ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನನ್ನ ಹಾಗೂ ನನ್ನ ದತ್ತು ಪುತ್ರನಿಗೆ ಸೇರಿಸಿ ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡಲಾಗಿದೆ ಎಂದು ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ಪೊಲೀಸ್ ಕಮಿಷನರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ನನ್ನ ಸಂಪೂರ್ಣ ಜೀವನವನ್ನು ನೆಲ, ಜಲ, ಪರಿಸರಕ್ಕೆ ಮೀಸಲಿಟ್ಟಿದ್ದೇನೆ. ಆದರೆ ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ನನ್ನ ಹಾಗೂ ನನ್ನ ದತ್ತು ಪುತ್ರ ಬಳ್ಳೂರು ಉಮೇಶ್ ಹೆಸರು ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಸಾಲುಮರದ ತಿಮ್ಮಕ್ಕ ಹೇಳಿದ್ದಾರೆ.
ಸರ್ಕಾರ ನೀಡಿದ ಸವಲತ್ತುಗಳನ್ನು ಬೇರೆಯವರಿಗೆ ನೀಡಿ ವಂಚನೆ ಮಾಡಲು ಅವಕಾಶ ಮಾಡಿಕೊಟ್ಟಿದ್ಧೇವೆ ಎಂದು ಸುದ್ದಿ ವಾಹಿನಿಗಳು ವರದಿ ಮಾಡಿದೆ. ವರದಿ ಬಗ್ಗೆ ಸಾಕ್ಷಿಗಳನ್ನು ನೀಡಲಿ. ಕಲ್ಪಿತ ವರದಿಯಿಂದ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಸಾಲುಮರದ ತಿಮ್ಮಕ್ಕ ಹೇಳಿದ್ದಾರೆ.
ನಾನು ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿಯಾಗಿದ್ದು, ಸಂಪುಟ ದರ್ಜೆ ಸ್ಥಾನಮಾನ ಹೊಂದಿದ್ದೇನೆ. ಸರ್ಕಾರ ನೀಡಿರುವ ಕಾರಿನ ಸಂಖ್ಯೆ ಕೆಎ 50 ಜಿ 6363 ನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ವರದಿ ಮಾಡಲಾಗಿದ್ದು, ನನಗೆ ಸರಕಾರ ನೀಡಿದ ಕಾರನ್ನು ಆರೋಪಿ ಚನ್ನನಾಯಕ ಬಳಸಿದ್ದಾನೆ. ಮತ್ತೊಬ್ಬ ಆರೋಪಿ ಗಗನ್ ಕಡೂರು ವಿಧಾನಸೌಧದ ಕೊಠಡಿಯನ್ನು ನವೀಕರಣ ಮಾಡಿಕೊಟ್ಟಿದ್ದಾನೆ ಎಂದೆಲ್ಲ ಸುಳ್ಳು ಸುದ್ದಿ ಬಿತ್ತರಿಸಲಾಗಿದೆ. ಈ ಬಗ್ಗೆ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಸಾಲುಮರದ ತಿಮ್ಮಕ್ಕ ಆಗ್ರಹಿಸಿದ್ದಾರೆ.
ಇದನ್ನು ಓದಿ: ಚೈತ್ರಾ ಕುಂದಾಪುರ ಗ್ಯಾಂಗ್ನ ಪ್ರಮುಖ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಬಂಧನ