Homeಮುಖಪುಟಹಿಂಗಿದ್ದ ನಮ್ಮ ರಾಮಣ್ಣ-9; "ಉರುಬಾಡು ಮಾಡಿಕಂಡು ತಿಂತಿವಿಕಲ, ಬೇಕಿದ್ರೆ ಬಾ"

ಹಿಂಗಿದ್ದ ನಮ್ಮ ರಾಮಣ್ಣ-9; “ಉರುಬಾಡು ಮಾಡಿಕಂಡು ತಿಂತಿವಿಕಲ, ಬೇಕಿದ್ರೆ ಬಾ”

- Advertisement -
- Advertisement -

ಹರದನಳ್ಳಿಲಿ ರಾಮಣ್ಣ ಆಸ್ಪತ್ರೆ ನಿರ್ಮಾಣಕ್ಕೆ ಕೈ ಹಾಕಿದ. ಸರಕಾರದ ಮಟ್ಟದಲ್ಲಿ ಓಡಾಡಿದ್ರಿಂದ ಅಲ್ಲಿಗೆ ಆಸ್ಪತ್ರೆ ಕಟ್ಟಡ ಬಂತು. ಪ್ರೈಮರಿ ಹೆಲ್ತ ಪಾಯಿಂಟು ಯಂಗಿರಬೇಕೋ ಅಂಗೆ ಮಾಡಿದ. ಅವುನನ್ನ ನೋಡಕ್ಕೆ ಅಂತ ಬಂದ ಸಾಹಿತಿಗಳು ಹರದನಳ್ಳಿಗೂ ಹೋಗಿ ಬರೋರು. ಕಾಳೇಗೌಡ ನಾಗವಾರ ಸದಾಶಿವ ಎಣ್ಣೆಹೊಳೆ ಕ್ಯಾತನಳ್ಳಿ ರಾಮಣ್ಣ ಇವುರ್‍ಯೆಲ್ಲ ಬತ್ತಿದ್ರು. ನಾವು ಯಾವುದಾರ ಸಾಹಿತಿ ಮನಿಗೋದ್ರೆ ಏನೋ ಎಂತೊ ಅನ್ನೊ ಅಂಜಿಕೆ ಇರತದೆ. ಅದು ಒಟ್ಟು ನಮ್ಮ ವ್ಯಕ್ತಿತ್ವವನ್ನೇ ನಿಯಂತ್ರಸೋಂತ ಅಳುಕು. ಆದ್ರೆ ನಮ್ಮ ರಾಮಣ್ಣನ ಮನಿಗೆ ಬರೋರಿಗೆ ಇಂತ ಯಾವ ಅಳಕೂ ಇರತಿರಲಿಲ್ಲ. ಅವುರ ಸ್ವಂತ ಮನಿಗಿಂತ ಇಲ್ಲಿ ನಿರಾಳವಾಗಿರೋರು. ಅದ್ಕೆ ಈ ಮಾರ್ಗವಾಗಿ ಹೋಗಿ ಬರೋ ಸಾಹಿತಿಗಳ್ಯಲ್ಲ ಇಲ್ಲಿ ಇಳುದು ರಾಮಣ್ಣನ ಮಾತಾಡ್ಸಿ ಹೋಗರು. ರಾಮಣ್ಣನ ಹೆಂಡತಿ ರಾಜಮ್ಮ ಭಾಳ ದೊಡ್ಡತನದ ಹೆಣ್ಣು ಮಗಳು. ನಾನೊಬ್ಬ ಡಾಕ್ಟರೆಡ್ತಿ ಅಂತ ಎಂದೂ ತೋರಿಸಿಗಳ್‌ಲಿಲ್ಲ. ರಾಮಣ್ಣನ್ನ ಹುಡಿಕಂಡು ಬಂದೋರಿಗೆ ಊಟ ಮಾಡಿಸಿ ಕಳಸೋರು. ಅವುರು ಮಾಡತಿದ್ದ ಬಾಡಿನ ಸಾರು ತುಂಬಾ ಫೇಮಸ್ಸು. ವಳ್ಳೆ ಮಸಾಲೆ ಹಾಕಿ ಮಾಡೋರು. ಇಡೀ ಬೀದಿನೆ ಘಮಗುಡೋದು. ಒಂದು ಸತಿ ಉಂಡೋರು ಮತ್ತೆ ಬರೋರು. ಈ ಬಾಡ್ನೆಸರಿಗೆ ಯಂಥಾ ಸಗತಿ ಅಂದ್ರೆ ಮುನಿಸಿಗಂಡ ಅಕ್ಕಪಕ್ಕದ ಮನಿಯೋರು ಅದ್ಯಂಗೋ ಮಾತಾಡಿಸಿಗಂಡು ಬತ್ತರೆ. ಮಾತು ಬುಟ್ಟೊರು ಕೂಡ ಮನಿಗೆ ಬಂದ ನಂಟ್ರು ಮಾತಾಡಸೊ ನ್ಯಪದಲ್ಲಿ ಬಂದೋಯ್ತರೆ. ಅದ್ಕೆ ನೋಡು ನಮ್ಮ ಕಡೆ ನ್ಯಡಿಯೋ ಮಾರಾಮಾರಿ ಜಗಳ ಬಾಡಿನೂಟದಲ್ಲಿ ರಾಜಿಯಾಯ್ತವೆ. ಅಂಗಾಗಿ ರಾಜಮ್ಮನೋರು ಮಾಡೋ ಬಾಡಿನ ಸಾರಿನ ವಾಸನೆ ಕುಡದೋರು ತಿರಗ ಬಂದೋಗರು.

