Homeಮುಖಪುಟಬುಡಕಟ್ಟು ಮಕ್ಕಳ ಜೀವನದಲ್ಲಿ ಶಿಕ್ಷಣದ ಬೆಳಕು ಚೆಲ್ಲಿದ ಶಿಕ್ಷಕಿ

ಬುಡಕಟ್ಟು ಮಕ್ಕಳ ಜೀವನದಲ್ಲಿ ಶಿಕ್ಷಣದ ಬೆಳಕು ಚೆಲ್ಲಿದ ಶಿಕ್ಷಕಿ

- Advertisement -
- Advertisement -

ಉತ್ತರಪ್ರದೇಶದಲ್ಲಿ ಶಿಕ್ಷಕಿಯೋರ್ವಳ ಸಾಹಸ, ಪರಿಶ್ರಮ 40 ಬುಡಕಟ್ಟು ಮಕ್ಕಳ ಜೀವನದಲ್ಲಿ ಶಿಕ್ಷಣದ ಬೆಳಕನ್ನು ಚೆಲ್ಲಿದೆ. ಸರ್ಕಾರಿ ಶಾಲೆಯ ಶಿಕ್ಷಕಿ ಸೀತಾ ತ್ರಿವೇದಿ  40 ಅಲೆಮಾರಿ ಬುಡಕಟ್ಟು ಮಕ್ಕಳನ್ನು ಭಿಕ್ಷಾಟನೆಯಿಂದ ರಕ್ಷಿಸಿ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದು, ಶಿಕ್ಷಕಿಯ ಕಾರ್ಯಕ್ಕೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗಿದೆ.

ಉತ್ತರಪ್ರದೇಶದ ಬಜೇರಾ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕಿ ಸೀತಾ ತ್ರಿವೇದಿ ಅವರು ಶಿಕ್ಷಣ ವಂಚಿತ ಕಲಬಾಜ್ ಸಮುದಾಯಕ್ಕೆ ಸೇರಿದ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಅವರ ಪೋಷಕರಿಗೆ ಮನವರಿಕೆ ಮಾಡಿ ಅವರ ವಾರ್ಡ್‌ಗಳಲ್ಲಿನ ಶಾಲೆಗೆ ಮಕ್ಕಳನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಜೇರಾ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ತ್ರಿವೇದಿ ಅವರಿಗೆ ಕೆಲವು ವರ್ಷಗಳ ಹಿಂದೆ ಮಕ್ಕಳ ಗಣತಿಯನ್ನು ನಡೆಸುವ ಕೆಲಸವನ್ನು ನೀಡಲಾಗಿತ್ತು. ಸಮೀಕ್ಷೆಗಾಗಿ ಸಮೀಪದ ಗ್ರಾಮಕ್ಕೆ ಭೇಟಿ ನೀಡಿದಾಗ ಸ್ಥಳೀಯರು ಶಿಕ್ಷಕಿಯನ್ನು ಕಲಬಾಜ್ ಸಮುದಾಯದವರ ಮನೆಗಳಿಗೆ ಹೋಗದಂತೆ ತಡೆದಿದ್ದಾರೆ. ಆದರೆ ಅವರು ತನ್ನ ಕಾರ್ಯವನ್ನು ಮುಂದುವರಿಸಿದ್ದರು. ಈ ವೇಳೆ ಅವರು ಕಲಬಾಜ್‌ ಸಮುದಾಯಕ್ಕೆ ಸೇರಿದ ಯಾವುದೇ ಮಕ್ಕಳು ಶಾಲೆಗೆ ಹೋಗುವುದಿಲ್ಲ ಮತ್ತು ಅವರು ಕಟುಂಬದ ಜೀವನೋಪಾಯಕ್ಕಾಗಿ ಭಿಕ್ಷೆ ಬೇಡುವ  ಕೆಲಸವನ್ನು ಮಾಡುತ್ತಾರೆ ಎಂದು ಕಂಡುಕೊಂಡಿದ್ದಾರೆ ಮತ್ತು ಮಕ್ಕಳನ್ನು ಶಾಲೆಗೆ ಸೇರಿಸುವ ಸಾಹಸಕ್ಕೆ ಮುಂದಾಗಿದ್ದಾರೆ. ತ್ರಿವೇದಿ ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರಯತ್ನಿಸುತ್ತಿದ್ದಂತೆ ಕಲಬಾಜ್ ಸಮುದಾಯ ಹಿರಿಯರು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಶಿಕ್ಷಕಿ ಸೀತಾ ತ್ರಿವೇದಿ, ನಾನು ಪ್ರತಿ ಮನೆಗೆ ಭೇಟಿ ನೀಡಿ ಹಿರಿಯರಿಗೆ ಶಿಕ್ಷಣದ ಮಹತ್ವದ ಬಗ್ಗೆ ಹೇಳಿದ್ದೇನೆ. ಬುಡಕಟ್ಟು ಸಮುದಾಯದ ಮಕ್ಕಳು ಶಿಕ್ಷಣ ಪಡೆದ ನಂತರ ಅಧಿಕಾರಿಗಳು ಮತ್ತು ಯಶಸ್ವಿ ಉದ್ಯಮಿಗಳಾಗಿರುವ ಕಥೆಗಳನ್ನು ನಾನು ಅವರಿಗೆ ಹೇಳಿದ್ದೇನೆ. ಇದು ಅವರ ಮೇಲೆ ಪರಿಣಾಮ ಬೀರಿತು ಮತ್ತು ಅವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪ್ರಾರಂಭಿಸಿದರು ಎಂದು ನೆನಪಿಸಿಕೊಂಡಿದ್ದಾರೆ.

