Homeಕರ್ನಾಟಕಹಿಂಗಿದ್ದ ನಮ್ಮ ರಾಮಣ್ಣ-8; "ಬೈಬಾರ್ದು ಕಲ; ಅವುಕೇನು ಬೈಸಿಗತ್ತವೆ; ತಿರಗ ಇತ್ತಗೆ ಬರದಂಗೆ ವಂಟೋಯ್ತವೆ"

ಹಿಂಗಿದ್ದ ನಮ್ಮ ರಾಮಣ್ಣ-8; “ಬೈಬಾರ್ದು ಕಲ; ಅವುಕೇನು ಬೈಸಿಗತ್ತವೆ; ತಿರಗ ಇತ್ತಗೆ ಬರದಂಗೆ ವಂಟೋಯ್ತವೆ”

- Advertisement -
- Advertisement -

ಮೈಸೂರಲ್ಲಿ ರಾಮಣ್ಣನ ಜೊತೆ ಇದ್ದ ಅವಧಿ ಗೋಲ್ಡನ್ ಡೇಸು. ಮಂಡ್ಯದ ಹುಡುಗರಾದ ರುದ್ರೇಶ ಅಲಗೂರು, ಬೆನವನಹಳ್ಳಿ ಪುಟ್ಟಸ್ವಾಮಿ ಇವುರ ಜೊತೆಲೆಲ್ಲ ಇರನು. ಇನ್ನ ಅವನ ಸಾಹಿತ್ಯ ಲೋಕದ ಗೆಳೆಯರೇ ಬ್ಯಾರೆ. ಆದಷ್ಟು ಜಾತ್ಯತೀತ ಜನಗಳ ಜೊತೆ ಇರಕ್ಕೆ ಇಷ್ಟ ಪಡೋನು. ಜನಾಂಗದಲ್ಯಾರಾದ್ರು ಉನ್ನತ ಹುದ್ದೆಗೋಗಿ ಅವುರ ಅಭಿನಂದನಾ ಸಭೆ ಏರ್ಪಾಟಾದ್ರೆ, ಅಲ್ಲಿಗೋಯ್ತಿರಲಿಲ್ಲ. ಗಣೇಶನ ಪೂಜೆಗೆ ಬತ್ತಿರಲಿಲ್ಲ. ಹಾಸ್ಟಲ್ ಮುಂದೆ ನಿಂತುಗ್ಯಂಡು ಹೋಗಿ ಬರೋರ ನೋಡನು. ಜನಗಳ ಕಡೆಗೆ ನೋಡ್ತ ಅವುರು ಶ್ರಮಜೀವಿಗಳೊ ಅಥವಾ ಇಲ್ಲಿ ತಿನ್ಕಂಡು ದಿಂಡಗಾಗಿ ತಿರುಗಾಡೋರೋ ಅಂತ ಅಳಿಯೋನು. ಶ್ರಮಜೀವಿ ಹೆಂಗಸರ ಕಂಡ್ರೆ “ನೋಡ್ಳ ಯಂಗವುರೆ. ಶ್ರಮಜೀವಿಗಳ ದೇಹನೆ ಕಂಡ್ಳ ಕಲಾಕೃತಿಯಂಗಾಗದು. ಅದು ನೋಡಿದ್ರೆ ನೀನು ತಿಳಕತಿ, ನೀನು ನೋಡದಿಲ್ಲ ನೋಡೊರ್ನು ಸಯಿಸದಿಲ್ಲ ಕಲ ನೀನು” ಅನ್ನೋನು. ಅವನ ಖಾಸಗಿ ವಿಷಯ ಏನಾರ ಇದ್ರೆ ನನ್ನತ್ರ ಹೇಳನು. ಇನ್ಯಾರತ್ರನೂ ಹೇಳ್ತಿರಲಿಲ್ಲ.

