Homeಕರ್ನಾಟಕಉತ್ತರ ಕನ್ನಡದ ರಾಜಕೀಯ ಜಗಲಿಯಲ್ಲಿ ಅದಲು ಬದಲು

ಉತ್ತರ ಕನ್ನಡದ ರಾಜಕೀಯ ಜಗಲಿಯಲ್ಲಿ ಅದಲು ಬದಲು

- Advertisement -
- Advertisement -

ಉತ್ತರ ಕನ್ನಡದ ರಾಜಕಾರಣದ ಸೂತ್ರ ಸಮೀಕರಣ ನಿಧಾನಕ್ಕೆ ಬದಲಾಗತೊಡಗಿದೆ. ಕಳೆದ ವಿಧಾನಸಭೆ ಚುನಾವಣೆ ಹೊತ್ತಲ್ಲಿ ಹೊನ್ನಾವರದ ಕೆರೆಯಲ್ಲಿ ಬಿದ್ದು ಅಸುನೀಗಿದ ಮೀನುಗಾರರ ಪರೇಶ್ ಮೇಸ್ತನನ್ನು ಸಾಬರೇ ಕೊಂದೆಸೆದಿದ್ದಾರೆಂದು ಹುಯಿಲೆಬ್ಬಿಸಿ ಬಿಜೆಪಿ ಭೂಪರು ಭರ್ಜರಿ ಗೆಲವು ಸಾಧಿಸಿದ್ದರು! ಆದರೆ ಬಿಜೆಪಿ ಬುಡವೀಗ ಮೊದಲಿನಷ್ಟು ಭದ್ರವಾಗುಳಿದಿಲ್ಲ. ಯಲ್ಲಾಪುರದ ಕಾಂಗ್ರೆಸ್ ಶಾಸಕನಾಗಿದ್ದ ಶಿವರಾಮ ಹೆಬ್ಬಾರ್ ಬಿಜೆಪಿ ಪಾರ್ಟಿಗೆ ನೆಗೆದು ಉಸ್ತುವಾರಿ ಮಂತ್ರಿಯಾದ ಬಳಿಕವಂತೂ ಜಿಲ್ಲೆಯ ಕೇಸರಿ ಪಾಳೆಯ ಬಣ್ಣಗೆಡುತ್ತಿದೆ. ಮುಗಿದ ಗ್ರಾಪಂ ಇಲೆಕ್ಷನ್‌ನಲ್ಲಿ ಬಿಜೆಪಿ ಬೀಗುವಂಥ ದಿಗ್ವಿಜಯವೂ ಸಾಧ್ಯವಾಗಿಲ್ಲ!!