ಶಾಲೆಗೆ ಮಕ್ಕಳನ್ನು ಸೇರಿಸಿದಾಗ ಎದುರಾಗಿದ್ದ ಸಮಸ್ಯೆ!

ಕಲಬಾಜ್ ಸಮುದಾಯದ 40 ಮಕ್ಕಳನ್ನು ಮನವೊಲಿಕೆ ಮಾಡಿ ಸೀತಾ ತ್ರಿವೇದಿ ಶಾಲೆಗೆ ದಾಖಲು ಮಾಡಿದ್ದಾರೆ. ಮಕ್ಕಳನ್ನು ದಾಖಲಿಸಿಕೊಂಡರೂ, ಇತರ ಸಮುದಾಯದ ವಿದ್ಯಾರ್ಥಿಗಳು ಅವರನ್ನು ಸ್ವೀಕರಿಸಲು ಸಿದ್ಧರಿಲ್ಲದ ಕಾರಣ ತ್ರಿವೇದಿಗೆ ಮತ್ತೊಂದು ಸವಾಲು ಎದುರಾಗಿತ್ತು. ಕಲಾಬಾಜ್ ಸಮುದಾಯದ ಮಕ್ಕಳೊಂದಿಗೆ ಇತರ ಸಮುದಾಯದ ಮಕ್ಕಳು ಮಧ್ಯಾಹ್ನದ ಊಟಕ್ಕೆ ಕುಳಿತುಕೊಳ್ಳದಿರುವುದನ್ನು ನಾನು ಗಮನಿಸಿದ್ದೇನೆ. ನಾನು ಇತರ ಮಕ್ಕಳ ಪೋಷಕರನ್ನು ಕರೆದು ಕಲಬಾಜ್ ಸಮುದಾಯದ ಮಕ್ಕಳ ಬಗ್ಗೆ ತಾರತಮ್ಯ ಮಾಡದಂತೆ ಕೇಳಿಕೊಂಡಿದ್ದೇನೆ.  ಪೋಷಕರ ಸಹಕಾರದಿಂದ ಈ ಸಮಸ್ಯೆಗೆ ಪರಿಹಾರವಾಗಿತ್ತು. ಪೋಷಕರ ಬಳಿ ಸಾಕಷ್ಟು ಹಣವಿಲ್ಲದ ಕಾರಣ ಈ ಮಕ್ಕಳಿಗೆ ಬಟ್ಟೆ ಮತ್ತು ಪುಸ್ತಕಗಳನ್ನು ಆಗಾಗ್ಗೆ ಖರೀದಿಸಿ ನಾನು ಕೊಡುತ್ತಿದ್ದೇನೆ ಎಂದು ತ್ರಿವೇದಿ ಹೇಳಿದ್ದಾರೆ.

