Homeಕರ್ನಾಟಕಪಂಚಮ ಪದ: ಪಂಚಮ ಪತ್ರಿಕೆಗೆ ಗೌರವ ಸಲ್ಲಿಸುವ ವಿಶಿಷ್ಟ ಪ್ರಸ್ತುತಿ

ಪಂಚಮ ಪದ: ಪಂಚಮ ಪತ್ರಿಕೆಗೆ ಗೌರವ ಸಲ್ಲಿಸುವ ವಿಶಿಷ್ಟ ಪ್ರಸ್ತುತಿ

- Advertisement -
- Advertisement -

ಕರ್ನಾಟಕದಲ್ಲಿ ಹತ್ತಾರು ಪತ್ರಿಕೆಗಳು ತಮ್ಮ ಕೆಲಸ ಮಾಡಿ ಬೇರೆಬೇರೆ ಕಾರಣಗಳಿಗೆ ಮರೆಗೆ ಮತ್ತು ಮರೆವಿಗೆ ಸರಿದಿವೆ. ಅಂತಹ ಪತ್ರಿಕೆಗಳ ಸ್ಮರಣೆ ಸಾಂಸ್ಕೃತಿಕ ಲೋಕದಲ್ಲಿ ಆಗಾಗ ನಡೆಯುತ್ತಿರುತ್ತದೆ. ಈ ಸ್ಮರಣೆಯಲ್ಲಿ ಸಣ್ಣ ಸಾಹಿತ್ಯಿಕ ಪತ್ರಿಕೆಗಳಾದ ಸಾಕ್ಷಿ (ಸಂ: ಗೋಪಾಲಕೃಷ್ಣ ಅಡಿಗ), ರುಜುವಾತು (ಸಂ: ಯು ಆರ್ ಅನಂತಮೂರ್ತಿ) ಅಂತಹವು ಸಿಂಹಪಾಲು ಜಾಗ ಪಡೆಯುತ್ತವೆ. ರಾಜಕೀಯ ಮತ್ತು ಸಾಹಿತ್ಯವನ್ನು ಮೇಳೈಸಿದ ಲಂಕೇಶ್ ಪತ್ರಿಕೆ ಕೂಡ ಮತ್ತೆಮತ್ತೆ ಕನ್ನಡ ಬೌದ್ಧಿಕ ಚರ್ಚೆಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತೆ. ಬಹಳ ದೀರ್ಘ ಕಾಲ ನಡೆದ ಸಂಕ್ರಮಣದಿಂದ ಹಿಡಿದು ಒಂದಷ್ಟು ಕಾಲ ನಡೆದು ಪ್ರಾತಿನಿಧ್ಯದ ಪ್ರಶ್ನೆಗೆ ಟೀಕೆಗೆ ಗುರಿಯಾದ ದೇಶಕಾಲದಂತಹ ಸಣ್ಣ ಸಾಹಿತ್ಯ ಪತ್ರಿಕೆಗಳು ಕೂಡ ನೆನಪಿನ ಸಂಭ್ರಮಗಳಲ್ಲಿ ಸದಾ ಭಾಗಿಯಾಗಿರುತ್ತವೆ. ಆದರೆ 70-80ರ ದಶಕದಲ್ಲಿ ಹತ್ತಾರು ವರ್ಷಗಳ ಕಾಲ ದಲಿತ ಸಂಘರ್ಷ ಸಮಿತಿಯ ಮುಖವಾಣಿಯಾಗಿ, ದಲಿತ ದೌರ್ಜನ್ಯಗಳ ಬಗ್ಗೆ ಪ್ರತಿಭಟಿಸಿದ, ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡ, ವರದಿಗಳು, ಕಥೆ, ಕವನ, ಹಾಡುಗಳ ಮೂಲಕ ಜನಸಾಮಾನ್ಯರನ್ನು ಎಚ್ಚರಿಸಿ ಅಸಾಮಾನ್ಯ ಕೊಡುಗೆ ನೀಡಿದ ’ಪಂಚಮ’ ಪತ್ರಿಕೆಯ ನೆನಪು ಮೇಲೆ ಹೆಸರಿಸಿದ ಪತ್ರಿಕೆಗಳಷ್ಟು ಸಾಮಾನ್ಯವಾಗಿಲ್ಲ ಅಥವಾ ಆ ನೆನಪನ್ನು ಮರೆಗೆ ಸರಿಸಲಾಗಿದೆ ಎಂದರೂ ಸರಿಯೇ. ಇಂತಹ ಪಕ್ಷಪಾತಿ ಸಾಂಸ್ಕೃತಿಕ ರಾಜಕೀಯವನ್ನು ಪ್ರಶ್ನೆ ಮಾಡುವುದರೊಂದಿಗೆ, ಪಂಚಮ ಪತ್ರಿಕೆಯ ಕೊಡುಗೆ, ದಸಂಸ ಮತ್ತು ದಲಿತ ಹೋರಾಟಗಳನ್ನು ಸ್ಮರಿಸಲು ಜಂಗಮ ತಂಡ ’ಪಂಚಮ ಪದ’ವನ್ನು ಪ್ರಸ್ತುತಪಡಿಸಿದೆ. ಹಾಡುಗಳು, ಪತ್ರಿಕೆಯ ಕೆಲವು ಪ್ರಾತಿನಿಧಿಕ ಬರಹಗಳ ಓದು, ಪ್ರೇಕ್ಷಕರ ಜತೆಗೆ ಸಂವಾದಗಳಿಂದ ಕೂಡಿರುವ ಪಂಚಮ ಪದ ಒಂದು ವಿಶಿಷ್ಟ ಪ್ರಯೋಗ.

