Homeಮುಖಪುಟಹಿಂಗಿದ್ದ ನಮ್ಮ ರಾಮಣ್ಣ-9; "ಉರುಬಾಡು ಮಾಡಿಕಂಡು ತಿಂತಿವಿಕಲ, ಬೇಕಿದ್ರೆ ಬಾ"

ಹಿಂಗಿದ್ದ ನಮ್ಮ ರಾಮಣ್ಣ-9; “ಉರುಬಾಡು ಮಾಡಿಕಂಡು ತಿಂತಿವಿಕಲ, ಬೇಕಿದ್ರೆ ಬಾ”

- Advertisement -
- Advertisement -

ಹರದನಳ್ಳಿಲಿ ರಾಮಣ್ಣ ಆಸ್ಪತ್ರೆ ನಿರ್ಮಾಣಕ್ಕೆ ಕೈ ಹಾಕಿದ. ಸರಕಾರದ ಮಟ್ಟದಲ್ಲಿ ಓಡಾಡಿದ್ರಿಂದ ಅಲ್ಲಿಗೆ ಆಸ್ಪತ್ರೆ ಕಟ್ಟಡ ಬಂತು. ಪ್ರೈಮರಿ ಹೆಲ್ತ ಪಾಯಿಂಟು ಯಂಗಿರಬೇಕೋ ಅಂಗೆ ಮಾಡಿದ. ಅವುನನ್ನ ನೋಡಕ್ಕೆ ಅಂತ ಬಂದ ಸಾಹಿತಿಗಳು ಹರದನಳ್ಳಿಗೂ ಹೋಗಿ ಬರೋರು. ಕಾಳೇಗೌಡ ನಾಗವಾರ ಸದಾಶಿವ ಎಣ್ಣೆಹೊಳೆ ಕ್ಯಾತನಳ್ಳಿ ರಾಮಣ್ಣ ಇವುರ್‍ಯೆಲ್ಲ ಬತ್ತಿದ್ರು. ನಾವು ಯಾವುದಾರ ಸಾಹಿತಿ ಮನಿಗೋದ್ರೆ ಏನೋ ಎಂತೊ ಅನ್ನೊ ಅಂಜಿಕೆ ಇರತದೆ. ಅದು ಒಟ್ಟು ನಮ್ಮ ವ್ಯಕ್ತಿತ್ವವನ್ನೇ ನಿಯಂತ್ರಸೋಂತ ಅಳುಕು. ಆದ್ರೆ ನಮ್ಮ ರಾಮಣ್ಣನ ಮನಿಗೆ ಬರೋರಿಗೆ ಇಂತ ಯಾವ ಅಳಕೂ ಇರತಿರಲಿಲ್ಲ. ಅವುರ ಸ್ವಂತ ಮನಿಗಿಂತ ಇಲ್ಲಿ ನಿರಾಳವಾಗಿರೋರು. ಅದ್ಕೆ ಈ ಮಾರ್ಗವಾಗಿ ಹೋಗಿ ಬರೋ ಸಾಹಿತಿಗಳ್ಯಲ್ಲ ಇಲ್ಲಿ ಇಳುದು ರಾಮಣ್ಣನ ಮಾತಾಡ್ಸಿ ಹೋಗರು. ರಾಮಣ್ಣನ ಹೆಂಡತಿ ರಾಜಮ್ಮ ಭಾಳ ದೊಡ್ಡತನದ ಹೆಣ್ಣು ಮಗಳು. ನಾನೊಬ್ಬ ಡಾಕ್ಟರೆಡ್ತಿ ಅಂತ ಎಂದೂ ತೋರಿಸಿಗಳ್‌ಲಿಲ್ಲ. ರಾಮಣ್ಣನ್ನ ಹುಡಿಕಂಡು ಬಂದೋರಿಗೆ ಊಟ ಮಾಡಿಸಿ ಕಳಸೋರು. ಅವುರು ಮಾಡತಿದ್ದ ಬಾಡಿನ ಸಾರು ತುಂಬಾ ಫೇಮಸ್ಸು. ವಳ್ಳೆ ಮಸಾಲೆ ಹಾಕಿ ಮಾಡೋರು. ಇಡೀ ಬೀದಿನೆ ಘಮಗುಡೋದು. ಒಂದು ಸತಿ ಉಂಡೋರು ಮತ್ತೆ ಬರೋರು. ಈ ಬಾಡ್ನೆಸರಿಗೆ ಯಂಥಾ ಸಗತಿ ಅಂದ್ರೆ ಮುನಿಸಿಗಂಡ ಅಕ್ಕಪಕ್ಕದ ಮನಿಯೋರು ಅದ್ಯಂಗೋ ಮಾತಾಡಿಸಿಗಂಡು ಬತ್ತರೆ. ಮಾತು ಬುಟ್ಟೊರು ಕೂಡ ಮನಿಗೆ ಬಂದ ನಂಟ್ರು ಮಾತಾಡಸೊ ನ್ಯಪದಲ್ಲಿ ಬಂದೋಯ್ತರೆ. ಅದ್ಕೆ ನೋಡು ನಮ್ಮ ಕಡೆ ನ್ಯಡಿಯೋ ಮಾರಾಮಾರಿ ಜಗಳ ಬಾಡಿನೂಟದಲ್ಲಿ ರಾಜಿಯಾಯ್ತವೆ. ಅಂಗಾಗಿ ರಾಜಮ್ಮನೋರು ಮಾಡೋ ಬಾಡಿನ ಸಾರಿನ ವಾಸನೆ ಕುಡದೋರು ತಿರಗ ಬಂದೋಗರು.