ಸೀತಾ ತ್ರಿವೇದಿ ಅವರ ಈ ಕೆಲಸಕ್ಕೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗಿದ್ದು, ತ್ರಿವೇದಿಯವರ ಪ್ರಯತ್ನ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಉಮೇಶ್ ಪ್ರತಾಪ್ ಸಿಂಗ್ ಶ್ಲಾಘಿಸಿದ್ದಾರೆ. ಈ ಮಕ್ಕಳು ಸಮಾಜದ ಹಿತದೃಷ್ಟಿಯಿಂದ ಮುಂದೆ ಸಾಗುತ್ತಾರೆ ಮತ್ತು ಶಿಕ್ಷಣ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಈ ರೀತಿಯ ಪ್ರಯತ್ನಗಳ ಮೂಲಕ ಜಾತಿ ಆಧಾರಿತ ತಾರತಮ್ಯ ಕೂಡ ಕೊನೆಗೊಳ್ಳುತ್ತವೆ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ  ಶಿಕ್ಷಾ ಅಧಿಕಾರಿ ರಣವೀರ್ ಸಿಂಗ್ ಅವರು, ಶಿಕ್ಷಕಿಯೋರ್ವರು ಮಾಡಿದ ಪ್ರಯತ್ನಗಳನ್ನು ಗಮನಿಸಿದ್ದೇವೆ. ಶಿಕ್ಷಕರ ಪ್ರಯತ್ನ ಶ್ಲಾಘನೀಯವಾಗಿದ್ದು, ಜಿಲ್ಲೆಯ ಒಂದೇ ಒಂದು ಮಗು ಶಾಲೆಯಿಂದ ದೂರ ಉಳಿಯದಂತೆ ಇತರೆ ಶಾಲೆಗಳಲ್ಲೂ ಇಂತಹ ಪ್ರಯತ್ನ ನಡೆಯಲಿ ಎಂದು ಆಶಿಸುತ್ತೇವೆ ಎಂದು ಹೇಳಿದ್ದಾರೆ.

ಕಲಬಾಜ್ ಸಮುದಾಯ

16ನೇ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ಅಡಳಿತದ ಸಮಯದಲ್ಲಿ ಉತ್ತರ ಪ್ರದೇಶಕ್ಕೆ ವಲಸೆ ಬಂದವರು ಕಲಾಬಾಜ್ ಜನರು. ಇವರು ಮೂಲತಃ ರಜಪೂತರು ಎಂದು ಹೇಳುತ್ತಾರೆ. ಈ ಸಮುದಾಯದ ಹೆಚ್ಚಿನ ಉತ್ತರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರು ಅಲೆಮಾರಿ ಸಮುದಾಯವಾಗಿದ್ದರು,  ಹಿಂದಿ ಮಾತನಾಡುತ್ತಾರೆ ಆದರೆ ತಮ್ಮದೇ ಆದ ನಿರ್ದಿಷ್ಟ ಉಪಭಾಷೆಯನ್ನು ಹೊಂದಿದ್ದಾರೆ.

ಇವರಲ್ಲಿ ಹೆಚ್ಚಿನವರು ಭೂರಹಿತರಾಗಿದ್ದಾರೆ. ಅದ್ಭುತವಾದ ಜಿಮ್ನಾಸ್ಟಿಕ್ ಸಾಹಸ, ಜಾನುವಾರುಗಳನ್ನು ನೋಡಿಕೊಳ್ಳುವುದು ಅಥವಾ ಬೈಸಿಕಲ್‌ಗಳನ್ನು ದುರಸ್ತಿ ಮಾಡುವುದು. ಕೆಲವರು ದಿನಗೂಲಿಗಳಾಗಿ ಕೂಡ ಕೆಲಸ ಮಾಡುತ್ತಾರೆ. ಹೆಚ್ಚಿನವರು ಬಿಕ್ಷಾಟನೆಯಲ್ಲಿ ತೊಡಗಿಕೊಂಡಿದ್ದಾರೆ.  2011ರ ಜನಗಣತಿಯು ಉತ್ತರಪ್ರದೇಶದಲ್ಲಿ ಕಲಾಬಾಜ್ ಸಮುದಾಯದ 11,199 ಜನರಿದ್ದಾರೆ ಎಂದು ಹೇಳಿದೆ. ಈ ಸಮುದಾಯವು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದೆ.

ಇದನ್ನು ಓದಿ:ಎಐಸಿಸಿ ಸೆಂಟ್ರಲ್‌ ವಾರ್‌ರೂಂ ಅಧ್ಯಕ್ಷರಾಗಿ ಶಶಿಕಾಂತ್‌ ಸೆಂಥಿಲ್‌ ನೇಮಕ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...