ಮಹಾರಾಷ್ಟ್ರ ವಿಚಾರದ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಧೀರ್ಘ ವಿಚಾರಣೆ ನಡೆದು ವಾದ ವಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ರಮಣ ನೇತೃತ್ವದ ನ್ಯಾಯಪೀಠವು ತನ್ನ ತೀರ್ಪನ್ನು ನಾಳೆಗೆ ಮುಂದೂಡಿದೆ.
ಮೊದಲಿಗೆ ಸರ್ಕಾರದ ಪರ ಜನರಲ್ ಸಾಲಿಸಿಟರ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ರಾಜ್ಯಪಾಲರ ನಡೆ ಮತ್ತು ಪ್ರಮಾಣ ವಚನ ನಡೆದಿದ್ದನ್ನು ಸಮರ್ಥಿಸಿಕೊಂಡರು.
ರಾಜ್ಯಪಾಲರಿಗೆ ಕೊಟ್ಟಿರುವ ಎನ್ಸಿಪಿ 54 ಶಾಸಕರ ಬೆಂಬಲ ಪತ್ರ ಸರಿಯಾಗಿದೆ ಎಂದು ಅಜಿತ್ ಪವಾರ್ ಪರ ವಕೀಲ ಮಣಿಂದರ್ ಸಿಂಗ್ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ. ಕುಟುಂಬದಲ್ಲಿ ಒಂದಷ್ಟು ಸಮಸ್ಯೆಯಿದ್ದು ಅದನ್ನು ನಾವು ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ.
ನಮ್ಮದೇ ಅಧಿಕೃತ ಎನ್ಸಿಪಿ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಯಾರೂ ಕೂಡ ಪ್ರಶ್ನಿಸಿಲ್ಲ. ಅಜಿತ್ ಪವಾರ್ರವರೆ ಎನ್ಸಿಪಿಯ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಅವರು ಕೊಟ್ಟಿರುವ ಶಾಸಕರ ಪಟ್ಟಿ ಸಾಂವಿಧಾನಿಕವಾಗಿದ್ದು ಅದು ಕಾನೂನಾತ್ಮಕವಾಗಿಯೂ ಸರಿಯಾಗಿದೆ ಎಂದು ವಾದ ಮಾಡಿದ್ದಾರೆ.
ಇನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ರವರು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದು ಬಹುಮತ ಸಾಬೀತುಪಡಿಸಲು ಹೆಚ್ಚು ಸಮಯ ಕೋರಿದ್ದಾರೆ.
ಕಾಂಗ್ರೆಸ್ ಪರ ಕಪಿಲ್ ಸಿಬಲ್ ವಾದ ಮಂಡಿಸಿ ನವೆಂಬರ್ 22ರ ಶುಕ್ರವಾರ ಸಂಜೆ ಸುದ್ದಿಗೋಷ್ಟಿ ನಡೆಸಲಾಗಿದೆ. ಎನ್ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಮೂರು ಪಕ್ಷಗಳು ಸರ್ಕಾರ ರಚಿಸುವುದಾಗಿ ಘೋಷಿಸಿದ್ದವು. ರಾಜ್ಯಪಾಲರ ಭೇಟಿಗೂ ಸಿದ್ಧತೆ ನಡೆಸಿದ್ದಾರೆ. ಆದರೆ ಬೆಳಿಗ್ಗೆ ನೋಡಿದರೆ ಬೆಳಿಗ್ಗೆ ಬಿಜೆಪಿ ಸರ್ಕಾರ ರಚನೆಯಾಗಿಬಿಟ್ಟಿದೆ.
ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿತ್ತೇ? ಆತುರಾತುರವಾಗಿ ರಾಷ್ಟ್ರಪತಿ ಆಡಳಿತ ಹಿಂತೆಗೆದುಕೊಳ್ಳುವ ತುರ್ತು ಏನಿತ್ತು? ಎಂದು ಪ್ರಶ್ನಿಸಿದ್ದಾರೆ.
ಕುದುರೆ ರೇಸ್ನಲ್ಲಿ ಜಾಕಿ ಓಡಿ ಹೋಗಬಹುದು. ಆದರೆ ಕುದುರೆಗಳು ಇನ್ನು ನಮ್ಮ ಬಳಿಯೇ ಇವೆ ಎಂದು ಕಪಿಲ್ ಸಿಬಲ್ ವ್ಯಾಖ್ಯಾನಿಸಿದ್ದಾರೆ. ನಾವು ನವೆಂಬರ್ 23 ರಂದು ಸರ್ಕಾರ ರಚಿಸುತ್ತಿದ್ದೆವು ಎಂದು ಹೇಳಿದ್ದಾರೆ.
ಕಾಂಗ್ರೆಸ್, ಎನ್ಸಿಪಿ ಮತ್ತು ಶಿವಸೇನೆ ಸೇರಿ ನಮ್ಮ ಬಳಿ 154 ಶಾಸಕರ ಬೆಂಬಲ ನಮಗಿದೆ. 24 ಗಂಟೆಯೊಳಗೆ ಬಹುಮತ ಸಾಬೀತು ಪಡಿಸಲು ಕೋರ್ಟ್ ಆದೇಶ ನೀಡಬೇಕು ಎಂದಿದ್ದಾರೆ.
ಎರಡೂ ಕಡೆಯವರು ಬಹುಮತ ಇದೆ ಎನ್ನುತ್ತಿದೆಯಾದರೆ ವಿಶ್ವಾಸಮತಯಾಚನೆ ಆಗಲಿ ಬಿಡಿ. ತಡ ಯಾಕೆ ಎಂದು ಅಭಿಷೇಕ್ ಮನುಸಿಂಘ್ವಿ ಪ್ರಶ್ನಿಸಿದ್ದರೆ. ಒಂದು ತಿಂಗಳು ಕಾದ ರಾಜ್ಯಪಾಲರು ಒಂದು ದಿನ ಕಾಯಲಿಲ್ಲ ಏಕೆ? ಎಂದು ಕೂಡ ಪ್ರಶ್ನಿಸಿದ್ದಾರೆ.
ಎನ್ಸಿಪಿ ಶಾಸಕರ ಸಹಿ ಸಂಗ್ರಹಿಸಿದ್ದು ಬೇರೆ ವಿಚಾರಕ್ಕೆ. ಆದರೆ ಅದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಜಿತ್ ಪವಾರ್ರನ್ನು ಎನ್ಸಿಪಿ ಶಾಸಕಾಂಗ ನಾಯಕತ್ವದಿಂದ ತೆಗೆಯಲಾಗಿದೆ.
ಬಿಜೆಪಿ ಅರ್ಧ ಸತ್ಯ ಹೇಳಿದೆ, ಪ್ರಜಾಪ್ರಭುತ್ವ ಮೇಲೆ ವಂಚನೆ ನಡೆದಿದೆ ಎಂದು ಅಭಿಷೇಕ್ ಮನುಸಿಂಗ್ವಿ ಆರೋಪಿಸಿದ್ದಾರೆ. ಎನ್ಸಿಪಿಯ ಒಬ್ಬನೇ ಶಾಸಕ ಬಿಜೆಪಿಗೆ ಬೆಂಬಲ ನೀಡಿಲ್ಲ. ಹಾಗಾಗಿ ಕೂಡಲೇ ಬಹುಮತ ಸಾಬೀತಿಗೆ ಆದೇಶ ನೀಡಬೇಕು ಎಂದಿದ್ದಾರೆ.
ಇದೇ ಸಮಯದಲ್ಲಿ ಅಭಿಷೇಕ್ ಮನುಸಿಂಘ್ವಿಯವರು ಎನ್ಸಿಪಿ ಕಾಂಗ್ರೆಸ್ ಬೆಂಬಲವಿರುವ ಅಫಿಡವಿಟ್ ಅನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲು ಮುಂದಾಗಿದ್ದಾರೆ. ನ್ಯಾಯಮೂರ್ತಿ ರಮಣ ನೇತೃತ್ವದ ಪೀಠ ಅದನ್ನು ತಿರಸ್ಕರಿಸಿದೆ.
ಆನಂತರ ಅವರು ಬಹುಮತ ಸಾಬೀತಿಗೆ ಆದೇಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಬಿಜೆಪಿ ಬಹುಮತ ಸಾಬೀತು ಪಡಿಸಲು ವಿಳಂಬ ಮಾಡುತ್ತಿರುವುದು ಸರಿಯಲ್ಲ. ಹಿಂದಿನ ಪ್ರಕರಣಗಳಲ್ಲಿ ಕೂಡ 24 ಗಂಟೆ ಅಥವಾ 48 ಗಂಟೆಗಳಲ್ಲಿ ಬಹುಮತ ಸಾಬೀತು ಪಡಿಸುವಂತೆ ಆದೇಶಿಸಿದೆ ಎಂದು ಅವರು ವಾದಿಸಿದ್ದಾರೆ.
ಮೂರು ನ್ಯಾಯಮೂರ್ತಿಗಳ ಪೀಠವು ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.