ಅವುನು ತಾನೆ ಏನು ಅಂತೀ, ಸಾಹಿತಿ ಗೆಳೆಯರು ಕಂಡೇಟಿಗೆ ನಿಧಿ ಸಿಕ್ಕಿದಂಗಾಡನು. ಸಾಹಿತಿಗಳ ಕಂಡೇಟಿಗೆ ಮಟನ್ ಸ್ಟಾಲ್ ಹೊಳಿಯದು. ಅವುನ ಮನೆಲಿ ಮರಿಗೌಡ ಅಂತ ಇದ್ದ. ಅವುನ್ನ ರವಿಕಾಂತ ಮಡಿಯ ಮಡಿಯ ಅನ್ನೊನು. ಅವುನಿನ್ನ ಸಣ್ಣುಡಗ ಆಗ. ಆದ್ರಿಂದ ಮರಿಗೌಡನಿಗೆ ಅಂಟಿಗಂಡಿರನು. ಮನಿಗೆ ಬಂದ ಗೆಳೆಯರು ರಾಮಣ್ಣನ ಅಧ್ಯಕ್ಷತೆಲಿ ಸಾಲಿಗೆ ಊಟಕ್ಕೆ ಕುತಗಳರು. ಪ್ರತಿಯೊಬ್ಬರಿಗೂ ಸಪರೇಟಾಗಿ ಚಟ್ನೆ ತುಂಬ ಬಾಡತಂದು ದಬ್ಬಾಕಿಬುಟ್ಟೋಗನು ಮರಿಗೌಡ. ಮುದ್ದೆನೂ ಅಂಗೆಯಾ ಒಂದೊಂದೇ ಮುದ್ದೆ ತಂದು ಇಕ್ಕೊರು. ಬಾಡಿನೆಸರು ಬುಟ್ಟೇಟಿಗೆ ರಾಮಣ್ಣ ಖಂಡದ ಪೀಸ ತಗಂಡು ಹುರಿಗಾಳೆಸಗಂಡಂಗೆ ಬಾಯಿಗೆಸಗಳನು. ಮತ್ತೆ ಸಾಹಿತ್ಯನೂ ಶುರು ಮಾಡಿಕಳನು. ಇಂತ ಪಾರ್ಟಿ ನಿರಂತರವಾಗಿ ನ್ಯಡಿಯವು. ನಡುಮನೆಲಿ ಕನ್ನಡ ಸಾಹಿತ್ಯದ ಚರ್ಚೆಗಳು ನ್ಯಡದ್ರೆ ಕ್ವಾಣೆ ವಳಗಡೆ ಬಾಡು ಬೆಯ್ಯದು. ಮಾತಾಡಿ ಸಾಕಾದ ಸಾಹಿತಿಗಳು ಚಟ್ನೆತುಂಬ ಬಾಡು ಬಂದಮ್ಯಾಲೆ ತ್ಯಪ್ಪಗಾಗೋರು. ಅಂತೂ ಮೈಸೂರಿನ ದಿನಗಳು ರಾಮಣ್ಣ ಹರದನಳ್ಳಿಗೆ ಬಂದ ಮ್ಯಾಲೆ ನಾಗಮಂಗಲದಲ್ಲಿ ಶುರುವಾದೊ. ಅದೊಂದು ಸುಭಿಕ್ಷದ ಕಾಲ.

ರಾಮಣ್ಣ ದಿನಾ ಹರದನಳ್ಳಿಗೋಗಿ ಬರೋನು. ನಮ್ಮಣ್ಣ ಎಮ್ಮೆಲ್ಲೆ ಐ.ಬಿ ಮುಂದಗಡೆ ಕುತಗಳರು. ರಾಮಣ್ಣನ ಮಾತು ಅಂದ್ರೆ ಅವುರಿಗೆ ತುಂಬಾ ಇಷ್ಟ. ಪರಸ್ಪರ ಗೌರವ ಇದ್ದೊರು. ರಾಮಣ್ಣನ ಮಾತು ಅಂದ್ರೆ ಅದರಲ್ಲೇನಾರ ಹಾಸ್ಯಮಯವಾದ್ದು ಇದ್ದೇ ಇರತದೆ ಅಂತ ತಿಳಕಂಡಿದ್ರು. ಅಂಗಾಗಿ ನಾಗಮಂಗಲದಲ್ಲಿದ್ದಾಗ ರಾಮಣ್ಣ ಬರದ್ನೆ ಕಾಯೋರು. ಒಂದಿನ ರಾಮಣ್ಣ ಬಂದು ಒಂದು ಪ್ರಸಂಗ ಹೇಳಿದ. ವಬ್ಬ ವಜಕಟ್ಟಾದ ಮನ್ಸ ಹೆಡತಿ ಕರಕಂಡು ಬಂದು “ಸ್ವಾಮಿ ಇವುಳು ರಾತ್ರಿಯಲ್ಲ ನಿದ್ದೆ ಕೊಡ್ಳಿಲ್ಲ” ಅಂದ. ರಾಮಣ್ಣ ಏನೇನೊ ಯೋಚನೆ ಮಾಡಿ ’ಯಾಕೆ ಏನು ಮಾಡಿದ್ಲಪ್ಪಾ’ ಅಂದವ್ನೆ. “ಅಯ್ಯೋ ಅವುಳ ಗೋಳ ನೋಡಕ್ಕಾಗಲಿಲ್ಲ ಸ್ವಾಮಿ. ಅವುಳ ವಲ ಕುಯ್ಯಕ್ಕೆ ಕರಕಂಡೋಗಿದ್ದೇ ತೆಪ್ಪಾಯ್ತು ನೋಡಿ” ಅಂತ ಮುಖ್ಯ ವಿಷಯದ ಸುತ್ತ ಮಾತಾಡತಿದ್ನಂತೆ. ’ಅದೇನಾಗದೆ ಹೇಳಿಗೌಡ್ರೆ’ ಅಂದಾಗ “ವಲ ಕುಯ್ತ ಮುಂಬರದಾಗ ಕೂಳೆ ತರಕತ್ತಂತೆ. ಅಷ್ಟೆಯಾ ಅದ್ಕೆ ರಾತ್ರ್ಯಲ್ಲ ನರಳಿದ್ಲು. ಅದೇನು ವಸಿ ನೋಡಿ” ಅಂದನಂತೆ. ಸರಿ ರಾಮಣ್ಣ ಆಯಮ್ಮನ ಮರ್ಮಸ್ಥಾನ ಚೆಕಪ್ ಮಾಡಬೇಕಾದ್ರಿಂದ, ಆತನೂ ಇರದು ವಳ್ಳೆದು ಅಂತ “ನೀನು ಬಾರಪ್ಪ ವಳಿಕೆ” ಅಂದನಂತೆ. ಅವುನು ತಲೆ ವಗದು “ಅದೇನು ನೀವೆ ಮಾಡಿ ಸ್ವಾಮಿ, ನಾನು ನೋಡದಿಲ ಅದ” ಅಂದನಂತೆ. ಎಷ್ಟು ಕರದ್ರೂ ಬರಲಿಲವಂತೆ. ಇಂತವೇಳಿ ನಮ್ಮಣ್ಣನ ನಗಸೋನು.