ಡಾಕ್ಟರ್ ಹನುಮಯ್ಯ ಸೀನಿಯರ್ ಸರ್ಜನ್ನು. ಅವುರು ಇವುನಿಗೆ ಎಗ್‌ಸಾಮಿನರ್. ಒಂದಿಷ್ಟು ಜಾತಿವಾದಿಯಾದ್ರು ರಾಮಣ್ಣ ಜಾತಿಯಿಂದ ಹೊರಗೇನೊ ಮಾಡ್ತನೆ ಅನ್ನಂಗೆ “ನೀನೇನೊ ಕತೆಪತೆ ಬರಿತಿಯಂತಲ್ಲೊ. ಬರಿ ಬರಿ ನಾನೇನು ಬ್ಯಾಡ ಅನ್ನದಿಲ್ಲ. ಅಂಗೆ ಸ್ವಲುಪ ಆಸುಪತ್ರಿ ಕಡಿಗೂ ನೋಡು” ಅಂತ ಹೇಳಿದ್ರಂತೆ. ಅದನ್ನ ತಂದು ನನಗೆ ಹೇಳಿದ್ದ. ಅವನ ಕೋರ್ಸು ಮುಗಿತು ಮೇಜರ್ ಸರ್ಜರಿ ಮೆಡಿಸನ್ ಒ.ಬಿ.ಜಿ ಇದನ್ನ ಉಳಿಸಿಗಂಡಿದ್ದ. ಕೋರ್ಸು ಅಟೆಂಡೆನ್ಸ್ ನಾಟ್ ಕಂಪಲ್ಸರಿ; ಆದರೆ ಪೇಷಂಟ್‌ನ ಎನ್‌ಕ್ವಯಿರಿ ಮಾಡ್ತಯಿರೊ ಜಾಗಕ್ಕೆ ಬರಬೇಕು. ವರಷಕ್ಕೆ ಎರಡೆ ಎಗ್ಸಾಂ ತಗಂಡು ಪಾಸು ಮಾಡಿಕಂಡ. ಅಂತೂ ಕಾಲೇಜು ಮತ್ತೆ ಹಾಸ್ಟೆಲಿಂದ ಬಿಡುಗಡೆ ಪಡೆದ. ಆದರೆ ವೈದ್ಯಕೀಯ ಕೋರ್ಸು ಬೇರೆ ಕೋರ್ಸು ತರ ಅಲ್ಲ. ವೃತ್ತಿಗೋದ ಕೂಡಲೆ ಜನಗಳ ಆರೋಗ್ಯದ ಸಮಸ್ಯೆ ಎದುರು ನಿಲ್ಲಬೇಕಾಯ್ತದೆ.

