Homeಮುಖಪುಟಹಿಂಗಿದ್ದ ನಮ್ಮ ರಾಮಣ್ಣ-9; "ಉರುಬಾಡು ಮಾಡಿಕಂಡು ತಿಂತಿವಿಕಲ, ಬೇಕಿದ್ರೆ ಬಾ"

ಹಿಂಗಿದ್ದ ನಮ್ಮ ರಾಮಣ್ಣ-9; “ಉರುಬಾಡು ಮಾಡಿಕಂಡು ತಿಂತಿವಿಕಲ, ಬೇಕಿದ್ರೆ ಬಾ”

- Advertisement -
- Advertisement -

ಹರದನಳ್ಳಿಲಿ ರಾಮಣ್ಣ ಆಸ್ಪತ್ರೆ ನಿರ್ಮಾಣಕ್ಕೆ ಕೈ ಹಾಕಿದ. ಸರಕಾರದ ಮಟ್ಟದಲ್ಲಿ ಓಡಾಡಿದ್ರಿಂದ ಅಲ್ಲಿಗೆ ಆಸ್ಪತ್ರೆ ಕಟ್ಟಡ ಬಂತು. ಪ್ರೈಮರಿ ಹೆಲ್ತ ಪಾಯಿಂಟು ಯಂಗಿರಬೇಕೋ ಅಂಗೆ ಮಾಡಿದ. ಅವುನನ್ನ ನೋಡಕ್ಕೆ ಅಂತ ಬಂದ ಸಾಹಿತಿಗಳು ಹರದನಳ್ಳಿಗೂ ಹೋಗಿ ಬರೋರು. ಕಾಳೇಗೌಡ ನಾಗವಾರ ಸದಾಶಿವ ಎಣ್ಣೆಹೊಳೆ ಕ್ಯಾತನಳ್ಳಿ ರಾಮಣ್ಣ ಇವುರ್‍ಯೆಲ್ಲ ಬತ್ತಿದ್ರು. ನಾವು ಯಾವುದಾರ ಸಾಹಿತಿ ಮನಿಗೋದ್ರೆ ಏನೋ ಎಂತೊ ಅನ್ನೊ ಅಂಜಿಕೆ ಇರತದೆ. ಅದು ಒಟ್ಟು ನಮ್ಮ ವ್ಯಕ್ತಿತ್ವವನ್ನೇ ನಿಯಂತ್ರಸೋಂತ ಅಳುಕು. ಆದ್ರೆ ನಮ್ಮ ರಾಮಣ್ಣನ ಮನಿಗೆ ಬರೋರಿಗೆ ಇಂತ ಯಾವ ಅಳಕೂ ಇರತಿರಲಿಲ್ಲ. ಅವುರ ಸ್ವಂತ ಮನಿಗಿಂತ ಇಲ್ಲಿ ನಿರಾಳವಾಗಿರೋರು. ಅದ್ಕೆ ಈ ಮಾರ್ಗವಾಗಿ ಹೋಗಿ ಬರೋ ಸಾಹಿತಿಗಳ್ಯಲ್ಲ ಇಲ್ಲಿ ಇಳುದು ರಾಮಣ್ಣನ ಮಾತಾಡ್ಸಿ ಹೋಗರು. ರಾಮಣ್ಣನ ಹೆಂಡತಿ ರಾಜಮ್ಮ ಭಾಳ ದೊಡ್ಡತನದ ಹೆಣ್ಣು ಮಗಳು. ನಾನೊಬ್ಬ ಡಾಕ್ಟರೆಡ್ತಿ ಅಂತ ಎಂದೂ ತೋರಿಸಿಗಳ್‌ಲಿಲ್ಲ. ರಾಮಣ್ಣನ್ನ ಹುಡಿಕಂಡು ಬಂದೋರಿಗೆ ಊಟ ಮಾಡಿಸಿ ಕಳಸೋರು. ಅವುರು ಮಾಡತಿದ್ದ ಬಾಡಿನ ಸಾರು ತುಂಬಾ ಫೇಮಸ್ಸು. ವಳ್ಳೆ ಮಸಾಲೆ ಹಾಕಿ ಮಾಡೋರು. ಇಡೀ ಬೀದಿನೆ ಘಮಗುಡೋದು. ಒಂದು ಸತಿ ಉಂಡೋರು ಮತ್ತೆ ಬರೋರು. ಈ ಬಾಡ್ನೆಸರಿಗೆ ಯಂಥಾ ಸಗತಿ ಅಂದ್ರೆ ಮುನಿಸಿಗಂಡ ಅಕ್ಕಪಕ್ಕದ ಮನಿಯೋರು ಅದ್ಯಂಗೋ ಮಾತಾಡಿಸಿಗಂಡು ಬತ್ತರೆ. ಮಾತು ಬುಟ್ಟೊರು ಕೂಡ ಮನಿಗೆ ಬಂದ ನಂಟ್ರು ಮಾತಾಡಸೊ ನ್ಯಪದಲ್ಲಿ ಬಂದೋಯ್ತರೆ. ಅದ್ಕೆ ನೋಡು ನಮ್ಮ ಕಡೆ ನ್ಯಡಿಯೋ ಮಾರಾಮಾರಿ ಜಗಳ ಬಾಡಿನೂಟದಲ್ಲಿ ರಾಜಿಯಾಯ್ತವೆ. ಅಂಗಾಗಿ ರಾಜಮ್ಮನೋರು ಮಾಡೋ ಬಾಡಿನ ಸಾರಿನ ವಾಸನೆ ಕುಡದೋರು ತಿರಗ ಬಂದೋಗರು.