ಸತೀಶ್ ಸೈಲ್

ಬಿಜೆಪಿಯ ಎಂಪಿ, ಎಂಎಲ್‌ಎ, ಮಂತ್ರಿಗಳು ಜನರ ವಿಶ್ವಾಸ ಕಳೆದುಕೊಳ್ಳಲು ಎರಡು ಕಾರಣ. ಒಂದು, ಸಿಬಿಐಗೆ ವಹಿಸಲಾಗಿದ್ದರೂ ಪರೇಶ ಮೇಸ್ತನ ಸಾವಿನ ಪ್ರಕರಣದ ತನಿಖೆ ತ್ವರಿತವಾಗಿ, ಪ್ರಾಮಾಣಿಕವಾಗಿ ಮಾಡದಿರುವುದು. ಹಾಗೊಮ್ಮೆ ಸರಿಯಾದ ತನಿಖೆ ನಡೆದರೆ ತಮ್ಮ ಬಂಡವಾಳ ಬಯಲಾಗುತ್ತದೆಂಬ ಆತಂಕ ಕಟ್ಟರ್ ಹಿಂದುತ್ವವಾದಿ ಸೂತ್ರಧಾರರಿಗೆ ಕಾಡುತ್ತಿದೆ ಎಂಬುದು ಜನರಿಗೆ ಖಾತ್ರಿಯಾಗಿಹೋಗಿದೆ. ಮತ್ತೊಂದು ಕಾರಣ, ಕಿಕ್‌ಬ್ಯಾಕ್, ಪರ್ಸೆಂಟೇಜ್ ದಂಧೆಯಿಂದ ಜನಸಾಮಾನ್ಯರು ರೋಸತ್ತು ಹೋಗಿದ್ದಾರೆ. ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರ ವಿರುದ್ಧ ಆಡಳಿತ ವಿರೋಧಿ ಆಕ್ರೋಶ ಎದ್ದಿದೆ! ಹೀಗಾಗಿಯೇ ಸಂಘಟನೆ, ನಾಯಕತ್ವ ಇಲ್ಲದಿದ್ದರೂ ಕಾಂಗ್ರೆಸ್ ಕಳೆದ ಗ್ರಾಪಂ ಇಲೆಕ್ಷನ್‌ನಲ್ಲಿ ಬಿಜೆಪಿಗೆ ಬೆವರಿಳಿಸಿದೆ. ವಲಸಿಗ ಮಂತ್ರಿ ಹೆಬ್ಬಾರ್‌ನಿಂದ ಬಿಜೆಪಿ ಬೆಳವಣಿಗೆಗೆ ಪೈಸೆ ಪ್ರಯೋಜನವೂ ಆಗುತ್ತಿಲ್ಲ. ಬದಲಿಗೆ ಹೆಬ್ಬಾರರ ಯಲ್ಲಾಪುರ, ಮುಂಡಗೋಡ ಕ್ಷೇತ್ರದಲ್ಲೇ ಮೂಲ ಬಿಜೆಪಿ ಬಸವಳಿದು ಹೆಬ್ಬಾರ್ ಬಿಜೆಪಿ ತಲೆಯೆತ್ತಿರುವುದು ಸಂಘಪರಿವಾರದ ಕಣ್ಣು ಕೆಂಪು ಮಾಡಿಸಿದೆ.