ಅಂತೂ ರಾಮಣ್ಣ ಡಾಕ್ಟರಾದ. ಡಿಗ್ರಿ ಮುಗಿಸಿ ಒಂದೊರ್ಷ ಹೌಸ್ ಸರ್ಜನ್ನಾಗಿ ಕೆಲಸ ಮಾಡಿದ ಮ್ಯಾಲೆ, ಅಧಿಕೃತ ಡಾಕ್ಟರಾಗಿ ಬಂದ. ಆಶ್ಚರ್ಯ ಅಂದ್ರೆ ನಮ್ಮ ತಾಲೂಕಿನ ಹರದನಳ್ಳಿಗೆ ಬಂದ. ಆ ಹರದನಳ್ಳಿಯು ಒಂಥರ ಕುಗ್ರಾಮ ಅಂತ್ಲೆ ಹೇಳಬಹುದು. ಒಂದಿನ್ನೂರೈವತ್ತರಿಂದ ಮುನ್ನೂರು ಮನೆ ಗ್ರಾಮ ಅದು. ಯಲ್ಲ ರೈತರು. ಬಡವರು ವಾಸ ಮಾಡೊ ಊರು. ಸರಕಾರಿ ಶಾಲೆ ಬುಟ್ರೆ ಇನ್ನ ಸರಕಾರದ್ದು ಅಂತ ಏನೂ ಇರಲಿಲ್ಲ. ಬಸ್ಸೂ ಹೋಯ್ತಿರಲಿಲ್ಲ. ಅಂಥ ಊರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಬತ್ತು. ಅದು ರಾಜಕಾರಣಿಗಳ ಕಿತ್ತಾಟದಿಂದ ನಡೆದದ್ದು. ಯಾವುದೊ ಊರಿಗೆ ಮಂಜೂರಾದದ್ದು ಆ ಊರಿಗೆ ಬತ್ತು. ಅಕ್ಚುವಲಿ ಏಕದಂ ಗ್ರಾಮಾಂತರ ಪ್ರದೇಶಕ್ಕೆ ಪ್ರೈಮರಿ ಹೆಲ್ತ್ ಸೆಂಟರ್ ಕೊಡಂಗಿಲ್ಲ. ಯಲ್ಲಾ ನಿಯಮನೂ ಗಾಳಿಗೆ ತೂರಿ ಕೊಟ್ಟಿದ್ರು. ತುಂಬಾ ಪ್ರಭಾವಿ ರಾಜಕಾರಣಿಗಳಾಗಿದ್ದ ಕಾಲ ಅದು. ಸಿಂಗಾರಿಗೌಡ್ರು, ಮಾದಪ್ಪಗೌಡ್ರು ಎದುರಾ ಬದುರಾ ಇದ್ರೂ ಸರಕಾರದ ಸವಲತ್ತು ತಾಲೂಕಿಗೆ ತರದ್ರಲ್ಲಿ ಜೊತೆಯಾಗಿದ್ರು. ಒಮ್ಮೆ ಸಿಂಗಾರಿಗೌಡರನ್ನ ನಿಜಲಿಂಗಪ್ಪನೋರು ಕರದು ಮಂತ್ರಿಯಾಗಿ ಗೌಡ್ರೆ ಅಂದಾಗ ನಮಿಗ್ಯಲ್ಲ ಯಾಕ್ ಸಾರ್, ಶಂಕರೇಗೌಡ್ರ ಮಾಡಿ ಅಂದು ಬಂದಿದ್ರು. ಇವತ್ತಿನ ದಿನದಲ್ಲಿ ತೋರತಿಯಾ ಅಂಥೋರ್‌ನಾ. ಅವುರೂ ಮಾದಪ್ಪಗೌಡರು ಯಲ್ಲ ಗಾಂಧಿವಾದಿಗಳಾಗಿದ್ರು. ಅವುರ ಭಾಷಣದಲ್ಲಿ ಗಾಂಧಿ ಮಹಾತ್ಮನ ವಿಷಯ ಬಂದೇ ಬರತಿದ್ದೊ. ಗಾಂಧೀಜಿ ಆದರ್ಶಗಳು ಇನ್ನು ಜೀವಂತವಾಗಿದ್ದ ಕಾಲ ಅದು. ಅದಕೊಂದು ವಳ್ಳೆ ಉದಾಹರಣೆ ಯಾವುದಪ್ಪ ಅಂದ್ರೇ, ಆಗೊಂದು ಚುನಾವಣೆಲಿ ಸಿಂಗಾರಿಗೌಡ ಮಾದಪ್ಪಗೌಡ ಎದುರಾ ಬದರಾ ನಿಂತಿದ್ರು. ಸಿಂಗಾರಿಗೌಡ್ರದು ಜೋಡೆತ್ತು; ಮಾದಪ್ಪಗೌಡ್ರುದು ತಕ್ಕಡಿ ಗುರುತು; ಆಗ ಮಂಡ್ಯದಲ್ಲೇ ಹೆಸರಾದ ಪಿ.ಎನ್ ಜವರಪ್ಪಗೌಡ ಅಂತ ಪತ್ರಕರ್ತರಿದ್ರು. ಪ್ರಭಾವಿ ಮನ್ಸ. ಗ್ರಾಮೀಣ ಭಾಗದ ಗಾದೆ ಮಾತ ಬಳಸಿ ಚೆನ್ನಾಗಿ ಭಾಷಣ ಮಾಡತಿದ್ರು. ಅವುರು ಸಿಂಗಾರಿಗೌಡನ ಪರವಾಗಿ ಕ್ಯಾನ್‌ವಾಸಿಗೋಗರು. ಒಂದಿನ ಮನಿಕಳಕ್ಕೆ ಎಲ್ಯೂ ಜಾಗ ಸಿಗದೆ ಮಾದಪ್ಪಗೌಡ್ರ ಮನಿಗೋಗಿ ಕದ ತಟ್ಯವುರೆ. ಬಾಗಲ ತಗದ ಮಾದಪ್ಪಗೌಡ ಜವರಪ್ಪಗೌಡನ್ನ ನೋಡಿ “ನಿನಿಗಿನ್ನೆಲ್ಲೂ ಜಾಗಿಲವೆ ಅಂದವುರೆ”. ಇನ್ನೆಲ್ಲಿಗೋಗ್ಲಿ ಅಂತ ವಳಿಕೆ ನುಗ್ಗಿ ಬಂದವುರೆ. ಮಾದಪ್ಪಗೌಡ್ರು “ಊಟ ಮಾಡಿದ” ಅಂತ ಕೇಳಿ ಮನಿಕಳ್ಕಕೆ ಏರ್ಪಾಡುಮಾಡ್ಯವುರೆ. ಇಂತದ ಎಲ್ಯಾರ ಕೇಳಿದ್ದೀಯಾ? ಸ್ನೇಹನೆ ಬ್ಯಾರೆ ಚುನಾವಣೆ ಆಟನೆ ಬ್ಯಾರೆ ಅಂತ ತಿಳಕಂಡಿದ್ದ ಕಾಲ ಅದು. ಅಲ್ಲಾ ಮನಿಕಳಕ್ಕೆ ಜಾಗಿಲ್ದಾಗ ಸಿಂಗಾರಿಗೌಡನೆದ್ರಿಗೆ ನಿಂತಿದ್ದ ಮಾದಪ್ಪಗೌಡನ ಮನಿಗೆ ಹೋಗಿ ಜಾಗ ಕೇಳಬೇಕಾದ್ರೆ ಮಾದಪ್ಪಗೌಡ ಯಂಗಿದ್ದ ಲ್ಯಕ್ಕಹಾಕು.

ಆಗ ನಾಗಮಂಗಲದಲ್ಲಿ ಯರಡೂ ಪಾರ್ಟಿಗೆ ಒಂದೇ ವೇದಿಕೆ ಇದ್ದಿದ್ದು. ಅಲ್ಲಿ ಬಂದು ನಿಂತಗಂಡು ಅವುರ ವಾಲಗ ಅವರೂದೋರು. ಇವುರ ವಾಲಗ ಇವುರೂದೋರು. ಚುನಾವಣೆ ದಿನ ಓಟಾಗದು. ಒಂದೇ ಒಂದು ಗಲಾಟಿ ನ್ಯಡಿತಿರಲಿಲ್ಲ. ಅದೇ ಇವತ್ತು ನೋಡು ಸೆಕ್ಷನ್ ಹಾಕ್ತರೆ, ದೊಂಬಿ ಕೇಸಾಕ್ತರೆ, ಗಡಿಪಾರು ಮಾಡ್ತರೆ. ಯಾಕಪ್ಪ ಬತ್ತವಪ್ಪ ಈ ಚುನಾವಣೆ ಅನ್ನಂಗಾಯ್ತದೆ. ಆಗ ಒಂದು ಚುನಾವಣೆ ನ್ಯಡಿತು. ಮಾದಪ್ಪಗೌಡ್ರು ನಮ್ಮಣ್ಣನು ಎದುರಾ ಬದರಾ ನಿಂತಿದ್ರು. ನಮ್ಮಣ್ಣ ಸೋತು ಸಪ್ಪಗಾಗಿ ಐಬಿಲಿ ಬಂದು ಕೂತಿದ್ದ. ಗೆದ್ದ ಮಾದಪ್ಪಗೌಡ್ರು ನೇರ ಬಂದು ನಮ್ಮಣ್ಣನ ಸಮಾಧಾನ ಮಾಡಿ ಹೋದ್ರು. ಪಾಪ ಕೆಲವೇ ತಿಂಗಳಲ್ಲಿ ತೀರೋದ್ರು. ಮರುಚುನಾವಣೆ ನ್ಯಡದು ನಮ್ಮಣ್ಣ ಗೆದ್ದ. ಅದೇ ಟೈಮಲ್ಲಿ ಹರದನಹಳ್ಳಿಗೆ ಪ್ರೈಮರಿ ಹೆಲ್ಟ್ ಯೂನಿಟ್ ಬಂದುಬುಡ್ತು. ರಾಮಣ್ಣ ಬಂದು ಜಾಯಿನಾದ.

