ತಮ್ಮ ಪುತ್ರ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಲೈಂಗಿಕ ಹಗರಣದ ಕುರಿತು ಪ್ರತಿಕ್ರಿಯೆ ನೀಡಿರುವಜನತಾದಳ (ಜಾತ್ಯತೀತ) ಹಿರಿಯ ಶಾಸಕ ಎಚ್.ಡಿ. ರೇವಣ್ಣ, “ಅಶ್ಲೀಲ ವೀಡಿಯೊಗಳು 4-5 ವರ್ಷಗಳಷ್ಟು ಹಳೆಯವು; ಭಯಪಟ್ಟು ಓಡಿಹೋಗುವುದಿಲ್ಲ” ಎಂದು ಅವರು ಸೋಮವಾರ ಹೇಳಿದ್ದಾರೆ.
ಏಪ್ರಿಲ್ 26 ರಂದು ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಚುನಾವಣೆಗೆ ಎರಡು ದಿನಗಳ ಮೊದಲು, ಕಳೆದ ವಾರ ಪ್ರಜ್ವಲ್ ರೇವಣ್ಣ ಅವರ ಸಾವಿರಾರು ಲೈಂಗಿಕ ವೀಡಿಯೊಗಳು ಭಾರೀ ವಿವಾದಕ್ಕೆ ಕಾರಣವಾಗಿವೆ. ನಂತರ, ಭಾನುವಾರ ಮನೆಗೆಲಸದಾಕೆ ಹಾಗೂ ಆಕೆಯ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಅಪ್ಪ-ಮಗನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಪ್ರಕರಣ ಕುರಿತು ಇಂದು ಪ್ರತಿಕ್ರಿಯೆ ನೀಡಿರುವ ರೇವಣ್ಣ, “ಎಂತಹ ಷಡ್ಯಂತ್ರ ನಡೆಯುತ್ತಿದೆ ಎಂದು ನನಗೆ ಗೊತ್ತಿದೆ, ಹೆದರಿ ಓಡಿ ಹೋಗುವವನಲ್ಲ, 4-5 ವರ್ಷಗಳ ಹಳೆ ವಿವಿಡಯೊಗಳನ್ನು ಬಿಡುಗಡೆ ಮಾಡಿದ್ದಾರೆ” ಎಂದು ಹೇಳಿದರು.
ವೀಡಿಯೋಗಳು ಭಾರೀ ಗದ್ದಲಕ್ಕೆ ಕಾರಣವಾದ ನಂತರ, ಕರ್ನಾಟಕ ಸರ್ಕಾರವು ವಿಶೇಷ ತನಿಖಾ ತಂಡದಿಂದ ತನಿಖೆಗೆ ವಹಿಸಿದೆ. ಇದರ ಬೆನ್ನಲ್ಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ದೇಶ ಬಿಟ್ಟು ಜರ್ಮನಿಯ ಫ್ರಾಂಕ್ ಫರ್ಟ್ ಗೆ ಪಲಾಯನ ಮಾಡಿದ್ದಾರೆ ಎನ್ನಲಾಗುತ್ತಿದ್ದು ಈವರೆಗೆ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಖಚಿತ ಸುದ್ದಿ ಲಭಿಸಿಲ್ಲ.
ಈ ಬಗ್ಗೆ ಮಾಧ್ಯಮಗಳಿಗೆ ಉತ್ತರಿಸಿರುವ ಅವರು, “ಪ್ರಜ್ವಲ್ ಹೇಗಿದ್ದರೂ ವಿದೇಶಕ್ಕೆ ಹೋಗುತ್ತಿದ್ದರು” ಎಂದರು. ಇನ್ನು, “ತಮ್ಮ ವಿರುದ್ಧ ಎಫ್ಐಆರ್ ದಾಖಲಾಗಿರುವುದು ಗೊತ್ತಿರಲಿಲ್ಲ” ಎಂದು ಹೇಳಿದರು.
ಪ್ರಜ್ವಲ್ ವಿರುದ್ಧ ಪಕ್ಷದ ಕ್ರಮದ ಕುರಿತು ಮಾತನಾಡಿ, “ಅವರನ್ನು ಪಕ್ಷದಿಂದ ಉಚ್ಚಾಟಿಸುವುದು ಪಕ್ಷದ ಹೈಕಮಾಂಡ್ಗೆ ಬಿಟ್ಟ ವಿಚಾರ” ಎಂದರು.
ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ ಎಂದು ಪ್ರತಿಪಾದಿಸಿದ ಹೆಚ್.ಡಿ.ರೇವಣ್ಣ, ರಾಜ್ಯ ಸರ್ಕಾರ ತನಿಖೆ ನಡೆಸಲಿ ಎಂದರು. ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಆಡಳಿತದಲ್ಲಿ ನಾವು ಸಿಐಡಿ ಅಥವಾ ಎಸ್ಐಟಿ ಆಗಿರಲಿ ಹಲವಾರು ತನಿಖೆಗಳನ್ನು ಎದುರಿಸಿದ್ದೇವೆ ಎಂದು ಹೇಳಿದರು.
ಇದು ರೇವಣ್ಣ ಕುಟುಂಬದ ಸಮಸ್ಯೆ; ನಮಗೂ ಇದಕ್ಕೂ ಸಂಬಂಧವಿಲ್ಲ:
ತಮ್ಮ ಅಣ್ಣನ ಪುತ್ರ, ಪಕ್ಷದ ಸಂಸದ ಪ್ರಜ್ವಲ್ ರೇವಣ್ಣ ಅವರ ‘ಅಶ್ಲೀಲ ವಿಡಿಯೋ’ ಪ್ರಕರಣಕ್ಕೆ ಸಂಬಂಧಿಸಿದಂತೆ ಜನತಾ ದಳ (ಜಾತ್ಯತೀತ) ನಾಯಕ ಎಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, “ಇದು ರೇವಣ್ಣ ಕುಟುಂಬದ ಸಮಸ್ಯೆ, ಇದಕ್ಕೂ ನಮಗೂ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.
“ಪ್ರಕರಣವು ಕುಟುಂಬದ ಸಮಸ್ಯೆಯಲ್ಲ, ನನ್ನ ಮತ್ತು ತಂದೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಹೆಸರನ್ನು ಏಕೆ ತಂದರು” ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, “ಯಾರಾದರೂ ಯಾವುದೇ ತಪ್ಪಿನಲ್ಲಿ ಭಾಗಿಯಾಗಿರುವುದು ಕಂಡುಬಂದರೆ, ಆ ವ್ಯಕ್ತಿಯನ್ನು ಕಾನೂನಿನ ಪ್ರಕಾರ ಶಿಕ್ಷಿಸಬೇಕಾಗುತ್ತದೆ” ಎಂದ ಅವರು, ಅಶ್ಲೀಲ ವೀಡಿಯೊಗಳು ಬಿಡುಗಡೆಯಾಗಿರುವ ಸಮಯವನ್ನು ಪ್ರಶ್ನಿಸಿದರು.
“ಬಿಡುಗಡೆ ಮಾಡಿದ್ದು ಯಾರು, ಈ ಹಿಂದೆ ಯಾಕೆ ಬಿಡುಗಡೆ ಮಾಡಿಲ್ಲ, ಚುನಾವಣೆ ಸಂದರ್ಭದಲ್ಲಿ ಹಳೇ ವಿಚಾರವನ್ನು ಏಕೆ ಎತ್ತಲಾಗುತ್ತಿದೆ? ಎಸ್ಐಟಿ ರಚನೆಯಾಗಿದೆ, ತನಿಖೆಯ ಮೂಲಕ ಸತ್ಯಾಂಶ ಹೊರ ಬರಲಿ. ಯಾರೇ ಆಗಿರಲಿ, ದೇಶದ ಕಾನೂನಿನ ಪ್ರಕಾರ ತಪ್ಪು… ತಪ್ಪು ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಹಾಗಾಗಿ, ತನಿಖೆಯಿಂದ ಸತ್ಯಾಂಶ ಹೊರಬರಲಿ, ಆ ನಂತರ ನಾನು ಪ್ರತಿಕ್ರಿಯಿಸುತ್ತೇನೆ” ಎಂದು ಹೇಳಿದ್ದಾರೆ.
“ಅದು ರೇವಣ್ಣ ಕುಟುಂಬದ ವಿಚಾರ, ನಮಗೆ ಸಂಬಂಧವಿಲ್ಲ, ನಾಲ್ವರು ಬೇರೆ ಬೇರೆಯಾಗಿ ವಾಸವಾಗಿದ್ದಾರೆ” ಎಂದ ಅವರು, ಆ ವ್ಯಕ್ತಿಯ ಬಗ್ಗೆ ಮಾತನಾಡುವಾಗ ಕುಟುಂಬದ ಹೆಸರು ತಂದಿರುವ ಬಗ್ಗೆ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಬೇಕೆಂದರು.
ಇದು ಕೌಟುಂಬಿಕ ಸಮಸ್ಯೆ ಅಲ್ಲ, ಕುಮಾರಸ್ವಾಮಿ ಹಾಗೂ ದೇವೇಗೌಡರ ಹೆಸರನ್ನು ಏಕೆ ತರುತ್ತೀರಿ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ; ’19 ಜನ ಶಾಸಕರ ಭವಿಷ್ಯ ಬೇಕೋ; ಪ್ರಜ್ವಲ್ ಮುಖ್ಯವೋ ತೀರ್ಮಾನಿಸಿ..’; ಜೆಡಿಎಸ್ ವರಿಷ್ಠರಿಗೆ ಸಮೃದ್ಧಿ ಮಂಜುನಾಥ್ ಎಚ್ಚರಿಕೆ