ಅವುನು ತಾನೆ ಏನು ಅಂತೀ, ಸಾಹಿತಿ ಗೆಳೆಯರು ಕಂಡೇಟಿಗೆ ನಿಧಿ ಸಿಕ್ಕಿದಂಗಾಡನು. ಸಾಹಿತಿಗಳ ಕಂಡೇಟಿಗೆ ಮಟನ್ ಸ್ಟಾಲ್ ಹೊಳಿಯದು. ಅವುನ ಮನೆಲಿ ಮರಿಗೌಡ ಅಂತ ಇದ್ದ. ಅವುನ್ನ ರವಿಕಾಂತ ಮಡಿಯ ಮಡಿಯ ಅನ್ನೊನು. ಅವುನಿನ್ನ ಸಣ್ಣುಡಗ ಆಗ. ಆದ್ರಿಂದ ಮರಿಗೌಡನಿಗೆ ಅಂಟಿಗಂಡಿರನು. ಮನಿಗೆ ಬಂದ ಗೆಳೆಯರು ರಾಮಣ್ಣನ ಅಧ್ಯಕ್ಷತೆಲಿ ಸಾಲಿಗೆ ಊಟಕ್ಕೆ ಕುತಗಳರು. ಪ್ರತಿಯೊಬ್ಬರಿಗೂ ಸಪರೇಟಾಗಿ ಚಟ್ನೆ ತುಂಬ ಬಾಡತಂದು ದಬ್ಬಾಕಿಬುಟ್ಟೋಗನು ಮರಿಗೌಡ. ಮುದ್ದೆನೂ ಅಂಗೆಯಾ ಒಂದೊಂದೇ ಮುದ್ದೆ ತಂದು ಇಕ್ಕೊರು. ಬಾಡಿನೆಸರು ಬುಟ್ಟೇಟಿಗೆ ರಾಮಣ್ಣ ಖಂಡದ ಪೀಸ ತಗಂಡು ಹುರಿಗಾಳೆಸಗಂಡಂಗೆ ಬಾಯಿಗೆಸಗಳನು. ಮತ್ತೆ ಸಾಹಿತ್ಯನೂ ಶುರು ಮಾಡಿಕಳನು. ಇಂತ ಪಾರ್ಟಿ ನಿರಂತರವಾಗಿ ನ್ಯಡಿಯವು. ನಡುಮನೆಲಿ ಕನ್ನಡ ಸಾಹಿತ್ಯದ ಚರ್ಚೆಗಳು ನ್ಯಡದ್ರೆ ಕ್ವಾಣೆ ವಳಗಡೆ ಬಾಡು ಬೆಯ್ಯದು. ಮಾತಾಡಿ ಸಾಕಾದ ಸಾಹಿತಿಗಳು ಚಟ್ನೆತುಂಬ ಬಾಡು ಬಂದಮ್ಯಾಲೆ ತ್ಯಪ್ಪಗಾಗೋರು. ಅಂತೂ ಮೈಸೂರಿನ ದಿನಗಳು ರಾಮಣ್ಣ ಹರದನಳ್ಳಿಗೆ ಬಂದ ಮ್ಯಾಲೆ ನಾಗಮಂಗಲದಲ್ಲಿ ಶುರುವಾದೊ. ಅದೊಂದು ಸುಭಿಕ್ಷದ ಕಾಲ.