ರಾಮಣ್ಣ ಆ ಊರಿನ್ನ ನೋಡಿದಮ್ಯಾಲಾದ್ರು ಅವತ್ತಿನ ಪ್ರಭಾವಿ ರಾಜಕಾರಣಿಗಳಾದ ಕೆ.ವಿ ಶಂಕರೇಗೌಡರಿಡುದು ಬೇರೆ ಕಡೆ ವರ್ಗ ಮಾಡಿಸಿಕೊಳ್ಳಬಹುದಿತ್ತು. ಆದ್ರೆ ಅಂಗೆ ಮಾಡದೆ ಸುಮ್ಮನೋಗಿ ಹರದನಳ್ಳಿ ಪ್ರೈಮರಿ ಹೆಲ್ತ್ ಸೆಂಟರಲ್ಲಿ ಕೂತಿದ್ದ. ನಾನು ರಾಜ್‌ದೂತ್ ಮೋಟರ್ ಸೈಕಲ್ ತಗಂಡು ಹರದನಳ್ಳಿಗೋಯ್ತಾ ಮೂರು ಸತಿ ಬಿದ್ದೆ. ಕೆಲವು ಜಾಗದಲ್ಲಂತೂ ಬೈಕ್ ತಳಿಕಂಡೇ ಹೋಗಬೇಕಾಗಿತ್ತು. ಅದೂ ಅಲ್ದೆ ಆಸುಪತ್ರೆ ಎಲ್ಯದೆ ಅಂತ ಕೇಳಿಕೊಂಡೋಗಬೇಕಿತ್ತು. ಅದು ಹಲಗೆ ಬಾಗಲ ಅಂಗಡಿ ಮನೆಲಿತ್ತು. ಹಲಗೆ ಜೋಡಿಸಿ ಮಧ್ಯದ ಹಲಗೆ ಬಾಗಲ ಚಂದ್ರಾಕಾರದ ತೂತು ಮಾಡಿದ್ರು. ಅದರೊಳಿಕೆ ಬೆಳ್ಳಾಕಿ ಹಿಡಿದೆತ್ತಿ ಕದತಗಿಬೇಕಾಗಿತ್ತು. ಅದರೊಳಗೆ ಆಫೀಸು ಆಸುಪತ್ರೆಯಲ್ಲಾ ಇದ್ದೊ. ನಾನು ಇಣುಕಿ ನೋಡಿದೆ. “ಅಂಗ್ಯಾಕೆ ನೋಡಿ ಬಾಲ ವಳಿಕೆ” ಅಂದ. ಹೋಗಿ ಕುತಗಂಡೆ ಸ್ವಲುಪ ಹೊತ್ತು. ಯಾರೂ ಮಾತಾಡಲಿಲ್ಲ. ಆ ಮೈಸೂರಿನ ವೈಭವದ ಕಾಲ ಏನು, ಅಲ್ಲಿ ನಮ್ಮ ರಾಮಣ್ಣ ಮ್ಯರದಿದ್ದೇನು! ಆ ಹಾಸ್ಟಲು ಕಾಲೇಜು ಅರಮನೆ ಗುರುಮನೆ ಸಾಹಿತಿಗಳ ಸಂಗದ ಆವರಣನ್ಯಲ್ಲ ಬುಟ್ಟು ಅಂಗಡಿಮನಿಗೆ ಬಂದು ಕೂತಿದ್ದ. ಇಂತದೊಂದು ಹಠಾತ್ ಬದಲಾವಣೆ ನನಿಗೆ ಬೇಜಾರಾದ್ರು ರಾಮಣ್ಣನಿಗೆ ಏನೂ ಅನ್ನಿಸದಂಗೆ ಕಾಣಲಿಲ್ಲ. ಅವುನು ಇಂತ ಸ್ಥಿತಿಯನ್ನ ಹೆದರಸಕ್ಕೆ ತಯಾರಾಗಿ ಬಂದೊನಂಗೆ ಕಂಡ. ಅಲ್ಲಿ ನೇರಳೆ ಹಣ್ಣಿನಂಗಿದ್ದ ಕಣ್ಣಿನ ನರ್ಸಿದ್ಲು. ಮದ್ದೂರತ್ರದಿಂದ ಬಂದಿದ್ದ ಫಾರ್ಮಸಿಸ್ಟ್ ಚನ್ನೇಗೌಡ ಇದ್ದ; ಇವುನು ರಾಮಣ್ಣನ ಅಭಿಮಾನಿ; ರಾಮಣ್ಣ ಅಂದ್ರೆ ಜೀವ ಬುಡೋನು. ಇವುರು ಬುಟ್ರೆ ನೀನೆಯಾ ಅಂತ ಕೇಳೋರು ಅಲ್ಯಾರು ಇರಲಿಲ್ಲ.