ಅವುನು ತಾನೆ ಏನು ಅಂತೀ, ಸಾಹಿತಿ ಗೆಳೆಯರು ಕಂಡೇಟಿಗೆ ನಿಧಿ ಸಿಕ್ಕಿದಂಗಾಡನು. ಸಾಹಿತಿಗಳ ಕಂಡೇಟಿಗೆ ಮಟನ್ ಸ್ಟಾಲ್ ಹೊಳಿಯದು. ಅವುನ ಮನೆಲಿ ಮರಿಗೌಡ ಅಂತ ಇದ್ದ. ಅವುನ್ನ ರವಿಕಾಂತ ಮಡಿಯ ಮಡಿಯ ಅನ್ನೊನು. ಅವುನಿನ್ನ ಸಣ್ಣುಡಗ ಆಗ. ಆದ್ರಿಂದ ಮರಿಗೌಡನಿಗೆ ಅಂಟಿಗಂಡಿರನು. ಮನಿಗೆ ಬಂದ ಗೆಳೆಯರು ರಾಮಣ್ಣನ ಅಧ್ಯಕ್ಷತೆಲಿ ಸಾಲಿಗೆ ಊಟಕ್ಕೆ ಕುತಗಳರು. ಪ್ರತಿಯೊಬ್ಬರಿಗೂ ಸಪರೇಟಾಗಿ ಚಟ್ನೆ ತುಂಬ ಬಾಡತಂದು ದಬ್ಬಾಕಿಬುಟ್ಟೋಗನು ಮರಿಗೌಡ. ಮುದ್ದೆನೂ ಅಂಗೆಯಾ ಒಂದೊಂದೇ ಮುದ್ದೆ ತಂದು ಇಕ್ಕೊರು. ಬಾಡಿನೆಸರು ಬುಟ್ಟೇಟಿಗೆ ರಾಮಣ್ಣ ಖಂಡದ ಪೀಸ ತಗಂಡು ಹುರಿಗಾಳೆಸಗಂಡಂಗೆ ಬಾಯಿಗೆಸಗಳನು. ಮತ್ತೆ ಸಾಹಿತ್ಯನೂ ಶುರು ಮಾಡಿಕಳನು. ಇಂತ ಪಾರ್ಟಿ ನಿರಂತರವಾಗಿ ನ್ಯಡಿಯವು. ನಡುಮನೆಲಿ ಕನ್ನಡ ಸಾಹಿತ್ಯದ ಚರ್ಚೆಗಳು ನ್ಯಡದ್ರೆ ಕ್ವಾಣೆ ವಳಗಡೆ ಬಾಡು ಬೆಯ್ಯದು. ಮಾತಾಡಿ ಸಾಕಾದ ಸಾಹಿತಿಗಳು ಚಟ್ನೆತುಂಬ ಬಾಡು ಬಂದಮ್ಯಾಲೆ ತ್ಯಪ್ಪಗಾಗೋರು. ಅಂತೂ ಮೈಸೂರಿನ ದಿನಗಳು ರಾಮಣ್ಣ ಹರದನಳ್ಳಿಗೆ ಬಂದ ಮ್ಯಾಲೆ ನಾಗಮಂಗಲದಲ್ಲಿ ಶುರುವಾದೊ. ಅದೊಂದು ಸುಭಿಕ್ಷದ ಕಾಲ.

