ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ಕಮಲೇಶ್ ತಿವಾರಿ ಹತ್ಯೆ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ಮೂವರನ್ನು ಸೂರತ್ ನಲ್ಲಿ ಬಂಧಿಸಿದ್ದಾರೆ. ಸೂರತ್ ನಿಂದ ನಾಲ್ವರು ಮತ್ತು ಅಲಹಾಬಾದ್ ನಿಂದ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಫೈಜನ್ ಯೂನಸ್ (21), ಮೌಲಾನಾ ಮೊಹ್ಸಿನ್ ಶೇಕ್ (24), ರಶೀದ್ ಅಹ್ಮದ್, ರಶೀದ್ ಪಠಾಣ್ (23) ಬಂಧಿತರು. ಗುಜರಾತ್ ಪೊಲೀಸರ ಸಹಾಯದಿಂದ ಶಂಕಿತರನ್ನು ಬಂಧಿಸಲಾಗಿದೆ.
ಕಮಲೇಶ್ ತಿವಾರಿ ಹತ್ಯೆಯಾದ ಪ್ರದೇಶದಲ್ಲಿ ಸೂರತ್ ನ ವಿಳಾಸವಿರುವ ಸಿಹಿತಿಂಡಿ ಬಾಕ್ಸ್ ಒಂದು ಪೊಲೀಸರಿಗೆ ದೊರೆತಿತ್ತು. ಇದರ ಬೆನ್ನತ್ತಿ ಹೊರಟ ಪೊಲೀಸರಿಗೆ ಸಿಹಿ ತಿಂಡಿ ಪೊಟ್ಟಣವನ್ನು ಸೂರತ್ ನ ನವ್ ಸಾರಿ ಬಜಾರ್ ನಲ್ಲಿರುವ ಧರ್ತಿ ಫರಸನ್ ಅಂಗಡಿಯಿಂದ ಖರೀದಿಸಿರುವುದು ಪತ್ತೆಯಾಯಿತು. ಅಂಗಡಿಯ ಮಾಲೀಕನ ವಿಚಾರಣೆ ನಡೆಸಿದ ಅಪರಾಧ ವಿಭಾಗ ಪೊಲೀಸರ ತಂಡ ಶಂಕಿತರ ಪತ್ತೆಗೆ ಬಲೆ ಬೀಸಿತ್ತು.
ಅಂಗಡಿಯ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗಿದೆ. ಲಖನೌನ ಖುರ್ಷೀದ್ ಬಾಗ್ ನಲ್ಲಿ ಅಳವಡಿಸಲಾಗಿರುವ 25 ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ ಕೇಸರಿ ಹೊದಿಕೆ ಹೊದ್ದಿರುವ ಇಬ್ಬರು ಶಂಕಿತರನ್ನು ಗುರುತಿಸಲಾಗಿದೆ. ಮೂರು ಡಜನ್ ಗಿಂತ ಹೆಚ್ಚು ಮೊಬೈಲ್ ಸಂಖ್ಯೆಗಳನ್ನು ಸ್ಕ್ಯಾನ್ ಮಾಡುವ ಮೂಲಕ ಹತ್ಯೆಗೆ ಸಂಚು ಹೂಡಿದ್ದವರನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ ಎಂದು ಎಸ್ ಎಸ್ ಪಿ ಕಲಾನಿಧಿ ನೈಥಾನಿ ಮಾಹಿತಿ ನೀಡಿದ್ದಾರೆ. ಸಿಹಿ ತಿಂಡಿ ಪೊಟ್ಟಣದಲ್ಲೇ ಹತ್ಯೆಗೆ ಬಳಸಿದ ಆಯುಧವನ್ನೂ ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಶಂಕಿತರನ್ನು ನ್ಯಾಯಾಂಗಬಂಧನಕ್ಕೆ ಒಳಪಡಿಸಲಾಗಿದೆ. ಶಂಕಿತರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ. ಇನ್ನೊಂದು ಮೂಲದ ಪ್ರಕಾರ, ಸುಮಾರು 15 ಗಂಟೆಗಳಲ್ಲಿ ಮಹಿಳೆಯನ್ನು ಸೇರಿದಂತೆ 15 ಮಂದಿ ಬಗ್ಗೆ ಸಿಸಿ ಕ್ಯಾಮರಾ ದೃಶ್ಯಾವಳಿಗಳು ಶಂಕೆ ಹುಟ್ಟು ಹಾಕಿವೆ. ಪ್ರಕರಣದಲ್ಲಿ 15 ಮಂದಿಯ ಕೈವಾಡವಿರುವ ಸಾಧ್ಯತೆ ದಟ್ಟವಾಗಿದೆ. ಉತ್ತರ ಪ್ರದೇಶದ ಮೊರಾದಾಬಾದ್, ಬಿಜ್ನೋರ್, ಕಾನ್ಪುರ, ಡೆಹತ್, ಲಕ್ನೋದಲ್ಲಿ 10 ಜನರನ್ನು ಬಂಧಿಸಲಾಗಿತ್ತು ಎಂದು ಹೇಳಿದೆ.
ಪ್ರಕರಣದಲ್ಲಿ ಆರೋಪಿಗಳಿಗಾಗಿ ಹುಡುಕಾಟ ತೀವ್ರಗೊಂಡಿದೆ. ಎಎಸ್ಪಿ ದಿನೇಶ್ ಪುರಿ, ವಲಯ ಅಧಿಕಾರಿ ಗಾಜಿಪುರ ಡಿ.ಕೆ.ಸಿಂಗ್, ಸಿಒ ಹಜರತ್ ಗಂಜ್ ಅಭಯ್ ಮಿಶ್ರಾ ನೇತೃತ್ವದ ಮೂರು ಪ್ರಮುಖ ತಂಡಗಳು ತನಿಖೆ ನಡೆಸಿವೆ. ಸಿಸಿ ಕ್ಯಾಮರಾ ಮತ್ತು ಇತರರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.