Homeಮುಖಪುಟ‘ಗರಂ ಹವಾ’: ಒಂದು ನೆನಪು

‘ಗರಂ ಹವಾ’: ಒಂದು ನೆನಪು

- Advertisement -
- Advertisement -

ಎಂ.ಎಸ್. ಸತ್ಯು ಅವರಿಗೆ ಈಚೆಗೆ 80 ತುಂಬಿತು. ಈ ಹೊತ್ತಲ್ಲಿ ಅವರ ‘ಗರಂ ಹವಾ’ (1974) ನೆನಪಾಗುತ್ತಿದೆ. ನಾನು ನೋಡಿದ ಅತ್ಯಂತ ಶ್ರೇಷ್ಠ ಸಿನಿಮಾಗಳಲ್ಲಿ ಇದೊಂದು. ಇಸ್ಮತ್ ಚುಗ್ತಾಯಿಯವರ ಕಥೆಯನ್ನಾಧರಿಸಿ ರಚನೆಯಾದ ಇದಕ್ಕೆ ಚಿತ್ರಕಥೆ ಬರೆದವರು ಕೈಫಿ ಆಜ್ಮಿ ಮತ್ತು ಸತ್ಯು ಅವರ ಜೀವನಸಂಗಾತಿ ಶಮಾ ಝೈದಿ. ಸಂಗೀತ ಕಲ್ಕತ್ತೆಯ ಉಸ್ತಾದ್ ಬಹಾದೂರಖಾನರದು. ಮುಖ್ಯ ಭೂಮಿಕೆಯಲ್ಲಿ ಬಲರಾಜ್ ಸಹಾನಿಯಿದ್ದಾರೆ. ಕೈಫಿ ಆಜ್ಮಿಯವರ ರಚನೆಗೆ ಪ್ರಸಿದ್ಧ ವಾರಸಿ ಸೋದರರು ಖವಾಲಿ ಹಾಡಿದ್ದಾರೆ. ಹಲವಾರು ದೊಡ್ಡ ಪ್ರತಿಭೆಗಳು ಸೇರಿ ನಿರ್ಮಿಸಿದ ಕಲಾಕೃತಿಯಿದು.

ಸಿನಿಮಾದ ವಸ್ತು, ದೇಶವಿಭಜನೆಯ ಬಳಿಕ, ಉತ್ತರ ಭಾರತದಲ್ಲಿರುವ ಚಪ್ಪಲಿ ತಯಾರಿಕೆ
ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಸ್ಥ ಕುಟುಂಬವೊಂದು ಪಡುವ ಪಾಡಿನ ಕಥೆ. ಮೂರು ತಲೆಮಾರಿಗೆ ಸೇರಿದ, ನಗರದಲ್ಲಿ ಗೌರವದ ಸ್ಥಾನ ಹೊಂದಿದ್ದ ಈ ಕುಟುಂಬದಲ್ಲಿನ ಒಬ್ಬ ವ್ಯಕ್ತಿ, ಮನೆಮಾರಿ ಪಾಕಿಸ್ತಾನಕ್ಕೆ ವಲಸೆ ಹೋಗುತ್ತಾನೆ. ಅಲ್ಲಿಂದ ಕುಟುಂಬದ ಕಷ್ಟಗಳು ಶುರುವಾಗುತ್ತವೆ. ಸಾಲ ಪಡೆದವರೆಲ್ಲ ದೇಶ ಬಿಟ್ಟುಹೋಗಿದ್ದರಿಂದ ಈ ಕುಟುಂಬಕ್ಕೆ ಬ್ಯಾಂಕು ಸಾಲ ಕೊಡುವುದಿಲ್ಲ. ಮನೆ ಹರಾಜಾದ ಬಳಿಕ ಬಾಡಿಗೆಗೆ ಮನೆ ಸಿಗುವುದಿಲ್ಲ. ಕುಟುಂಬದ ಹುಡುಗರಿಗೆ ಯಾರೂ ಉದ್ಯೋಗ ಕೊಡುವುದಿಲ್ಲ. ದೇಶದ ರಹಸ್ಯಗಳನ್ನು ಪಾಕಿಸ್ತಾನಕ್ಕೆ ಕಳಿಸಿದ ಸುಳ್ಳು ಆಪಾದನೆಯನ್ನೂ ಹೊರಬೇಕಾಗುತ್ತದೆ. ದೇಶವಿಭಜನೆಯಂತಹ ರಾಜಕೀಯ ವಿದ್ಯಮಾನವೊಂದು, ಕುಟುಂಬದಲ್ಲಿ ಎಬ್ಬಿಸುವ ಸಂಕಟಗಳನ್ನು ತೆರೆತೆರೆಯಾಗಿ ಚಿತ್ರ ಹಿಡಿಯುತ್ತ ಹೋಗುತ್ತದೆ. ವಿಭಜನೆಯ ಬಳಿಕ ಭಾರತದಲ್ಲೇ ಉಳಿಯಲು ನಿರ್ಧರಿಸಿದ ಮುಸ್ಲಿಮರು, ಹಳೆಯ ಮಾನವ ಸಂಬಂಧಗಳೆಲ್ಲ ಭಗ್ನವಾಗಿ ಹುಟ್ಟಿರುವ ಘೋರವಾದ ಅವಿಶ್ವಾಸದ ವಾತಾವರಣದಲ್ಲಿ ಅನುಭವಿಸಿದ ಕಷ್ಟಗಳನ್ನು ಕಾಣಿಸುತ್ತದೆ. ಈ ಅಪನಂಬಿಕೆಯ ವಾತಾವರಣದಲ್ಲಿ ಬದುಕಲಾಗದೆ ಕುಟುಂಬದ ಒಬ್ಬೊಬ್ಬರೇ ಭಾರತ ಬಿಟ್ಟು ಹೋಗುತ್ತಾರೆ. ಆದರೆ ಕುಟುಂಬದ ಅಜ್ಜಿ, ಅಪ್ಪ ಮತ್ತು ಮಗ ಮಾತ್ರ ಭಾರತದಲ್ಲೇ ಉಳಿಯಲು ಛಲತೊಡುತ್ತಾರೆ.