ರಾಮಣ್ಣ ದಿನಾ ಹರದನಳ್ಳಿಗೋಗಿ ಬರೋನು. ನಮ್ಮಣ್ಣ ಎಮ್ಮೆಲ್ಲೆ ಐ.ಬಿ ಮುಂದಗಡೆ ಕುತಗಳರು. ರಾಮಣ್ಣನ ಮಾತು ಅಂದ್ರೆ ಅವುರಿಗೆ ತುಂಬಾ ಇಷ್ಟ. ಪರಸ್ಪರ ಗೌರವ ಇದ್ದೊರು. ರಾಮಣ್ಣನ ಮಾತು ಅಂದ್ರೆ ಅದರಲ್ಲೇನಾರ ಹಾಸ್ಯಮಯವಾದ್ದು ಇದ್ದೇ ಇರತದೆ ಅಂತ ತಿಳಕಂಡಿದ್ರು. ಅಂಗಾಗಿ ನಾಗಮಂಗಲದಲ್ಲಿದ್ದಾಗ ರಾಮಣ್ಣ ಬರದ್ನೆ ಕಾಯೋರು. ಒಂದಿನ ರಾಮಣ್ಣ ಬಂದು ಒಂದು ಪ್ರಸಂಗ ಹೇಳಿದ. ವಬ್ಬ ವಜಕಟ್ಟಾದ ಮನ್ಸ ಹೆಡತಿ ಕರಕಂಡು ಬಂದು “ಸ್ವಾಮಿ ಇವುಳು ರಾತ್ರಿಯಲ್ಲ ನಿದ್ದೆ ಕೊಡ್ಳಿಲ್ಲ” ಅಂದ. ರಾಮಣ್ಣ ಏನೇನೊ ಯೋಚನೆ ಮಾಡಿ ’ಯಾಕೆ ಏನು ಮಾಡಿದ್ಲಪ್ಪಾ’ ಅಂದವ್ನೆ. “ಅಯ್ಯೋ ಅವುಳ ಗೋಳ ನೋಡಕ್ಕಾಗಲಿಲ್ಲ ಸ್ವಾಮಿ. ಅವುಳ ವಲ ಕುಯ್ಯಕ್ಕೆ ಕರಕಂಡೋಗಿದ್ದೇ ತೆಪ್ಪಾಯ್ತು ನೋಡಿ” ಅಂತ ಮುಖ್ಯ ವಿಷಯದ ಸುತ್ತ ಮಾತಾಡತಿದ್ನಂತೆ. ’ಅದೇನಾಗದೆ ಹೇಳಿಗೌಡ್ರೆ’ ಅಂದಾಗ “ವಲ ಕುಯ್ತ ಮುಂಬರದಾಗ ಕೂಳೆ ತರಕತ್ತಂತೆ. ಅಷ್ಟೆಯಾ ಅದ್ಕೆ ರಾತ್ರ್ಯಲ್ಲ ನರಳಿದ್ಲು. ಅದೇನು ವಸಿ ನೋಡಿ” ಅಂದನಂತೆ. ಸರಿ ರಾಮಣ್ಣ ಆಯಮ್ಮನ ಮರ್ಮಸ್ಥಾನ ಚೆಕಪ್ ಮಾಡಬೇಕಾದ್ರಿಂದ, ಆತನೂ ಇರದು ವಳ್ಳೆದು ಅಂತ “ನೀನು ಬಾರಪ್ಪ ವಳಿಕೆ” ಅಂದನಂತೆ. ಅವುನು ತಲೆ ವಗದು “ಅದೇನು ನೀವೆ ಮಾಡಿ ಸ್ವಾಮಿ, ನಾನು ನೋಡದಿಲ ಅದ” ಅಂದನಂತೆ. ಎಷ್ಟು ಕರದ್ರೂ ಬರಲಿಲವಂತೆ. ಇಂತವೇಳಿ ನಮ್ಮಣ್ಣನ ನಗಸೋನು.

