ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಹಾಗೂ ರೈತರ ಹೋರಾಟವನ್ನು ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿಯ ಗಾಂಧಿ ಪ್ರತಿಮೆ ಮುಂದೆ ರೈತ-ದಲಿತ-ಕಾರ್ಮಿಕರ ಐಕ್ಯ ಹೋರಾಟ ಸಮಿತಿಯು ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಸಿರಿಮನೆ ನಾಗರಾಜ ಅವರು ಮಾತನಾಡಿ, “ದೇಶದಾದ್ಯಂತ ರೈತರು ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರವೆ ಅಲ್ಲಿ ಕೋಟಿಗಿಂತಲೂ ಹೆಚ್ಚು ಪ್ರತಿಭಟನಾಕಾರರು ಸೇರಿದ್ದಾರೆ ಎಂದು ಹೇಳುತ್ತಿದೆ. ಈ ಕಾಯ್ದೆಯ ವಿರುದ್ದ ಕರ್ನಾಟಕದಲ್ಲಿಯು ಮುಂದಿನ ದಿನಗಳಲ್ಲಿ ಪ್ರತಿಭಟನೆ ಆಯೋಜನೆಯಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ” ಎಂದರು.
ಇದನ್ನೂ ಓದಿ: ದೆಹಲಿಯಲ್ಲಿ ರೈತರ ಗುಡುಗು: ಇಂದಿನ ಹೋರಾಟದ ಚಿತ್ರಗಳು
ಎಐಪಿಎಫ್ ನಾಯಕರಾದ ಮಣಿ ಪಿಆರ್ಎಸ್ ಅವರು ಮಾತನಾಡಿ, “ಈ ಸರ್ಕಾರ ಇರುವುದು ಅಂಬಾನಿ-ಅದಾನಿಗಳ ಪರವಾಗಿ ಕಾನೂನು ಸೃಷ್ಟಿ ಮಾಡಲು ಮಾತ್ರ. ರೈತರ ಹೊಟ್ಟೆಗೆ ಹೊಡೆಯುತ್ತಿರುವ ಈ ಸರ್ಕಾರಕ್ಕೆ ತಮ್ಮ ಆಹಾರ ಹೇಗೆ ಸಿಗುತ್ತಿದೆ ಎಂದು ತಿಳಿದಿಲ್ಲ. ಜಂತರ್ ಮಂತರ್ನಲ್ಲಿ ತಮಗೆ ಪ್ರತಿಭಟನೆ ಮಾಡಬೇಕು ಎಂದು ರೈತರು ಕೇಳುತ್ತಿದ್ದಾರೆ. ಆದರೆ ಅದಕ್ಕೆ ಅನುಮತಿ ನೀಡದ ಕೇಂದ್ರ ಸರ್ಕಾರ ಅವರ ಮೇಲೆಯೆ ದಬ್ಬಾಳಿಕೆ ಮಾಡುತ್ತಿದೆ. ಈ ಹಿಂದೆ ಕೂಡಾ ರೈತರ ಮೇಲೆ ದಬ್ಬಾಳಿಕೆ ಮಾಡಿರುವ ಸರ್ಕಾರ ಏನಾಗಿದೆ ಎಂದು ನಮಗೆ ತಿಳಿದಿದೆ. ರೈತರ ಸಿಟ್ಟನ್ನು ಮೈಮೇಲೆ ಎಳೆದು ಕೊಳ್ಳದಿರಿ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಸುಪ್ರೀಂ ಹೊರಗೆ ಪ್ರತಿಭಟನೆ: ರೈತರ ಹೋರಾಟಕ್ಕೆ ಸಾಥ್ ನೀಡಿದ ದೆಹಲಿ ವಕೀಲರು!
ರೈತ ಸಂಘದ ನಾರಾಯಣ ಸ್ವಾಮಿ ಮಾತನಾಡಿ, “ಮತ ನೀಡಿ ಕೇಂದ್ರಕ್ಕೆ ಸಂಸದರನ್ನು ಕಳುಹಿಸಿದ್ದು ನಮ್ಮದೆ ತಪ್ಪು. ಇಂದು ರಾಜ್ಯ ಸರ್ಕಾರ ಗ್ರಾಮ ಪಂಚಾಯತ್ ಚುನಾವಣೆ ಘೋಷಿಸಿದೆ, ಈ ಚುನಾವಣೆಯಲ್ಲಿ ಗ್ರಾಮಿಣ ಮಟ್ಟದಿಂದಲೇ ಇವರನ್ನು ಸೋಲಿಸುವ ತೀರ್ಮಾನ ಮಾಡಬೇಕು” ಎಂದು ಕರೆ ನೀಡಿದರು.
ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಕೇಂದ್ರ ಸರ್ಕಾರವು ನಡೆಸಿಕೊಳ್ಳುತ್ತಿರುವ ರೀತಿಗೆ ಹಾಗೂ ಹೊಸ ರೈತ ವಿರೋಧಿ ನೀತಿಯ ವಿರುದ್ದ ಪ್ರತಿಭಟನಾಕಾರರು ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಆಜ್ತಕ್ ವರದಿಗಾರರನ್ನು ’ಗೋದಿ ಮೀಡಿಯಾ’ ಎಂದು ಕರೆದು ಸ್ವಾಗತಿಸಿದ ಚಳವಳಿ ನಿರತ ರೈತರು!