ಅಪ್ಪ ಮಕ್ಕಳಿಗೆ ಈ ನಿರ್ಧಾರವು ಅವರ ಸಾರ್ವಜನಿಕ ಬದುಕಿನ ಅನುಭವ ಮತ್ತು ರಾಜಕೀಯ ಪ್ರಜ್ಞೆಯ ಫಲ. ಆದರೆ ಈ ಕುಟುಂಬದ ಸದಸ್ಯರಾದ ಒಬ್ಬ ಮುದುಕಿ ಮತ್ತು ತರುಣಿ ಕೂಡ ವಲಸೆಹೋಗಲು ತಮ್ಮದೇ ಕಾರಣಕ್ಕೆ ನಿರಾಕರಿಸುವವರು. ಮುದುಕಿಗೆ ತನ್ನ ದೇಶ ಪರದೇಶ ಎಂದರೇನು ಗೊತ್ತಿಲ್ಲ. ತಾನು ಮದುವೆಯಾಗಿ ಬಂದಾಗ ಮನೆದುಂಬಿಸಿಕೊಂಡ ಮನೆಯನ್ನು ಬಿಟ್ಟು ಅವಳಿಗೆ ಬೇರೆ ದೇಶದ ಕಲ್ಪನೆಯೇ ಗೊತ್ತಿಲ್ಲ. ಖಯಾಮತ್ ದಿನ ತೀರಿಹೋಗಿರುವ ತನ್ನ ಗಂಡ ‘ನಮ್ಮ ಮನೆಯನ್ನು ಬಿಟ್ಟು ಬೇರೆ ಮನೆಯಲ್ಲಿ ಸತ್ತೆಯಾ?’ ಎಂದರೆ ನಾನೇನೆಂದು ಉತ್ತರಿಸಲಿ ಎನ್ನುವುದು ಅವಳ ಪ್ರಶ್ನೆ. ಕಡೆಗೂ ಅವಳು ತಾನು ಲಗ್ನವಾದ ಹವೇಲಿಯಲ್ಲಿಯೇ ಸಂತೋಷದಿಂದ ಸಾಯುತ್ತಾಳೆ. ಇನ್ನು ತರುಣಿ, ತನ್ನನ್ನು ಪ್ರೇಮಿಸಿದ ತರುಣರು ಭಾರತದಲ್ಲಿ ತಮಗೆ ನೌಕರಿ ಸಿಗುತ್ತಿಲ್ಲವೆಂದು ಹೇಳಿ ಪಾಕಿಸ್ತಾನಕ್ಕೆ ವಲಸೆ ಹೋದವರು, ಮರಳಿ ಬರುವುದನ್ನೇ ಕಾಯುತ್ತಾಳೆ. ಆದರೆ ಅವರು ಅಲ್ಲೇ ಮದುವೆಯಾಗಿ ನೆಲೆಸಲು ನಿಶ್ಚಯಿಸಿದ್ದಾರೆಂದು ತಿಳಿದು ಅತ್ಮಹತ್ಯೆ ಮಾಡಿಕೊಳ್ಳುತ್ತಾಳೆ-ತಾಯಿ ತನಗಾಗಿ ಹೆಣೆದ ಮದುಮಗಳ ತಲೆವಸ್ತ್ರವನ್ನು ಧರಿಸಿ ಬ್ಲೇಡಿನಲ್ಲಿ ಕೈಯ ನರವನ್ನು ಕೊಯ್ದುಕೊಂಡು.