ಇನ್ನೊಂದು ಸಾರ್ತಿ ಸರಕಾರದ ಕಾರ್ಯಕ್ರಮದಲ್ಲಿ ಸಿಕ್ಕಿ ಸಿಕ್ಕಿದೋರನ್ಯಲ್ಲ ಹಿಡಿದು ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ ಮಾಡಿದ್ರಂತೆ. ಒಬ್ಬ ಬಂದು “ಅಲ್ಲಾ ಸ್ವಾಮಿ ಹಿಂಗೂ ಮಾಡ್ಯರೆ ಇದು ನ್ಯಾಯವೆ” ಅಂದನಂತೆ.

“ಯಾಕಯ್ಯ ಏನು ಮಾಡಿದ್ರು ನಿಂಗೆ?”

“ನನ್ನನ್ನೂ ಯಳಕಂಡೋಗಿ ನರ ಕಟ್ ಮಾಡಿದ್ರು ಸ್ವಾಮಿ.”

“ಅದು ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ನು ಕಣಯ್ಯ ವಳ್ಳೆದಾಯ್ತದೆ ಬುಡು. ಮಕ್ಕಳು ಮರಿಯಾಯ್ತವೆ ಅಂತ ಯೇಚ್ನೆ ಮಾಡಂಗೇಯಿಲ್ಲ.”

“ಸರಿ ಸ್ವಾಮಿ ಗದ್ದಿಗೆ ನೀರು ಬುಡಬೇಕಾದ್ರೆ ಕ್ಯರೆಲಿ ನೀರಿರಬೇಕಲವೆ? ಬತ್ತ್ಯೋಗಿರೊ ಕ್ಯರೆ ತೂಬಿನ ಗುಂಡಿನೆ ಮುಚ್ಚಿದರಲ್ಲ. ಹಿಂಗೂ ಮಾಡ್ಯರೆ” ಅಂತ ಗೋಳಾಡಿದನಂತೆ.