ಸುಮಾರು ಮೂರು ದಶಕಗಳ ಹಿಂದೆ, ಕಮ್ಮಸಂದ್ರ ಎಂಬ ಗ್ರಾಮದಲ್ಲಿ ಉತ್ಸವದ ದೇವರು ದಲಿತರ ಕೇರಿಗೆ ಬರದೆ ಇರುವ ಬಗ್ಗೆ, ಪ್ರತಿಭಟನೆಗಳ ನಂತರ ಅದು ಬಂದರೂ ದೂರದಿಂದಲೇ ಪೂಜೆ ಸಲ್ಲಿಸಬೇಕಿದ್ದ ಬಗ್ಗೆ ಬರೆದ ಹಾಡೊಂದನ್ನು (ಮುತ್ತಿನ ಪಲ್ಲಕ್ಕಿ ಮುಟ್ಟಾದ ಮುಟ್ಟಿದರೆ ಅನ್ಯಾಯವೇನಣ್ಣ) ಪ್ರಸ್ತುತಪಡಿಸುವ ಮೂಲಕ 22 ಏಪ್ರಿಲ್ 2024ರಂದು ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ಪಂಚಮ ಪದ ಪ್ರಸ್ತುತಿ ಆರಂಭವಾಯಿತು. ಆ ಹಾಡಿನ ಭಾವ ಮರಿಯಮ್ಮ ಅವರ ಮುಖದಲ್ಲಿ ಸಮಾಜದ ಬಗ್ಗೆ ಸಿಟ್ಟಿನ ಅವತರಣಿಕೆಯಾಗಿ ಮೈದಾಳಿತ್ತು; ಹಾಡಿನ ಕೊನೆಯಲ್ಲಿ, ಕಮ್ಮಸಂದ್ರ ಗ್ರಾಮದಲ್ಲಿ ಈ ರೀತಿ ಮಾಡಿದ್ದು ತಪ್ಪಲ್ಲವೇ ಎಂದು ಸಭಿಕರನ್ನು ಪ್ರಶ್ನಿಸಿದರೆ, ಒಂದಷ್ಟು ಹೊತ್ತು ಮೌನವಾಗಿದ್ದ ಸಭೆ, ನಂತರ ಅಲ್ಲಲ್ಲಿ ಹೌದು-ತಪ್ಪು ಎಂಬ ಉತ್ತರ ಕೇಳಿಬಂತು. ಪಂಚಮ ಪದ ಪ್ರಸ್ತುತಿಯುದ್ದಕ್ಕೂ ಪ್ರೇಕ್ಷಕರನ್ನು ತುಸು ತಬ್ಬಿಬ್ಬುಗೊಳಿಸುವ ಮತ್ತು ಪ್ರಶ್ನಿಸುವ ನಿಟ್ಟಿನಲ್ಲಿ ಕಟ್ಟಿರುವ ಸಂಭಾಷಣೆಗಳು ಬಹಳ ಗಟ್ಟಿ ದನಿಯಲ್ಲಿ ಮೂಡಿಬಂದಿರುವುದು, ಶತಮಾನಗಳ ದಬ್ಬಾಳಿಕೆ ಇಂದಿಗೂ ಕೊನೆಯಾಗದಿರುವುದನ್ನು ಪ್ರತಿನಿಧಿಸಿದೆ ಎಂದೆನಿಸುತ್ತದೆ. ಮುಂದುವರಿದು ಅಂದು ದಲಿತರ ಮೇಲಿನ ದೌರ್ಜನ್ಯಗಳ ಕಥೆಯನ್ನು ಹೇಳಲು ಪಂಚಮವೇ ಬರಬೇಕಾಯಿತು, ಪಂಚಮವನ್ನು ನೆನಪಿಸಿಕೊಳ್ಳಲು ಜಂಗಮವೇ ಬರಬೇಕಾಯಿತು ಏಕೆ ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಪ್ರೇಕ್ಷಕರನ್ನು ಆಹ್ವಾನಿಸುತ್ತದೆ.