ಪ್ರಶಾಂತ ದೇಶಪಾಂಡೆ

ಕೇಸರಿ ಕೋಟೆ ಕಂಗೆಡುತ್ತಿರುವ ಈ ಕಾಲಘಟ್ಟದಲ್ಲಿ ಕಾಂಗ್ರೆಸ್ ಫಿನಿಕ್ಸ್‌ನಂತೆ ಬೂದಿಯಿಂದ ಮೇಲೇಳುತ್ತಿದೆ. ಕಾಂಗ್ರೆಸ್‌ನ ವಯೋವೃದ್ಧ ಮುಖಂಡ ಆರ್.ವಿ ದೇಶಪಾಂಡೆ ತಮ್ಮ ಕುಲಕಂಠೀರವ ಪ್ರಶಾಂತ ದೇಶಪಾಂಡೆಯನ್ನು ಉತ್ತರಾಧಿಕಾರಿಯಾಗಿಸಿ ಜಿಲ್ಲಾ ರಾಜಕಾರಣ ಆಖಾಡಕ್ಕೆ ಬಿಟ್ಟಿದ್ದಾರೆ. ಒಮ್ಮೆ ಲೋಕಸಭಾ ಇಲೆಕ್ಷನ್‌ಗೆ ಸ್ಪರ್ಧಿಸಿ ಸೋತ ನಂತರ ರಾಜಕಾರಣದ ಉಸಾಬರಿಯೇ ಬೇಡವೆಂಬಂತಿದ್ದ ಪ್ರಶಾಂತ್ ಈಗ ಕಾಂಗ್ರೆಸ್ ಕಟ್ಟಲು ಜಿಲ್ಲೆಯಲ್ಲಿ ಓಡಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನಲ್ಲಿರುವ ಹಿಂದುತ್ವದ ಸೋಂಕಿಲ್ಲದ ಹಿರಿ-ಮರಿ ನೇತಾಗಳ ಸೆಳೆಯಲು ಸ್ಕೆಚ್ ಹಾಕಿಕೊಂಡು ಹೊರಟಿದ್ದಾರೆ. ಅತ್ತ ಹಳಿಯಾಳದಲ್ಲಿ ದೊಡ್ಡ ದೇಶಪಾಂಡೆ ಸಾಹೇಬರು ಮಗ್ಗಲು ಮುಳ್ಳಾಗಿರುವ ಶಿಷ್ಯ ಕಂ ಎಂಎಲ್‌ಸಿ ಶ್ರೀಕಾಂತ ಘೋಟನೇಕರ್‌ರನ್ನು ಮಟ್ಟಹಾಕಲು ನೋಡುತ್ತಿದ್ದಾರೆ. ತನ್ನಿಂದಲೇ ಎರಡು ಬಾರಿ ಎಂಎಲ್‌ಸಿಯಾದರೂ, ಈಗ ತನ್ನ ಎಂಎಲ್‌ಎ ಕುರ್ಚಿ ಮೇಲೆ ಕಣ್ಣು ಹಾಕಿರುವ ಘೋಟನೇಕರ್ ಬಿಜೆಪಿ ಮಂತ್ರಿಯೂ ಮಾಜಿ ಕಾಂಗ್ರೆಸಿಗನೂ ಆಗಿರುವ ಶಿವರಾಮ ಹೆಬ್ಬಾರ್‌ರ ಗಳಸ್ಯಕಂಠಸ್ಯ ಸಖನಾಗಿರುವುದರಿಂದ, ಮಾತೃ ಪಕ್ಷಕ್ಕೆ ದ್ರೋಹ ಬಗೆಯುತ್ತಾರೆಂದು ಹೈಕಮಾಂಡ್ ಮಟ್ಟಲ್ಲಿ ದೇಶಪಾಂಡೆ ಬಿಂಬಿಸುತ್ತಿದ್ದಾರೆ! ಘೋಟನೇಕರ್‌ರನ್ನು ಖಳನಾಯಕನಾಗಿ ಬಿಂಬಿಸಲು, ಅವರು ಗ್ರಾಪಂ ಇಲೆಕ್ಷನ್ ಸಂದರ್ಭದಲ್ಲಿ ಹೆಬ್ಬಾರರ ಯಲ್ಲಾಪುರ-ಮುಂಡಗೋಡದ ಕಾಂಗ್ರೆಸ್ ಉಸ್ತುವಾರಿಯಿಂದ ನುಣುಚಿಕೊಂಡಿದ್ದು, ದೇಶಪಾಂಡೆಯವರಿಗೆ ನೆರವಾಗಿದೆ.