“ಆಗ ರಾಮಣ್ಣ ಅದವುರಿಗೆ ಗೊತ್ತಿಲ್ಲ ಬುಡಿಗೌಡ್ರೇ. ನಿಮ್ಮ ಕ್ಯರೆ ಬತ್ತಿ ಮೀನು ಸತ್ತಿರದು ಅವುರಿಗ್ಯಂಗೆ ಗೊತ್ತಾಗಬೇಕು. ನೋಡಕ್ಕೆ ಜೋರಾಗಿದ್ದಿರಲ್ಲಾ ಅದ್ಕೆ ಹಿಡಕಂಡೋಗಿ ಆಪರೇಷನ್ ಮಾಡ್ಯವುರೆ. ತ್ವಂದ್ರೆ ಏನೂಯಿಲ್ಲ. ನೀವು ಮದ್ಲಿಗಿಂತ ಜೋರಾಗಿರತಿರಿ” ಅಂತ ಸಮಾಧಾನ ಮಾಡಿ ಕಳಿಸಿದನಂತೆ. ಇಂತ ಕತೆ ಕೇಳಕ್ಕೆ ರಾಮಣ್ಣನ್ನ ಕಾಯರು. ಅವುನು ಬಂದು ಒಂದಲ್ಲಾ ಒಂದು ಹೇಳನು. ಅದರಲ್ಲಿ ಅವುನ ಇಮೇಜಿನೇಷನ್ ಕೂಡ ಇರವು. ಅವೇನು ನಮ್ಮಣ್ಣನಿಗೆ ಗೊತ್ತಾಯ್ತಾಯಿರಲಿಲ್ಲ. ನಮ್ಮಣ್ಣನೂ ರಾಮಣ್ಣನಿಗೆ ತನ್ನ ಅನುಭವ ಹೇಳೋನು.

ನಮ್ಮಣ್ಣ ಆಗ ಹೊಸ ಎಮ್ಮೆಲ್ಲೆ. ನಮ್ಮದು ದೊಡ್ಡ ತಾಲ್ಲೂಕು. ಜನಗಳ ಮಕ ಪರಿಚಯ ಇಟಗಳದು ಬಾಳಕಷ್ಟ. ಅಂತ ಟೇಮಲ್ಲಿ ಯಾರೋ ಬಂದು ಅವುರೆದ್ರಿಗೆ ನಿಂತವುರೆ. ಅವುರ್‍ಯಾವೂರೊರು ಅನ್ನದು ಗೆಪ್ಪಿಗೆ ಬತ್ತಾಯಿಲ್ಲ. ಅದ ತಿಳಕಳಕ್ಕೆ ಮಳೆಯಂಗೆ ನಿಮ್ಮ ಕಡೆ ಅಂತ ಕೇಳಿದರಂತೆ. “ಏ ತಾಳಿನಕ್ಯರಿಗೆ ಊದದೆ. ನಮ್ಮೂರು ಬಿದರಕ್ಯರಿಗೆ ಒಂದನಿ ಮಳಿಲ್ಲ ಅಂದಾಗ ಓಹೊ ಬಂದಿರೋದು ಬಿದಿರಿಕ್ಯರಿಯೋರು ಅಂತ ಗೊತ್ತಾಗದಂತೆ. ಸರಿ ಬಂದಿರೋರು ಸಮಸ್ಯೆ ಏನು ಅಂತ ತಿಳಕಬೇಕಲ್ಲ. ಆಗ ನಿಧಾನವಾಗಿ “ಅದ ಹೇಳಿದ್ದಿನಿ, ಅವುರು ಬರ್ಲಿ ಅಂದವುರೆ” ಅಂತ ಅಂದಾಜಲ್ಲೊಂದು ಮಾತಂದು ಅದ್ನೂ ಅವುನ ಕೈಲೆ ಬಾಯಿ ಬುಡಸೋ ಪ್ಲಾನ ಮಾಡಿದರಂತೆ. ಅಂಗಂದಕೂಡ್ಳೆ “ನಾವು ಬರದೇನು ಸಾ ನೀವು ತಾಸಿಲ್ದಾರಿಗೊಂದು ಮಾತೇಳಿರ್ರಾಯ್ತು, ಯಲ್ಲ ಬಗೆಹರಿತದೆ” ಅಂದನಂತೆ. ಓಹೊ ಇದು ರೆವಿನ್ಯೂ ಇಲಾಖೆ ವಿಷಯ ಅಂತ ತಿಳಕಂಡು ಮುಂದುವರಿದರಂತೆ. ಇದ ಕೇಳಿಕಂಡು ಬಂದ ರಾಮಣ್ಣ “ಯಮ್ಮೆಲ್ಲೆ ಕ್ಯಲಸ ಭಾಳ ಕಷ್ಟ ಕಣ್ಲ. ನಿಮ್ಮಣ್ಣನೂ ಬುದ್ಧಿವಂತ. ಎಷ್ಟೇ ಆಗಲಿ ಲಾಯರಾಗಿದ್ದೊರಲವೆ” ಅಂತ ನಗಾಡಿದ. ಬಾಡ ತಿನ್ನದರಲ್ಲಿ ರಾಮಣ್ಣ ನಮ್ಮಣ್ಣ ಒಂದೇ ತರ ಇದ್ರು. ಸಮಾನ ಅಭಿರುಚಿ ಇತ್ತು.