ರಾಮಣ್ಣ ದಿನಾ ಹರದನಳ್ಳಿಗೋಗಿ ಬರೋನು. ನಮ್ಮಣ್ಣ ಎಮ್ಮೆಲ್ಲೆ ಐ.ಬಿ ಮುಂದಗಡೆ ಕುತಗಳರು. ರಾಮಣ್ಣನ ಮಾತು ಅಂದ್ರೆ ಅವುರಿಗೆ ತುಂಬಾ ಇಷ್ಟ. ಪರಸ್ಪರ ಗೌರವ ಇದ್ದೊರು. ರಾಮಣ್ಣನ ಮಾತು ಅಂದ್ರೆ ಅದರಲ್ಲೇನಾರ ಹಾಸ್ಯಮಯವಾದ್ದು ಇದ್ದೇ ಇರತದೆ ಅಂತ ತಿಳಕಂಡಿದ್ರು. ಅಂಗಾಗಿ ನಾಗಮಂಗಲದಲ್ಲಿದ್ದಾಗ ರಾಮಣ್ಣ ಬರದ್ನೆ ಕಾಯೋರು. ಒಂದಿನ ರಾಮಣ್ಣ ಬಂದು ಒಂದು ಪ್ರಸಂಗ ಹೇಳಿದ. ವಬ್ಬ ವಜಕಟ್ಟಾದ ಮನ್ಸ ಹೆಡತಿ ಕರಕಂಡು ಬಂದು “ಸ್ವಾಮಿ ಇವುಳು ರಾತ್ರಿಯಲ್ಲ ನಿದ್ದೆ ಕೊಡ್ಳಿಲ್ಲ” ಅಂದ. ರಾಮಣ್ಣ ಏನೇನೊ ಯೋಚನೆ ಮಾಡಿ ’ಯಾಕೆ ಏನು ಮಾಡಿದ್ಲಪ್ಪಾ’ ಅಂದವ್ನೆ. “ಅಯ್ಯೋ ಅವುಳ ಗೋಳ ನೋಡಕ್ಕಾಗಲಿಲ್ಲ ಸ್ವಾಮಿ. ಅವುಳ ವಲ ಕುಯ್ಯಕ್ಕೆ ಕರಕಂಡೋಗಿದ್ದೇ ತೆಪ್ಪಾಯ್ತು ನೋಡಿ” ಅಂತ ಮುಖ್ಯ ವಿಷಯದ ಸುತ್ತ ಮಾತಾಡತಿದ್ನಂತೆ. ’ಅದೇನಾಗದೆ ಹೇಳಿಗೌಡ್ರೆ’ ಅಂದಾಗ “ವಲ ಕುಯ್ತ ಮುಂಬರದಾಗ ಕೂಳೆ ತರಕತ್ತಂತೆ. ಅಷ್ಟೆಯಾ ಅದ್ಕೆ ರಾತ್ರ್ಯಲ್ಲ ನರಳಿದ್ಲು. ಅದೇನು ವಸಿ ನೋಡಿ” ಅಂದನಂತೆ. ಸರಿ ರಾಮಣ್ಣ ಆಯಮ್ಮನ ಮರ್ಮಸ್ಥಾನ ಚೆಕಪ್ ಮಾಡಬೇಕಾದ್ರಿಂದ, ಆತನೂ ಇರದು ವಳ್ಳೆದು ಅಂತ “ನೀನು ಬಾರಪ್ಪ ವಳಿಕೆ” ಅಂದನಂತೆ. ಅವುನು ತಲೆ ವಗದು “ಅದೇನು ನೀವೆ ಮಾಡಿ ಸ್ವಾಮಿ, ನಾನು ನೋಡದಿಲ ಅದ” ಅಂದನಂತೆ. ಎಷ್ಟು ಕರದ್ರೂ ಬರಲಿಲವಂತೆ. ಇಂತವೇಳಿ ನಮ್ಮಣ್ಣನ ನಗಸೋನು.

ಇನ್ನೊಂದು ಸಾರ್ತಿ ಸರಕಾರದ ಕಾರ್ಯಕ್ರಮದಲ್ಲಿ ಸಿಕ್ಕಿ ಸಿಕ್ಕಿದೋರನ್ಯಲ್ಲ ಹಿಡಿದು ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ ಮಾಡಿದ್ರಂತೆ. ಒಬ್ಬ ಬಂದು “ಅಲ್ಲಾ ಸ್ವಾಮಿ ಹಿಂಗೂ ಮಾಡ್ಯರೆ ಇದು ನ್ಯಾಯವೆ” ಅಂದನಂತೆ.

“ಯಾಕಯ್ಯ ಏನು ಮಾಡಿದ್ರು ನಿಂಗೆ?”

“ನನ್ನನ್ನೂ ಯಳಕಂಡೋಗಿ ನರ ಕಟ್ ಮಾಡಿದ್ರು ಸ್ವಾಮಿ.”

“ಅದು ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ನು ಕಣಯ್ಯ ವಳ್ಳೆದಾಯ್ತದೆ ಬುಡು. ಮಕ್ಕಳು ಮರಿಯಾಯ್ತವೆ ಅಂತ ಯೇಚ್ನೆ ಮಾಡಂಗೇಯಿಲ್ಲ.”

“ಸರಿ ಸ್ವಾಮಿ ಗದ್ದಿಗೆ ನೀರು ಬುಡಬೇಕಾದ್ರೆ ಕ್ಯರೆಲಿ ನೀರಿರಬೇಕಲವೆ? ಬತ್ತ್ಯೋಗಿರೊ ಕ್ಯರೆ ತೂಬಿನ ಗುಂಡಿನೆ ಮುಚ್ಚಿದರಲ್ಲ. ಹಿಂಗೂ ಮಾಡ್ಯರೆ” ಅಂತ ಗೋಳಾಡಿದನಂತೆ.

“ಆಗ ರಾಮಣ್ಣ ಅದವುರಿಗೆ ಗೊತ್ತಿಲ್ಲ ಬುಡಿಗೌಡ್ರೇ. ನಿಮ್ಮ ಕ್ಯರೆ ಬತ್ತಿ ಮೀನು ಸತ್ತಿರದು ಅವುರಿಗ್ಯಂಗೆ ಗೊತ್ತಾಗಬೇಕು. ನೋಡಕ್ಕೆ ಜೋರಾಗಿದ್ದಿರಲ್ಲಾ ಅದ್ಕೆ ಹಿಡಕಂಡೋಗಿ ಆಪರೇಷನ್ ಮಾಡ್ಯವುರೆ. ತ್ವಂದ್ರೆ ಏನೂಯಿಲ್ಲ. ನೀವು ಮದ್ಲಿಗಿಂತ ಜೋರಾಗಿರತಿರಿ” ಅಂತ ಸಮಾಧಾನ ಮಾಡಿ ಕಳಿಸಿದನಂತೆ. ಇಂತ ಕತೆ ಕೇಳಕ್ಕೆ ರಾಮಣ್ಣನ್ನ ಕಾಯರು. ಅವುನು ಬಂದು ಒಂದಲ್ಲಾ ಒಂದು ಹೇಳನು. ಅದರಲ್ಲಿ ಅವುನ ಇಮೇಜಿನೇಷನ್ ಕೂಡ ಇರವು. ಅವೇನು ನಮ್ಮಣ್ಣನಿಗೆ ಗೊತ್ತಾಯ್ತಾಯಿರಲಿಲ್ಲ. ನಮ್ಮಣ್ಣನೂ ರಾಮಣ್ಣನಿಗೆ ತನ್ನ ಅನುಭವ ಹೇಳೋನು.