“ಇಲ್ಯಂಗಿದ್ದಿ” ಅಂದೆ.

“ನೀನೆ ನೋಡಿದಲ್ಲ ಈಗ. ಅಂಗಿದ್ದಿನಿ ಕಲ. ನಾನು ನೋಡಿ ಬಂದ ಆಸುಪತ್ರೆ ಯಿಂಗಿತ್ತು ಅಂತ ನಿಮ್ಮಣ್ಣನಿಗೇಳು” ಅಂದ. ಅದು ಜನಗಳು ಆರೋಗ್ಯವಾಗಿದ್ದ ಕಾಲ. ಆಸ್ಪತ್ರಿಗೆ ಕಡಿಮೆ ಪೇಷಂಟ್ ಬರೋರು. ಅಂಗಾಗಿ ರಾಮಣ್ಣ ತಾನು ಮೆಚ್ಚಿದ ಪುಸ್ತಕ ತಗಂಡೋಗಿ ಓದಿಕೊಂಡು ಬರೋನು. ಮಧ್ಯಾಹ್ನದೊತ್ತು ಊಟನೂ ಸಿಗತಿರಲಿಲ್ಲ. ಮೂರ್‌ನಾಕು ಕೋಳಿಮೊಟ್ಟೆ ತಿನ್ನಕಂಡು ಬರನು. ಯಾರಾದ್ರು ಪೇಷಂಟ್ ಬಂದ್ರೆ ಅವರ ಪುರಾಣನ್ಯಲ್ಲ ಜಾಲಾಡಿ ಕಳಿಸೋನು. ಅವುನಲ್ಲಿ ಗ್ರಾಮೀಣ ಭಾಷೆಯಿತ್ತು. ಮಂಡ್ಯದ ಕಡೆ ಕೊಡಿಯಾಲ, ಬೆಸಗರಳ್ಳಿ ಭಾಷೆಲಿ ಪೇಷಂಟ್ ಮಾತಾಡಿಸಿದ್ರೆ ರೋಗಿಗಳಿಗೆ ಡಾಕ್ಟ್ರು ನಮ್ಮವರು ಅನ್ಸದು. ಹರದನಳ್ಳಿಗೋಗಿ ಜಾಯಿನಾಗಿ ಬಂದ ಮ್ಯಾಲೆ ಒಂದು ತಿಂಗಳಾಕಡಿಕೆ ತಲೆ ಹಾಕಿರಲಿಲ್ಲ. ಇವುನೆಲ್ಲೊ ಪ್ರಭಾವಿಗಳ ಕಂಡು ವರ್ಗ ಮಾಡಿಸಿಗತ್ತಾಯಿರಬಹುದು ಅಂತ ನಾವು ತಿಳಕಂಡ್ರೆ, ಅವುನು ಸಂಸಾರ ತಂದು ನಾಗಮಂಗಲದಲ್ಲಿ ಮನೆ ಮಾಡಿ ಇರಿಸಿ ಹರದನಳ್ಳಿ ನಿಭಾಯ್ಸಕ್ಕೆ ತಯಾರಾಗಿ ಹೋಗಿದ್ದ. ನಾನು ಆಗಾಗ್ಗೆ ಹೋಯ್ತಿದ್ದೆ. ಒಂದುಸತಿ ಹೋದಾಗ ಒಬ್ಬ ರೋಗಿ ಸತ್ಯ ಹೇಳಿದ.

