ರಾಮ ಮಂದಿರ ಉದ್ಘಾಟನೆ ಸಮಾರಂಭದ ಸಂದರ್ಭದಲ್ಲಿ ಮಸೀದಿಗಳು, ದರ್ಗಾಗಳು ಮತ್ತು ಮದರಸಾಗಳಲ್ಲಿ ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್ ಎಂದು ಜಪಿಸುವಂತೆ ಆರೆಸ್ಸೆಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್ ಮುಸ್ಲಿಮರಿಗೆ ಆಗ್ರಹಿಸಿದ್ದು, ವಿವಾದಕ್ಕೆ ಕಾರಣವಾಗಿದೆ.
‘ರಾಮ್ ಮಂದಿರ್, ರಾಷ್ಟ್ರ ಮಂದಿರ್– ಎ ಕಾಮನ್ ಹೆರಿಟೇಜ್’ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಇಂದ್ರೇಶ್ ಕುಮಾರ್, ದೇಶದಲ್ಲಿರುವ ಶೇ 99ರಷ್ಟು ಮುಸ್ಲಿಮರು ಮತ್ತು ಇತರ ಹಿಂದೂಯೇತರರು ದೇಶಕ್ಕೆ ಸೇರಿದವರು. ನಮ್ಮೆಲ್ಲರ ಪೂರ್ವಜರು ಸಹ ಒಂದೇ. ಅವರು ತಮ್ಮ ಧರ್ಮವನ್ನು ಬದಲಾಯಿಸಿದ್ದಾರೆ ಹೊರತು ದೇಶವನ್ನಲ್ಲ ಎಂದು ಹೇಳಿದ್ದಾರೆ.
ಇಸ್ಲಾಂ, ಕ್ರಿಶ್ಚಿಯನ್, ಸಿಖ್ ಅಥವಾ ಯಾವುದೇ ಧರ್ಮಕ್ಕೆ ಸೇರಿದ ಜನರು ಶಾಂತಿ, ಸೌಹಾರ್ದತೆ ಮತ್ತು ಭ್ರಾತೃತ್ವಕ್ಕಾಗಿ ತಮ್ಮ ಧಾರ್ಮಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆರ್ಎಸ್ಎಸ್ ನಾಯಕ ಆಗ್ರಹಿಸಿದ್ದಾರೆ.
ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್ಎಂ) ನ ಮುಖ್ಯ ಪೋಷಕನಾಗಿರುವ ಇಂದ್ರೇಶ್ ಕುಮಾರ್, ನಮ್ಮೆಲ್ಲರ ಪೂರ್ವಜರು ಒಂದೇ ಮತ್ತು ನಮಗೆ ಸಾಮಾನ್ಯ ಕನಸುಗಳಿದೆ. ನಾವೆಲ್ಲರೂ ಈ ದೇಶಕ್ಕೆ ಸೇರಿದವರು. ನಮಗೆ ವಿದೇಶಿಯರೊಂದಿಗೆ ಯಾವುದೇ ಸಂಬಂಧವಿಲ್ಲ. ಎಂಆರ್ಎಂ ನಿಮಗೆ ಮನವಿ ಮಾಡಿದೆ ಮತ್ತು ನಾನು ಇಂದು ಅದನ್ನೇ ಪುನರುಚ್ಚರಿಸುತ್ತಿದ್ದೇನೆ. ಶ್ರೀ ರಾಮ್ ಜೈ, ರಾಮ್ ಜೈ, ಜೈ ರಾಮ್ ಎಂದು 11 ಬಾರಿ ದರ್ಗಾಗಳು, ಮದರಸಾಗಳು ಮತ್ತು ಮಸೀದಿಗಳಲ್ಲಿ ಹೇಳಿ ಎಂದು ಹೇಳಿದ್ದಾರೆ.
ಇದಲ್ಲದೆ ಗುರುದ್ವಾರಗಳು, ಚರ್ಚ್ಗಳು ಮತ್ತು ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಜ.22ರಂದು ರಾತ್ರಿ ಭವ್ಯವಾಗಿ ಅಲಂಕರಿಸಲು ಮತ್ತು ಟಿವಿಯಲ್ಲಿ ಈ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಸಮಾರಂಭ ಕಾರ್ಯಕ್ರಮವನ್ನು ವೀಕ್ಷಣೆಗೆ ವ್ಯವಸ್ಥೆ ಮಾಡಲು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಭಗವಾನ್ ರಾಮನು ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಪ್ರಪಂಚದ ಎಲ್ಲರಿಗೂ ಸೇರಿದವನು ಎಂಬ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಇಂದ್ರೇಶ್ ಕುಮಾರ್, ರಾಮ ಹಿಂದೂಗಳಿಗೆ ಮಾತ್ರವಲ್ಲ, ಎಲ್ಲರಿಗೂ ಸೇರಿದವನು. ಅದು ಹಾಗಲ್ಲ ಎಂದು ನಾವು ಯಾವಾಗ ಹೇಳಿದ್ದೇವೆ? ರಾಮನು ಎಲ್ಲರಿಗೂ ಸೇರಿದವನು ಎಂದು ಅವರು INDIA ಮೈತ್ರಿಕೂಟಕ್ಕೆ ಹೇಳಬೇಕು. ಪ್ರತಿಷ್ಠಾಪನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನವನ್ನು ನೀವು ಪಡೆಯುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಬಿಹಾರ: ದಲಿತ ಮಹಿಳೆಗೆ ಸಾರ್ವಜನಿಕವಾಗಿ ಥಳಿಸಿದ ಪೊಲೀಸ್ ಅಧಿಕಾರಿ