ನಮ್ಮಣ್ಣ ಆಗ ಹೊಸ ಎಮ್ಮೆಲ್ಲೆ. ನಮ್ಮದು ದೊಡ್ಡ ತಾಲ್ಲೂಕು. ಜನಗಳ ಮಕ ಪರಿಚಯ ಇಟಗಳದು ಬಾಳಕಷ್ಟ. ಅಂತ ಟೇಮಲ್ಲಿ ಯಾರೋ ಬಂದು ಅವುರೆದ್ರಿಗೆ ನಿಂತವುರೆ. ಅವುರ್‍ಯಾವೂರೊರು ಅನ್ನದು ಗೆಪ್ಪಿಗೆ ಬತ್ತಾಯಿಲ್ಲ. ಅದ ತಿಳಕಳಕ್ಕೆ ಮಳೆಯಂಗೆ ನಿಮ್ಮ ಕಡೆ ಅಂತ ಕೇಳಿದರಂತೆ. “ಏ ತಾಳಿನಕ್ಯರಿಗೆ ಊದದೆ. ನಮ್ಮೂರು ಬಿದರಕ್ಯರಿಗೆ ಒಂದನಿ ಮಳಿಲ್ಲ ಅಂದಾಗ ಓಹೊ ಬಂದಿರೋದು ಬಿದಿರಿಕ್ಯರಿಯೋರು ಅಂತ ಗೊತ್ತಾಗದಂತೆ. ಸರಿ ಬಂದಿರೋರು ಸಮಸ್ಯೆ ಏನು ಅಂತ ತಿಳಕಬೇಕಲ್ಲ. ಆಗ ನಿಧಾನವಾಗಿ “ಅದ ಹೇಳಿದ್ದಿನಿ, ಅವುರು ಬರ್ಲಿ ಅಂದವುರೆ” ಅಂತ ಅಂದಾಜಲ್ಲೊಂದು ಮಾತಂದು ಅದ್ನೂ ಅವುನ ಕೈಲೆ ಬಾಯಿ ಬುಡಸೋ ಪ್ಲಾನ ಮಾಡಿದರಂತೆ. ಅಂಗಂದಕೂಡ್ಳೆ “ನಾವು ಬರದೇನು ಸಾ ನೀವು ತಾಸಿಲ್ದಾರಿಗೊಂದು ಮಾತೇಳಿರ್ರಾಯ್ತು, ಯಲ್ಲ ಬಗೆಹರಿತದೆ” ಅಂದನಂತೆ. ಓಹೊ ಇದು ರೆವಿನ್ಯೂ ಇಲಾಖೆ ವಿಷಯ ಅಂತ ತಿಳಕಂಡು ಮುಂದುವರಿದರಂತೆ. ಇದ ಕೇಳಿಕಂಡು ಬಂದ ರಾಮಣ್ಣ “ಯಮ್ಮೆಲ್ಲೆ ಕ್ಯಲಸ ಭಾಳ ಕಷ್ಟ ಕಣ್ಲ. ನಿಮ್ಮಣ್ಣನೂ ಬುದ್ಧಿವಂತ. ಎಷ್ಟೇ ಆಗಲಿ ಲಾಯರಾಗಿದ್ದೊರಲವೆ” ಅಂತ ನಗಾಡಿದ. ಬಾಡ ತಿನ್ನದರಲ್ಲಿ ರಾಮಣ್ಣ ನಮ್ಮಣ್ಣ ಒಂದೇ ತರ ಇದ್ರು. ಸಮಾನ ಅಭಿರುಚಿ ಇತ್ತು.

