ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಯು ಇಂದು ಕಾಶ್ಮೀರದಲ್ಲಿ ದಿಢೀರ್ ರದ್ದುಗೊಳಿಸಲಾಯಿತು. “ಅತ್ಯಂತ ಗಂಭೀರ ಭದ್ರತಾ ಲೋಪವಾಗಿದೆ” ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಹುಲ್ ಗಾಂಧಿಯವರು ಕಾಶ್ಮೀರ ಕಣಿವೆಯಲ್ಲಿ ಇಂದು 11 ಕಿ.ಮೀ ನಡೆಯಬೇಕಿತ್ತು. ಆದರೆ ಒಂದು ಕಿಲೋಮೀಟರ್ ನಂತರ ನಿಲ್ಲಿಸಿದರು. ರಾಹುಲ್ ಗಾಂಧಿಯವರು ಕಾಶ್ಮೀರಕ್ಕೆ ಕಾಲಿಡುತ್ತಿದ್ದಂತೆ, ದೊಡ್ಡ ಹಾಗೂ ಅನಿರೀಕ್ಷಿತ ಜನಸಮೂಹ ಅವರಿಗಾಗಿ ಕಾಯುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
“ಭದ್ರತಾ ಸಿಬ್ಬಂದಿಯ ಹಠಾತ್ ವಾಪಸಾತಿಯಿಂದಾಗಿ ಗಂಭೀರ ಭದ್ರತಾ ಉಲ್ಲಂಘನೆಯಾಗಿದೆ” ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರ ಆಡಳಿತವು ಜನಸಂದಣಿಯನ್ನು ಸರಿಯಾಗಿ ನಿರ್ವಹಿಸುವಲ್ಲಿ ಸೋತಿದೆ ಎಂದು ದೂರಲಾಗಿದೆ.
ಶ್ರೀನಗರಕ್ಕೆ ಹೋಗುವ ದಾರಿಯಲ್ಲಿ ಬನಿಹಾಲ್ ಸುರಂಗವನ್ನು ದಾಟಿದ ನಂತರ ರಾಹುಲ್ ಗಾಂಧಿಯವರು ಪಾದಯಾತ್ರೆಯನ್ನು ನಿಲ್ಲಿಸಿದರು. ಭಾರೀ ಜನಸಮೂಹ ಸೇರಿದ್ದು, ಅಸಮರ್ಪಕ ಭದ್ರತೆಯಿಂದಾಗಿ ಕಾಂಗ್ರೆಸ್ ಯಾತ್ರೆಯನ್ನು ನಿಲ್ಲಿಸಬೇಕಾಯಿತು ಎಂದು ಮೂಲಗಳು ಸ್ಪಷ್ಟಪಡಿಸಿವೆ.
ರಾಹುಲ್ ಗಾಂಧಿ ಅವರು 30 ನಿಮಿಷವೂ ಪಾದಯಾತ್ರೆ ನಡೆಸಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅವರನ್ನು ಭದ್ರತಾ ವಾಹನದಲ್ಲಿ ಕರೆದೊಯ್ಯಲಾಯಿತು, ಪಕ್ಷವು ಇಂದಿನ ಯಾತ್ರೆಯನ್ನು ರದ್ದುಗೊಳಿಸಿತು.
“ನಾವು ಬನಿಹಾಲ್ ಸುರಂಗವನ್ನು ದಾಟಿದ ನಂತರ ಪೊಲೀಸರು ರಕ್ಷಣೆ ನೀಡಲಿಲ್ಲ” ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
“ರಾಹುಲ್ ಗಾಂಧಿ ಮತ್ತು ಒಮರ್ ಅಬ್ದುಲ್ಲಾ ಅವರಿಗೆ ಸೂಕ್ತ ಭದ್ರತೆಯನ್ನು ಪೊಲೀಸರು ನೀಡಿರಲಿಲ್ಲ. ಗಂಭೀರವಾದ ಭದ್ರತಾ ಲೋಪಗಳಾಗಿವೆ. ರಾಹುಲ್ ಗಾಂಧಿ ಯಾವುದೇ ಭದ್ರತೆಯಿಲ್ಲದೆ ಹೋಗುತ್ತಿದ್ದರು. ನಾವು ಭದ್ರತಾ ಅಂಶದ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತ್ ಜೋಡೋ: ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅನುಕೂಲವಾಗಲಿದೆ?
“ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅನುಕೂಲ ಮಾಡಿಕೊಡಲಿದೆ” ಎಂದು ಇಂಡಿಯಾ ಟುಡೆ ನಡೆಸಿದ ಸಮೀಕ್ಷೆ ಹೇಳಿದೆ.
ಇಂಡಿಯಾ ಟುಡೇ-ಸಿವೋಟರ್ ನಡೆಸಿರುವ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯು, ಭಾರತ್ ಜೋಡೋ ಯಾತ್ರೆಯು ದೊಡ್ಡ ಮಟ್ಟದಲ್ಲಿ ನಡೆದಿರುವ ಸಾರ್ವಜನಿಕ ಸಂಪರ್ಕದ ಪ್ರಯೋಗವಾಗಿದೆ ಎಂದು 29% ರಷ್ಟು ಜನರು ಹೇಳಿರುವುದಾಗಿ ತಿಳಿಸಿದೆ.
ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ 37% ಜನರು ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯು ಸಂಚಲನವನ್ನು ಸೃಷ್ಟಿಸಿದೆ, ಆದರೆ ಕಾಂಗ್ರೆಸ್ಗೆ ಮತ್ತೆ ಅಧಿಕಾರಕ್ಕೆ ತರಲು ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದಲ್ಲದೆ, ಸಮೀಕ್ಷೆಗೆ ಪ್ರತಿಕ್ರಿಯಿಸಿದ 26% ರಷ್ಟು ಮಂದಿ ಕಾಂಗ್ರೆಸ್ ಅನ್ನು ಪುನರುಜ್ಜೀವನಗೊಳಿಸಲು ರಾಹುಲ್ ಗಾಂಧಿಯೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 284 ಸ್ಥಾನಗಳನ್ನು ಗೆಲ್ಲಲಿದ್ದು, ಕಾಂಗ್ರೆಸ್ 191 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆಯು 1,40,917 ಜನರಿಂದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.