ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನನ್ನು ವಿರೋಧಿಸಿ ದೇಶದಾದ್ಯಂತ ರೈತರು ಹೋರಾಟ ನಡೆಸುತ್ತಿದ್ದಾರೆ. ದೆಹಲಿ ಕೇಂದ್ರಿತವಾಗಿ ನಡೆಯುತ್ತಿದ್ದ ರೈತ ಹೋರಾಟವನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ಉದ್ದೇಶದಿಂದ ಹಳ್ಳಿ ಹಳ್ಳಿಗಳಲ್ಲೂ ರೈತ ಮಹಾಪಂಚಾಯತ್ ನಡೆಸಲು ರೈತ ಮುಖಂಡರು ಉದ್ದೇಶಿಸಿದ್ದರು. ಅದರಂತೆ ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳದಲ್ಲಿ ಹಲವಾರು ರೈತ ಮಹಾಚಂಚಾಯತ್ಗಳು ನಡೆಯುತ್ತಿದ್ದು, ಭಾರಿ ಸಂಖ್ಯೆಯ ಜನಬೆಂಬಲ ಪಡೆಯುತ್ತಿದೆ. ಹೀಗಾಗಿ, ದಕ್ಷಿಣ ಭಾರತದ ಮೊದಲ ರೈತ ಮಹಾಪಂಚಾಯತ್ ರಾಜ್ಯದ ಶಿವಮೊಗ್ಗದಲ್ಲಿ ಶನಿವಾರ(ನಾಳೆ) ನಡೆಯಲಿದ್ದು, ಅದರ ಸಿದ್ದತೆ ಭರದಿಂದ ಸಾಗಿದೆ.
ಈ ಹಿನ್ನಲೆಯಲ್ಲಿ ಶಿವಮೊಗ್ಗದ ರೈತ ಮಹಾಪಂಚಾತ್ನ ಸಂಚಾಲಕರಾದ ಎಂ. ಶ್ರೀಕಾಂತ್ ಮಾತನಾಡಿದ್ದು, “ನಾಳೆ ನಡೆಯಲಿರುವ ರೈತ ಮಹಾಪಂಚಾಯತ್ ದೇಶಕ್ಕೆ ಮಾದರಿಯಾದ ಹೋರಾಟವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರ ವಿಶ್ವಾಸದ ಮಾತನ್ನು ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ: ರೈತ ಹೋರಾಟ ಸರ್ಕಾರದ ವಿರುದ್ಧವೂ ಅಲ್ಲ ಕಾಂಗ್ರೆಸ್ನ ಪರವೂ ಅಲ್ಲ: ಚುಕ್ಕಿ ನಂಜುಂಡಸ್ವಾಮಿ
ಈ ಬಗ್ಗೆ ಹಲವಾರು ರಾಜಕೀಯ ಪಕ್ಷಗಳು ಬೆಂಬಲ ನೀಡಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷಗಳ ನಾಯಕ ಯೋಗೇಶ್ ಮಾತನಾಡಿ, ‘ರೈತ ಆಂದೊಲನವು ಯಶಸ್ವಿಯಾಗಲಿದ್ದು, ಇಲ್ಲಿನ ಹಿರಿಯ ರೈತರು ರಾಕೇಶ್ ಟಿಕಾಯತ್ ಅವರ ತಂದೆ ಶಿವಮೊಗ್ಗಕ್ಕೆ ಬಂದು ಹೋರಾಟ ಮಾಡಿರುವುದನ್ನು ನೆನಪಿದ್ದಾರೆ. ರಾಕೇಶ್ ಟಿಕಾಯತ್ ಶಿವಮೊಗ್ಗಕ್ಕೆ ಬಂದು ನಮ್ಮ ಪರವಾಗಿ ಹೋರಾಟ ಮಾಡುವುದಾದರೆ ನಮ್ಮ ಒಂದು ದಿನವನ್ನು ಕೊಡುವುದು ನಮ್ಮ ಕರ್ತವ್ಯ ಎಂದು ರೈತರು ಹೇಳುತ್ತಿದ್ದಾರೆ’ ಎಂದು ಅವರು ಹೋರಾಟಕ್ಕೆ ಜನ ನೀಡುತ್ತಿರುವ ಸ್ಪಂದನೆಯ ಕುರಿತು ಮಾತನಾಡಿದ್ದಾರೆ. ಈ ವಿಡಿಯೋವನ್ನು ಕೆಳಗೆ ನೋಡ ವೀಕ್ಷಿಸಬಹುದಾಗಿದೆ.
ನಾಳೆ ಶಿವಮೊಗ್ಗದಲ್ಲಿ ನಡೆಯಲಿರುವ ಮಹಾ ಪಂಚಾಯತ್ನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಡಾ. ದರ್ಶನ್ ಪಾಲ್, ಯೋಗೇಂದ್ರ ಯಾದವ್, ರಾಕೇಶ್ ಟಿಕಾಯತ್ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ರೈತ ಮುಖಂಡರು ಭಾಗವಹಿಸಲಿದ್ದಾರೆ.
ಶಿವಮೊಗ್ಗದಲ್ಲಿ ದಕ್ಷಿಣ ಭಾರತದ ಮೊದಲ ರೈತ ಮಹಾಪಂಚಾಯತ್ ನಡೆಯಲಿದ್ದು, ಇದರ ನಂತರ ಮಾರ್ಚ್ 21 ರಂದು ಹಾವೇರಿ ಮತ್ತು ಮಾರ್ಚ್ 22 ರಂದು ಬೆಳಗಾವಿಯಲ್ಲಿ ರೈತ ಮಹಾಪಂಚಾಯತ್ ನಡೆಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ‘ಆಟ ಶುರು – ಬಂಗಾಳದಲ್ಲಿ ಬಿಜೆಪಿ ತೊಲಗಿಸಿ’: ರಾಕೇಶ್ ಟಿಕಾಯತ್ ಕರೆ