ಇನ್ನೊಂದು ಸಾರ್ತಿ ಸರಕಾರದ ಕಾರ್ಯಕ್ರಮದಲ್ಲಿ ಸಿಕ್ಕಿ ಸಿಕ್ಕಿದೋರನ್ಯಲ್ಲ ಹಿಡಿದು ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ ಮಾಡಿದ್ರಂತೆ. ಒಬ್ಬ ಬಂದು “ಅಲ್ಲಾ ಸ್ವಾಮಿ ಹಿಂಗೂ ಮಾಡ್ಯರೆ ಇದು ನ್ಯಾಯವೆ” ಅಂದನಂತೆ.

“ಯಾಕಯ್ಯ ಏನು ಮಾಡಿದ್ರು ನಿಂಗೆ?”

“ನನ್ನನ್ನೂ ಯಳಕಂಡೋಗಿ ನರ ಕಟ್ ಮಾಡಿದ್ರು ಸ್ವಾಮಿ.”

“ಅದು ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ನು ಕಣಯ್ಯ ವಳ್ಳೆದಾಯ್ತದೆ ಬುಡು. ಮಕ್ಕಳು ಮರಿಯಾಯ್ತವೆ ಅಂತ ಯೇಚ್ನೆ ಮಾಡಂಗೇಯಿಲ್ಲ.”

“ಸರಿ ಸ್ವಾಮಿ ಗದ್ದಿಗೆ ನೀರು ಬುಡಬೇಕಾದ್ರೆ ಕ್ಯರೆಲಿ ನೀರಿರಬೇಕಲವೆ? ಬತ್ತ್ಯೋಗಿರೊ ಕ್ಯರೆ ತೂಬಿನ ಗುಂಡಿನೆ ಮುಚ್ಚಿದರಲ್ಲ. ಹಿಂಗೂ ಮಾಡ್ಯರೆ” ಅಂತ ಗೋಳಾಡಿದನಂತೆ.

“ಆಗ ರಾಮಣ್ಣ ಅದವುರಿಗೆ ಗೊತ್ತಿಲ್ಲ ಬುಡಿಗೌಡ್ರೇ. ನಿಮ್ಮ ಕ್ಯರೆ ಬತ್ತಿ ಮೀನು ಸತ್ತಿರದು ಅವುರಿಗ್ಯಂಗೆ ಗೊತ್ತಾಗಬೇಕು. ನೋಡಕ್ಕೆ ಜೋರಾಗಿದ್ದಿರಲ್ಲಾ ಅದ್ಕೆ ಹಿಡಕಂಡೋಗಿ ಆಪರೇಷನ್ ಮಾಡ್ಯವುರೆ. ತ್ವಂದ್ರೆ ಏನೂಯಿಲ್ಲ. ನೀವು ಮದ್ಲಿಗಿಂತ ಜೋರಾಗಿರತಿರಿ” ಅಂತ ಸಮಾಧಾನ ಮಾಡಿ ಕಳಿಸಿದನಂತೆ. ಇಂತ ಕತೆ ಕೇಳಕ್ಕೆ ರಾಮಣ್ಣನ್ನ ಕಾಯರು. ಅವುನು ಬಂದು ಒಂದಲ್ಲಾ ಒಂದು ಹೇಳನು. ಅದರಲ್ಲಿ ಅವುನ ಇಮೇಜಿನೇಷನ್ ಕೂಡ ಇರವು. ಅವೇನು ನಮ್ಮಣ್ಣನಿಗೆ ಗೊತ್ತಾಯ್ತಾಯಿರಲಿಲ್ಲ. ನಮ್ಮಣ್ಣನೂ ರಾಮಣ್ಣನಿಗೆ ತನ್ನ ಅನುಭವ ಹೇಳೋನು.

