ಪತಂಜಲಿ ಆಯುರ್ವೇದ ಹಲವು ಕಾಯಿಲೆಗಳಿಗೆ ಔಷಧಿಯೆಂದು ಜಾಹೀರಾತುಗಳಲ್ಲಿ ಸುಳ್ಳು ಮತ್ತು ದಾರಿ ತಪ್ಪಿಸುವ ಅಂಶಗಳನ್ನು ನೀಡಿರುವ ಯೋಗ ಗುರು ರಾಮ್ದೇವ್ ಅವರ ಪತಂಜಲಿ ಆಯುರ್ವೇದ್ ಕಂಪನಿಯನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದ್ದು, ನಿರ್ದಿಷ್ಟ ಕಾಯಿಲೆಯನ್ನು ಗುಣಪಡಿಸುವ ಔಷಧಿ ಎಂದು ಸುಳ್ಳು ಹೇಳಿಕೆ ನೀಡಿದರೆ, ಪ್ರತಿ ಉತ್ಪನ್ನದ ಮೇಲೆ 1 ಕೋಟಿ ದಂಡ ವಿಧಿಸಲು ಪೀಠವು ಪರಿಗಣಿಸಬೇಕಾಗಬಹುದು ಎಂದು ಹೇಳಿದೆ.
ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಪತಂಜಲಿ ಆಯುರ್ವೇದದ ಎಲ್ಲಾ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ತಕ್ಷಣ ನಿಲ್ಲಿಸಬೇಕು. ಅಂತಹ ಯಾವುದೇ ವಿಚಾರವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದೆ.
ವ್ಯಾಕ್ಸಿನೇಷನ್ ಡ್ರೈವ್ ಮತ್ತು ಅಲೋಪತಿ ಔಷಧಿಗಳ ವಿರುದ್ಧ ರಾಮ್ದೇವ್ ಅವರ ಅಭಿಯಾನವನ್ನು ಆರೋಪಿಸಿ ಐಎಂಎ ಸಲ್ಲಿಸಿದ ಮನವಿಯ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈ ಬಗ್ಗೆ ಆ.23 2022ರಂದು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಆಯುಷ್ ಮತ್ತು ಪತಂಜಲಿ ಆಯುರ್ವೇದ್ ಲಿಮಿಟೆಡ್ಗೆ ನೋಟಿಸ್ ಜಾರಿ ಮಾಡಿತ್ತು.
ವಿಚಾರಣೆಯ ವೇಳೆ ಪೀಠವು ಪತಂಜಲಿ ಆಯುರ್ವೇದ್ಗೆ ಆಧುನಿಕ ವೈದ್ಯಕೀಯ ವ್ಯವಸ್ಥೆಗಳ ವಿರುದ್ಧ ತಪ್ಪುದಾರಿಗೆಳೆಯುವ ಸಂದೇಶಗಳು ಮತ್ತು ಜಾಹೀರಾತುಗಳನ್ನು ಪ್ರಕಟಿಸದಂತೆ ಸೂಚಿಸಿದೆ. ನಿರ್ದಿಷ್ಟ ಕಾಯಿಲೆಯನ್ನು ಗುಣಪಡಿಸುತ್ತದೆ ಎಂದು ಸುಳ್ಳು ಹೇಳಿಕೆ ನೀಡಿ ಜಾಹೀರಾತು ನೀಡಿದರೆ ಪ್ರತಿ ಉತ್ಪನ್ನದ ಮೇಲೆ 1 ಕೋಟಿ ದಂಡ ವಿಧಿಸಲು ಪೀಠವು ಆದೇಶಿಸಬಹುದು ಎಂದು ಪತಂಜಲಿಗೆ ನ್ಯಾಯಾಲಯವು ಎಚ್ಚರಿಕೆಯನ್ನು ನೀಡಿದೆ.
ಅಲೋಪತಿ ಮತ್ತು ಅಲೋಪತಿ ವೈದ್ಯರನ್ನು ಟೀಕಿಸಿದ್ದಕ್ಕಾಗಿ ರಾಮ್ದೇವ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್, ವೈದ್ಯರು ಮತ್ತು ಇತರ ಚಿಕಿತ್ಸಾ ವ್ಯವಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಬೇಕು ಎಂದು ಹೇಳಿದೆ.
ಈ ಗುರು ಸ್ವಾಮಿ ರಾಮದೇವ್ ಬಾಬಾಗೆ ಏನಾಯಿತು? ಅಂತಿಮವಾಗಿ ಅವರು ಯೋಗವನ್ನು ಜನಪ್ರಿಯಗೊಳಿಸಿದ್ದರಿಂದ ನಾವು ಅವರನ್ನು ಗೌರವಿಸುತ್ತೇವೆ. ಆದರೆ ಅವರು ಇತರ ವ್ಯವಸ್ಥೆಯನ್ನು ಟೀಕಿಸಬಾರದು. ಆಯುರ್ವೇದ ಎಲ್ಲದಕ್ಕೂ ಪರಿಹಾರ ಎನ್ನುವುದರಲ್ಲಿ ಏನು ಗ್ಯಾರೆಂಟಿ ಇದೆ? ಎಂದು ನ್ಯಾಯಾಲಯ ಕೇಳಿದೆ.
ಲಸಿಕೆ ಅಭಿಯಾನ ಹಾಗೂ ಆಧುನಿಕ ಔಷಧಗಳ ವಿರುದ್ಧ ಬಾಬಾ ರಾಮದೇವ್ ಅವರು ಸುಳ್ಳು ಅಭಿಯಾನ ನಡೆಸಿದ್ದಾರೆ ಎಂದು ಐಎಂಎ ಅರ್ಜಿ ಸಲ್ಲಿಸಿದೆ. ಔಷಧಗಳ ವಿಚಾರದಲ್ಲಿ ತಪ್ಪುದಾರಿಗೆ ಎಳೆಯುವ ಜಾಹೀರಾತುಗಳ ಸಮಸ್ಯೆಯನ್ನು ನಿವಾರಿಸಲು ಮಾರ್ಗೋಪಾಯ ಹುಡುಕುವಂತೆ ನ್ಯಾಯಪೀಠವು ಕೇಂದ್ರ ಸರ್ಕಾರದ ಪರ ವಕೀಲರಿಗೆ ಸೂಚಿಸಿದೆ. ಪೀಠವು ಈ ಕುರಿತು ವಿಚಾರಣೆಯನ್ನು ಫೆ.5ಕ್ಕೆ ಮುಂದೂಡಿದೆ.