ನಂತರ ಬಾನಂದೂರ ಕೆಂಪಯ್ಯ ಅವರ ಜನಿವಾರದ ಕಥೆಯ ಪ್ರಸ್ತುತಿ, ಅವರು ಸಂಗ್ರಹಿಸಿದ್ದ ಜನಪದ ಗೀತೆ ’ತನುವಿನೊಳಗನುದಿನವಿದ್ದು’ ಗಾಯನದ ಮೂಲಕ ಮುಂದುವರಿಯುತ್ತದೆ. ಕುಣಿಗಲ್ ತಾಲೂಕಿನ ದಾಸನಪುರದಲ್ಲಿ ನಡೆದ ಚಿಕ್ಕತಿಮ್ಮಯ್ಯನವರ ಕೊಲೆಯ ವರದಿ, ಅದರ ಸುತ್ತ ಕವಿ-ಸಾಹಿತಿ ಕೆ.ಬಿ ಸಿದ್ದಯ್ಯ ಅವರು ಕಟ್ಟಿದ ಹಾಡು, ಕೋಲಾರದ ಅನಸೂಯಮ್ಮ ಅತ್ಯಾಚಾರ ಮತ್ತು ಶೇಷಗಿರಿಯಪ್ಪ ಕೊಲೆ ಪ್ರಕರಣಗಳು, ಅದರ ಸುತ್ತ ನಡೆದ ಹೋರಾಟ ಎಲ್ಲವೂ ಹೇಗೆ ಪಂಚಮ ಪತ್ರಿಕೆಯಲ್ಲಿ ಪ್ರತಿಧ್ವನಿಸಿತ್ತು ಎಂಬುದು ಓದು ಮತ್ತು ಹಾಡುಗಳ ಮೂಲಕ ರಂಗದ ಮೇಲೆ ಮಾರ್ದನಿಸುತ್ತದೆ. ಕೆ ಚಂದ್ರಶೇಖರ್ (ಈ ಪ್ರಸ್ತುತಿಯ ನಿರ್ದೇಶಕರು ಕೂಡ), ಮರಿಯಮ್ಮ, ಶ್ರದ್ಧಾ, ಲಕ್ಷ್ಮಣ್, ಭರತ ಡಿಂಗ್ರಿ, ಶ್ವೇತಾ ಎಚ್ ಕೆ ನಂದಿನಿ ಮತ್ತು ನರಸಿಂಹರಾಜು ಒಬ್ಬರನಂತರಒಬ್ಬರು ಮೈಕ್ ಹಿಡಿದು, ಕೆ ಬಿ ಸಿದ್ದಯ್ಯ, ಸಿದ್ದಲಿಂಗಯ್ಯ, ಬಾನಂದೂರು ಕೆಂಪಯ್ಯ, ಜೆನ್ನಿ, ಕೆ ರಾಮಯ್ಯ, ಇಂಧೂದರ ಹೊನ್ನಾಪುರ, ದೇವನೂರ ಮಹಾದೇವ ಇವರುಗಳ ಬರಹಗಳನ್ನ ಪರ್ಫಾಮ್ ಮಾಡುತ್ತಾ, ಹಾಡುಗಳನ್ನು ಹಾಡುತ್ತಾ, ತಾವೇ ಅವರಾಗಿ, 70-80ರ ದಶಕದ ದೌರ್ಜನ್ಯಗಳ ಕಡೆಗೆ, ಅವುಗಳ ವಿರುದ್ಧ ನಡೆದ ಹೋರಾಟಗಳ ಕಡೆಗೆ ಗಮನ ಸೆಳೆಯುತ್ತಾರೆ. ಈ ಪ್ರದರ್ಶನದಲ್ಲಿ ಈ ಹಿಂದಿನ ’ಮುಖ್ಯವಾಹಿನಿ’ ಏಸ್ಥೆಟಿಕ್‌ಅನ್ನು ಮುರಿಯುತ್ತಾ, ಅರೆ ಮತ್ತು ತಮೆಟೆಯ ವಾದ್ಯಗಳ ಶಬ್ದಗಳೊಂದಿಗೆ ಹಾಡುಗಳನ್ನು ಪ್ರಸ್ತುತಪಡಿಸಿ, ಕೇಳಿ ಗುನುಗಿ ಬಿಟ್ಟುಬಿಡಬಹುದಾಗಿದ್ದ ಭಾವದಿಂದ ಪ್ರೇಕ್ಷಕರನ್ನು ಬೇರೆಡೆ ಹೊರಳಿಸಿ, ಅವರನ್ನು ಬೌದ್ಧಿಕವಾಗಿ ಬಡಿದೆಬ್ಬಿಸಲು ತಂಡ ಪ್ರಯತ್ನಿಸುತ್ತದೆ. ಆ ನಿಟ್ಟಿನಲ್ಲಿ ಮೂಡಿರುವ ಸಿದ್ದಲಿಂಗಯ್ಯನವರ ’ಇಕ್ರಲ, ಒದಿರ್ಲ’ ಕಾಂಪೊಸಿಷನ್ ಹೆಚ್ಚು ಅರ್ಥಪೂರ್ಣವಾಗಿಯೂ, ಹೆಚ್ಚು ಪ್ರವೊಕೆಟಿವ್ ಆಗಿಯೂ ಕೇಳಿಸುತ್ತದೆ. ಸಿದ್ದಲಿಂಗಯ್ಯನವರ ’ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು’, ಆರ್ ಮಾನಸಯ್ಯನವರ ’ಸತ್ತಂತ ತೊಗಲಿಗೆ’, ಇಂಧೂದರ ಹೊನ್ನಾಪುರ ಅವರ ’ಕಪ್ಪು ಮನುಜರು ನಾವು..’- ಹೀಗೆ ಹಲವು ಹಾಡುಗಳ ಪ್ರಸ್ತುತಿ, ’ಬತ್ತಿದ ನೆಲಕ್ಕಾಗಿ ಎಚ್ಚೆತ್ತ ಜನಕ್ಕಾಗಿ ಮುತ್ತಿನ ಮಳೆಯ ನಾವು ಕರೆಯೋಣ’ ಎಂಬಂತೆ ಶೋಷಕ ಹಿನ್ನೆಲೆಯಿಂದ ಬಂದವರು ಬದಲಾವಣೆಗೆ ತೆರೆದುಕೊಂಡು ಎಲ್ಲರನ್ನು ಒಳಗೊಳ್ಳಬೇಕಾದ ವಿವೇಕಕ್ಕೆ ಕರೆಕೊಡುತ್ತದೆ.