ಎಂ.ಎಸ್. ಸತ್ಯು

ದೇಶವಿಭಜನೆ ಮತ್ತು ಹೊಸರಾಷ್ಟ್ರದ ಉದಯದಂತಹ ಬೃಹತ್ ರಾಜಕೀಯ ಘಟನೆಗಳಿಗೆ ಬಹುತೇಕವಾಗಿ ಸಾಮಾನ್ಯ ಜನ ಕಾರಣರಲ್ಲ. ಆದರೆ ಈ ಘಟನೆಗಳ ದುರಂತ ಫಲವನ್ನು ಅವರು ಉಣ್ಣಬೇಕಾಗುತ್ತದೆ. ಈ ಕಷ್ಟಗಳಲ್ಲೂ ಕುಟುಂಬದೊಳಗಿನ ಪ್ರೇಮ ವಾತ್ಸಲ್ಯ ಜಗಳದಂತಹ ಮಾನವ ಸಂಬಂಧದ ಮುಖಗಳನ್ನು ಚಿತ್ರ ಹಿಡಿದುಕೊಡುತ್ತದೆ. ಮುನಿಸಿಕೊಳ್ಳುವ ಅಪ್ಪನಿಗೆ ಮಗಳು ಕದ್ದು ತಂದು ರೊಟ್ಟಿ ತಿನಿಸುವ ದೃಶ್ಯ, ತಾನು ಹುಟ್ಟಿಬೆಳೆದ ಮನೆಯನ್ನು ಬಿಟ್ಟುಬರಲು ನಿರಾಕರಿಸಿ ಸೌದೆಗೂಡಿನಲ್ಲಿ ಅಡಗಿಕೊಳ್ಳುವ ಮುದುಕಿಯನ್ನು ಬಲಾತ್ಕಾರವಾಗಿ ಎತ್ತಿಕೊಂಡು ಹೋಗುವ ದೃಶ್ಯವಾಗಲಿ ಇಂತಹವು. ಇಂತಹುದೇ ಕಷ್ಟ-ಸುಖಗಳನ್ನು ಪಾಕಿಸ್ತಾನದಲ್ಲಿ ತಮ್ಮ ಊರುಮನೆಗಳಲ್ಲೇ ಉಳಿದ ಮುಸ್ಲಿಮೇತರ ಕುಟುಂಬಗಳೂ ಅನುಭವಿಸುತ್ತಿರಬಹುದು ಎಂಬ ಧ್ವನಿಯನ್ನು ಚಿತ್ರ ಚಿಮ್ಮಿಸುತ್ತದೆ. ರಾಜಕೀಯ ಸಂದರ್ಭದ ಒತ್ತಡದಿಂದ ಕೆಲವರು ಎಷ್ಟೇ ಸಮುದಾಯ ಶಂಕೆ, ದ್ವೇಷ ಮಾಡಲಿ, ಜನರ ನೋವಿಗೆ ಧರ್ಮಾತೀತವಾಗಿ ಮಿಡಿವ ಜೀವಗಳು ಅದೇ ಸಮಾಜದಲ್ಲಿ ಇರುತ್ತವೆ ಎಂಬ ಸತ್ಯವನ್ನು ಚಿತ್ರ ಕಾಣಿಸುತ್ತದೆ. ‘ಸಂಬಂಜ ಎಂಬುದು ದೊಡ್ಡದು ಕನಾ’ ಎಂದು ಬಿಂಬಿಸುತ್ತದೆ.