ಯಾರೊ ಒಬ್ಬ ಬಡರೋಗಿ ಬಂದನಂತೆ. “ಸಾ ನನ್ನ ಮಕ್ಕಳಿಗೆ ಉಸಾರಿಲ್ಲ, ಯಂತೆವಾರ ಮಾತ್ರೆ ಕೊಡಿ” ಅಂದನಂತೆ. ಯಂತೆವಾರ ಮಾತ್ರೆ ಆದ್ರಾತ್ಯು, ಅವುಕೆ ಕಾಯಿಲೆ ವಾಸಿ ಮಾಡೋ ಸಗತಿ ಇರತದೆ ಅಂತ ತಿಳಕಂಡ ಜನ ಇವುರು. “ಅಲ್ಲಯ್ಯಾ ಯಂತೆವಾರ ಮಾತ್ರೆ ಅಂತಿಯಲ್ಲಯ್ಯ, ಮಕ್ಕಳನೂ ಕರಕಂಡು ಬಂದಿಲ್ಲ, ಅವುದೇನಾಗ್ಯದೆ ಅದ್ನಾರ ಹೇಳು” ಅಂದಾಗ “ಜರ ಬಂದವೆ ಸಾ” ಅಂದನಂತೆ. ಸರಿ ಅಂತ ಮಾತ್ರೆ ಬರಕೊಟ್ಟನಂತೆ. ವತ್ತರಿಕೆ ತಿರಗಾ ಬಂದ ಆತನನ್ನು ಏನಾಯ್ತೋ ಏನೊ ಅಂತ ರಾಮಣ್ಣ “ಉಸಾರಾದವೇನಯ್ಯ ಮಕ್ಕಳು” ಅಂತ ಕೇಳಿದನಂತೆ.

“ಇಲ್ಲ ಸಾ.”

“ಯಾಕಯ್ಯ?”

“ನೀವು ಬರಕೊಟ್ಟ ಮಾತ್ರೆ ತರಕ್ಕಾಗಲಿಲ್ಲ ಸಾ.”

“ದುಡ್ಡಿರಲಿಲವೇನಯ್ಯ?”

“ಇತ್ತು ಸಾ, ಹಂದಿಮರಿಗೆ ಮೇವು ತಂದೆ.”

“ನಿನ್ನ ಮಕ್ಕಳಿಗಿಂತ್ಲೂ ಹಂದಿ ಮರಿನೆ ಮುಖ್ಯವಾದವೇನಯ್ಯ. ತಗೋ ಮೊದ್ಲೊಗಿ ಮಾತ್ರೆ ತಂದುಕೊಡು” ಅಂತ ದುಡ್ಡು ಕೊಟ್ನಂತೆ.

“ನೀವು ಬರಕೊಟ್ಟ ಅವುಸ್ತಿ ಚೀಟಿ ಕಳಕಂಡಿದ್ದಿನಿ ಸಾ” ಅಂದನಂತೆ. ಆಗ ಮಾತ್ರೆ ಚೀಟಿ ಜೊತೆಗೆ ದುಡ್ಡನ್ನೂ ಕೊಟ್ಟು ಕಳಿಸಿದನಂತೆ.