ರಾಮಣ್ಣ ಇಲ್ಲಿಗೆ ಬಂದ ಮ್ಯಾಲೆ ಲಾಟರಿ ಟಿಕೆಟ್ ತಗಳೋನು. ಅದು ಸಂಬಳ ಬಂದಾಗ. ಅದರ ಉದ್ದೇಶ ಏನಪ್ಪಾ ಅಂದ್ರೆ ಅಕಸ್ಮಾತ್ ಲಾಟರಿ ಹೊಡಿತು ಅನ್ನು ಚೇಬುತುಂಬ ದುಡ್ಡ ಮಡಿಕಂಡು ಬಡರೋಗಿಗಳಿಗೆ ಸಹಾಯ ಮಾಡಬುದಲ್ಲಾ ಅನ್ನೊ ಕನಸು ಅವುನಿಗೆ. ಪಾಪ ಯಾವತ್ತೂ ಲಾಟ್ರಿ ವಡಿಲಿಲ್ಲ. ಒಂದು ಸಂಬಳದಲ್ಲಿ ಒಂದಿಷ್ಟು ಪುಸ್ತಕ ತಗಳನು. ಲಾಟರಿ ಟಿಕೆಟ್ ತಗಳದು, ದುಂದುಗಾರಿಕೆ ಮಾಡದು ಹಿಂಗೆ ಮಾಡತಿದ್ದ. ಮಕ್ಕಳಿನ್ನೂ ಚಿಕ್ಕೋರು. ಅವುರ ಓದಿನ ಕರ್ಚು ಇರಲಿಲ್ಲ. ಅಂಗಾಗಿ ಸಂಬಳದಲ್ಲಿ ಒಂದು ಪೈಸೆನೂ ಉಳಸದಂಗೆ ಜಾಲಿಯಾಗಿದ್ದ.

ಕೊಪ್ಪದ ತಿಮ್ಮಯ್ಯ ಅನ್ನೊ ಪಿಡಿಒ ಇದ್ದ. ಅವುನ ಜ್ವತೆ ಸೇರಿಕಂಡ ರಾಮಣ್ಣ ಕೆ.ಆರ್ ಪೇಟೆತ ಯಿರೊ ತಂಡೇಕೆರೆ ಸಂತಿಗೋಗಿ ಬಾಡತರೋನು. “ವಚ್ಚರಿ ಬೀಜದ ಭಾಗ ಇರಂಗೆ ಕೊಡಯ್ಯ” ಅಂತ ಹೇಳಿ ಅರ್ಧ ಮರಿನೆ ತರೋರು. ಇದ ನೋಡಿದ ನಾನು

“ಅದ್ಯಾಕಷ್ಟೊಂದು ಬಾಡ ತತ್ತಿರಿ” ಅಂದ್ರೇ,

“ಉರುಬಾಡು ಮಾಡಿಕಂಡು ತಿಂತಿವಿಕಲ, ಬೇಕಿದ್ರೆ ಬಾ” ಅನ್ನೊನು.

“ಅದ್ಯಂತ ಉರುಬಾಡು ಮಾರಾಯ” ಅಂದ್ರೆ,

“ಮಾಡ್ತಿವಿ ನೋಡು ಬಾ” ಅಂತಿದ್ದ. ಒಂದು ಬೀಜದ ಭಾಗ ಅಂದ್ರೆ ಏಳೆಂಟು ಕೆಜಿ ಬರದು. ಅದನ್ನ ಉರುದು ಮಡಿಕಂಡು ತಿನ್ನನ ಅಂದ್ರೆ ಒಂದೂವರದಿನಕೆ ಮುಗದೋಗದು. ಸಾಹಿತಿಗಳು ಬಂದ್ರಂತೂ ಅಷ್ಟು ದಿನಕ್ಕೂ ಸಾಲ್ತಿರಲಿಲ್ಲ. ಅವುನ ಮನೆಲಿ ತರಕಾರಿ ಸಾರು ಮಾಡಿದ್ನೆ ನೋಡಲಿಲ್ಲ ನಾನು.

