ಜಗತ್ತಿನ ಮೊದಲ ಕೋವಿಡ್ ಲಿಸಿಕೆಯನ್ನು ಕಂಡುಹಿಡಿಯುವ ಮೂಲಕ ರಷ್ಯಾ ತನ್ನ ಆತ್ಮನಿರ್ಭರತೆ ತೋರಿಸಿದೆ. ಆದರೆ ಭಾರತ ಕೇವಲ ಬೋಧಿಸುತ್ತಿದೆ ಎಂದು ಶಿವಸೇನೆಯ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಶಿವಸೇನೆಯ ಮುಖವಾಣಿ ಸಾಮ್ನಾಗೆ ಬರೆದ ಲೇಖನದಲ್ಲಿ “ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜಗತ್ತಿನ ಮೊದಲ ಕೊರೊನಾ ಲಸಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅವರ ಮಗಳು ಈಗಾಗಲೇ ಲಸಿಕೆ ತೆಗೆದುಕೊಂಡಿದ್ದಾರೆ. ಆ ಮೂಲಕ ಅವರು ಆತ್ಮನಿರ್ಭರತೆಯ ಪಾಠ ಮಾಡಿದ್ದಾರೆ. ಆದರೆ ಭಾರತ ಮಾತ್ರ ಸ್ವಾವಲಂಬನೆಯ ಭೋಧನೆ ಮಾಡುತ್ತಿದೆ ಎಂದು ಅವರು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಟೀಕಿಸಿದ್ದಾರೆ.
ಇನ್ನು ಕೆಲವರು ಆ ಲಸಿಕೆ ಕಾನೂನುಬದ್ಧವಲ್ಲ, ಸರಿಯಾದ ನಿಯಮಗಳನ್ನು ಅನುಸರಿಸಿಲ್ಲ ಎನ್ನಬಹುದು. ಆದರೆ ಅವರು ಆ ಲಸಿಕೆಯನ್ನು ತನ್ನ ಮಗಳಿಗೆ ಹಾಕಿಸುವ ಮೂಲಕ ಆತ್ಮವಿಶ್ವಾಸ ಪ್ರದರ್ಶಿಸಿದ್ದಾರೆ ಎಂದು ರಾವುತ್ ಹೇಳಿದ್ದಾರೆ.
ರಾಮ್ ಮಂದಿರ ನಿರ್ಮಾಣದ ಟ್ರಸ್ಟ್ ಮುಖ್ಯಸ್ಥ ಮಹಂತ್ ನೃತ್ಯ ಗೋಪಾಲ್ ದಾಸ್ ಅವರು ಕೊರೊನಾ ಪಾಸಿಟಿವ್ ಆಗಿದ್ದಾರೆ. ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆದ ದೇವಾಲಯದ ಶಿಲಾನ್ಯಾಸ ಸಮಾರಂಭದಲ್ಲಿ ದಾಸ್ ಅವರೊಂದಿಗೆ ಕೈಕುಲುಕಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳುತ್ತಾರೆಯೇ? ಏಕೆ ಕ್ವಾರಂಟೈನ್ ಆಗಿಲ್ಲ ಎಂದು ರಾವುತ್ ಪ್ರಶ್ನಿಸಿದ್ದಾರೆ.
ದೇಶದಲ್ಲಿ 14 ಕೋಟಿ ನಿರುದ್ಯೋಗಿಗಳಿದ್ದಾರೆ. ಆದರೆ ಅಳುವವರು ಈ ಕುರಿತು ನಿರ್ಲಕ್ಷ್ಯ ವಹಿಸಿದ್ದಾರೆ. ಹೋರಾಟಗಾರರು ಮತ್ತು ಪ್ರತಿಪಕ್ಷಗಳು ತಣ್ಣಗಾಗಿವೆ ಎಂದು ಅವರು ಟೀಕಿಸಿದ್ದಾರೆ.
ಇದನ್ನೂ ಓದಿ: ದಲಿತನೊಬ್ಬ ಗ್ರಾ.ಪಂ ಮುಖ್ಯಸ್ಥನಾದುದ್ದನ್ನು ಸಹಿಸದ ಮೇಲ್ಜಾತಿಗಳು: ಗುಂಡಿಕ್ಕಿ ಕೊಲೆ