ರಾಮಣ್ಣ ಇಲ್ಲಿಗೆ ಬಂದ ಮ್ಯಾಲೆ ಲಾಟರಿ ಟಿಕೆಟ್ ತಗಳೋನು. ಅದು ಸಂಬಳ ಬಂದಾಗ. ಅದರ ಉದ್ದೇಶ ಏನಪ್ಪಾ ಅಂದ್ರೆ ಅಕಸ್ಮಾತ್ ಲಾಟರಿ ಹೊಡಿತು ಅನ್ನು ಚೇಬುತುಂಬ ದುಡ್ಡ ಮಡಿಕಂಡು ಬಡರೋಗಿಗಳಿಗೆ ಸಹಾಯ ಮಾಡಬುದಲ್ಲಾ ಅನ್ನೊ ಕನಸು ಅವುನಿಗೆ. ಪಾಪ ಯಾವತ್ತೂ ಲಾಟ್ರಿ ವಡಿಲಿಲ್ಲ. ಒಂದು ಸಂಬಳದಲ್ಲಿ ಒಂದಿಷ್ಟು ಪುಸ್ತಕ ತಗಳನು. ಲಾಟರಿ ಟಿಕೆಟ್ ತಗಳದು, ದುಂದುಗಾರಿಕೆ ಮಾಡದು ಹಿಂಗೆ ಮಾಡತಿದ್ದ. ಮಕ್ಕಳಿನ್ನೂ ಚಿಕ್ಕೋರು. ಅವುರ ಓದಿನ ಕರ್ಚು ಇರಲಿಲ್ಲ. ಅಂಗಾಗಿ ಸಂಬಳದಲ್ಲಿ ಒಂದು ಪೈಸೆನೂ ಉಳಸದಂಗೆ ಜಾಲಿಯಾಗಿದ್ದ.

ಕೊಪ್ಪದ ತಿಮ್ಮಯ್ಯ ಅನ್ನೊ ಪಿಡಿಒ ಇದ್ದ. ಅವುನ ಜ್ವತೆ ಸೇರಿಕಂಡ ರಾಮಣ್ಣ ಕೆ.ಆರ್ ಪೇಟೆತ ಯಿರೊ ತಂಡೇಕೆರೆ ಸಂತಿಗೋಗಿ ಬಾಡತರೋನು. “ವಚ್ಚರಿ ಬೀಜದ ಭಾಗ ಇರಂಗೆ ಕೊಡಯ್ಯ” ಅಂತ ಹೇಳಿ ಅರ್ಧ ಮರಿನೆ ತರೋರು. ಇದ ನೋಡಿದ ನಾನು

“ಅದ್ಯಾಕಷ್ಟೊಂದು ಬಾಡ ತತ್ತಿರಿ” ಅಂದ್ರೇ,

“ಉರುಬಾಡು ಮಾಡಿಕಂಡು ತಿಂತಿವಿಕಲ, ಬೇಕಿದ್ರೆ ಬಾ” ಅನ್ನೊನು.