ಎಸ್.ಎಲ್ ಘೋಟನೇಕರ್

ಘೋಟನೇಕರ್ ಮತ್ತು ಕಾರವಾರದ ಕಾಂಗ್ರೆಸ್ ಮಾಜಿ ಶಾಸಕ ಸತೀಶ್ ಸೈಲ್ ಬಿಜೆಪಿ ಸೇರಲು ಸರ್ಕಸ್ ಮಾಡುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಸದ್ಯಕ್ಕೆ ಜೆಡಿಎಸ್‌ನಲ್ಲಿರುವ ಕಾರಾವಾರದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಇಲ್ಲಿರುವುದು ಸುಮ್ಮನೆ; ಎಲ್ಲಿರುವುದೋ ನನ್ನ ಮನೆ ಎಂದು ಹಾಡುತ್ತಿದ್ದಾರೆ. ಪಾಪ! ಕಳೆದ ಲೋಕಸಭಾ ಇಲೆಕ್ಷನ್‌ನಲ್ಲಿ ಜೆಡಿಎಸ್ ಕಾಂಗ್ರೆಸ್ ಜಂಟೀ ಅಭ್ಯರ್ಥಿಯಾಗಿದ್ದ ಅಸ್ನೋಟಿಕರ್ ಹಿಂದುತ್ವದ ಬೂಟಾಟಿಕೆ ಮತ್ತು ಸಂಸದ ಅನಂತ ಹೆಗಡೆಯ ಸೋಗಲಾಡಿತನ ಬಯಲುಗೊಳಿಸಿದ್ದರು. ಆದರೂ ಬಿಜೆಪಿಗೆ ನುಸುಳಲು ಮಂತ್ರಿ ಈಶ್ವರಪ್ಪರನ್ನು ಹಿಡಿದು ವಿಫಲ ತಿಪ್ಪರಲಾಗ ಹಾಕಿದ್ದಾರೆ. ಅಸ್ನೋಟಿಕರ್‌ಗೆ ಬಿಜೆಪಿ ಸೇರಲು ಅನಂತ್‌ಹೆಗಡೆ ಮತ್ತು ಕಾಂಗ್ರೆಸ್ ಹೊಕ್ಕಲು ದೇಶಪಾಂಡೆ ಅಡ್ಡಗಾಲು ಹಾಕಿ ಕುಂತಿದ್ದಾರೆ. ಒಂದು ಸುದ್ದಿಯ ಪ್ರಕಾರ ದೇಶಪಾಂಡೆಗೆ ಅಸ್ನೋಟಿಕರ್ ಮೇಲಿನ ಸಿಟ್ಟು ಕೊಂಚ ಕಡಿಮೆ ಆಗಿದೆಯಂತೆ. ಹೀಗಾಗಿ ಅಸ್ನೋಟಿಕರ್ ಒಂದು ಕಡೆಯಿಂದ ಪ್ರಶಾಂತ ದೇಶಪಾಂಡೆ ಮತ್ತೊಂದು ಕಡೆಯಿಂದ ಮಧುಬಂಗಾರಪ್ಪರ ಮೂಲಕ ಕಾಂಗ್ರೆಸ್‌ಗೆ ಎಂಟ್ರಿ ಹೊಡಲು ತಿಣುಕಾಡುತ್ತಿದ್ದಾರೆ.

ಬಳ್ಳಾರಿ ರೆಡ್ಡಿ ರಾಮುಲುಗಳ ಸಂಗಡ ನಿಕಟ ನಂಟಿರುವ ಸತೀಶ್ ಸೈಲ್ ಬಿಜೆಪಿಗೆ ಹೋಗಲು ಬಹಳ ದಿನಗಳಿಂದ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಸಂಘಪರಿವಾರದ ಸೂತ್ರಧಾರರಿಗೆ ಹಾಲಿ ಶಾಸಕಿ ರೂಪಾಲಿನಾಯ್ಕ್ ಬೇಡವಾಗುತ್ತಿದ್ದಾರೆ. ಹೀಗಾಗಿ ಸೈಲ್ ಬಿಜೆಪಿಗೆ ಹೋದರೆ ಆನಂದ ಅಸ್ನೋಟಿಕರ್‌ಗೆ ಕಾಂಗ್ರೆಸ್ ನೆಗೆತ ಸಲೀಸಾಗುತ್ತದೆ! ಕಾಂಗ್ರೆಸ್ ಸೇರಲು ಸನ್ನದ್ಧವಾಗಿರುವ ಜೆಡಿಎಸ್‌ನ ಕಾರ್ಯಾಧ್ಯಕ್ಷ ಮಧುಬಂಗಾರಪ್ಪ ತನ್ನೊಂದಿಗೆ ಈ ಅಸ್ನೋಟಿಕರ್ ಮತ್ತು ಸಿದ್ದಾಪುರದ ಶಶಿಭೂಷಣ ಹೆಗಡೆಯನ್ನು ಕರೆದೊಯ್ದು ತಾಕತ್ತು ತೋರಿಸಲು ಯೋಜನೆ ಹಾಕಿಕೊಂಡಿದ್ದಾರೆ. ಸ್ವಜಾತಿ ದೀವರು ಹೆಚ್ಚಿರುವ ಉತ್ತರಕನ್ನಡದಲ್ಲಿ, ಅವರ ತಂದೆ ದಿವಂಗತ ಬಂಗಾರಪ್ಪನವರ ದೊಡ್ಡ ಅಭಿಮಾನಿ ಬಳಗವಿದೆ. ಹಾಗಾಗಿ ಉತ್ತರಕನ್ನಡದಲ್ಲಿ ಮಧು ವರ್ಚಸ್ಸು ಒಂದು ಲೇವಲ್‌ಗೆ ಬೆಳೆದಿದೆ.

ಶಶಿಭೂಷಣ ಹೆಗಡೆ

ಮಧು ಜತೆಯಲ್ಲಿ ಕಾರವಾರದಲ್ಲಿ ಪ್ರಬಲನಾಗಿರುವ ಆನಂದ ಅಸ್ನೋಟಿಕರ್ ಮತ್ತು ಶಿರಸಿಯ ಪ್ರಭಾವಿ ಯುವ ನಾಯಕ ಶಶಿಭೂಷಣ ಹೆಗಡೆ ಜೆಡಿಎಸ್‌ಗೆ ಬೈಹೇಳಿ ಕಾಂಗ್ರೆಸ್ ಪಾಲಾಗುತ್ತಾರೆಂಬ ಸುದ್ದಿ ಜಿಲ್ಲೆಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಶಶಿಭೂಷಣ ಹೆಗಡೆ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ದಾಯಾದಿ ಮೊಮ್ಮಗ. ಈ ಕಾಣಕ್ಕೆ ಜಿಲ್ಲೆಯ ಬಹುಸಂಖ್ಯಾತ ಹವ್ಯಕ ಬ್ರಾಹ್ಮಣರ ಒಂದು ವರ್ಗ ಶಶಿ ಹಿಂದಿದೆ. ಕ್ರೀಯಾಶೀಲತೆ, ವಿನಯವಂತಿಕೆ ಮತ್ತು ಜಿಲ್ಲೆಯ ಬೇಕು ಬೇಡಗಳ ತಿಳುವಳಿಕೆಯಿರುವ ಶಶಿ ತೀರಾ ಸಣ್ಣ ಅಂತರದಲ್ಲಿ ನಾಲ್ಕು ಬಾರಿ ಸೋತಿರುವುದರಿಂದ ಸಿಂಪಥಿಯೂ ಪಡೆದಿದ್ದಾರೆ. ಅವರು ಎರಡು ಬಾರಿ ಕುಮಟಾದಲ್ಲಿ ಬಿಜೆಪಿಯಿಂದ ಎರಡು ಬಾರಿ ಜೆಡಿಎಸ್‌ನಿಂದ ಶಿರಸಿಯಲ್ಲಿ ಸೋತಿದ್ದಾರೆ. ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಬಂ ಮತ್ತು ಹೆಗಡೆಜೀ ನಾಮ ಮಹಿಮೆ ಇವತ್ತಿಗೂ ಇರುವುದರಿಂದ ಶಶಿ ಕಾಂಗ್ರೆಸ್‌ಗೆ ಮಧು ತಂಡದೊಂದಿಗೆ ಬಂದರೆ ಶಾಸಕನಾಗುವ ಛಾನ್ಸ್ ಜಾಸ್ತಿಯೆಂಬುದು ರಾಜಕೀಯ ಪಂಡಿತರ ತರ್ಕ!!