ನಮ್ಮಣ್ಣ ಆಗ ಹೊಸ ಎಮ್ಮೆಲ್ಲೆ. ನಮ್ಮದು ದೊಡ್ಡ ತಾಲ್ಲೂಕು. ಜನಗಳ ಮಕ ಪರಿಚಯ ಇಟಗಳದು ಬಾಳಕಷ್ಟ. ಅಂತ ಟೇಮಲ್ಲಿ ಯಾರೋ ಬಂದು ಅವುರೆದ್ರಿಗೆ ನಿಂತವುರೆ. ಅವುರ್‍ಯಾವೂರೊರು ಅನ್ನದು ಗೆಪ್ಪಿಗೆ ಬತ್ತಾಯಿಲ್ಲ. ಅದ ತಿಳಕಳಕ್ಕೆ ಮಳೆಯಂಗೆ ನಿಮ್ಮ ಕಡೆ ಅಂತ ಕೇಳಿದರಂತೆ. “ಏ ತಾಳಿನಕ್ಯರಿಗೆ ಊದದೆ. ನಮ್ಮೂರು ಬಿದರಕ್ಯರಿಗೆ ಒಂದನಿ ಮಳಿಲ್ಲ ಅಂದಾಗ ಓಹೊ ಬಂದಿರೋದು ಬಿದಿರಿಕ್ಯರಿಯೋರು ಅಂತ ಗೊತ್ತಾಗದಂತೆ. ಸರಿ ಬಂದಿರೋರು ಸಮಸ್ಯೆ ಏನು ಅಂತ ತಿಳಕಬೇಕಲ್ಲ. ಆಗ ನಿಧಾನವಾಗಿ “ಅದ ಹೇಳಿದ್ದಿನಿ, ಅವುರು ಬರ್ಲಿ ಅಂದವುರೆ” ಅಂತ ಅಂದಾಜಲ್ಲೊಂದು ಮಾತಂದು ಅದ್ನೂ ಅವುನ ಕೈಲೆ ಬಾಯಿ ಬುಡಸೋ ಪ್ಲಾನ ಮಾಡಿದರಂತೆ. ಅಂಗಂದಕೂಡ್ಳೆ “ನಾವು ಬರದೇನು ಸಾ ನೀವು ತಾಸಿಲ್ದಾರಿಗೊಂದು ಮಾತೇಳಿರ್ರಾಯ್ತು, ಯಲ್ಲ ಬಗೆಹರಿತದೆ” ಅಂದನಂತೆ. ಓಹೊ ಇದು ರೆವಿನ್ಯೂ ಇಲಾಖೆ ವಿಷಯ ಅಂತ ತಿಳಕಂಡು ಮುಂದುವರಿದರಂತೆ. ಇದ ಕೇಳಿಕಂಡು ಬಂದ ರಾಮಣ್ಣ “ಯಮ್ಮೆಲ್ಲೆ ಕ್ಯಲಸ ಭಾಳ ಕಷ್ಟ ಕಣ್ಲ. ನಿಮ್ಮಣ್ಣನೂ ಬುದ್ಧಿವಂತ. ಎಷ್ಟೇ ಆಗಲಿ ಲಾಯರಾಗಿದ್ದೊರಲವೆ” ಅಂತ ನಗಾಡಿದ. ಬಾಡ ತಿನ್ನದರಲ್ಲಿ ರಾಮಣ್ಣ ನಮ್ಮಣ್ಣ ಒಂದೇ ತರ ಇದ್ರು. ಸಮಾನ ಅಭಿರುಚಿ ಇತ್ತು.