“ಅದ್ಯಂತ ಉರುಬಾಡು ಮಾರಾಯ” ಅಂದ್ರೆ,

“ಮಾಡ್ತಿವಿ ನೋಡು ಬಾ” ಅಂತಿದ್ದ. ಒಂದು ಬೀಜದ ಭಾಗ ಅಂದ್ರೆ ಏಳೆಂಟು ಕೆಜಿ ಬರದು. ಅದನ್ನ ಉರುದು ಮಡಿಕಂಡು ತಿನ್ನನ ಅಂದ್ರೆ ಒಂದೂವರದಿನಕೆ ಮುಗದೋಗದು. ಸಾಹಿತಿಗಳು ಬಂದ್ರಂತೂ ಅಷ್ಟು ದಿನಕ್ಕೂ ಸಾಲ್ತಿರಲಿಲ್ಲ. ಅವುನ ಮನೆಲಿ ತರಕಾರಿ ಸಾರು ಮಾಡಿದ್ನೆ ನೋಡಲಿಲ್ಲ ನಾನು.

ರಾಮಣ್ಣನ ಕೆಲಸದಲ್ಲಿ ಅವುನ್ನ ಕೇಳೋರೆ ಇರಲಿಲ್ಲ. ಅಧಿಕಾರಿಗಳ ಕೈಲಿ ಹೇಳಿಸಿಗಂಡು ಕ್ಯಲಸ ಮಾಡೊತರ ಇರಲಿಲ್ಲ ಅವುನು. ಕಂಪ್ಲೇಂಟ್ ಬರದಂಗೆ ತನ್ನ ಕೆಲಸ ಮಾಡೋನು. ಅವುನು ಇಲ್ಲಿದ್ದಾಗ ಮೂರನೆ ಜನಪದ ಸಾಹಿತ್ಯ ಸಮ್ಮೇಳನ ನ್ಯಡಿತು. ನಮ್ಮಣ್ಣ ಯಾವುದೇ ಕಾರ್ಯಕ್ರಮ ಮಾಡದ್ರಲ್ಲಿ ಅಥವಾ ಸಂಘಟಸೊದ್ರಲ್ಲಿ ಅಂತ ಶಕ್ತಿ ಇಲ್ದೊರು. ಆದ್ರಿಂದ ಆ ಸಮ್ಮೇಳನ ಜವಾಬ್ದಾರಿ ಹೊರಕ್ಕೆ ಹಿಂದೇಟಾಕುವಾಗ ರಾಮಣ್ಣ “ನ್ಯಾವೆಲ್ಲ ಇದ್ದಿವಿ ಹೆದರಬ್ಯಾಡಿ ಸಾರ್ ಅಂತ ಸಮ್ಮೇಳನ ನ್ಯಡಿಯಂಗೆ ಮಾಡಿದ. ನಮ್ಮ ತಾಲೂಕಿನವರೆ ಆದ ಜೀಶಂಪ, ಹೆಚ್.ಎನ್ ನಾಗೇಗೌಡ್ರು, ಹ.ಕ ರಾಜೇಗೌಡ್ರು ಇಂತ ಘಟಾನುಘಟಿಗಳೇ ಜನಪದ ವಿದ್ವಾಂಸರು. ಅಲ್ದೆ ಮಾದಪ್ಪಗೌಡ್ರು ಸಿಂಗಾರಿಗೌಡ್ರು ಚಿಗರಿಗೌಡರು ಇದ್ರು. ಇವುರ್‍ಯಾಲ್ಲಾರ್ನು ಒಳಗೊಂಡು, ಯಲ್ಲಾರ ಜೊತೆಲೂ ಸಲಗೆಯಿಂದ ಮಾತಾಡ್ತ ಇಡೀ ಸಮ್ಮೇಳನ ಚನ್ನಾಗಿ ನ್ಯಡಿಯಂಗೆ ಮಾಡಿದ. ಅವಾಗ ರಾಮಣ್ಣನ ಇನ್ನೊಂದು ಮುಖ ನೋಡಿದಂಗಯ್ತು. ಅವುನು ಒಳ್ಳೆ ಸಂಘಟಕ ಅಷ್ಟೆ ಅಲ್ಲ ಲೀಡ್ರು ಕೂಡ ಆಗಿದ್ದ. ಆದ್ರೆ ಲೀಡರ್‌ಶಿಪ್ಪ ಒಪ್ಪಿಗಳದೆ ಕಾರ್ಯಕರ್ತನಾಗಿ ಗುರುತಿಸಿಗಳಕ್ಕೆ ಇಷ್ಟಪಡನು. ಮೂರನೆ ಜಾನಪದ ಸಮ್ಮೇಳನ ಒಂದು ದಾಖಲೆಯಾಯ್ತು. ಅದಾದ ಮೇಲೆ ಎಲ್ಲೂ ನ್ಯಡಿಲಿಲ್ಲ ಅನ್ನಸ್ತದೆ. ನಮ್ಮ ತಾಲೂಕಿನಲ್ಲವುನು ಹರದನಳ್ಳಿ ಆಸುಪತ್ರೆ ಕಟ್ಟಿದ. ಜನಪದ ಸಮ್ಮೇಳನದ ರೂವಾರಿಯಾದ.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-8; “ಬೈಬಾರ್ದು ಕಲ; ಅವುಕೇನು ಬೈಸಿಗತ್ತವೆ; ತಿರಗ ಇತ್ತಗೆ ಬರದಂಗೆ ವಂಟೋಯ್ತವೆ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರನ್ನು ವಾಪಸ್ ಕರೆತಂದ ಕೇಂದ್ರ ಸರ್ಕಾರ

