ಪ್ರತಿ ದಿನ 24,000 ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ನೀಡದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.
ಈವರೆಗೂ ಕರ್ನಾಟಕ ಬಿಡುಗಡೆ ಮಾಡಿರುವ ನೀರಿನ ಪ್ರಮಾಣದ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ವರದಿ ಪಡೆಯಲು ಸುಪ್ರೀಂ ಕೋರ್ಟ್ ಆದ್ಯತೆ ನೀಡಿದೆ.
ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠವು ತಮಿಳುನಾಡು ಪರ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಮತ್ತು ಕರ್ನಾಟಕದ ಪರ ಶ್ಯಾಮ್ ದಿವಾನ್ ಅವರ ವಾದವನ್ನು ಆಲಿಸಿದೆ. ಪ್ರಾಧಿಕಾರವು ಆದೇಶ ಹೊರಡಿಸಿದ್ದರೂ ಕರ್ನಾಟಕದಿಂದ ನೀರು ಹರಿಸಿಲ್ಲ ಎಂಬುದು ತಮಿಳುನಾಡು ರಾಜ್ಯದ ವಾದವಾಗಿದೆ.
ಸಿಡಬ್ಲ್ಯುಎಂಎ ನಿಗದಿಪಡಿಸಿದ ನೀರನ್ನು ಬಿಡುಗಡೆ ಮಾಡಲಾಗಿದೆ ಆದರೆ ಅದು ತಮಿಳುನಾಡಿಗೆ ತಲುಪಲು ಮೂರು ದಿನಗಳ ಸಮಯ ತೆಗೆದುಕೊಳ್ಳುತ್ತದೆ ಎಂದು ಕರ್ನಾಟಕವನ್ನು ಗಮನಿಸಿದೆ.
”ಈ ವಿಷಯದ ಬಗ್ಗೆ ನಮಗೆ ಹೆಚ್ಚಿನ ವಿಚಾರ ಗೊತ್ತಿಲ್ಲ” ಎಂದು ಪೀಠ ಹೇಳಿದೆ.
ಮುಂದಿನ 15 ದಿನಗಳ ಕಾಲ ನೀರು ಬಿಡಲು ನಿರ್ಧರಿಸಲು ಪ್ರಾಧಿಕಾರವು ಸೋಮವಾರ ಸಭೆ ನಡೆಸಲಿದೆ ಎಂದು ಕೇಂದ್ರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಹೇಳಿದರು.
”ನೀರು ಬಿಡಲು ನೀಡಲಾದ ನಿರ್ದೇಶನಗಳನ್ನು ಅನುಸರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು CWMA ತನ್ನ ವರದಿಯನ್ನು ಸಲ್ಲಿಸುವುದು ಸೂಕ್ತ, ಮುಂದಿನ ಶುಕ್ರವಾರದೊಳಗೆ ವರದಿಯನ್ನು ನಮಗೆ ಸಲ್ಲಿಸಬೇಕು” ಎಂದು ಪೀಠ ಹೇಳಿದೆ.
ಅಧಿಕಾರಿಗಳ ಆದೇಶಗಳು ಕರ್ನಾಟಕದ ಹಿತಾಸಕ್ತಿಗೆ ವ್ಯತಿರಿಕ್ತವಾಗಿದೆ ಹಾಗಾಗಿ ಹಂಚಿಕೆಯಾಗಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಕರ್ನಾಟಕ ಅರ್ಜಿ ಸಲ್ಲಿಸಿದೆ.
ಇದಕ್ಕೆ ವ್ಯತಿರಿಕ್ತವಾಗಿ ತಮಿಳುನಾಡು ಹೆಚ್ಚಿನ ಪಾಲು ಕೋರಿ ಅರ್ಜಿ ಸಲ್ಲಿಸಿದೆ. ಇವೆಲ್ಲವನ್ನು ಅಧಿಕಾರಿಗಳು ನಿರ್ಧರಿಸಲಿ ಎಂದು ಹೇಳಿದ ಪೀಠವು ಮುಂದಿನ ಶುಕ್ರವಾರ ಪ್ರಕರಣವನ್ನು ಪಟ್ಟಿ ಮಾಡಲಾಗುವುದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಕಾವೇರಿ ನದಿ ನೀರನ್ನು ದಿನಕ್ಕೆ 24,000 ಕ್ಯೂಸೆಕ್ಸ್ ನಷ್ಟು ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಮಾಡಿದ ಮನವಿಯನ್ನು ಕರ್ನಾಟಕವು ನ್ಯಾಯಾಲಯದಲ್ಲಿ ವಿರೋಧಿಸಿದೆ.
ಆಗಸ್ಟ್ 12ರಿಂದ ಮುಂದಿನ 15 ದಿನಗಳವರೆಗೆ ಅಂತರರಾಜ್ಯ ಗಡಿಯಾದ ಬಿಳಿಗುಂಡ್ಲುವಿನಲ್ಲಿ ದಿನಕ್ಕೆ 10,000 ಕ್ಯೂಸೆಕ್ ಅನ್ನು ಬಿಡುಗಡೆ ಮಾಡಲು ಆಗಸ್ಟ್ 11ರಂದು ನಿರ್ಧಾರ ತೆಗೆದುಕೊಡಿದೆ. ಈ ನಿರ್ಧಾರವನ್ನು ಪರಿಶೀಲಿಸಬೇಕು ಎಂದು ಕರ್ನಾಟಕವು CWMA ಗೆ ಕೇಳಿದೆ.
ಇದನ್ನೂ ಓದಿ: ಮತ್ತೆ ಭುಗಿಲೆದ್ದ ಕಾವೇರಿ ನದಿ ವಿವಾದ; ಮಳೆ ಮತ್ತು ಮಾತುಕತೆಯೇ ಪರಿಹಾರ