“ನೋಡು ಯಂಗವುರೆ ಜನ.. ಇನ್ನ ಯಂಥ್ಯಥಾ ಜನ ಬತ್ತರೊ ನೋಡನ ಅಂತ ಕಾಯ್ತಯಿದ್ದಿನಿ ಕಲ” ಅಂದ.

“ಸರಿಯಾಗಿ ಬೈಬೇಕಿತ್ತು” ಅಂದೆ.

“ಬೈಬಾರ್ದು ಕಲ. ಅವುಕೇನು ಬೈಸಿಗತ್ತವೆ. ತಿರಗ ಇತ್ತಗೆ ಬರದಂಗೆ ವಂಟೋಯ್ತವೆ. ನಮ್ಮಣೆ ಬರನೆ ಇಷ್ಟು ಅನ್ನಕತ್ತವೆ. ಅದ್ಕೆ ಸಯಿಸಿಗಂಡು ನಾವೇ ತಿದ್ದಬೇಕು” ಕಲ ಅಂದ ರಾಮಣ್ಣ. ನಿಜವಾಗ್ಲು ಹಳ್ಳಿ ಡಾಕ್ಟರಾಗಕ್ಕೆ ಯೋಗ್ಯವಾಗಿ ಕಂಡ. ಜೊತೆಗೆ ಅವನ ಜವಬ್ದಾರಿ ನೋಡಿ ಹೆಮ್ಮೆ ಅನ್ನಸ್ತು.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-7; ’ಏ ನಮ್ಮ ಟ್ರೈನಿಂಗೆ ಬ್ಯಾರೆ, ನಮ್ಮ ಜನಗಳು ಹೇಳೊ ಕತೆನೆ ಬ್ಯಾರೆ ಕಲ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...

ನಾವು ದಾಖಲೆಗಳನ್ನು ಕೊಟ್ಟರೂ ನಮ್ಮನ್ನು ಹಕ್ಕುಗಳಿಂದ ವಂಚಿಸಲಾಗುತ್ತದೆ ಎಚ್ಚರ- ಡಿ.ಹೆಚ್.ಕಂಬಳಿ

ಸಿಂಧನೂರು: SIR ವಿರೋಧಿಸಿ ನಡೆಸಲಾಗುತ್ತಿರುವ ಜಾಗೃತಿ ಜಾಥ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿತ್ತು. ನಗರದ ಜಮಾತ್ ಎ ಇಸ್ಲಾಂ ಹಿಂದ್ ಕಚೇರಿಯಲ್ಲಿ ಹಲವು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ಹಾಜರಿದ್ದರು. ಜಾಥಾದ ಭಾಗವಾಗಿ...

ಹುಬ್ಬಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಸಭೆ ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಹುಬ್ಬಳ್ಳಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಞಾನ ಮಂಟಪದಲ್ಲಿ ಮಂಗಳವಾರ (ಜೂ.16) ಸಂಜೆ ವಿವಿಧ ಜನ ಸಂಘಟನೆಗಳು ಮತ್ತು...

ಎಸ್ಐಆರ್ ಮೂಲಕ ಮನುವಾದದ ಮರು ಜಾರಿಗೆ ಯತ್ನ : ಡಾ. ಗಣೇಶ್ ದೇವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು. ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ...

ಎಡದೊರೆಯ ನಾಡಿನಲ್ಲಿ ಮೊಳಗಿದ SIR ವಿರೋಧಿ ಕೂಗು

ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು. ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ...

ಜೂನ್ 20ರ ಬೆಂಗಳೂರಿನ ‘SIR’ ವಿರೋಧಿ ಸಮಾವೇಶಕ್ಕೆ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ವಕೀಲರಾದ ಶ್ರೀಪಾಲ್ ಕರೆ

ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ...