ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಸಲಹಾ ಸಂಸ್ಥೆ ಐ-ಪಿಎಸಿಯು ಆಮ್ ಆದ್ಮಿ ಪಕ್ಷದ ಜೊತೆಗೂಡಿ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಪ್ರಕಟಿಸಿದ್ದಾರೆ.
ಈ ಕುರಿತು ಪ್ರಶಾಂತ್ ಕಿಶೋರ್ರವರ ಐಪ್ಯಾಕ್ ಮತ್ತು ಅರವಿಂದ್ ಕೇಜ್ರಿವಾಲ್ ಟ್ವಿಟ್ಟರ್ನಲ್ಲಿ ಪರಸ್ಪರ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ.
After Punjab results, we acknowledged you as the toughest opponent that we have ever faced. Happy to join forces now with @ArvindKejriwal and @AamAadmiParty. https://t.co/5Rcz4ie6Xs
— I-PAC (@IndianPAC) December 14, 2019
ಪ್ರಶಾಂತ್ ಕಿಶೋರ್ ಜೆಡಿಯುನ ಉಪಾಧ್ಯಕ್ಷರಾಗಿದ್ದಾರೆ. ಅವರ ಪಕ್ಷ ಸದ್ಯ ಬಿಹಾರದಲ್ಲಿ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡಿದೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಬಿಹಾರ ಮುಖ್ಯಮಂತ್ರಿ ಮತ್ತು ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ವಿರುದ್ಧ ಪ್ರಶಾಂತ್ ಕಿಶೋರ್ ಕಿಡಿಕಾರಿದ್ದಾರೆ.
ಅವರ ಟೀಕೆಗಳ ನಂತರ “ನಾನು ಯಾರನ್ನೂ ಹೆಸರಿಸುವುದಿಲ್ಲ ಆದರೆ ಯಾರಿಗಾದರೂ ಸಮಸ್ಯೆ ಇದ್ದರೆ ಅವರು ಪಕ್ಷವನ್ನು ತೊರೆಯಲು ಸ್ವತಂತ್ರರು” ಎಂದು ಜೆಡಿಯು ಸಂಸದ ರಾಮ್ ಚಂದ್ರ ಪ್ರಸಾದ್ ಸಿಂಗ್ ಹೇಳಿದ್ದಾರೆ.
ನಿತೀಶ್ ಕುಮಾರ್ ಅವರು 2015 ರ ರಾಜ್ಯ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿದ ನಂತರ ಪ್ರಶಾಂತ್ ಕಿಶೋರ್ ಜೆಡಿಯುಗೆ ಸೇರಿದ್ದರು. ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ ಜೊತೆ ಮಹಾಮೈತ್ರಿಯ ಭಾಗವಾಗಿದ್ದ ನಿತೀಶ್ ಕುಮಾರ್ ಅವರು ಚುನಾವಣೆಯಲ್ಲಿ ಜಯಗಳಿಸಿದ್ದರು.
ಪ್ರಶಾಂತ್ ಕಿಶೋರ್ರವರ ಭಾರತೀಯ ರಾಜಕೀಯ ಕ್ರಿಯಾ ಸಮಿತಿ (ಐ-ಪಿಎಸಿ)ಯು ಬಿಜೆಪಿಯ “ಚಾಯ್ ಪಾರ್ ಚರ್ಚಾ” ಅಭಿಯಾನದ ಹಿಂದಿನ ರೂವಾರಿಗಳಾಗಿದ್ದರು. ಇದೇ ಸಮಿತಿಯು 2014 ರಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯಾಗಿ ಅಧಿಕಾರಕ್ಕೆ ಬರಲು ಸಹಾಯ ಮಾಡಿತು.
ರಾಜಕೀಯ ಚತುರರ ಈ ಗುಂಪು ಪ್ರಸ್ತುತ 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಪರವಾಗಿ ಸಹ ಕೆಲಸ ಮಾಡಲಿದೆ. ರಾಜ್ಯದಲ್ಲಿ ಬಿಜೆಪಿ ಅರಳಲು ಕನಸು ಕಾಣುತ್ತಿದ್ದರೆ, ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಲು ಮಮತಾ ಬ್ಯಾನರ್ಜಿಯವರ ಪರವಾಗಿ ಈ ಗುಂಪು ನಿಂತಿದೆ. ಪ್ರಶಾಂತ್ ಕಿಶೋರ್ ಅವರನ್ನು ಜೂನ್ 6 ರಂದು ಮಮತಾ ಬ್ಯಾನರ್ಜಿಯವರ ಸೋದರಳಿಯ ಮತ್ತು ಪಕ್ಷದ ಶಾಸಕ ಅಭಿಷೇಕ್ ಬ್ಯಾನರ್ಜಿ ಸಂಪರ್ಕಿಸಿ ಒಪ್ಪಿಸಿದ್ದರು.
ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರು ಸಹ ಈ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಪ್ರಶಾಂತ್ ಕಿಶೋರ್ರವರ ಸಲಹೆಯನ್ನು ಪಡೆದುಕೊಂಡಿದ್ದರು.