ಅಂತಃಕರಣ ಮಿಡಿವ ಈ ಚಿತ್ರವು ಒಂದು ಶ್ರೇಷ್ಠ ಕಲಾಕೃತಿಯೂ ಆಗಿದೆ. ಇಲ್ಲಿ ಉತ್ತರ ಪ್ರದೇಶದ ಉಚ್ಚವರ್ಗದ ಮುಸ್ಲಿಮರ ಬದುಕಿನ ಊಟ ಉಡುಪು ಭಾಷೆಯನ್ನು ಒಳಗೊಂಡ ರಿವಾಜುಗಳನ್ನು ಸಮರ್ಥವಾಗಿ ಹಿಡಿಯಲಾಗಿದೆ. ಕಥೆ ಜರುಗುವ ಗಲ್ಲಿ ಮತ್ತು ಹವೇಲಿಗಳು, ತನ್ನ ಸ್ಥಳೀಯ ವಾಸ್ತುಶಿಲ್ಪದ ಜತೆಯಲ್ಲಿ ತಾವೂ ಪಾತ್ರಗಳಾಗಿವೆ. ಚಿತ್ರದ ಪ್ರತಿಯೊಂದು ಫ್ರೇಮ್ ಕೂಡ ಅರ್ಥಪೂರ್ಣ ಕಾವ್ಯದ ಒಂದೊಂದು ಸಾಲಿನಂತಿದೆ. ನೆಳಲು ಬೆಳಕಿನ ಸಂಯೋಜನೆಯು ದೇಶವಿಭಜನೆಯ ಒಳಿತುಕೇಡುಗಳ ಸಂಕೇತದಂತೆ ಇಡೀ ಚಿತ್ರದಲ್ಲಿ ಆವರಿಸಿಕೊಂಡಿದೆ. ಧನಿಪೂರ್ಣವೂ ಸಂಕ್ಷಿಪ್ತವೂ ಆದ ಸಂಭಾಷಣೆಯಿರುವ ಚಿತ್ರದಲ್ಲಿ ವಾಚಾಳಿತನವಿಲ್ಲ. ಮುಖಭಾವದಲ್ಲೇ ತಮ್ಮ ಒಳಗನ್ನು ಪ್ರಕಟಿಸುವ ಪ್ರಬುದ್ಧ ನಟನೆಯಿಂದ ಕೂಡಿದೆ. ಬಲರಾಜರ ಅಭಿನಯವಂತೂ ಮನೋಜ್ಞ. ದುರಂತವೆಂದರೆ, ಈ ಚಿತ್ರ ಬಿಡುಗಡೆಯಾಗುವ ಹೊತ್ತಿಗೆ ಬಲರಾಜ್ ತೀರಿಕೊಂಡಿದ್ದರು.

1983ರಲ್ಲಿ ನಾನು ಕನ್ನಡ ಎಂ.ಎ.ಯಲ್ಲಿ ರ್‍ಯಾಂಕ್ ಪಡೆದಾಗ, ಆ ಹುಡುಗನನ್ನು ನೋಡಬೇಕಲ್ಲ ಎಂದು ಆಸೆಪಟ್ಟು ನನ್ನನ್ನು ತಮ್ಮ ಸಹಾಯಕರಾಗಿದ್ದ ಶಿರಾಳಕೊಪ್ಪದ ರಾಮಸ್ವಾಮಿಯವರ ಮೂಲಕ ಕರೆಸಿಕೊಂಡಿದ್ದರು. ಔತಣಕೊಟ್ಟು ಪ್ರೀತಿವಿಶ್ವಾಸ ತೋರಿದ್ದರು. ಕಾಲುಶತಮಾನದ ಬಳಿಕ, ನನ್ನ ‘ಅಮೀರಬಾಯಿ ಕರ್ನಾಟಕಿ’ ಓದಿ, ಬೆಂಗಳೂರಿನಲ್ಲಿ ಒಂದು ಚರ್ಚೆ ಇಟ್ಟುಕೊಂಡಿದ್ದರು. ಅವರೂ ಚಿರಂಜೀವಿಸಿಂಗರೂ ಮಾತಾಡಿದರು. ಮುಂಬೈ ಸಿನಿಮಾ ಜಗತ್ತಿಗೆ ಉತ್ತರ ಕರ್ನಾಟಕದ ಕೊಡುಗೆಯನ್ನು ಬಿಂಬಿಸುವ ಮ್ಯೂಸಿಯಮ್ಮನ್ನು ಬಿಜಾಪುರದ ಅಮೀರಬಾಯಿ ಅವರ ಹಳೆಯ ಮನೆಯಲ್ಲಿ ಮಾಡುವ ಕನಸನ್ನು ಸತ್ಯು ತಮ್ಮ ಪತ್ರದ ಮೂಲಕ ಹಂಚಿಕೊಂಡಿದ್ದರು. ಎಂ.ಎಸ್. ಸತ್ಯು ಹಾಗೂ ರಾಜೀವ ತಾರಾನಾಥ್ ಕರ್ನಾಟಕದಲ್ಲಿ ಹುಟ್ಟಿ ಭಾರತದಲ್ಲಿ ಹರಡಿದ ಪರಂಪರೆಯೊಂದರ ಎರಡು ಕೊಂಡಿಗಳಂತೆ ತೋರುತ್ತಾರೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ವಿಧಾನ ಪರಿಷತ್ ಖಂಡಿತಾ ಉಳಿಸಿಕೊಳ್ಳಬೇಕಿದೆ; ಉತ್ತಮ ಪ್ರತಿನಿಧಿತ್ವಕ್ಕಾಗಿ ಸುಧಾರಣೆಗಳ ಜೊತೆಗೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...