೆ ತಪ್ಪೇನು? ಅವರೆಲ್ಲಾದರೂ ಹಿಂದೂ ಧಾರ್ಮಿಕ ವಿಧಿ ವಿಧಾನಗಳನ್ನು ಟೀಕಿಸಿದ್ದಾರಾ..? ಖಂಡಿತಾ ಇಲ್ಲವಲ್ಲಾ. ಅವರು ವಿರೋಧಿಸಿದ್ದು ಹಿಂದೂಯಿಸಂನ ಹೆಸರಲ್ಲಿ ನಡೆಯುತ್ತಿದ್ದ ಬರ್ಬರತೆಯನ್ನು ಮಾತ್ರವಲ್ಲವೇ..?”
ಅವರು ಮದುವೆಯ ಹೊರತಾಗಿ ವೈಯಕ್ತಿಕವಾಗಿಯೂ ಧಾರ್ಮಿಕ ಆಚರಣೆಗಳನ್ನು ಆಚರಿಸಿದ್ದನ್ನು ಹತ್ತು ವರ್ಷಗಳ ಕಾಲದ ಅವರ ಜೊತೆಗಿನ ಒಡನಾಟದಲ್ಲಿ ಕಂಡಿಲ್ಲ. ಅವರಿಗೆ ಗಾಂಧಿಯ ಬಗ್ಗೆ ಇದ್ದ ಒಲವು ಅಪಾರವಾದುದು. ಭಾರತದ ಸಂಕಟಗಳಿಗೆ ಗಾಂಧಿ ಮಾರ್ಗದಲ್ಲಿ ಪರಿಹಾರ ಕಾಣಬಹುದೆಂದು ಅವರು ನಂಬಿದ್ದರು. ಅವರು ಗಾಂಧಿ ಕುರಿತು ತನ್ನ ಕಾಲೇಜಿನಲ್ಲಿ ಪ್ರತೀ ವರ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು ಕೂಡಾ.

ಓರ್ವ ವ್ಯಕ್ತಿಯ ವ್ಯಕ್ತಿತ್ವದ ದೋಷಗಳನ್ನು ಇಟ್ಟುಕೊಂಡು ಆತ ಸರಿಯಿಲ್ಲ ಎನ್ನುವುದನ್ನು ನಾನಂತೂ ಒಪ್ಪಲಾರೆ. ಆತನಿಂದ ಸಮಾಜಕ್ಕೆ ಹಾನಿಯಾಗದಿದ್ದರಾಯಿತು ಅಷ್ಟೇ. ಹಾಗೆ ಯಾರ ವ್ಯಕ್ತಿತ್ವದಲ್ಲಿ ದೋಷವಿಲ್ಲ ಹೇಳಿ..? ದಿ‌ ಪರ್ಫೆಕ್ಟ್ ಮ್ಯಾನ್ ಎಂದು ಯಾರಿದ್ದಾರೆ..? ಪಟ್ಟಾಭಿ ಕೋಮುವಾದದ ವಿರುದ್ಧ ಯಾವ ನಿಲುವುಗಳನ್ನು ತಾಳಬೇಕಿತ್ತೋ ಆ ನಿಲುವುಗಳನ್ನು ಸದಾ ತಾಳಿದ್ದಾರೆ. ಅವರು ಅಂತಹ ಸಂದರ್ಭಗಳಲ್ಲಿ ಯಾವತ್ತೂ ತನ್ನ ಉದ್ಯೋಗ ಭದ್ರತೆಯ ಕುರಿತು ಯೋಚಿಸಿಲ್ಲ.

ನನ್ನ ತಂಗಿ ಪಟ್ಟಾಭಿಯವರ ವಿದ್ಯಾರ್ಥಿನಿಯಾಗಿದ್ದಳು. ಅವಳು ಹೇಳುವ ಪ್ರಕಾರ ಮತ್ತು ಅವರ ಇತರ ವಿದ್ಯಾರ್ಥಿಗಳು ಹೇಳುವ ಪ್ರಕಾರ ಪಟ್ಟಾಭಿ ಓರ್ವ ಅದ್ಭುತ ಅಧ್ಯಾಪಕ. ಅಕಾಡೆಮಿಕ್ ಆಗಿ ಅವರ ಮೇಲೆ ಬೆರಳು ತೋರಿಸುವ ಅರ್ಹತೆ ಇದ್ದ ಇನ್ನೊಬ್ಬ ಅಧ್ಯಾಪಕ ಇಡೀ ಮಂಗಳೂರು ಯುನಿವರ್ಸಿಟಿಯಲ್ಲಿರಲಿಲ್ಲ. ಹಾಗೆ ಯಾರೂ ಅವರ ವಿರುದ್ಧ ದೂರಿದ್ದು ನನಗಂತೂ ಗೊತ್ತಿಲ್ಲ. ಅವರು ತನ್ನ ಸೈದ್ಧಾಂತಿಕ ಒಲವು ನಿಲುವುಗಳನ್ನು ಕ್ಯಾಂಪಸ್ ಒಳಗೆ ತೋರಿಸಿದ್ದೇ ಇಲ್ಲ. ತರಗತಿಯಲ್ಲಿ ಏನು ಪಾಠ ಮಾಡಬೇಕೋ ಅದನ್ನು ಮಾತ್ರ ಪಾಠ ಮಾಡುತ್ತಿದ್ದರು. ಇಂಗ್ಲಿಷ್ ಅಧ್ಯಾಪಕರಾದುದರಿಂದ ಶೇಕ್ಸ್ ಪಿಯರ್, ಬ್ರೆಕ್ಟ್ ಮುಂತಾದ ಪಾಶ್ಚಾತ್ಯ ಸಾಹಿತಿ, ನಾಟಕಕಾರರುಗಳ ಸಾಹಿತ್ಯವನ್ನು ಮುಂದಿರಿಸಿಕೊಂಡು ಪ್ರಗತಿಪರ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದರಷ್ಟೆ.
ಅವರಿಗೆ ತನ್ನ ಸಹೋದ್ಯೋಗಿಗಳ ಜೊತೆಗೆ ಜಗಳವೂ ಇರಲಿಲ್ಲ. ಯಾಕೆಂದರೆ ಅವರು ಕ್ಯಾಂಪಸ್ ಒಳಗೆ ತನ್ನ ಸಬ್ಜೆಕ್ಟ್ ಹೊರತಾಗಿ ಬೇರೇನನ್ನೂ ಮಾತಾಡುತ್ತಿರಲಿಲ್ಲ. ಅವರು ಕ್ಯಾಂಪಸ್ ಒಳಗೆ ಏನೇ ಮಾತನಾಡುವುದಾದರೂ ಅಳೆದು ತೂಗಿ ಮಾತನಾಡುತ್ತಿದ್ದರು.

ಬಿಜೆಪಿ ಸಂಘಪರಿವಾರವನ್ನು ಶತ್ರುವೆಂದು ಪರಿಗಣಿಸಿದರೂ ಸೈದ್ಧಾಂತಿಕವಾಗಿ ವಿರುದ್ಧ ಧ್ರುವಗಳಂತಿದ್ದ ಕಮ್ಯೂನಿಸ್ಟರು, ಜಮಾ‌ಅತೇ ಇಸ್ಲಾಮಿಯವರು, ಪಾಪ್ಯುಲರ್ ಫ್ರಂಟ್‌ನವರು ಹೀಗೆ ಎಲ್ಲರೂ ತಂತಮ್ಮ ಕಾರ್ಯಕ್ರಮಗಳಿಗೆ ಪಟ್ಟಾಭಿಯವರನ್ನು ಆಹ್ವಾನಿಸುತ್ತಿದ್ದರು ಎನ್ನುವುದೇ ಅವರ ವ್ಯಕ್ತಿತ್ವದ ವಿಶೇಷ. ಪಟ್ಟಾಭಿ ಸಂಘಪರಿವಾರದ ತಪ್ಪುಗಳನ್ನು ಖಂಡಿಸುವ, ವಿರೋಧಿಸುವ ಒಂದೇ ಒಂದು ಅವಕಾಶಗಳನ್ನು ಮಿಸ್ ಮಾಡುತ್ತಿರಲಿಲ್ಲ.

ಅವರ ಇಂಗ್ಲಿಷ್ ಜ್ಞಾನ ಅದ್ಭುತವಾಗಿತ್ತು. ಅವರು ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದರೆ ಶಶಿ ತರೂರ್‌ರನ್ನೂ ಮೀರಿಸುತ್ತಿದ್ದರೇನೋ.. ಅಪಾರವಾದ ವಿದ್ವತ್ತು ಮತ್ತು ಆಳವಾದ ಓದು ಇದ್ದರೂ ಅವರು ಬರೆದದ್ದು ಕಡಿಮೆ. ಬರೆಯುತ್ತಿದ್ದರೆ ಓರ್ವ ಶ್ರೇಷ್ಠ ಗುಣಮಟ್ಟದ ವಿಮರ್ಶಕಗಾಗುತ್ತಿದ್ದರು. ಅವರದ್ದು ಮೌಖಿಕ ಪರಂಪರೆಯಾಗಿತ್ತು. ಬರೆಯಬೇಕಾದುದನ್ನು ಮಾತನಾಡಿಯೇ ಮುಗಿಸುತ್ತಿದ್ದರು.

ಪಟ್ಟಾಭಿಯ ಸಾವಿನಿಂದ ನಾಡು ಒಂದು ಪ್ರಬಲ ಜನಪರವಾದ ಧ್ವನಿಯನ್ನು ಕಳಕೊಂಡಿದೆ. ನಾಡು ಅವರು ಮಾಡಿದ ಕೆಲಸಗಳಿಗಾಗಿ ಅವರನ್ನು ಬಹುಕಾಲ ನೆನಪಿಡುತ್ತೆ. ಸಂತಾಪಗಳು ಪಟ್ಟಾಭಿ ಸರ್…

ಇಸ್ಮತ್ ಪಜೀರ್

(ಕರ್ನಾಟಕ ಕೋಮು ಸೌರ್ಹಾದ ವೇದಿಕೆಯ ಒಡನಾಡಿ)

ಇದನ್ನೂ ಓದಿ: ಹಾಸನ: ಶಾಲೆಯಲ್ಲಿ ಬಕ್ರಿದ್ ಆಚರಣೆ ವಿರುದ್ದ ಹಿಂದುತ್ವ ಸಂಘಟನೆಗಳ ಆಕ್ರೋಶ; ಆಡಳಿತ ಮಂಡಳಿ ಸ್ಪಷ್ಟನೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...