ಈ ಪ್ರಸ್ತುತಿಯಲ್ಲಿ ಕೆಲವು ಆಸಕ್ತಿಕಾರಕ ಸಂಗತಿಗಳು ಕೂಡ ಸುಳಿಯುತ್ತವೆ. ಅಂತಹುದರಲ್ಲಿ ಒಂದು, ದೇವನೂರ ಮಹದೇವರ ಬೀಡಿ ಕುಂಚವಾಗಿ, ದಸಂಸ ಪ್ರಕಟಿಸಿದ ’ಹೋರಾಟದ ಹಾಡುಗಳ’ ಮುಖಪುಟ ರಚನೆಯಾಗಿದ್ದು.

ಪಂಚಮಕ್ಕೆ, ದಲಿತ ಹೋರಾಟಕ್ಕೆ ಗೌರವ ಸಲ್ಲಿಸುವ ಪ್ರಸ್ತುತಿಯ ನಡುವೆಯೇ, ಈ ರಂಗತಂಡ ಇದೇ ಪ್ರಸ್ತುತಿಯನ್ನು ಇಂದಿನ ಹೊಸ ಚಿಂತನೆಗಳ ಚರ್ಚೆಯ ಹಿನ್ನೆಲೆಯಲ್ಲಿ ತಮ್ಮ ಹೋರಾಟಗಳನ್ನು ರಿಫ್ಲೆಕ್ಟ್ ಮಾಡಿಕೊಳ್ಳುವುದಕ್ಕೂ ಬಳಸಿಕೊಂಡಿದೆ. ಅನಸೂಯಮ್ಮ ಹೋರಾಟದ ಭಾಗವಾಗಿ ಕೆ ರಾಮಯ್ಯನವರು ರಚಿಸಿದ ಸಾಹಿತ್ಯದಲ್ಲಿ ಇರುವ ಮತ್ತು ಹೋರಾಟದಲ್ಲಿ ಹೆಚ್ಚು ಮಹಿಳೆಯರನ್ನು ತೊಡಗಿಸಿಕೊಳ್ಳದೆ ಪುರುಷರೇ ಲೀಡ್ ಮಾಡಿದ ಪೇಟ್ರಿಯಾರ್ಕಲ್ ಸಮಸ್ಯೆಯ ಬಗ್ಗೆ ರಾಮಯ್ಯನವರ ಮಗಳು ದಿಶಾ ಬರೆಯುವ ಪತ್ರವನ್ನು ಓದುವ ಮೂಲಕ ವಿಶಾಲ ಪ್ರಾತಿನಿಧಿಕ ದಾರಿಯನ್ನು ರಂಗತಂಡ ಶೋಧಿಸಿಕೊಳ್ಳುತ್ತದೆ ಮತ್ತು ಈ ಪ್ರಸ್ತುತಿಯ ತಂಡದ ಕಾಂಪೊಸಿಷನ್‌ನಲ್ಲೂ ಅದು ಧನಾತ್ಮಕವಾಗಿ ರಿಫ್ಲೆಕ್ಟ್ ಆಗತ್ತೆ. ಈ ರೀತಿಯಲ್ಲಿ ಪ್ರಚೋದನೆಯ ಜತೆಗೆ ತಾನೂ ಹೇಗೆ ಪ್ರಶ್ನಿಸಿಕೊಂಡಿದ್ದೇನೆ ಎಂದು ತೋರಿಸುವ ಜಂಗಮ ತಂಡದ ಈ ಪ್ರಸ್ತುತಿ ಮರೆವಿಗೆ ಸರಿಸುವ ಸಾಂಸ್ಕೃತಿಕ ರಾಜಕೀಯದ ವಿರುದ್ಧ ಹೇಳಿಕೆಯೂ ಹೌದು ಮತ್ತು ಪ್ರಾತಿನಿಧ್ಯವನ್ನು ಸರಿಪಡಿಸಿಕೊಳ್ಳುವ ಆಹ್ವಾನವೂ ಹೌದು.