ರಾಮಣ್ಣನ ಕೆಲಸದಲ್ಲಿ ಅವುನ್ನ ಕೇಳೋರೆ ಇರಲಿಲ್ಲ. ಅಧಿಕಾರಿಗಳ ಕೈಲಿ ಹೇಳಿಸಿಗಂಡು ಕ್ಯಲಸ ಮಾಡೊತರ ಇರಲಿಲ್ಲ ಅವುನು. ಕಂಪ್ಲೇಂಟ್ ಬರದಂಗೆ ತನ್ನ ಕೆಲಸ ಮಾಡೋನು. ಅವುನು ಇಲ್ಲಿದ್ದಾಗ ಮೂರನೆ ಜನಪದ ಸಾಹಿತ್ಯ ಸಮ್ಮೇಳನ ನ್ಯಡಿತು. ನಮ್ಮಣ್ಣ ಯಾವುದೇ ಕಾರ್ಯಕ್ರಮ ಮಾಡದ್ರಲ್ಲಿ ಅಥವಾ ಸಂಘಟಸೊದ್ರಲ್ಲಿ ಅಂತ ಶಕ್ತಿ ಇಲ್ದೊರು. ಆದ್ರಿಂದ ಆ ಸಮ್ಮೇಳನ ಜವಾಬ್ದಾರಿ ಹೊರಕ್ಕೆ ಹಿಂದೇಟಾಕುವಾಗ ರಾಮಣ್ಣ “ನ್ಯಾವೆಲ್ಲ ಇದ್ದಿವಿ ಹೆದರಬ್ಯಾಡಿ ಸಾರ್ ಅಂತ ಸಮ್ಮೇಳನ ನ್ಯಡಿಯಂಗೆ ಮಾಡಿದ. ನಮ್ಮ ತಾಲೂಕಿನವರೆ ಆದ ಜೀಶಂಪ, ಹೆಚ್.ಎನ್ ನಾಗೇಗೌಡ್ರು, ಹ.ಕ ರಾಜೇಗೌಡ್ರು ಇಂತ ಘಟಾನುಘಟಿಗಳೇ ಜನಪದ ವಿದ್ವಾಂಸರು. ಅಲ್ದೆ ಮಾದಪ್ಪಗೌಡ್ರು ಸಿಂಗಾರಿಗೌಡ್ರು ಚಿಗರಿಗೌಡರು ಇದ್ರು. ಇವುರ್‍ಯಾಲ್ಲಾರ್ನು ಒಳಗೊಂಡು, ಯಲ್ಲಾರ ಜೊತೆಲೂ ಸಲಗೆಯಿಂದ ಮಾತಾಡ್ತ ಇಡೀ ಸಮ್ಮೇಳನ ಚನ್ನಾಗಿ ನ್ಯಡಿಯಂಗೆ ಮಾಡಿದ. ಅವಾಗ ರಾಮಣ್ಣನ ಇನ್ನೊಂದು ಮುಖ ನೋಡಿದಂಗಯ್ತು. ಅವುನು ಒಳ್ಳೆ ಸಂಘಟಕ ಅಷ್ಟೆ ಅಲ್ಲ ಲೀಡ್ರು ಕೂಡ ಆಗಿದ್ದ. ಆದ್ರೆ ಲೀಡರ್‌ಶಿಪ್ಪ ಒಪ್ಪಿಗಳದೆ ಕಾರ್ಯಕರ್ತನಾಗಿ ಗುರುತಿಸಿಗಳಕ್ಕೆ ಇಷ್ಟಪಡನು. ಮೂರನೆ ಜಾನಪದ ಸಮ್ಮೇಳನ ಒಂದು ದಾಖಲೆಯಾಯ್ತು. ಅದಾದ ಮೇಲೆ ಎಲ್ಲೂ ನ್ಯಡಿಲಿಲ್ಲ ಅನ್ನಸ್ತದೆ. ನಮ್ಮ ತಾಲೂಕಿನಲ್ಲವುನು ಹರದನಳ್ಳಿ ಆಸುಪತ್ರೆ ಕಟ್ಟಿದ. ಜನಪದ ಸಮ್ಮೇಳನದ ರೂವಾರಿಯಾದ.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-8; “ಬೈಬಾರ್ದು ಕಲ; ಅವುಕೇನು ಬೈಸಿಗತ್ತವೆ; ತಿರಗ ಇತ್ತಗೆ ಬರದಂಗೆ ವಂಟೋಯ್ತವೆ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 293 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ...

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...