ರಾಮಣ್ಣ ಇಲ್ಲಿಗೆ ಬಂದ ಮ್ಯಾಲೆ ಲಾಟರಿ ಟಿಕೆಟ್ ತಗಳೋನು. ಅದು ಸಂಬಳ ಬಂದಾಗ. ಅದರ ಉದ್ದೇಶ ಏನಪ್ಪಾ ಅಂದ್ರೆ ಅಕಸ್ಮಾತ್ ಲಾಟರಿ ಹೊಡಿತು ಅನ್ನು ಚೇಬುತುಂಬ ದುಡ್ಡ ಮಡಿಕಂಡು ಬಡರೋಗಿಗಳಿಗೆ ಸಹಾಯ ಮಾಡಬುದಲ್ಲಾ ಅನ್ನೊ ಕನಸು ಅವುನಿಗೆ. ಪಾಪ ಯಾವತ್ತೂ ಲಾಟ್ರಿ ವಡಿಲಿಲ್ಲ. ಒಂದು ಸಂಬಳದಲ್ಲಿ ಒಂದಿಷ್ಟು ಪುಸ್ತಕ ತಗಳನು. ಲಾಟರಿ ಟಿಕೆಟ್ ತಗಳದು, ದುಂದುಗಾರಿಕೆ ಮಾಡದು ಹಿಂಗೆ ಮಾಡತಿದ್ದ. ಮಕ್ಕಳಿನ್ನೂ ಚಿಕ್ಕೋರು. ಅವುರ ಓದಿನ ಕರ್ಚು ಇರಲಿಲ್ಲ. ಅಂಗಾಗಿ ಸಂಬಳದಲ್ಲಿ ಒಂದು ಪೈಸೆನೂ ಉಳಸದಂಗೆ ಜಾಲಿಯಾಗಿದ್ದ.

ಕೊಪ್ಪದ ತಿಮ್ಮಯ್ಯ ಅನ್ನೊ ಪಿಡಿಒ ಇದ್ದ. ಅವುನ ಜ್ವತೆ ಸೇರಿಕಂಡ ರಾಮಣ್ಣ ಕೆ.ಆರ್ ಪೇಟೆತ ಯಿರೊ ತಂಡೇಕೆರೆ ಸಂತಿಗೋಗಿ ಬಾಡತರೋನು. “ವಚ್ಚರಿ ಬೀಜದ ಭಾಗ ಇರಂಗೆ ಕೊಡಯ್ಯ” ಅಂತ ಹೇಳಿ ಅರ್ಧ ಮರಿನೆ ತರೋರು. ಇದ ನೋಡಿದ ನಾನು

“ಅದ್ಯಾಕಷ್ಟೊಂದು ಬಾಡ ತತ್ತಿರಿ” ಅಂದ್ರೇ,

“ಉರುಬಾಡು ಮಾಡಿಕಂಡು ತಿಂತಿವಿಕಲ, ಬೇಕಿದ್ರೆ ಬಾ” ಅನ್ನೊನು.

“ಅದ್ಯಂತ ಉರುಬಾಡು ಮಾರಾಯ” ಅಂದ್ರೆ,

“ಮಾಡ್ತಿವಿ ನೋಡು ಬಾ” ಅಂತಿದ್ದ. ಒಂದು ಬೀಜದ ಭಾಗ ಅಂದ್ರೆ ಏಳೆಂಟು ಕೆಜಿ ಬರದು. ಅದನ್ನ ಉರುದು ಮಡಿಕಂಡು ತಿನ್ನನ ಅಂದ್ರೆ ಒಂದೂವರದಿನಕೆ ಮುಗದೋಗದು. ಸಾಹಿತಿಗಳು ಬಂದ್ರಂತೂ ಅಷ್ಟು ದಿನಕ್ಕೂ ಸಾಲ್ತಿರಲಿಲ್ಲ. ಅವುನ ಮನೆಲಿ ತರಕಾರಿ ಸಾರು ಮಾಡಿದ್ನೆ ನೋಡಲಿಲ್ಲ ನಾನು.