ವರ್ಷದ ಹಿಂದೆ, ಅಂದರೆ 2025ರ ಜೂನ್ ತಿಂಗಳಲ್ಲಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರು ಬುಧವಾರ (ಜು.8) ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಸುನಾಲಿ...

ಬೆಂಗಳೂರಿನ ಜ್ವಲಂತ ನಾಗರಿಕ ಸಮಸ್ಯೆಗಳ ವಿರುದ್ಧ ಜುಲೈ 12ಕ್ಕೆ ಬೃಹತ್ ‘ಜನಾಕ್ರೋಶ ಸಮಾವೇಶ

ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಪ್ರತಿನಿತ್ಯ ಎದುರಿಸುತ್ತಿರುವ ನರಕಸದೃಶ ಸಮಸ್ಯೆಗಳ ವಿರುದ್ಧ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೃಹತ್ ‘ಜನಾಕ್ರೋಶ ಸಮಾವೇಶ’ವನ್ನು ಹಮ್ಮಿಕೊಂಡಿದೆ. ಈ ‘ಜನಾಕ್ರೋಶ...

ಭೀಕರ ಪ್ರವಾಹಕ್ಕೆ ಕೊಚ್ಚಿಹೋದ 3 ಸಾವಿರ LPG ಸಿಲಿಂಡರ್

ಮಹಾರಾಷ್ಟ್ರದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಪ್ರಕೃತಿಯ ವಿಕೋಪದ ನಡುವೆ ರಾಯಗಢ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್...

ಹೈದರಾಬಾದ್‌| ಪವನ್‌ ಕಲ್ಯಾಣ್‌ ಟೀಕಿಸಿದ ಯೂಟ್ಯೂಬರ್ ರಾವಣ್ ಮೇಲೆ ಯುಎಪಿಎ ಕೇಸ್; ನಿವಾಸದಲ್ಲಿ ಪೊಲೀಸರ ಶೋಧ

ತೆಲುಗು ಯೂಟ್ಯೂಬರ್, ಸಾಮಾಜಿಕ ಕಾರ್ಯಕರ್ತ ರಾವಣ್‌ (ಬಚಲಕೂರಿ ಜೋಸೆಫ್) ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಬಂಧಿಸಿದ್ದು, ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿರುವ ಯೂಟ್ಯೂಬರ್ ರಾವಣ್ ನಿವಾಸದಲ್ಲಿ...

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...