ವಿಶ್ವೇಶ್ವರ ಹೆಗಡೆ ಕಾಗೇರಿ

ದುರಂತ ನಾಯಕ ಎಂದೇ ಜಿಲ್ಲೆಯಲ್ಲಿ ಚಿರಪರಿಚಿತನಾಗಿರುವವರು ಶಶಿ ಹೆಗಡೆ. 2004ರಲ್ಲಿ ಬಿಜೆಪಿ ಪ್ರಭಾವಿ ಮುಖಂಡರಾಗಿದ್ದ ಮಾಜಿ ಶಾಸಕ ಡಾ ಎಂ.ಪಿ ಕರ್ಕಿಯನ್ನು ಮೂಲೆಗೆ ತಳ್ಳುವ ಉದ್ದೇಶದಿಂದ, ಸಂಘಪರಿವಾರದಲ್ಲಿ ಬೇರು ಬಿಟ್ಟಿದ್ದ ಇಂದಿನ ಸ್ಪೀಕರ್ ಕಾಗೇರಿ ನಾಜೂಕಾಗಿ, ಶಶಿ ಕುಮಟಾದಲ್ಲಿ ಬಿಜೆಪಿ ಕ್ಯಾಂಡಿಡೇಟಾಗುವಂತೆ ನೋಡಿಕೊಂಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಮಂತ್ರಿಗಿರಿ ಡಾ. ಕರ್ಕಿ ಪಾಲಾಗುತ್ತದೆಂಬ ದೂ(ದು)ರಾಲೋಚನೆಯಿಂದ ಕಾಗೇರಿ ಅವರಿಗೆ ಟಿಕೆಟ್ ಸಿಗದಂತೆ ಮಾಡಿದ್ದರು. ಆ ನಂತರ ಸ್ವಜಾತಿ ಹವ್ಯಕ ವಲಯದಲ್ಲಿ ಶಶಿ ತನಗೆ ಪ್ರತಿಸ್ಪರ್ಧಿಯಾಗುತ್ತಾರೆಂದು ಹೆದರಿ ಆತ ಬಿಜೆಪಿಯಿಂದ ಹೊರಹೋಗುವಂಥ ಸಂದಿಗ್ಧ ಸೃಷ್ಟಿಸಿದ್ದೂ ಇದೇ ಕಾಗೇರಿ! ಇದರಿಂದ ಕೆರಳಿದ ಶಶಿ ತವರು ಕ್ಷೇತ್ರ ಶಿರಸಿಗೇ ಬಂದು ಕಾಗೇರಿ ವಿರುದ್ಧವೇ ಸ್ಪರ್ಧಿಸಿದ್ದರು. ಅದೆಂಥ ರೋಚಕ ಜಿದ್ದಾಜಿದ್ದಿಯಾಗಿತ್ತೆಂದರೆ ಕಾಗೇರಿ ಬರೀ ಎರಡೇ ಸಾವಿರ ಮತದಂತರದಿಂದ ಗೆದ್ದೂ ಸೋತಂತಾಗಿತ್ತು! ಎರಡನೇ ಬಾರಿ ಪರೇಶ್ ಮೇಸ್ತನ ಸಾವಿನ ಧರ್ಮೋನ್ಮಾದ ಅಲೆಯಲ್ಲೂ ಶಶಿ ಶಿರಸಿಯಲ್ಲಿ ಕಾಗೇರಿಗೆ ಬೆವರಿಳಿಸಿದ್ದರು.

ಇಂಥ ಶಶಿ ಕಾಂಗ್ರೆಸ್ ಸೇರಿದರೆ ಸ್ವಜಾತಿ ಹವ್ಯಕ ಮತ ಮತ್ತು ಮಧುಬಂಗಾರಪ್ಪರಿಂದ ದೀವರ ಓಟು ಬಂದು ಕಾಗೇರಿ ಮಾಜಿಯಾಗುತ್ತಾರೆಂಬುದು ಸರಳ ಗಣಿತದ ಲೆಕ್ಕಾಚಾರ. ಆರು ಬಾರಿ ಶಾಸಕನಾದರೂ ಕಾಗೇರಿಯಿಂದ ಅಭಿವೃದ್ಧಿಯೇನೂ ಆಗಿಲ್ಲ. ಒಂದಂತೂ ಖರೆ; ಶಶಿ ಕಾಂಗ್ರೆಸ್ ಪ್ರವೇಶವಾದರೆ ಕ್ಷೇತ್ರದಲ್ಲಿ ಹಿಡಿತ ಕಳಕೊಂಡಿರುವ ಕಾಗೇರಿಗೆ ಗಂಡಾಂತರ ಖಂಡಿತ!!


ಇದನ್ನೂ ಓದಿ: ರಾಜಕೀಯದಲ್ಲೇ ಮುಳುಗಿ ಹೋದವರಿಗೆ ರಾಜ್ಯದ ಹಿತ ನೆನಪಿರುತ್ತದೆಯೇ?- ಕುಮಾರಸ್ವಾಮಿ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...