ರಾಮಣ್ಣನ ಕೆಲಸದಲ್ಲಿ ಅವುನ್ನ ಕೇಳೋರೆ ಇರಲಿಲ್ಲ. ಅಧಿಕಾರಿಗಳ ಕೈಲಿ ಹೇಳಿಸಿಗಂಡು ಕ್ಯಲಸ ಮಾಡೊತರ ಇರಲಿಲ್ಲ ಅವುನು. ಕಂಪ್ಲೇಂಟ್ ಬರದಂಗೆ ತನ್ನ ಕೆಲಸ ಮಾಡೋನು. ಅವುನು ಇಲ್ಲಿದ್ದಾಗ ಮೂರನೆ ಜನಪದ ಸಾಹಿತ್ಯ ಸಮ್ಮೇಳನ ನ್ಯಡಿತು. ನಮ್ಮಣ್ಣ ಯಾವುದೇ ಕಾರ್ಯಕ್ರಮ ಮಾಡದ್ರಲ್ಲಿ ಅಥವಾ ಸಂಘಟಸೊದ್ರಲ್ಲಿ ಅಂತ ಶಕ್ತಿ ಇಲ್ದೊರು. ಆದ್ರಿಂದ ಆ ಸಮ್ಮೇಳನ ಜವಾಬ್ದಾರಿ ಹೊರಕ್ಕೆ ಹಿಂದೇಟಾಕುವಾಗ ರಾಮಣ್ಣ “ನ್ಯಾವೆಲ್ಲ ಇದ್ದಿವಿ ಹೆದರಬ್ಯಾಡಿ ಸಾರ್ ಅಂತ ಸಮ್ಮೇಳನ ನ್ಯಡಿಯಂಗೆ ಮಾಡಿದ. ನಮ್ಮ ತಾಲೂಕಿನವರೆ ಆದ ಜೀಶಂಪ, ಹೆಚ್.ಎನ್ ನಾಗೇಗೌಡ್ರು, ಹ.ಕ ರಾಜೇಗೌಡ್ರು ಇಂತ ಘಟಾನುಘಟಿಗಳೇ ಜನಪದ ವಿದ್ವಾಂಸರು. ಅಲ್ದೆ ಮಾದಪ್ಪಗೌಡ್ರು ಸಿಂಗಾರಿಗೌಡ್ರು ಚಿಗರಿಗೌಡರು ಇದ್ರು. ಇವುರ್‍ಯಾಲ್ಲಾರ್ನು ಒಳಗೊಂಡು, ಯಲ್ಲಾರ ಜೊತೆಲೂ ಸಲಗೆಯಿಂದ ಮಾತಾಡ್ತ ಇಡೀ ಸಮ್ಮೇಳನ ಚನ್ನಾಗಿ ನ್ಯಡಿಯಂಗೆ ಮಾಡಿದ. ಅವಾಗ ರಾಮಣ್ಣನ ಇನ್ನೊಂದು ಮುಖ ನೋಡಿದಂಗಯ್ತು. ಅವುನು ಒಳ್ಳೆ ಸಂಘಟಕ ಅಷ್ಟೆ ಅಲ್ಲ ಲೀಡ್ರು ಕೂಡ ಆಗಿದ್ದ. ಆದ್ರೆ ಲೀಡರ್‌ಶಿಪ್ಪ ಒಪ್ಪಿಗಳದೆ ಕಾರ್ಯಕರ್ತನಾಗಿ ಗುರುತಿಸಿಗಳಕ್ಕೆ ಇಷ್ಟಪಡನು. ಮೂರನೆ ಜಾನಪದ ಸಮ್ಮೇಳನ ಒಂದು ದಾಖಲೆಯಾಯ್ತು. ಅದಾದ ಮೇಲೆ ಎಲ್ಲೂ ನ್ಯಡಿಲಿಲ್ಲ ಅನ್ನಸ್ತದೆ. ನಮ್ಮ ತಾಲೂಕಿನಲ್ಲವುನು ಹರದನಳ್ಳಿ ಆಸುಪತ್ರೆ ಕಟ್ಟಿದ. ಜನಪದ ಸಮ್ಮೇಳನದ ರೂವಾರಿಯಾದ.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-8; “ಬೈಬಾರ್ದು ಕಲ; ಅವುಕೇನು ಬೈಸಿಗತ್ತವೆ; ತಿರಗ ಇತ್ತಗೆ ಬರದಂಗೆ ವಂಟೋಯ್ತವೆ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...