ಆಸಕ್ತಿದಾಯಕ ಪ್ರಯೋಗ

ಈ ಪ್ರಸ್ತುತಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸುವ ರೀತಿಯಲ್ಲಿ ಮಾಡಿರುವ ಪ್ರಯೋಗ ಉಲ್ಲೇಖನೀಯ. ಈ ಹೋರಾಟದ ಕಥನಗಳ ನಡುವೆ ಒಂದೈದು ನಿಮಿಷ ಬ್ರೇಕ್ ನೀಡಿ, ಪ್ರೇಕ್ಷಕರಿಗೆ ತಮ್ಮ ಹೋರಾಟದ ಅನುಭವಗಳನ್ನು, ನೋವಿನ ಕಥೆಗಳನ್ನು ನಿವೇದಿಸಿಕೊಳ್ಳಲು ಆಹ್ವಾನ ನೀಡುತ್ತದೆ. ನಾನು ನೋಡಿದ ಪ್ರದರ್ಶನದಲ್ಲಿ ಬ್ರಾಹ್ಮಣ ಸಮುದಾಯದ ಇಬ್ಬರು, ಜನಿವಾರ ಹಾಕಿಕೊಂಡಾಗ ಸಣ್ಣ ಮಕ್ಕಳಿಗಾಗುವ ಆಘಾತ ಮತ್ತು ನೋವಿನ ಕಥೆಗಳನ್ನು ಹಂಚಿಕೊಂಡರು.

ಪ್ರಸ್ತುತಿಯ ಕೊನೆಗೆ ನಡೆದ ಪ್ರಶ್ನೋತ್ತರ ಸಂವಾದವೂ ಆಸಕ್ತಿದಾಯಕ ಮಾತುಕತೆಗೆ ಸಾಕ್ಷಿಯಾಯಿತು. ಈ ಕಾಲಘಟ್ಟದಲ್ಲಿಯೂ ’ಇಕ್ರಲಾ ಒದಿರ್ಲಾ’ ಎಂಬ ಪ್ರವೊಕೇಶನ್ ಬೇಕಾ ಎನ್ನುವ ಪ್ರಶ್ನೆಗೆ, ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ನಿಜವಾಗಿಯೂ ತಾರತಮ್ಯಗಳು ನಿಂತಿವೆಯೇ ಎಂಬ ಮರುಪ್ರಶ್ನೆ ಬಂದಿತು ರಂಗತಂಡದಿಂದ. ಈ ದೌರ್ಜನ್ಯನ ಕಥೆಗಳನ್ನು ನೀವು ಹೇಳುವಾಗ ಮಾನಸಿಕವಾಗಿ ಕುಗ್ಗಿಹೋಗುವುದಿಲ್ಲವೇ ಎಂಬ ಪ್ರಶ್ನೆಗೆ, ಇದನ್ನು ನಟನೆಗೆ ಒಗ್ಗಿಸಿಕೊಳ್ಳದೆ, ಓದು ಹಾಡಿನ ಪ್ರದರ್ಶನ ನೀಡುತ್ತಿರುವುದಕ್ಕೆ ಅದೂ ಒಂದು ಕಾರಣ ಎಂದಿತು ತಂಡ. ಬೇರೆಬೇರೆ ಶೋಗಳಲ್ಲಿ ಕುಹಕದ, ವ್ಯಂಗ್ಯದ ಮತ್ತು ಅವಮಾನಿಸುವ ಪ್ರತಿಕ್ರಿಯೆಗಳು ಬಂದಿದ್ದನ್ನು ಜಂಗಮ ತಂಡ ನರೇಟ್ ಮಾಡಿತು. ಈ ಮಟ್ಟಿಗೆ ಪ್ರೇಕ್ಷಕರನ್ನು ಚಿಂತಿಸುವಂತೆ ಪ್ರಚೋದಿಸಲು ಈ ಪ್ರಸ್ತುತಿ ನಿಜಕ್ಕೂ ಯಶಸ್ವಿಯಾಗಿದೆ ಎನ್ನಬಹುದು.

ಇದನ್ನೂ ಓದಿ: ’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...