ಸರ್ಕಾರದ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಸರ್ಕಾರಿ ಶಾಲೆಗಳಿಂದ ವಿದ್ಯಾರ್ಥಿಗಳು ದೂರ ಉಳಿದು, ಖಾಸಗೀ ಶಾಲೆಗಳ ಮೆಟ್ಟಿಲೇರುತ್ತಿದ್ದಾರೆ. ಕೊರೊನಾದಿಂದಾಗಿ ಜನರ ಬದುಕು ಅತಂತ್ರಗೊಂಡಿದ್ದು, ಆರ್ಥಿಕ ಬಿಕ್ಕಟ್ಟಿನಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಸೇರಿಸಲು ಮುಂದಾಗಿದ್ದಾರೆ.
ಇಂತಹ ಸಮಯದಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಅಭಿವೃದ್ದಿ ಪಡಿಸಬೇಕಿದ್ದ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ. ಹಲವು ಸರ್ಕಾರಿಗಳು ಶಾಲೆಗಳ ವಾತಾವರಣವೇ ಹದಗೆಟ್ಟಿದೆ. ಹೀಗೆ ಶಿಥಿಲಗೊಂಡಿರುವ ಶಾಲೆಗಳ ಪಟ್ಟಿಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂರಿನ ಚಲ್ಯ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಸೇರಿದೆ.
ಶಾಲೆಯ ಕೆಲವು ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿವೆ. ಹೆಂಚುಗಳು ಬಿದ್ದುಹೋಗಿದ್ದು, ಶಾಲಾ ಕೊಠಡಿಗಳಿಗೆ ಸೂರು ಇಲ್ಲದಂತಾಗಿದೆ. ಮಳೆ ಬಂದರೆ ನೀರು ನೇರವಾಗಿ ಕೊಠಡಿಯೊಳಗೇ ಸೋರುತ್ತಿದೆ. ಶಾಲೆಗಾಗಿ ಕಟ್ಟಿದ್ದ ರಂಗಮಂದಿರ ಕುಸಿದು ಬಿದ್ದಿದೆ. ರಂಗಮಂದಿರಕ್ಕೆ ಹೊದಿಸಿದ್ದ ಶೀಟುಗಳು ಮಳೆ-ಗಾಳಿಯಿಂದ ಒಡೆದು, ಹಾರಿಹೋಗಿವೆ. ಬಿರುಕು ಬಿಟ್ಟಿರುವ ಗೋಡೆಗಳು ಯಾವಾಗ ಬೀಳುತ್ತವೋ ಎಂಬ ಆತಂಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಕಾಡುತ್ತಿದ್ದು, ಜೀವ ಭಯ ಎದುರಾಗಿದೆ.
ಶಾಲೆಯ ಮುಖ್ಯಶಿಕ್ಷಕರು ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಶಿಥಿಲಗೊಂಡಿರುವ ಶಾಲೆಯ ಕೊಠಡಿಗಳನ್ನು ರಿಪೇರಿ ಮಾಡಿಸಬೇಕು. ಹೆಂಚುಗಳನ್ನು ಹೊದಿಸಬೇಕು ಎಂದು ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ.
ಮನವಿ ಪತ್ರಗಳು ಮತ್ತು ಅರ್ಜಿಗಳನ್ನು ಪಡೆದ ಅಧಿಕಾರಿಗಳು, ಆ ಪತ್ರಗಳನ್ನು ಫೈಲ್ನಲ್ಲಿ ಭದ್ರವಾಗಿಟ್ಟಿದ್ದಾರೆಯೇ ಹೊರತು. ಇದೂವರೆಗೂ ಯಾವುದೇ ಕೆಲಸಗಳಾಗಿಲ್ಲ. 2019ರಿಂದ ಇದೂವರೆಗೂ ನಾಲ್ಕೈದು ಬಾರಿ ಶಾಲೆಯ ಮುಖ್ಯ ಶಿಕ್ಷಕರು ಇಲಾಖೆಯ ಗಮನಕ್ಕೆ ತಂದರೂ ಯಾರೂ ಶಾಲೆಯತ್ತ ಸುಳಿದಿಲ್ಲ ಎಂದು ಶಾಲೆಯ ಹಿರಿಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಹೀಗಾಗಿ, ಶಾಲೆಯ ಗೋಡೆಯೇನಾದರೂ ಕುಸಿದರೆ, ತಮ್ಮ ಮಕ್ಕಳ ಜೀವಕ್ಕೇ ಆಪತ್ತು ಎಂಬ ಭಯದಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ, ಅಕ್ಕ-ಪಕ್ಕದ ಊರುಗಳಲ್ಲಿರುವ ಖಾಸಗೀ ಶಾಲೆಗೆ ಸೇರಿಸುತ್ತಿದ್ದಾರೆ.
ಕೆಲವು ವರ್ಷಗಳ ಹಿಂದೆ 100ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದ್ದ ಈ ಸರ್ಕಾರಿ ಶಾಲೆ, ಈಗ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳನ್ನು ಮಾತ್ರ ಹೊಂದಿದೆ. ಶಾಲೆಯನ್ನು ಅಭಿವೃದ್ದಿ ಪಡಿಸಿ, ಹೆಚ್ಚು ಮಕ್ಕಳು ದಾಖಲಾಗುವಂತೆ ಮಾಡುವುದಕ್ಕಾಗಿ ಶಾಲೆಯ ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರಿಗೆ ಇಲಾಖೆಯಿಂದಾಗಲೀ, ಗ್ರಾಮ ಪಂಚಾಯತಿಯಿಂದಾಗಲೀ ಸಹಕಾರ ದೊರೆಯುತ್ತಿಲ್ಲ ಎಂದು ಶಾಲೆಯ ಹಳೆಯ ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ.
ಇದೂವರೆಗೂ ಸಾವಿರಾರು ಗ್ರಾಮೀಣ ಮಕ್ಕಳು ವಿದ್ಯಾಭ್ಯಾಸ ಪಡೆದಿದ್ದ ಸರ್ಕಾರಿ ಶಾಲೆ ಈಗ ಮುಚ್ಚಿವ ಹಂತಕ್ಕೆ ಬಂದು ನಿಂತಿದೆ. ಶಾಲೆಯ ಹಿರಿಯ ವಿದ್ಯಾರ್ಥಿಗಳೂ ಮುಖ್ಯ ಶಿಕ್ಷಕರ ಜೊತೆ ನಿಂತು ಶಾಲೆಯ ಉಳಿವಿಗಾಗಿ ಯತ್ನಿಸುತ್ತಿದ್ದಾರೆ. ಸರ್ಕಾರ, ಶಿಕ್ಷಣ ಇಲಾಖೆ ಈ ಶಾಲೆಯತ್ತ ಗಮನ ಹರಿಸಬೇಕು. ಶಾಲೆಯನ್ನು ಅಭಿವೃದ್ದಿ ಪಡಿಸಲು ಮುಂದಾಗಬೇಕು ಎಂದು ಶಾಲೆಯ ಹಿರಿಯ ವಿದ್ಯಾರ್ಥಿ ಸುನೀಲ್ ಹೇಳಿದ್ದಾರೆ.
ವರದಿ – ಸೋಮಶೇಖರ್ ಚಲ್ಯ