ರಾಜಸ್ಥಾನದ ರಾಜಕೀಯ ಬಿಕ್ಕಟ್ಟುಗಳ ಕೇಂದ್ರಬಿಂದುವಾಗಿರುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಮತ್ತು ಡಿಸಿಎಂ ಸ್ಥಾನದಿಂದ ವಜಾಗೊಂಡ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಾನು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ನಾನು ಬಿಜೆಪಿಗೆ ಸೇರುತ್ತಿಲ್ಲ. ಗಾಂಧಿಯರ ದೃಷ್ಟಿಯಲ್ಲಿ ನನ್ನನ್ನು ಕೆಳಕ್ಕೆ ಇಳಿಸಲು ಪ್ರಯತ್ನಿಸುತ್ತಿರುವವರು ಆ ರೀತಿ ಪ್ರಚಾರ ಮಾಡುತ್ತಿದ್ದಾರೆ ಎಂದು ಸಚಿನ್ ಪೈಲಟ್ ಹೇಳಿದ್ದಾರೆ. ಅಲ್ಲದೇ ಇಂದು ನಿಗಧಿಯಾಗಿದ್ದ ತಮ್ಮ ಪತ್ರಿಕಾಗೋಷ್ಠಿಯನ್ನು ಸಹ ರದ್ದಗೊಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಮಂಗಳವಾರ ಸಚಿನ್ ಪೈಲಟ್ರನ್ನು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿತ್ತು. ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯ ನಂತರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂಪುಟದಿಂದ ಕೈಬಿಡಲಾಯಿತು. ಅವರೊಂದಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಮೇಶ್ ಮೀನಾ ಮತ್ತು ಪ್ರವಾಸೋದ್ಯಮ ಸಚಿವ ವಿಶ್ವೇಂದ್ರ ಸಿಂಗ್ ರನ್ನು ಸಹ ಸಂಪುಟದಿಂದ ಕೈಬಿಡಲಾಗಿದೆ.
ರಾಜಸ್ಥಾನ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋಟಾಸ್ರಾ ಅವರನ್ನು ರಾಜಸ್ಥಾನದ ಹೊಸ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಮುಕೇಶ್ ಭಾಕರ್ ಮತ್ತು ರಾಕೇಶ್ ಪರೀಕ್ ಅವರನ್ನು ಮುಂಚೂಣಿ ಸಂಸ್ಥೆಗಳಾದ ಯೂತ್ ಕಾಂಗ್ರೆಸ್ ಮತ್ತು ಸೇವಾ ದಳದ ಅಧ್ಯಕ್ಷ ಸ್ಥಾನದಿಂದ ಪಕ್ಷವು ವಜಾ ಮಾಡಿದೆ.
ಸೋಮವಾರ ಮತ್ತು ಮಂಗಳವಾರ ಪಕ್ಷ ಕರೆದ ಎರಡು ಸಿಎಲ್ಪಿ ಸಭೆಗಳಲ್ಲಿ ಸಚಿನ್ ಪೈಲಟ್ ಭಾಗವಹಿಸಲಿಲ್ಲ. ನಂತರ ಅವರನ್ನು ವಜಾಗೊಳಿಸಿದೆ. ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಸಚಿನ್ ಪೈಲಟ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಸಚಿನ್ ಪೈಲಟ್ ಕಾಂಗ್ರೆಸ್ ತೊರೆಯಲು ಕಾರಣವಾದ ಮೂರು ಪ್ರಮುಖ ಬೇಡಿಕೆಗಳಿವು…!!